ಭಯೋತ್ಪಾದಕ ಸಂಘಟನೆ ‘ಸಿಖ್ಸ್ ಫಾರ್ ಜಸ್ಟಿಸ್’ನಿಂದ ರಾಜಕೀಯ ದೇಣಿಗೆ ಪಡೆದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಎನ್ ಐಎ ತನಿಖೆ ನಡೆಸುವಂತೆ ರಾಜ್ಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಶಿಫಾರಸು ಮಾಡಿದ್ದಾರೆ.
ಈ ಸಂಬಂಧ ಸಕ್ಸೇನಾ ಅವರು ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
1993ರ ಸ್ಫೋಟ ಪ್ರಕರಣದ ಅಪರಾಧಿ ದೇವೇಂದ್ರ ಪಾಲ್ ಭುಲ್ಲರ್ ಅವರನ್ನು ಬಿಡುಗಡೆ ಮಾಡಲು ಸಹಾಯ ಕೋರಿ ಖಲಿಸ್ತಾನ್ ಪರ ಭಯೋತ್ಪಾದಕ ಸಂಘಟನೆಗಳಿಂದ ಕೇಜ್ರಿವಾಲ್ ನೇತೃತ್ವದ ಎಎಪಿ 16 ಮಿಲಿಯನ್ ಡಾಲರ್ ಪಡೆದಿದೆ ಎಂಬ ದೂರನ್ನು ಸ್ವೀಕರಿಸಿರುವುದಾಗಿ ಸಕ್ಸೇನಾ ಪತ್ರದಲ್ಲಿ ತಿಳಿಸಿದ್ದಾರೆ.
ಈ ನಡುವೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು ನೀಡಲು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಘೋಷಿಸಿದ ಕೆಲವೇ ದಿನಗಳಲ್ಲಿ ಸಕ್ಸೇನಾ ಪತ್ರದೊಂದಿಗೆ ಇದಕ್ಕೆ ಸಂಬಂಧಿಸಿದ ಸಾಕ್ಷ್ಯವನ್ನು ಸಹ ಲಗತ್ತಿಸಿದ್ದಾರೆ ಎಂದು ವರದಿಯಾಗಿದೆ.
ಇದು ಬಿಜೆಪಿಯ ಆದೇಶದ ಮೇರೆಗೆ ಕೇಜ್ರಿವಾಲ್ ವಿರುದ್ಧದ ಮತ್ತೊಂದು ಪಿತೂರಿ ಎಂದು ಎಎಪಿ ಟೀಕಿಸಿದೆ. ದೆಹಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವ ಭಯದಲ್ಲಿರುವ ಬಿಜೆಪಿ ಇಂತಹ ಷಡ್ಯಂತ್ರಗಳಿಗೆ ಮುಂದಾಗಿದೆ ಎಂದು ಎಎಪಿ ನಾಯಕರು ಮತ್ತು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಟೀಕಿಸಿದ್ದಾರೆ.