ದೊಡ್ಡ ಪ್ರಮಾಣದ ವಿದೇಶಿ ಸಾಲದಲ್ಲಿ ಬದುಕುವ ಬಡ ಭಾರತಕ್ಕೆ ದುಬಾರಿ ಪಾರ್ಲಿಮೆಂಟ್ ಕಟ್ಟಡದ ಅಗತ್ಯ ಇದೆಯೇ? ವರುಷದ ಮುನ್ನೂರ ಅರುವತ್ತೈದು ದಿನವೂ ಅಲ್ಲೇನೂ ಕಲಾಪ ನಡೆಯುತ್ತದೆಯೇ? ಪ್ರಜಾತಾಂತ್ರಿಕ ಚರ್ಚೆ, ಸಂವಾದಕ್ಕೆ ಭವ್ಯ ಕಟ್ಟಡದ ಅಗತ್ಯ ಇದೆಯೇ? ಜನತಂತ್ರವೇ ಇಲ್ಲದ ಮೇಲೆ ಭವ್ಯ ಸಂಸತ್ ಭವನ ಇಟ್ಟುಕೊಂಡು ಏನು ಮಾಡೋಣ?
ಶ್ರೀನಿವಾಸ ಕಾರ್ಕಳ
ಇತ್ತೀಚೆಗೆ ಕ್ಯಾಮರಾ ಮನ್ ಗಳ ಸೈನ್ಯವನ್ನೇ ಕಟ್ಟಿಕೊಂಡು ಪ್ರಧಾನಿ ನರೇಂದ್ರ ಮೋದಿಯವರು ನಿರ್ಮಾಣ ಹಂತದಲ್ಲಿರುವ ಪಾರ್ಲಿಮೆಂಟ್ ಕಟ್ಟಡಕ್ಕೆ ‘ಸರ್ಪ್ರೈಸ್ ವಿಸಿಟ್’ ಕೊಟ್ಟುದು ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಯಿತು. ಈ ‘ಸರ್ಪ್ರೈಸ್ ವಿಸಿಟ್’ ಬಹುತೇಕ ಗೋದಿ ಪತ್ರಕರ್ತರಿಗೆ ಗೊತ್ತಿತ್ತು ಎನ್ನುವುದು ಅವರು ಎಲ್ಲರೂ ಒಂದೇ ರೀತಿಯ ಟ್ವೀಟನ್ನು ಏಕಕಾಲದಲ್ಲಿ ಮಾಡಿದ್ದನ್ನು ನೋಡುವಾಗ ಎಲ್ಲರಿಗೂ ತಿಳಿಯಿತು. ನಿರ್ಮಾಣ ಹಂತದಲ್ಲಿಯೇ ನೀಡಲಾಗುತ್ತಿರುವ ಪ್ರಚಾರ, ವ್ಯಕ್ತಿ ವೈಭವೀಕರಣ ನೋಡಿದರೆ, ಅದನ್ನು ಉದ್ಘಾಟಿಸುವಾಗ ನೀಡಬಹುದಾದ ಪ್ರಚಾರ, ವೈಭವ ಊಹಿಸಿಕೊಂಡರೂ ದಿಗಿಲಾಗುತ್ತದೆ.
ಹಳೆಯ ಪಾರ್ಲಿಮೆಂಟ್ ಕಟ್ಟಡ
ಅದಿರಲಿ, ಈ ಹೊಸ ಪಾರ್ಲಿಮೆಂಟ್ ಕಟ್ಟಡದ ಬಗ್ಗೆ ಮಾತನಾಡುವ ಮುನ್ನ ನಾವು ಈಗ ಇರುವ ಹಳೆಯ ಕಟ್ಟಡದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಈಗ ಇರುವ ಪಾರ್ಲಿಮೆಂಟ್ ಕಟ್ಟಡ ಸ್ವತಂತ್ರ ಭಾರತದ ಮೊದಲ ಸಂಸತ್ ಗೆ ಜಾಗ ನೀಡಿದೆ. ಭಾರತ ಸಂವಿಧಾನವನ್ನು ಅಂಗೀಕರಿಸಿದ್ದಕ್ಕೆ ಸಾಕ್ಷಿಯಾಗಿದೆ. ಸೆಂಟ್ರಲ್ ವಿಸ್ಟಾದ ಹೃದಯ ಭಾಗದಲ್ಲಿರುವ ಈ ಕಟ್ಟಡ ಭಾರತದ ಜನತಂತ್ರ ತತ್ತ್ವದ ಐಕಾನ್ ಆಗಿದೆ. ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟಿನ್ಸ್ ಮತ್ತು ಹರ್ಬರ್ಟ್ ಬೆಕರ್ ವಿನ್ಯಾಸ ಗೊಳಿಸಿದ, ವೃತ್ತಾಕಾರದ ಈ ರಚನೆಯ ನಿರ್ಮಾಣ ಕಾರ್ಯ 1921 ರಿಂದ 1927 ರ ತನಕ ಅಂದರೆ ಆರು ವರ್ಷಗಳ ಕಾಲ ನಡೆಯಿತು. ಮೊದಲು ಇದನ್ನು ಕೌನ್ಸಿಲ್ ಹೌಸ್ ಎನ್ನುತ್ತಿದ್ದರು. ಇದರಲ್ಲಿ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ನಡೆಯುತ್ತಿತ್ತು. ಸ್ವಾತಂತ್ರ್ಯಾನಂತರ 1956 ರಲ್ಲಿ ಇದಕ್ಕೆ ಎರಡು ಮಹಡಿ ಸೇರಿಸಲಾಯಿತು. ಆನಂತರ ಇಂದಿನವರೆಗೂ ಈ ಸಂಸತ್ ಸೌಧವು ದೇಶದ ವರ್ತಮಾನ ಮತ್ತು ಭವಿಷ್ಯವನ್ನು ನಿರ್ಧರಿಸಿದ ಅನೇಕ ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗಿದೆ.

ಹೊಸ ಪಾರ್ಲಿಮೆಂಟ್ ಕಟ್ಟಡ
ಹೊಸ ಪಾರ್ಲಿಮೆಂಟ್ ಕಟ್ಟಡವು 13 ಎಕರೆ ಜಾಗದಲ್ಲಿ ತಲೆ ಎತ್ತುತ್ತಿದೆ. ತ್ರಿಕೋಣಾಕಾರದಲ್ಲಿರುವ ಇದು ನಾಲ್ಕು ಮಹಡಿಯನ್ನು ಹೊಂದಿದ್ದು, ಹೊಸ ಲೆಕ್ಕಾಚಾರದ ಪ್ರಕಾರ ಅದಕ್ಕೆ 1275 ಕೋಟಿ ರುಪಾಯಿ ವೆಚ್ಚ ತಗುಲಲಿದೆ. ಹೊಸ ಕಟ್ಟಡ 65,000 ಚದರ ಮೀಟರ್ ವಿಸ್ತಾರದ್ದಾಗಿದ್ದು, ಲೋಕಸಭೆಯಲ್ಲಿ 888 ಆಸನಗಳು, ರಾಜ್ಯಸಭೆಯಲ್ಲಿ 384 ಆಸನಗಳನ್ನು ಹೊಂದಿದೆ. ಲೋಕಸಭೆಯಲ್ಲಿ ಏಕಕಾಲಕ್ಕೆ 1272 ಮಂದಿ ಕುಳಿತುಕೊಳ್ಳಲು ಅವಕಾಶ ಇದ್ದು, ಇದೇ ಕಾರಣದಿಂದ ಹೊಸ ಪಾರ್ಲಿಮೆಂಟ್ ನಲ್ಲಿ ಸೆಂಟ್ರಲ್ ಹಾಲ್ ಇರುವುದಿಲ್ಲ.
ನಿಜ, ಈಗಿನ ಪಾರ್ಲಿಮೆಂಟ್ ಕಟ್ಟಡ ಸುಮಾರು ಶತಮಾನ ಕಾಲ ಹಳೆಯದಾಗಿದ್ದು ಅದರಲ್ಲಿ ಹೊಸ ಕಾಲಕ್ಕೆ ಅಗತ್ಯವಾದ ಅನೇಕ ಸೌಲಭ್ಯಗಳು ಇಲ್ಲ. ಸಂಸದರ ಸಂಖ್ಯೆ ಹೆಚ್ಚಿದೆ ಮತ್ತು 2026 ರ ಕ್ಷೇತ್ರ ವಿಂಗಡಣೆಯ ಬಳಿಕ ಇನ್ನೂ ಹೆಚ್ಚಾಗಲಿದ್ದು, ಆಗ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ. ಈ ದೃಷ್ಟಿಯಿಂದ ಸುವ್ಯಸ್ಥಿತವಾದ ಹೊಸ ಕಟ್ಟಡವೊಂದನ್ನು ಕಟ್ಟುವುದು ತಪ್ಪೇನೂ ಅಲ್ಲ.
ಉದ್ದೇಶ ಏನು?
ಆದರೆ, ದೊಡ್ಡ ಪ್ರಮಾಣದ ವಿದೇಶಿ ಸಾಲದಲ್ಲಿ ಬದುಕುವ ಬಡ ಭಾರತಕ್ಕೆ ಇಂತಹ ದುಬಾರಿ ಕಟ್ಟಡದ ಅಗತ್ಯ ಇದೆಯೇ? ವರುಷದ ಮುನ್ನೂರ ಅರುವತ್ತೈದು ದಿನವೂ ಅಲ್ಲೇನೂ ಕಲಾಪ ನಡೆಯುವುದಿಲ್ಲವಲ್ಲ? ಪ್ರಜಾತಾಂತ್ರಿಕ ಚರ್ಚೆ, ಸಂವಾದಕ್ಕೆ ಭವ್ಯ ಕಟ್ಟಡದ ಅಗತ್ಯ ಇದೆಯೇ? ಎಂಬ ಅನೇಕ ಪ್ರಶ್ನೆಗಳ ನಡುವೆಯೇ, ಇಂತಹ ಆ ಭವ್ಯ ಕಟ್ಟಡವನ್ನು ಕಟ್ಟುವುದರ ಹಿಂದಿನ ಪ್ರಾಮಾಣಿಕ ಉದ್ದೇಶವೇನು? ಎಂಬ ಪ್ರಶ್ನೆಯೂ ತೂರಿ ಬಂದಿದೆ. ಕಾಂಗ್ರೆಸ್ ನಾಯಕ ಜಯರಾಮ ರಮೇಶ್ ಇದೇ ಕಾರಣದಿಂದ ‘The first of the personal vanity projects. Every dictator wants to leave behind his architectural legacy. Colossal waste of money’ (ಇದು ಮೊಟ್ಟಮೊದಲ ವೈಯಕ್ತಿಕ ಜಂಬದ ಯೋಜನೆ. ಪ್ರತಿಯೋರ್ವ ಸರ್ವಾಧಿಕಾರಿ ತನ್ನ ವಾಸ್ತುಶಿಲ್ಪ ಪರಂಪರೆಯೊಂದನ್ನು ಬಿಟ್ಟುಹೋಗ ಬಯಸುತ್ತಾನೆ. ಹಣದ ದುರ್ವ್ಯಯ) ಎಂದು ಟ್ವೀಟ್ ಮಾಡಿದ್ದಾರೆ.
ಮಂದಿರವೇನೋ ಭವ್ಯವಾಗಲಿದೆ. ಆದರೆ ಅದರೊಳಗಿನ ದೇವರ ವಿಗ್ರಹದ ಕತೆಯೇನು? ಸಂಸತ್ತನ್ನು ‘ಟೆಂಪಲ್ ಆಫ್ ಡೆಮಾಕ್ರಸಿ’ ಎನ್ನುವುದಿದೆ. ದೇವರಿಗೆ ಮಂದಿರ ಮುಖ್ಯವಲ್ಲ. ಹಾಗೆಯೇ ಜನತಂತ್ರಕ್ಕೆ ಸಂಸತ್ ಕಟ್ಟಡ ಮುಖ್ಯವಲ್ಲ. ದೇವರೇ ಇಲ್ಲದ ಮೇಲೆ ಮಂದಿರವನ್ನು ಇಟ್ಟುಕೊಂಡು ಏನು ಮಾಡುತ್ತೀರಿ? ಜನತಂತ್ರವೇ ಇಲ್ಲದ ಮೇಲೆ ಭವ್ಯ ಸಂಸತ್ ಭವನ ಇಟ್ಟುಕೊಂಡು ಏನು ಮಾಡೋಣ? ಹಳೆಯ ಕಟ್ಟದಲ್ಲಿ ಭೌತಿಕ ಸಮಸ್ಯೆಗಳಿರಬಹುದು. ಆದರೆ ಇರುವ ವ್ಯವಸ್ಥೆಗಳಲ್ಲಿಯಾದರೂ ಅಲ್ಲಿ ಪ್ರಜಾತಂತ್ರವನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ?
ಆದರ್ಶ ಸಂಸತ್ ಹೇಗಿರಬೇಕು?
ಸಂಸತ್ ಎಂದರೆ ಚುನಾಯಿತ ಜನಪ್ರತಿನಿಧಿಗಳು ಒಂದೆಡೆ ಸೇರಿ, ಚರ್ಚಿಸಿ, ದೇಶದ ಹಿತಕ್ಕೆ ಅನುಕೂಲಕರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಾಗ. ಸಂಸತ್ ನ ಒಳಗಡೆ ಆಡಳಿತ ಪಕ್ಷ ಮತ್ತು ವಿಪಕ್ಷಗಳಿರುತ್ತವೆಯಾದರೂ ಅವರು ಪರಸ್ಪರ ಶತ್ರುಗಳಲ್ಲ. ಭಿನ್ನಾಭಿಪ್ರಾಯ ಜನತಂತ್ರದ ಸೌಂದರ್ಯ. ಆಡಳಿತ ಪಕ್ಷ ಮತ್ತು ವಿಪಕ್ಷದ ನಡುವೆ ಭಿನ್ನಾಭಿಪ್ರಾಯ ಇರಬಹುದು ಆದರೆ ಶತ್ರುತ್ವ ಇರಬಾರದು. ಆಡಳಿತ ಪಕ್ಷವು ವಿಪಕ್ಷವನ್ನು ಗೌರವದಿಂದ ನಡೆಸಿಕೊಂಡು ಕೆಲಸ ಮಾಡಬೇಕು. ಲೋಕಸಭೆ ಮತ್ತು ರಾಜ್ಯಸಭೆಯ ಅಧ್ಯಕ್ಷರಾದವರು ನಿಷ್ಪಕ್ಷಪಾತದಿಂದ ಕೆಲಸ ಮಾಡಬೇಕು. ಯಾವುದೇ ಮಸೂದೆ ಕಾನೂನು ಆಗುವ ಮುನ್ನ ಆಳ ಚರ್ಚೆ ನಡೆದು, ಸೂಕ್ತ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಬೇಕು. ವಿಪಕ್ಷದವರು ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ಮಾಡಿಕೊಡಬೇಕು. ಅವರ ಬೇಡಿಕೆಗಳನ್ನು ಸೌಜನ್ಯದಿಂದ ಪರಿಶೀಲಿಸಬೇಕು. ಇಡೀ ಸಂಸತ್ ನ ಸದಸ್ಯರು ಒಂದು ಟೀಮ್ ನಂತೆ ಕೆಲಸ ಮಾಡಬೇಕು. ಇದೊಂದು ಆದರ್ಶ ಸಂಸತ್ ವ್ಯವಸ್ಥೆ.
ಇವೆಲ್ಲ ಈಗ ಸಂಸತ್ ನಲ್ಲಿ ನಡೆಯುತ್ತಿವೆಯೇ? ವಿಪಕ್ಷದವರಿಗೆ ಮಾತನಾಡಲು ಆಡಳಿತಪಕ್ಷದವರೇ ಅಡ್ಡಿಪಡಿಸುವುದು, ಸಭಾಧ್ಯಕ್ಷರು ಆಡಳಿತ ಪಕ್ಷದ ಸದಸ್ಯನಂತೆ ವರ್ತಿಸುವುದು, ವಿಪಕ್ಷದವರು ಮಾತನಾಡುವಾಗ ಮೈಕ್ ಆಫ್ ಮಾಡುವುದು, ಅವರ ಮಾತುಗಳನ್ನು ಕಡತದಿಂದ ತೆಗೆದುಹಾಕುವುದು, ಚರ್ಚೆಯೇ ಇಲ್ಲದೆ ಮಸೂದೆಗಳನ್ನು ಅಂಗೀಕರಿಸುವುದು, ಬೃಹತ್ ಹಗರಣವೊಂದು ನಡೆದಾಗ ಅದಕ್ಕೆ ಜಂಟಿ ಸಂಸದೀಯ ಸಮಿತಿ ನಡೆಸಿ ಚರ್ಚಿಸಲು ಅವಕಾಶ ನೀಡದಿರುವುದು, ವಿವಾದಾಸ್ಪದ ಮಸೂದೆಗಳನ್ನು ಸ್ಥಾಯೀ ಸಮಿತಿಗೆ ಕಳುಹಿಸಲು ಒಪ್ಪದೆ ಸರ್ವಾಧಿಕಾರ ಮೆರೆಯುವುದು, ಆಡಳಿತಪಕ್ಷ ಮತ್ತು ವಿಪಕ್ಷ ಮುಖಕ್ಕೆ ಮುಖ ಕೊಟ್ಟು ಮಾತನಾಡಲಾಗದಂತಹ ಸ್ಥಿತಿ ಇವೆಲ್ಲ ದೇಶದ ಜನತಂತ್ರಕ್ಕೆ ಶೋಭೆ ತರುವ ಸಂಗತಿಗಳೇ? ಜನತಾಂತ್ರಿಕ ಚಟುವಟಿಕೆಗಳಿಗೆ ಅವಕಾಶ ಇಲ್ಲದ ಮೇಲೆ ಕಟ್ಟಡ ಎಷ್ಟು ಭವ್ಯ ಇದ್ದರೆ ಏನು ಪ್ರಯೋಜನ?
ಕಾನೂನುಗಳು ಚರ್ಚೆಯೇ ಇಲ್ಲದೆ ಪಾಸಾಗುವ ಸಂಸತ್ ಬೇಕೇ?
ಇದೇ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷವೊಂದರ ವಕ್ತಾರ ಅಲೋಕ್ ಶರ್ಮಾ ಅವರು ಒಂದು ಟಿವಿ ಟಿಬೇಟ್ ನಲ್ಲಿ ಆಡಿದ ಮಾತುಗಳ ವೀಡಿಯೋ ಈಗ ವೈರಲ್ ಆಗಿದೆ. ಮೋದಿ ಕಟ್ಟಿಸುತ್ತಿರುವ ಕಟ್ಟಡ ಎಂದು ವಾಹಿನಿಯ ಆಂಕರ್ ಪ್ರಸ್ತಾವಿಸಿದಾಗ “ಮೋದಿಯವರ ಮಾವನ ಮನೆಯ ಹಣವೇ? ಅದು ದೇಶದ ತೆರಿಗೆದಾರರ ಹಣ” ಎಂದು ಅವರು ಹೇಳಿದ್ದರು.
ಮುಂದುವರಿದು, “ಸಂಸತ್ತನ್ನು ಕಂಪೆನಿಯ ಹೈಟೆಕ್ ಕಾರ್ಯಾಲಯಕ್ಕೆ ಹೋಲಿಸಬೇಡಿ. ಸಂಸತ್ತು ಇಟ್ಟಿಗೆ, ಸಿಮೆಂಟು, ಕಲ್ಲು ಗಳಿಂದ ಆಗುವುದಲ್ಲ. ಸಂಸತ್ ಅಂದರೆ ಜನತಂತ್ರದ ಮಂದಿರ. ಅಲ್ಲಿ ಜನತಂತ್ರವನ್ನು ಜೀವಂತ ಇಡಲಾಗುತ್ತದೆ. ಕಾಗದ ಇಡಲು ಜಾಗ ಕಡಿಮೆ ಇದ್ದರೂ ಸಂಸತ್ ನಲ್ಲಿ ಮಾತನಾಡಲು ಜಾಗ ಇರುತ್ತದೆ. ನೀವು ಜಾಗ ದೊಡ್ಡದು ಮಾಡಿ, ಮೈಕ್ ದೊಡ್ಡದು ಮಾಡಿ, ಬಟನ್ ಬಂದ್ ಮಾಡಿದರೆ ಏನು ಪ್ರಯೋಜನ? ಇಂತಹ ಸಂಸತ್ ನಮಗೆ ಬೇಕಾ? ಉತ್ತರ ಕೊರಿಯಾದ ಸಂಸತ್ ಕಟ್ಟಡದಂಥ ಭವ್ಯ ಕಟ್ಟಡ ಎಲ್ಲೂ ಇಲ್ಲವಂತೆ. ಆದರೆ ಅದರಲ್ಲಿ ಸರ್ವಾಧಿಕಾರಿ ಕೂರುತ್ತಾನೆ. ನಿಮಗೆ ಸರ್ವಾಧಿಕಾರಿ ಕೂರುವಂತಹ ಸಂಸತ್ ಕಟ್ಟಡ ಬೇಕೇ? ಚರ್ಚೆಯೇ ಇಲ್ಲದೆ ಮೂರು ಕರಾಳ ರೈತ ಕಾನೂನು ಪಾಸ್ ಆಗುವ ಸಂಸತ್ ಬೇಕೇ? ಚರ್ಚೆಯೇ ಇಲ್ಲದೆ ನೋಟ್ ಬಂದಿ ಪಾಸ್ ಆಗುವ ಸಂಸತ್ ಬೇಕೇ? ಸಿಬಿಐ ಡೈರೆಕ್ಟರ್ ಮತ್ತು ಜಜ್ ಗಳ ಮೇಲೆ ಪೆಗಸಸ್ ಛೂ ಬಿಡುವ ಸಂಸತ್ ಬೇಕೇ? ಚೀನಾಕ್ಕೆ ಕ್ಲೀನ್ ಚಿಟ್ ಕೊಡುವಂತಹ ಪ್ರಧಾನಿ ಬೇಕೇ? ಸ್ಥಾಯೀ ಸಮಿತಿ ಇಲ್ಲದ ಸಂಸತ್ ಬೇಕೇ? ರೈತ ಮಸೂದೆ, ನೋಟು ನಿಷೇಧ ಇತ್ಯಾದಿ ಕಾನೂನುಗಳು ಚರ್ಚೆಯೇ ಇಲ್ಲದೆ ಪಾಸಾಗುವ ಸಂಸತ್ ಬೇಕೇ? 81 ಕೋಟಿ ಜನರಿಗೆ ರೇಷನ್ ಕೊಟ್ಟು ಓಟು ಕೇಳುತ್ತೀರಿ. ಆದರೆ ಸಂಸತ್ ಭವ್ಯವಾಗಬೇಕು. ನಿರುದ್ಯೋಗ ಮತ್ತು ಹಸಿವಿನ ಸೂಚ್ಯಂಕದಲ್ಲಿ ಭಾರತ ಜಗತ್ತಿನಲ್ಲಿಯೇ ಕಳಪೆ ಸಾಧನೆ ಮಾಡಿದೆ. ದ್ವೇಷ ಭಾಷಣದಲ್ಲಿ ‘ಈ ಸರಕಾರ ನಪುಂಸಕ’ ಎಂದು ಸುಪ್ರೀಂ ಕೋರ್ಟ್ ಹೇಳುತ್ತದೆ. ರಾಮನವಮಿಯ ಯಾತ್ರೆಯಲ್ಲಿ ಈಗಲೂ ಹಿಂಸೆ ನಿಂತಿಲ್ಲ. ಆದರೆ ಸಂಸತ್ ಭವ್ಯವಾಗಬೇಕು. ಖಾಲಿಸ್ತಾನದ ಕೂಗು ದೇಶದಲ್ಲಿಯಲ್ಲ, ಇಡೀ ವಿಶ್ವದಲ್ಲಿ ಏಳುತ್ತಿದೆ. ಆದರೆ ಸಂಸತ್ ಭವ್ಯವಿರಬೇಕು. ದೇಶದಲ್ಲಿ 3600 ದಂಗೆಯಾಗಿದೆ. ಆದರೆ ಸಂಸತ್ ಭವ್ಯ ಇರಬೇಕು. ಯಾಕೆಂದರೆ ಅದು ಆಧುನಿಕ ಭಾರತದ ಪ್ರತೀಕ. ‘ರಾಮ್ ಜಾದೆ ಹರಾಮ್ ಜಾದೆ’ ಎಂದು ಓಟು ಕೇಳಿ ಸಂಸತ್ ನಲ್ಲಿ ಕೂರುತ್ತಾರೆ. ‘ಗೋಲಿ ಮಾರೋ’ ಎಂದವರು ಸಂಸತ್ ನಲ್ಲಿ ಕೂರುತ್ತಾರೆ. ಶಾಸಕರನ್ನು ಖರೀದಿಸಿ ಸರಕಾರ ಉರುಳಿಸುತ್ತೇವೆ. ಆದರೆ ಸಂಸತ್ ನಲ್ಲಿ ಲೈಟ್ ಚೆನ್ನಾಗಿರಬೇಕು. ದಿಲ್ಲಿ ಜಗತ್ತಿನ ಅತ್ಯಂತ ವಾಯು ಮಾಲಿನ್ಯದ ನಗರ. ಇದೇ ಕಾರಣಕ್ಕೆ ಶಾಲೆ ಬಂದ್ ಮಾಡಬೇಕಾಯಿತು. ಆದರೆ ಸಂಸತ್ ಭವ್ಯವಾಗಿರಬೇಕು. 60 ಸಾವಿರ ಶಾಲೆ ಬಂದ್ ಆಯಿತು. ಅದರೆ ಸಂಸತ್ ಚೆನ್ನಾಗಿರಬೇಕು. ಯಾಕೆಂದರೆ ಅಲ್ಲಿ ಚಕ್ರವರ್ತಿಗಳು ಕೂರಬೇಕು. ಭಾರತೀಯ ಜನ ತಂತ್ರ ಈ ಕಟ್ಟಡಗಳಲ್ಲಿ ನಡೆಯುವುದಲ್ಲ” ಎಂದರು.
ನಿಜ, ಹೊಸಕಾಲದ ಅಗತ್ಯಕ್ಕೆ ತಕ್ಕಂತೆ ಸುಸಜ್ಜಿತ ಸಂಸತ್ ಕಟ್ಟಡವೊಂದರ ಅಗತ್ಯವಿದೆ. ಆದರೆ ಅದು ದೇವರಿಲ್ಲದ ಗುಡಿಯಂತಾಗದಿರಲಿ, ಜನತಂತ್ರಕ್ಕೆ ಜಾಗವಿರದ ಬರಿಯ ಕಟ್ಟಡವಾಗದಿರಲಿ.
ಶ್ರೀನಿವಾಸ ಕಾರ್ಕಳ
ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.