ನನ್ನನ್ನು ಬಿಟ್ಟು ಅಪ್ಪ ಅಮ್ಮ ಗುಳೇ ಹೊರಡುವಾಗ ನಾನು ಬಿದ್ದು ಬಿದ್ದು ಹೊರಳಾಡಿ ಅಳುತ್ತಿದ್ದೆ. ತಂದೆ ಬೆಂಗಳೂರಿಗೆ ಮುಟ್ಟಿದ ನಂತರ ಕರೆ ಮಾಡಿ “ಮಗಾ ನೋಡು ನಮ್ಮ ಜೀವನ…ನಾವೂ ಹೇಗಾದರೂ ಬದುಕಬೇಕಲ್ಲ ..ಸಮಾಧಾನ ಮಾಡ್ಕೋ” ಅಂತ ಹೇಳೋರು. ಸಣ್ಣ ವಯಸ್ಸಿನಲ್ಲೇ ಎದುರಾದ ಆರ್ಥಿಕ ಸಮಸ್ಯೆ ನನ್ನನ್ನು ಓದಿನ ಕಡೆ ತಳ್ಳಿತು ಎಂದು ನೆನಪಿಸಿಕೊಳ್ಳುತ್ತಾರೆ ರಾಯಚೂರಿನ ಪಿಯುಸಿ ವಿದ್ಯಾರ್ಥಿ ಶ್ರೀಕಾಂತ್ ಕೋಠಾ.
ಅಪ್ಪ-ಅಮ್ಮನಿಗೆ ಮೂರನೇ ಮಗನಾಗಿ ಬಡ ಕುಟುಂಬದಲ್ಲಿ ಜನಿಸಿದವ ನಾನು. ಮೊದಲು ಒಂದನೇ ತರಗತಿಗೆ ಸರಕಾರಿ ಶಾಲೆಗೆ ಸೇರಿಸಿದರು. ಹೇಗೋ ಅದನ್ನು ಮುಗಿಸಿದೆ. ಆನಂತರ ಎಷ್ಟೇ ಕಷ್ಟವಾದರೂ ಕೂಡ ನನ್ನ ಮಗ ಚೆನ್ನಾಗಿ ಓದಬೇಕು ಅಂತ ನನ್ನಪ್ಪ ಕಷ್ಟಪಟ್ಟು ನಮ್ಮೂರಿನ ಖಾಸಗಿ ಶಾಲೆಯಾದ ಶ್ರೀ ಜ್ಞಾನ ಸಂಜೀವಿನಿ ಶಾಲೆಗೆ ಸೇರಿಸಿಯೇ ಬಿಟ್ಟರು. ಆ ಶಾಲೆಯಲ್ಲಿ ನಮ್ಮ ಕಷ್ಟವನ್ನು ಕಂಡು ಎಲ್ಲಾ ಗುರುಗಳು ಮಮತೆಯಿಂದ ಮಾತನಾಡುತ್ತಾ ಓದಿನ ಬೀಜವನ್ನು ನನ್ನಲ್ಲಿ ಬಿತ್ತಿ ಮೊಳಕೆಯೊಡೆಯುವಂತೆ ಮಾಡಿದರು.
ನಮ್ಮ ಕುಟುಂಬದ ಉದ್ಯೋಗ ಗುಳೆ ಹೊರಡುವುದು. ಅಂದರೆ ಬೆಂಗಳೂರಿನಲ್ಲಿ ದುಡಿಯುವವರು. ನಾನು ಎರಡನೇ ತರಗತಿಯಲ್ಲಿ ಓದುತ್ತಿರುವಾಗ ಒಂದು ಘಟನೆ ನಡೆದಿತ್ತು. ನಮ್ಮಪ್ಪ-ಅಮ್ಮ ನಾನು ಎಂಟು ವರ್ಷದ ಹುಡುಗನಾಗಿದ್ದಾಗಲೇ ನನ್ನನ್ನು ಬೇರೆಯವರ ಮನೆಯಲ್ಲಿ ಬಿಟ್ಟು ಆರಾಮಾಗಿರು ಮಗ ಚೆನ್ನಾಗಿ ಓದು ಅಂತ ಹೇಳಿ ಬೆಂಗಳೂರಿಗೆ ದುಡಿಯೋಕೆ ಗುಳೆ ಹೊರಟರು.
ಆ ಸಂದರ್ಭದಲ್ಲಿ ಅವ್ರು ಹೋಗುವಾಗ ನಾನು ಬಿದ್ದು ಬಿದ್ದು ಹೊರಳಾಡಿ ಅಳುತಿದ್ದೆ. ನನ್ನ ಅಳುವನ್ನು ಲೆಕ್ಕಿಸದೇ ಹೋಗುವ ತಂದೆ ಬೆಂಗಳೂರಿಗೆ ಮುಟ್ಟಿದ ನಂತರ ಕರೆ ಮಾಡಿ “ಮಗಾ ನೋಡು ನಮ್ಮ ಜೀವನ ಹೇಗಿದೆ..ನಾವೂ ಹೇಗಾದರೂ ಬದುಕಬೇಕಲ್ಲ ..ಸಮಾಧಾನ ಮಾಡ್ಕೋ” ಅಂತ ಹೇಳೋರು. ಸಣ್ಣ ವಯಸ್ಸಿನಲ್ಲೇ ಆರ್ಥಿಕ ಸಮಸ್ಯೆ ಎಂಬ ಅನುಭವ ನನ್ನಲ್ಲಿ ಗಾಢವಾದ ಪರಿಣಾಮ ಬೀರುತ್ತಾ ಹೋಯಿತು. ಹೇಗೋ ಅಷ್ಟೊತ್ತಿಗೆ, ಐದನೇ ತರಗತಿಯವರೆಗೆ ಆ ಖಾಸಗಿ ಶಾಲೆಯಲ್ಲಿಯೇ ಓದು ಮುಗಿಸಿದೆ. ನನ್ನ ತಂದೆ ತಾಯಿ ನಮಗೆ ಎಷ್ಟೇ ಕಷ್ಟ ಆದರೂ ನನ್ನ ಮಗ ಎಲ್ಲರಂತೆ ಬುದ್ಧಿವಂತ ಆಗಬೇಕು ಎಂದು ನನ್ನನ್ನು ಮುಂದೆ ಹಟ್ಟಿಯಲ್ಲಿನ ವಿನಾಯಕ ಶಾಲೆಗೆ ಸೇರಿಸಿದರು.
ನಾವು ವರ್ಷದಲ್ಲಿ ಹೆತ್ತವರನ್ನು ನೋಡುವುದು ಎರಡು ಅಥವಾ ಮೂರು ತಿಂಗಳು ಮಾತ್ರ. ಆರನೇ ತರಗತಿ ಮುಗಿಸಿ ಏಳನೇ ತರಗತಿಯ ಎರಡು ತಿಂಗಳ ಬೇಸಿಗೆ ರಜೆಯಲ್ಲಿ ನಾನು ಅಪ್ಪ ಅಮ್ಮ ಅಣ್ಣನ ನೋಡಿಕೊಂಡು ಮಾತಾಡಿಸಿ ಬರೋಣವೆಂದು ಬೆಂಗಳೂರಿಗೆ ಹೋಗಿದ್ದೆ. ಅವರು ಲಗ್ಗೆರಿ ಎಂಬ ಏರಿಯಾದಲ್ಲಿ ಆಗ ಇದ್ದರು. ನಾನು ಹೋಗಿ ಅವರನ್ನು ನೋಡಿದಾಕ್ಷಣ ಅವರು ಇರುವ ಗುಡಿಸಲು ನೋಡಿ ನನಗೆ ಕಣ್ಣಲ್ಲಿ ನೀರು ಬಂತು. ನಾನು ಕಣ್ಣೀರು ಹಾಕುವುದನ್ನು ಕಂಡು ನನ್ನ ತಾಯಿ ಒಂದು ಮಾತು ಹೇಳಿದಳು “ಮಗ ನೀನು ಯಾಕೆ ಆಳುತ್ತಿಯಾ ಬಿಡು, ಇಂತ ಪರಿಸ್ಥಿತಿ ನಿನಗೆ ಬರಬಾರದು ಅನ್ನೋದು ನಮ್ಮಾಸೆ.” ಅಪ್ಪ ಅಮ್ಮನ ಜೊತೆ ಎರಡು ತಿಂಗಳು ಕಳೆದು ಮತ್ತೆ ಊರಿಗೆ ಬಂದೆ. ನನಗೆ ಆಗ ಗೊತ್ತಾಯ್ತು ಹೆತ್ತವರನ್ನು ಬಿಟ್ಟು ಬೇರೆಯವರ ಮನೆಯಲ್ಲಿ ಇರುವುದು ಎಷ್ಟು ಕಷ್ಟ ಅಂತ. ಎಂಟನೇ ತರಗತಿ ಅಲ್ಲೇ ಮುಗಿಸಿ, ನಂತರ ಈ ಪರಿಸ್ಥಿತಿಯಲ್ಲಿ ನಾನು ಖಾಸಗಿ ಶಾಲೆಯಲ್ಲಿ ಫೀಸ್ ತುಂಬಿ ಓದುವುದು ಸರಿಯಲ್ಲ ಎಂದು ತಿಳಿದು ನಮ್ಮೂರಿನ ಸರಕಾರಿ ಪ್ರೌಢ ಶಾಲೆಗೆ ಒಂಬತ್ತನೇ ತರಗತಿಗೆ ಮತ್ತೆ ಸೇರಿದೆ.
ನಾನು ಈ ಎರಡು ವರ್ಷದಲ್ಲಿ ಎಲ್ಲ ಕಷ್ಟವನ್ನು ಮರೆತು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದೆ. ಅಮರೇಶ್ ಎನ್ನುವ ಗುರುಗಳು ಟ್ಯೂಷನ್ ಹೇಳುತ್ತಿದ್ದರು. ಅವರು ನನ್ನಲ್ಲಿ ದುಡ್ಡು ಕೇಳುತ್ತಿರಲಿಲ್ಲ ನಿನ್ನ ಹತ್ತಿರ ಯಾವಾಗ ಇರುತ್ತದೆಯೋ ಆಗಲೇ ಕೊಡು ಅನ್ನುತ್ತಿದ್ದರು.
ಆ ಸರಕಾರಿ ಶಾಲೆಯಲ್ಲಿ ನನ್ನ ಭಾವನೆಗಳನ್ನು ಹಂಚಿಕೊಳ್ಳುವಂತಹ ಕೆಲವು ಆತ್ಮೀಯ ಸ್ನೇಹಿತರು ನನಗೆ ಸಿಕ್ಕರು. ಜೊತೆಗೆ ಅಲ್ಲಿನ ಗುರುಗಳು ಸಹ ನೈತಿಕ ಮೌಲ್ಯದ ಜೊತೆಗೆ ಪ್ರೀತಿಯಿಂದ ಪಾಠವನ್ನು ಹೇಳುತ್ತಿದ್ದರು. ನಾನು ಒಂಬತ್ತನೇ ತರಗತಿಯಲ್ಲಿದ್ದಾಗ ಸಮಾಜ ವಿಜ್ಞಾನದ ಶಿಕ್ಷಕರಾದ ನಾಗಪ್ಪ ಗುರುಗಳು ಮತ್ತು ಅಕ್ಷತಾ ಮೇಡಂ ಮಕ್ಕಳ ಹಕ್ಕುಗಳ ಬಗ್ಗೆ ಹಟ್ಟಿಯಲ್ಲಿ ಇದ್ದ ಒಂದು ಸಮಾರಂಭಕ್ಕೆ ನನ್ನನ್ನು ಮತ್ತು ಏಳನೇ ತರಗತಿಯ ವಿದ್ಯಾರ್ಥಿನಿ ರಾಜೇಶ್ವರಿಯನ್ನು ಕರೆದುಕೊಂಡು ಹೋಗಿದ್ರು. ಅಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ನಾನು ಅವತ್ತು ಭಾಷಣ ಮಾಡಿದೆ. ಅದು ಆ ದಿನದ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿ ನನ್ನ ತಂದೆ ತಾಯಿ ಸಂತೋಷ ವ್ಯಕ್ತಪಡಿಸಿ, ಒಳ್ಳೇದಾಗ್ಲಿ ಮಗಾ ಅಂದಿದ್ರು.
ಪಾಠದ ಜೊತೆಗೆ ನೈತಿಕತೆಯನ್ನು ಬೆಳೆಸಲು ಶಿಕ್ಷಕರು ಮಾರ್ಗದರ್ಶನ ನೀಡಿದರೆ, ಜೀವನದಲ್ಲಿ ಮಾರ್ಗದರ್ಶನ ನೀಡಿದವರು ನನ್ನ ಅಣ್ಣ (ಮಂಜು). ಆತ ಪದೇ ಪದೇ ಒಂದು ಮಾತು ಹೇಳುತಿದ್ದ- ಬೆಂಗಳೂರಲ್ಲಿ ದುಡಿಯುವುದು ತುಂಬಾ ಕಷ್ಟ. ಇದನ್ನು ನಾನು ಅನುಭವಿಸುತ್ತಿದ್ದೀನಿ ನಿನಗಿದು ಬೇಡ ಅಂತ. ಸಮಾಜ ಹೇಗಿದೆ, ಜನರು ಹೇಗಿದಾರೆ ಎಂದು ನನ್ನ ಅಣ್ಣ ತಿಳಿಸುತ್ತಿದ್ದ.
ಮುಂದೆ ಹತ್ತನೇ ತರಗತಿಗೆ ಕಾಲಿಟ್ಟಾಗ ಕಷ್ಟದ ಅನುಭವಗಳ ಜೊತೆಗೆ ಅಭ್ಯಾಸವನ್ನು ಮುಂದುವರೆಸಿದೆ. ಆದರೂ ಹತ್ತನೇ ತರಗತಿಯಲ್ಲಿ ಇದ್ದಾಗ ಬಹಳ ಜನ ನನ್ನ ನೋಡಿ ಅಸಹ್ಯ ಪಡುತ್ತಿದ್ದರು. ನಾನು ದು:ಖ ಪಡುತ್ತಲೇ ಕೆಲವು ಶಿಕ್ಷಕರ ಹಾಗೂ ಹೆತ್ತವರ ಆಶೀರ್ವಾದದಿಂದ ಎಸ್.ಎಸ್.ಎಲ್.ಸಿಯಲ್ಲಿ ಶಾಲೆಗೆ ಆ ವರ್ಷದಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ!
ಈಗ ಪ್ರಥಮ ವರ್ಷದ ಪಿ.ಯು.ಸಿಯನ್ನು ಶ್ರೀ ವಿನಾಯಕ ಹಟ್ಟಿ ಚಿನ್ನದ ಗಣಿ ಕಾಲೇಜಿನಲ್ಲಿ ಓದುತ್ತಿದ್ದೇನೆ. ಅದರೊಟ್ಟಿಗೆ ನಮ್ಮ ಭಾಗದ ಹಿರಿಯ ಕವಿಗಳಾದ ಮಹೇಂದ್ರ ಕುರ್ಡಿ ಸರ್ ಅವರ ಮಾರ್ಗದರ್ಶನದಿಂದ ಕವನ ಹಾಗೂ ಹಾಡುಗಳನ್ನು ಬರೆಯುತ್ತಿದ್ದೇನೆ. ಜೊತೆಗೆ ಯೂಟ್ಯೂಬಲ್ಲಿ Dream boy Shrikanth ಎಂಬ ಚಾನೆಲ್ ಅನ್ನು ಶುರುಮಾಡಿ ಇತರರಿಗೆ ಪ್ರೇರಣೆ ನೀಡುವಂತಹ ಹಾಗೂ ಭಾವನಾತ್ಮಕವಾದ ವಿಡಿಯೋಗಳನ್ನು ಇತ್ತೀಚಿನಿಂದ ಹಂಚಿಕೊಳ್ಳುತ್ತಿದ್ದೇನೆ.
ಶ್ರೀಕಾಂತ್ ಕೋಠಾ
ಪಿಯುಸಿ ವಿದ್ಯಾರ್ಥಿ, ಹಟ್ಟಿಚಿನ್ನದ ಗಣಿ.