Home ಕರ್ನಾಟಕ ಚುನಾವಣೆ - 2023 ಕರಾವಳಿಯಲ್ಲಿ ಕಾಂಗ್ರೆಸ್ ನ್ನು ಕಾಂಗ್ರೆಸಿಗರೇ ಸೋಲಿಸಿದರು!

ಕರಾವಳಿಯಲ್ಲಿ ಕಾಂಗ್ರೆಸ್ ನ್ನು ಕಾಂಗ್ರೆಸಿಗರೇ ಸೋಲಿಸಿದರು!

0

ಜಾತಿವಾರು ಟಿಕೆಟ್ ಹಂಚಿಕೆಯಲ್ಲಿನ ಸದುಪಯೋಗ ಪಡೆದುಕೊಳ್ಳುವಲ್ಲಿ ಉಡುಪಿ ಜಿಲ್ಲೆಯ ಕಾಂಗ್ರೆಸ್ ವಿಫಲವಾಯಿತು. ಶಾಸಕರುಗಳ ನಡುವಿನ ಮನಸ್ತಾಪ ಹೆಚ್ಚಾಯಿತು. ಪಕ್ಷ ಸಂಘಟನೆ ದುರ್ಬಲಗೊಂಡಿತು. ಪಕ್ಷದ ಶಾಸಕರುಗಳಿದ್ದ ಕಡೆ ಸ್ವ-ಕೇಂದ್ರಿತ ಸಂಘಟನೆ, ಅಭಿಮಾನಿ ವರ್ಗ ಅಥವಾ ಭಟ್ಟಂಗಿಗಳನ್ನೇ ಬೆಳೆಸುವಲ್ಲಿ ಶಾಸಕರು-ನಾಯಕರು ನಿರತರಾದರು ಎಂದು ಪತ್ರಕರ್ತ ದಿನೇಶ್ ಕಿಣಿಯವರು  ವಿಶ್ಲೇಷಿಸುತ್ತಾರೆ.

ಕರ್ನಾಟಕ ಕರಾವಳಿಯಲ್ಲಿ (ಉಡುಪಿ)ಕಾಂಗ್ರೆಸ್ ಹಿಂದಕ್ಕೆ ಬೀಳಲು ಸಂಘ ಪರಿವಾರ ಕರಾವಳಿಯ ಯುವ ಜನರಲ್ಲಿ ಹಿಂದುತ್ವ ಹಾಗೂ ಕೋಮುವಾದದ ವಿಷ ಬೀಜ ಬಿತ್ತಿದ್ದೇ ಕಾರಣ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಆ ವಿಷ ದೇಹಪೂರ್ತಿ ಹರಡುವವರೆಗೂ ಕಾಂಗ್ರೆಸ್ ಮುಖಂಡರುಗಳು, ಮುಖ್ಯವಾಗಿ ಶಾಸಕ-ಸಂಸದರುಗಳು ಸ್ವಾರ್ಥ ರಾಜಕಾರಣದಲ್ಲಿ ನಿರತರಾಗಿದ್ದೇ ಕಾರಣ ಎಂಬುದು ಮಾತ್ರ ಕಟು ಸತ್ಯ.

ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡೀಸ್, ಮನೋರಮಾ ಮಧ್ವರಾಜ್, ವೀರಪ್ಪ ಮೊಯ್ಲಿ ಮತ್ತಿತರ ಕರಾವಳಿ ಕಾಂಗ್ರೆಸಿನ ದಿಗ್ಗಜರು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲವದು. ಪಕ್ಷ ಸಂಘಟನೆ ಜೋರಾಗಿತ್ತು. ಪಕ್ಷದ ನಾಯಕರಲ್ಲಿ ಅನ್ಯೋನ್ಯತೆಯಿತ್ತು. ಅವಿಭಜಿತ ದ.ಕ. ಜಿಲ್ಲೆಯ ನಾಯಕರು ಏಕ ಮನಸ್ಸಿನಿಂದ ಚುನಾವಣೆ ಎದುರಿಸುವುದಿತ್ತು. ಉದಾಹರಣೆಗೆ, ಅದು ಲೋಕಸಭಾ ಚುನಾವಣೆಯಿರಲಿ,  ವಿಧಾನಸಭಾ ಚುನಾವಣೆ ಇರಲಿ, ಅಥವಾ ವಿಧಾನ ಪರಿಷತ್ ಚುನಾವಣೆಯೇ ಇರಲಿ, ನಾಯಕರು ಪರಸ್ಪರ ಸಮನ್ವಯ ಸಾಧಿಸುವುದಿತ್ತು. ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಡುಪಿಗೆ ಬಂದು ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವುದು, ಮತ ಪ್ರಚಾರ ಮಾಡುವುದಿತ್ತು. ಉಡುಪಿ ಕ್ಷೇತ್ರದ ಅಭ್ಯರ್ಥಿ ಮಂಗಳೂರಿಗೆ ತೆರಳಿ ಅಲ್ಲಿಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಕೊಳ್ಳುವುದಿತ್ತು. ಅದು ದ.ಕ. ಹಾಗೂ ಉಡುಪಿ  ಜಿಲ್ಲೆಯೊಳಗಿನ ವಿಧಾನಸಭಾ ಚುನಾವಣೆಗಳಲ್ಲೂ ಯಶಸ್ವಿಯಾಗಿ ಮುಂದುವರಿದಿತ್ತು. ಎಲ್ಲಿಯವರೆಗೆ  ಈ ಸಮನ್ವಯತೆ ಇತ್ತೊ ಅಲ್ಲಿಯವರೆಗೆ ವಿರೋಧ ಪಕ್ಷ ಬಿಜೆಪಿಗೆ ಜಿಲ್ಲೆಯಲ್ಲಿ ಅಧಿಕಾರ ಕಸಿದುಕೊಳ್ಳಲು ಸಾಧ್ಯವಾಗಿರಲಿಲ್ಲ. ಚುನಾವಣೆಗಳ ಬಳಿಕವೂ, ಜಿಲ್ಲೆಯ ಅಭಿವೃದ್ಧಿಯ ವಿಷಯದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು-ಸಂಸದರು ಒಗ್ಗಟ್ಟು ಸಾಧಿಸುವುದಿತ್ತು.

ಅಧಿಕಾರದ ಆಸೆ ಅಥವಾ ಮಂತ್ರಿಗಿರಿಗೆ ಲಾಬ್ಬಿ ನಡೆಸುವ ವಿಷಯದಲ್ಲಿ ನಾಯಕರೊಳಗೆ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವ ಕೆಲಸ ಗುಟ್ಟಾಗಿ ನಡೆಯಿತು. ತನ್ನ ಪಕ್ಷದವನಾದ ಇನ್ನೊಬ್ಬ ಶಾಸಕ ಇಲ್ಲಿ ಸೋತರೆ ಮಂತ್ರಿಗಿರಿ ತನಗೇ ಖಾತರಿ ಎಂಬಿತ್ಯಾದಿ ಲೆಕ್ಕಾಚಾರಗಳು ಉಡುಪಿ, ಕಾಪು, ಬೈಂದೂರು ಕ್ಷೇತ್ರಗಳಲ್ಲಿ ನಡೆದವು. ಬಳಿಕದ ವರ್ಷಗಳಲ್ಲಿ ನಾಯಕರುಗಳೊಳಗೇ ವೈಮನಸ್ಸು, ಸಣ್ಣ ಮನಸ್ಸು, ಸ್ವಾರ್ಥ ರಾಜಕಾರಣ ಹುಟ್ಟಿಕೊಂಡಿದೆ. ಶಾಸಕರುಗಳು ತಮ್ಮ ಕ್ಷೇತ್ರಗಳಿಗೇ ಸೀಮಿತರಾದರು. ಅದೂ ಅಡ್ಡಿಯಿರಲಿಲ್ಲ. ಆದರೆ ತಮ್ಮ ಕ್ಷೇತ್ರಗಳ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸ್ವಪಕ್ಷೀಯರೇ ಆದ ಅನ್ಯ ಕ್ಷೇತ್ರದ ಶಾಸಕರು ಪಾಲ್ಗೊಳ್ಳುವುದು ಜಿಲ್ಲೆಯ ಕೆಲ ಶಾಸಕರುಗಳ ಕಣ್ಣು ಕೆಂಪಾಗಿಸುತ್ತಿತ್ತು. ಶಂಕು ಸ್ಥಾಪನೆ, ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲೂ ಇತರ ಕ್ಷೇತ್ರಗಳ ಶಾಸಕರನ್ನು ದೂರವಿಡಲಾಯಿತು. ಚುನಾವಣಾ ಪ್ರಚಾರದಲ್ಲಿ ಸಮುದಾಯದ ನಾಯಕರೂ ಆಗಿರುವ ಇತರ ಶಾಸಕರು-ನಾಯಕರುಗಳನ್ನು ಬಳಸಿಕೊಳ್ಳುವ ಸತ್ ಸಂಪ್ರದಾಯ ಬರೀ ಕಾಟಾಚಾರಕ್ಕೆ ನಡೆಯಿತು ಅಥವಾ ಅದಕ್ಕೂ ಇತಿಶ್ರೀ ಹಾಡಲಾಯಿತು.

ಹಾಗಾಗಿ ಜಾತಿವಾರು ಟಿಕೆಟ್ ಹಂಚಿಕೆಯಲ್ಲಿನ ಸದುಪಯೋಗ ಪಡೆದುಕೊಳ್ಳುವಲ್ಲಿ ಜಿಲ್ಲೆಯ ಕಾಂಗ್ರೆಸ್ ವಿಫಲವಾಯಿತು. ಶಾಸಕರುಗಳ ನಡುವಿನ ಮನಸ್ತಾಪ ಹೆಚ್ಚಾಯಿತು. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ಪಕ್ಷ ಸಂಘಟನೆ ದುರ್ಬಲಗೊಂಡಿತು. ಪಕ್ಷದ ಶಾಸಕರುಗಳಿದ್ದ ಕಡೆ ಸ್ವ-ಕೇಂದ್ರಿತ ಸಂಘಟನೆ, ಅಭಿಮಾನಿ ವರ್ಗ ಅಥವಾ ಭಟ್ಟಂಗಿಗಳನ್ನೇ ಬೆಳೆಸುವಲ್ಲಿ ಶಾಸಕರು-ನಾಯಕರು ನಿರತರಾದರು.

ಇದೆಲ್ಲದರ ಪರಿಣಾಮ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಹೇಳ ಹೆಸರಿಲ್ಲದಂತಾಯಿತು. ಕಾಂಗ್ರೆಸಿಗರನ್ನು ಕಾಂಗ್ರೆಸಿಗರೇ ಸೋಲಿಸಿದಂತಾಯಿತು! ಈಗ ಮತ್ತೆ ಚುನಾವಣೆ ಬಂದಿದೆ. ಈ ಹಿಂದೆ ಮಾಡಿದ ತಪ್ಪಿನಿಂದ ನಾಯಕರುಗಳು ಇನ್ನೂ ಕಲಿತುಕೊಂಡಿಲ್ಲವಾದರೆ ಮತ್ತೆ ಸೋಲು ಖಚಿತ ಎಂಬುದು ಕಟು ಸತ್ಯ. 

ಜಿಲ್ಲೆಯ ಹಿಂದಿನ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರ್ಯಕರ್ತರು ಕಾರಣರಲ್ಲ. ಕಾರ್ಯಕರ್ತರು ಪಕ್ಷಕ್ಕಾಗಿ ಹಿಂದೆಯೂ ನಿಯತ್ತಿನಿಂದ ದುಡಿದಿದ್ದಾರೆ. ಈ ಬಾರಿಯೂ ದುಡಿಯುವ ಹುಮ್ಮಸ್ಸಿನಲ್ಲಿದ್ದಾರೆ. ನಾಯಕರು, ಪಕ್ಷ,  ಕಾರ್ಯಕರ್ತರ ಉತ್ಸಾಹವನ್ನು ಯಾವ ರೀತಿ ಬಳಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ದಿನೇಶ್‌ ಕಿಣಿ

ಪತ್ರಕರ್ತರು

You cannot copy content of this page

Exit mobile version