ಬೆಂಗಳೂರು: ಪ್ರಜ್ವಲ್ ರೇವಣ್ಣನಿಗೆ ಎಂತಹ ಶಿಕ್ಷೆ ಸಿಗಬೇಕೆಂದರೆ ಆತ ಮತ್ತೆ ತಲೆ ಎತ್ತಿ ನಿಲ್ಲದಂತೆ ಮಾಡಬೇಕು ಎಂದು ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಅಭಿಪ್ರಾಯಪಟ್ಟಿದ್ದಾರೆ.
ಜೆಡಿಎಸ್ ಸಂಸದ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೆಕಾರ್ಡ್ ಮಾಡಿರುವ ಮೂರು ಸಾವಿರ ವಿಡಿಯೋ ಕ್ಲಿಪ್ಪಿಂಗ್ಗಳಲ್ಲಿ ಸಂತ್ರಸ್ತೆ ಮೃದುಲಾ (ಹೆಸರು ಬದಲಾಯಿಸಲಾಗಿದೆ) ಕೂಡ ಸೇರಿದ್ದಾರೆ. ಆದರೆ ಮೃದುಲಾ ಮನೆಯವರಿಗೆ ಈ ವಿಷಯ ತಿಳಿಯುವ ಮೊದಲೇ ರೇವಣ್ಣನ ಕುಟುಂಬದ ಆತ್ಮೀಯ ಸ್ನೇಹಿತ ಸತೀಶ್ ಬಾಬಣ್ಣ ಆಕೆಯನ್ನು ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗಿದ್ದಾನೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಮೃದುಲಾ ಸಂಬಂಧಿಕರು ಮತ್ತು ಸ್ನೇಹಿತರು ವಿಡಿಯೋಗಳ ವಿಷಯವನ್ನು ಮಗನ ಗಮನಕ್ಕೆ ತಂದರು.
ಮೃದುಲಾ ಮತ್ತು ಆಕೆಯ ಪತಿ ಇಬ್ಬರೂ ಪ್ರಜ್ವಲ್ ತಂದೆ ಹೆಚ್.ಡಿ.ರೇವಣ್ಣ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ಅಲ್ಲಿನ ಕೆಲಸ ಬಿಟ್ಟು ಗರ್ಭಿಣಿ ಮಗಳನ್ನು ಸಾಕಲು ಮೈಸೂರು ಜಿಲ್ಲೆಯ ಸ್ವಗ್ರಾಮಕ್ಕೆ ಬಂದಿದ್ದರು. ‘ಆಗಲೂ ಆಕೆ ಅತ್ಯಾಚಾರದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ನಾವು ಅವಳನ್ನು ಬೈಯುತ್ತೇವೆ ಎಂದು ಅವಳು ಹೆದರಿದ್ದಳು. ಆದರೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ಅವಳು ಯಾವುದೇ ತಪ್ಪು ಮಾಡಿಲ್ಲ. ಆದರೆ ಇದು ಅವಳ ತಪ್ಪು ಎಂದು ಜನರು ಹೇಳುತ್ತಾರೆ. ನಮ್ಮದೇನೂ ತಪ್ಪಿಲ್ಲದಿದ್ದರೂ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ಗೊತ್ತಾಗುತ್ತಿಲ್ಲ’ ಎಂದು ಮೃದುಲಾ ಸಹೋದರಿ ಮಾಲಾ ಹೇಳಿದರು.
ಈ ತಿಂಗಳ 3ರಂದು ಪೊಲೀಸರು ಸತೀಶನನ್ನು ಬಂಧಿಸಿದ್ದರು. ಮರುದಿನ ಬೆಂಗಳೂರಿಗೆ ಕರೆತರಲಾಯಿತು. ಅದೇ ದಿನ ಹೆಚ್.ಡಿ.ರೇವಣ್ಣ ಅವರನ್ನೂ ಬಂಧಿಸಲಾಗಿತ್ತು. ಎರಡು ಬಾರಿ ಲುಕೌಟ್ ನೋಟಿಸ್ ಜಾರಿ ಮಾಡಿದರೂ ಪ್ರಜ್ವಲ್ ತಲೆಮರೆಸಿಕೊಂಡಿದ್ದಾನೆ. ಕಳೆದ ತಿಂಗಳು 24ರಂದು ಕುಟುಂಬ ಸದಸ್ಯರು ಮೃದುಲಾರನ್ನು ಕೊನೆಯ ಬಾರಿಗೆ ನೋಡಿದ್ದಾರೆ. ಸತೀಶ್ ಜೊತೆ ಹೋಗಿದ್ದ ಮೃದುಲಾ ಮತದಾನದ ದಿನ ವಾಪಸ್ಸಾದರು. ಎರಡು ದಿನಗಳ ನಂತರ ಸತೀಶ್ ಮತ್ತೆ ಬಂದು ಮೃದುಲಾರನ್ನು ತನ್ನ ಜೊತೆ ಬರುವಂತೆ ಒತ್ತಾಯಿಸಿದ. ಹೆಚ್.ಡಿ.ರೇವಣ್ಣ ಕೇಸ್ ವಿಚಾರವಾಗಿ ಬರಲು ಹೇಳಿದ್ದಾರೆ ಎಂದು ಅವನು ಹೇಳಿದ್ದ. ಹಾಗಾಗಿ ಸತೀಶನ ಜೊತೆ ಅವರು ಹೋದರು.
ಆ ಬಳಿಕ ಮೃದುಲಾರನ್ನು ಭೇಟಿಯಾಗಲು ಕುಟುಂಬಸ್ಥರು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಪೊಲೀಸರು ಮೃದುಲಾರನ್ನು ಬಂಧಿಸಿದ್ದು ಜಾಮೀನು ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಸತೀಶ್ ಅವರಿಗೆ ತಿಳಿಸಿದ್ದ.
ಮೃದುಲಾರ ಮೇಲೆ ಅತ್ಯಾಚಾರವೆಸಗಿರುವ ವಿಡಿಯೋ ಹೊರಬಿದ್ದ ನಂತರವೇ ಆಕೆಯ ಮಗನಿಗೆ ವಿಷಯ ತಿಳಿದು ಬಂದಿದೆ. ಇದೇ 2ರಂದು ಮೃದುಲಾ ಕಿಡ್ನಾಪ್ ಆಗಿರುವುದನ್ನು ಅರ್ಥ ಮಾಡಿಕೊಂಡ ಕುಟುಂಬಸ್ಥರು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಜ್ವಲ್ ರಾಜಕೀಯ ವಿರೋಧಿಗಳು ಪೆನ್ ಡ್ರೈವ್ಗಳಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಹಾಸನ ಜಿಲ್ಲೆಯ ಉದ್ಯಾನವನಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಅಂಗಡಿಗಳಲ್ಲಿ ಹಂಚಿದ್ದಾರೆ.
ಹಾಸನದಲ್ಲಿ ಮತದಾನಕ್ಕೂ ಮುನ್ನ ಈ ವಿಡಿಯೋಗಳು ವೈರಲ್ ಆಗಿವೆ.
ಮೃದುಲಾ ಸಹೋದರಿಗೆ ರೇವಣ್ಣ ಮತ್ತು ಪ್ರಜ್ವಲ್ ಬಗ್ಗೆ ಹೆಚ್ಚು ತಿಳಿದಿಲ್ಲ. ಕಳೆದ ತಿಂಗಳು 29ರಂದು ಹಬ್ಬಕ್ಕೆಂದು ತನ್ನ ಊರಿಗೆ ಬಂದಿದ್ದಳು. ಕೆಲಸವಿದೆ ಎಂದು ಕರೆದಿದ್ದರಿಂದಾಗಿ ಅವಳು ಸತೀಶನ ಜೊತೆಗೆ ಹೋಗಿದ್ದಳು. ಭವಾನಿ ರೇವಣ್ಣ ಬರಲು ಹೇಳಿದ್ದಾರೆ ಎಂದು ಅವನು ಹೇಳಿದ್ದ. ಹೀಗೆಲ್ಲಾ ಆಗುತ್ತದೆ ಎಂದು ಯಾರಿಗೆ ತಿಳಿದಿತ್ತು ಎಂದು ಅವರು ಕೇಳುತ್ತಾರೆ.
ಎರಡು ಕೋಣೆಗಳಿರುವ ಪುಟ್ಟ ಮನೆಯಲ್ಲಿ ಮೃದುಲಾ ಕುಟುಂಬ ವಾಸವಾಗಿದೆ. ಪ್ರಕರಣ ದಾಖಲಾದಾಗಿನಿಂದಲೂ ಪೊಲೀಸರು ಅವರ ಮನೆಯ ಮೇಲೆ ನಿಗಾ ಇಟ್ಟಿದ್ದರು. ಈಗ ರೇವಣ್ಣ ಕುಟುಂಬಕ್ಕೆ ಹೆದರುವುದಿಲ್ಲ ಎಂದು ಮೃದುಲಾ ಸಂಬಂಧಿಕರು ಹೇಳಿದ್ದಾರೆ. ರೇವಣ್ಣ ಕುಟುಂಬದವರ ಮೇಲೆ ಮೃದುಲಾ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ತಮ್ಮ ಗ್ರಾಮದ ಹೆಸರೇ ಹಾಳಾಗಿದೆ ಎಂದು ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.