ಬೊಗಸೆಗೆ ದಕ್ಕಿದ್ದು – 7
ನಿಖಿಲ್ ಕೋಲ್ಪೆ
ಕಾಕತಾಳೀಯ! ಒಂದಕ್ಕೊಂದು ಸಂಬಂಧವೇ ಇಲ್ಲದ ಎರಡು ಘಟನೆಗಳು ಅವಿನಾಭಾವ ಸಂಬಂಧ ಇವೆಯೋ ಎಂಬಂತೆ ಭ್ರಮೆ ಹುಟ್ಟಿಸುವ ರೀತಿಯಲ್ಲಿ ನಡೆದರೆ ಅದನ್ನು ಕಾಕತಾಳೀಯ ಎನ್ನುತ್ತೇವೆ. ಅದೊಂದು ಮ್ಯಾಜಿಕಲ್ ಕ್ಷಣ! “ಕಾಗೆ ಕೂರುವುದಕ್ಕೂ, ಕೊಂಬೆ ಮುರಿಯುವುದಕ್ಕೂ ಸರಿಹೋಯ್ತು” ಎಂದೋ “ಕಾಗೆ ಕೂರುವುದಕ್ಕೂ ಹಣ್ಣು ಉದುರುವುದಕ್ಕೂ ಸರಿಹೋಯ್ತು” ಎಂದೋ ಹೇಳುತ್ತಾರೆ. ವಾಸ್ತವದಲ್ಲಿ ಎರಡಕ್ಕೂ ಸಂಬಂಧ ಒಂದು ಚೂರೂ ಇಲ್ಲದಿದ್ದರೂ ಕಾಗೆ ಕೂತದ್ದೇ ಕೊಂಬೆ ಮುರಿದದ್ದಕ್ಕೋ, ಹಣ್ಣು ಉದುರಿದ್ದಕ್ಕೋ ಕಾರಣ ಎಂಬ ಭ್ರಮೆ ನಮ್ಮನ್ನು ಆವರಿಸುತ್ತದೆ.
ಕೆಟ್ಟು ಹೋದ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರಿಸುತ್ತದೆ ಎಂಬುದು ಹಳೆಯ ಮಾತು. ಬಹಳಷ್ಟು ಜನರಿಗೆ ಇದನ್ನು ಹೇಳಿದರೆ, ಅದು ಹೇಗೆ ಎಂದು ಕೇಳುತ್ತಾರೆ! “ಗಡಿಯಾರದ ಮುಳ್ಳು ೬.೦೦ ಗಂಟೆಯ ಹೊತ್ತು ತೋರಿಸುವ ಹೊತ್ತಿಗೇ ಕೆಟ್ಟು ನಿಂತಿತು ಎಂದಿಟ್ಟುಕೊಳ್ಳಿ. ನಂತರವೂ ಪ್ರತೀ ದಿನ ನೀವು ಬೆಳಗ್ಗೆ ಮತ್ತು ಸಂಜೆ ೬.೦೦ ಗಂಟೆ ಹೊತ್ತಿಗೆ ಗಡಿಯಾರ ನೋಡಿದರೆ ಅದು ಸರಿಯಾದ ಸಮಯವನ್ನೇ ತೋರಿಸುತ್ತದಲ್ಲ?” ಎಂದೆಲ್ಲಾ ಅಂತವರಿಗೆ ವಿವರಿಸಬೇಕಾಗುತ್ತದೆ.
ಬಹುಶಃ ಇಂತಹ “ಬುದ್ಧಿವಂತ” ಜನರೇ ಪ್ರಪಂಚದಲ್ಲಿ ತುಂಬಿರುವಂತಿದೆ. ಇಲ್ಲವಾದಲ್ಲಿ ಯಾವುದೇ ಒಬ್ಬ ಜ್ಯೋತಿಷಿ ಹೇಳಿದ್ದು ನಿಜವಾಗುತ್ತದೆ ಎಂದೋ, ಅಸ್ತಿತ್ವದಲ್ಲಿಯೇ ಇಲ್ಲದ ರಾಹು- ಕೇತುಗಳು ನಮ್ಮ ಜೀವನ, ಭವಿಷ್ಯದ ಮೇಲೆ ಪ್ರಭಾವ ಬೀರುತ್ತವೆ ಎಂದು ಯಾರಾದರೂ ನಂಬುತ್ತಾರೆಯೇ? ಮಂತ್ರಿಸಿದ ನೂಲಿನಿಂದ, ಅಥವಾ ನೀರಿನಿಂದ ರೋಗ ಗುಣವಾಗುತ್ತದೆ ಎಂದರೆ ಯಾರಾದರೂ ನಂಬುತ್ತಾರೆಯೇ? ಇವುಗಳಿಗೆ ದೇವರ, ನಂಬಿಕೆಯ, ಡೋಂಗಿ ವಿಜ್ಞಾನದ ಬಣ್ಣ ನೀಡಿ ನಂಬಿಸಲಾಗುತ್ತದೆ. ವಿಜ್ಞಾನಿಗಳೇ ಇಂತವುಗಳನ್ನು ನಂಬುವಾಗ ಸಾಮಾನ್ಯ ಜನರ ಪಾಡೇನು? ಮಂತ್ರದಿಂದ ಆಥವಾ ಪಾಯಸದಿಂದ ಮಕ್ಕಳಾಗುತ್ತವೆ ಎಂದು ಪುರಾಣಗಳಲ್ಲಿ ಹೇಳಿದ್ದರೂ, ಹಾಗೆಂದು ಈಗ ಯಾರಾದರೂ ಯಾರಾದರೂ ನಂಬುತ್ತಾರೆಯೆ? ಅದೂ ಮಕ್ಕಳಾಗುವುದು ಹೇಗೆ ಎಂದು ಸ್ವಲ್ಪ ದೊಡ್ಡ ಮಕ್ಕಳಿಗೂ ಗೊತ್ತಿರುವಾಗ?! ಅಥವಾ ನಂಬುವುದಿಲ್ಲ ಎಂದು ನಂಬುವುದಾದರೂ ಹೇಗೆ?- ನವಿಲಿಗೆ ಕಣ್ಣೀರಿನಿಂದ ಮಕ್ಕಳಾಗುತ್ತವೆ ಎಂದೊಬ್ಬ ಬೃಹಸ್ಪತಿ ನ್ಯಾಯಾಧೀಶನೇ ಹೇಳಿರುವಾಗ!?
ಅದಿರಲಿ, ನಾನೀಗ ನನ್ನ ಬಾಲ್ಯದಲ್ಲಿ ನಡೆದ, ನಿಮಗೆ ನಂಬಲು ಕಷ್ಟವಾಗಬಹುದಾದ ಎರಡು ಕಾಕತಾಳೀಯ ಘಟನೆಗಳನ್ನು ನಿಮಗೆ ಹೇಳುತ್ತೇನೆ.
ನಾಲ್ಕು ದಶಕಗಳಿಗೂ ಹಿಂದಿನ ಕತೆಯಿದು. ನಾನಾಗ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಒಂದು ದಿನ ಸಂಜೆ ಹೈಸ್ಕೂಲಿನಿಂದ ಮನೆಗೆ ಬರುತ್ತಿದ್ದಂತೆ ಹಿತ್ತಿಲಲ್ಲಿ ಆರನೇ ಕ್ಲಾಸಿನಲ್ಲಿ ಕಲಿಯುತ್ತಿದ್ದ ತಮ್ಮನೂ, ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದ ದೊಡ್ಡ ತಂಗಿಯೂ ಹಿತ್ತಿಲಲ್ಲಿ ಬಹಳ ತನ್ಮಯತೆಯಿಂದ ಏನೋ ಮಹಾನ್ ಕೆಲಸದಲ್ಲಿ ತೊಡಗಿದ್ದಾರೆ. ಕುತೂಹಲ ತಾಳದೆ ಹೋಗಿ ಏನೆಂದು ನೋಡಿದರೆ ಇಬ್ಬರೂ ಹಳೆಯ ನೇಗಿಲ ಮೊನೆಯಲ್ಲಿ ಗುಂಡಿ ತೋಡಿ ತುಳಸಿ ಗಿಡ ನೆಡಲು ಸಿದ್ಧತೆ ನಡೆಸುತ್ತಿದ್ದಾರೆ. ಬದಿಯಲ್ಲಿ ಒಂದು ಚಿಕ್ಕ ಬುಟ್ಟಿಯಲ್ಲಿ ಬೂದಿ, ಬಳೆಚೂರುಗಳು, ಅದೂ ಇದೂ ಮಣಿ ಸರಕುಗಳೆಲ್ಲಾ ಇದ್ದವು!
ಇದೇನಿದೆಂದು ಕೇಳಿದರೆ, ಯಾರೋ ಶಾಲೆಯಲ್ಲಿ ಹೇಳಿದ್ದಂತೆ: ಹಿತ್ತಿಲಲ್ಲಿ ಗುಂಡಿ ತೋಡಿ, ಬೂದಿ, ಬಳೆಚೂರು ಮಣ್ಣು ಮಸಣ ಎಲ್ಲಾ ಹಾಕಿ ತುಳಸಿ ಗಿಡ ನೆಡಬೇಕಂತೆ. ಪ್ರತಿದಿನ ಬೆಳಿಗ್ಗೆ, ಸಂಜೆ ನೀರು ಹಾಕಬೇಕಂತೆ! ಒಂದು ವಾರ ಬಿಟ್ಟು ಗಿಡ ಅಗೆದರೆ ಅಡಿಯಲ್ಲಿ ಚಿನ್ನ ಸಿಗುತ್ತದಂತೆ! ನಾನು ನಕ್ಕು ಮನೆಗೆ ಹೋದೆ. ಇವರ ಚಿನ್ನದ ಬೇಸಾಯ ಮುಂದುವರಿದಿತ್ತು. ಪ್ರತೀ ನಿತ್ಯ ಬೆಳಿಗ್ಗೆ ಬೇಗನೇ ಎದ್ದು ನೀರು ಹಾಕುವುದು ನಡೆದೇ ಇತ್ತು.
ಒಂದು ವಾರ ಕಳೆಯಿತು. ನಾನು ಸಂಜೆ ಮನೆಗೆ ಬಂದು ನೋಡುತ್ತೇನೆ: ತಮ್ಮ, ತಂಗಿ, ತಂದೆ, ತಾಯಿ, ಅಜ್ಜಿಯಂದಿರು, ಎಲ್ಲಾ ಭಾರೀ ಖುಷಿಯಲ್ಲಿ ಇದ್ದಾರೆ! ಹಾಗೆ ಹೀಗೆ ಮಾತುಗಳು! ಏನೆಂದು ಕೇಳಿದರೆ, “ಚಿನ್ನ ಸಿಕ್ಕಿತು! ಮಕ್ಕಳಿಗೆ ಚಿನ್ನ ಸಿಕ್ಕಿತು!” ಎಂದರು ತಂದೆ! ಹೌದು! ಗಿಡವನ್ನು ಅಗೆದು ತೆಗೆದಾಗ ಮಕ್ಕಳಿಗೆ ಚಿನ್ನದ ಬೆಂಡೋಲೆಯೊಂದು ಸಿಕ್ಕಿತ್ತು. ಆದರೆ, ಅದು ಸ್ವಲ್ಪ ಕರಕಲಾಗಿತ್ತು. ಸಹಜವಾಗಿಯೇ ಅದು ಗಿಡದಲ್ಲಿ ಬೆಳೆದ ಚಿನ್ನವಾಗಿರದೆ, ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಚಿನ್ನದ ಬೆಂಡೋಲೆಗಳಲ್ಲಿ ಒಂದಾಗಿತ್ತು. ತಾಯಿಯ ಬಳಿ ಇದ್ದ ಎರಡು ಜೊತೆ ಬೆಂಡೋಲೆಗಳಲ್ಲಿ ಒಂದು ಜೊತೆ ಕಪಾಟಿನಲ್ಲಿ ಇತ್ತು. ಅದನ್ನವರು ಕಾಗದದಲ್ಲಿ ಸುತ್ತಿ ಇಟ್ಟಿದ್ದರಂತೆ. ಅದನ್ನು ಎಷ್ಟು ಹುಡುಕಿದರೂ, ಮನೆಯ ಬೂತಗಳಿಗೆ ಹರಕೆ ಹೊತ್ತರೂ ಅವು ಸಿಕ್ಕಿರಲಿಲ್ಲ. ಕಪಾಟಿನಿಂದ ಅದನ್ನು ಯಾರೂ ಕದ್ದೊಯ್ಯುವಂತೆಯೂ ಇರಲಿಲ್ಲ.
ನನ್ನ ತಂದೆ ಶೆರ್ಲಾಕ್ ಹೋಮ್ಸ್ ತರ ಲೆಕ್ಕಾಚಾರ ಹಾಕಿ ಒಂದು ವಿಶ್ಲೇಷಣೆ ಮಾಡಿದರು. ತಾಯಿ ಕಪಾಟು ತೆರೆದಾಗ ಅದು ಹೇಗೋ ಬೆಂಡೋಲೆ ಇದ್ದ ಕಾಗದದ ಪೊಟ್ಟಣ ಕೆಳಗೆ ಬಿದ್ದಿರಬೇಕು. ಗುಡಿಸುವಾಗ ಕಸದ ಜೊತೆಗೆ ಮನೆಯ ಒಲೆ ಸೇರಿರಬೇಕು. ಕೃಷಿಕರಾದ ನಮ್ಮ ಬಚ್ಚಲ ಪಕ್ಕದಲ್ಲೇ ದೊಡ್ಡ ಬೂದಿ ಗುಂಡಿ ಇತ್ತು. ಮನೆ ಒಲೆಗಳ ಬೂದಿ, ಬಚ್ಚಲು ಒಲೆಯ ಬೂದಿ, ಭತ್ತ ಬೇಯಿಸುವ ಒಲೆಗಳ ಬೂದಿ, ಎಮ್ಮೆ ದನ ಕೋಣಗಳಿಗೆ ಕಲಗಚ್ಚು ಕಾಯಿಸುವ ಒಲೆಯ ಬೂದಿ ಬಂದು ಸೇರುವುದು ಈ ಬೂದಿ ಗುಂಡಿಯನ್ನೇ. ಮಕ್ಕಳು ಗಿಡ ನೆಡುವಾಗ ಅಲ್ಲಿಂದ ತೆಗೆದು ಹಾಕಿದ ಬೂದಿಯಲ್ಲಿ ಈ ಬೆಂಡೋಲೆಯೂ ಇತ್ತು. ಇದು ಸರಿಯಾದ ವಿಶ್ಲೇಷಣೆ.
ಆದರೆ, ಅಗಾಧವಾದ ಬೂದಿ ರಾಶಿಯೊಳಗಿನಿಂದ ಮಕ್ಕಳು ತೆಗೆದ ಒಂದು ಚಿಕ್ಕ ಬುಟ್ಟಿ ಬೂದಿಯಲ್ಲೇ ಬೆಂಡೋಲೆ ಬರುವ ಸಾಧ್ಯತೆ ತೀರಾ ತೀರಾ ಕಡಿಮೆಯಾದುದರಿಂದ ಮುದುಕರೆಲ್ಲಾ ಅದರಲ್ಲೂ ಬೂತದ ಕಾರಣಿಕ ಹುಡುಕಿ, ಅದನ್ನೇ ನಂಬಿದರು. ನನ್ನ ದೊಡ್ಡ ಅಜ್ಜಿ ಹೋದದ್ದು ಹೋಯ್ತು, ಬಂದದ್ದು ಬಂತು ಎಂಬಂತೆ ಸಮಾಧಾನದಿಂದ ಇದ್ದರೂ, ಅಸಾಧ್ಯ ಪಿಟ್ಟಾಸಿಯಾದ ಚಿಕ್ಕ ಅಜ್ಜಿ ಆ ಬೂದಿ ಗುಂಡಿ ಜಾಲಾಡಿದರೂ ಇನ್ನೊಂದು ಬೆಂಡೋಲೆ ಸಿಗಲಿಲ್ಲ! ಮಕ್ಕಳು ಮತ್ತೆ ಗಿಡ ನೆಟ್ಟರೂ ಸಿಗಲಿಲ್ಲ.
ಮತ್ತೊಂದು ಘಟನೆ ಅದಕ್ಕಿಂತಲೂ ಮೊದಲು, ನಾನೇ ಮೂರನೆಯೋ, ನಾಲ್ಕನೆಯೋ ಕ್ಲಾಸಿನಲ್ಲಿ ಇದ್ದಾಗ ನಡೆದದ್ದು. ಒಂದು ಸಂಜೆ ನಾನು ಅಂಗಳದಲ್ಲಿ ಆಟವಾಡುತ್ತಾ ಇದ್ದೆ. ಅಲ್ಲೇ ಅಡುಗೆ ಮನೆ ಬಾಗಿಲ ಹೊರಗೆ ಇದ್ದ ತೆರೆದ ಜಾಗದಲ್ಲಿ ದೊಡ್ಡದೊಂದು ಅರೆಯುವ ಕಲ್ಲಿನಲ್ಲಿ ಅಕ್ಕಿ ಕಡೆಯುತ್ತಾ ತಾಯಿ ಮತ್ತು ಮೀನ್ದ ಅಬ್ಬ (ಮೀನಿನ ಅಜ್ಜಿ) ಪಟ್ಟಾಂಗದಲ್ಲಿ ತೊಡಗಿದ್ದರು. ಆಗ ಗದ್ದೆ ಕೆಲಸಕ್ಕೆ ತುಂಬಾ ಜನ ಬರುತ್ತಿದ್ದರಿಂದ ತುಂಬಾ ಅಕ್ಕಿ ಕಡೆಯಬೇಕಾಗಿತ್ತು.
ಇಲ್ಲಿ ಮೀನಿನ ಅಬ್ಬನ ಬಗ್ಗೆ ಕರಾವಳಿಯಲ್ಲಿ ಇದ್ದ ಒಂದು ರೀತಿಯ ಸೌಹಾರ್ದಕ್ಕೆ ಸಾಕ್ಷಿಯಾಗಿ ಎರಡು ಮಾತುಗಳನ್ನು ಬರೆಯಬೇಕು. ಅವರು ನಮ್ಮ ಸಂಬಂಧಿ ಅಲ್ಲ. ಉಪ್ಪಳ, ಮಂಜೇಶ್ವರ ಕಡೆಯ ಮೊಗವೀರರು. ತನಿಯಾರು ಎಂದವರ ಹೆಸರು. ಒಣ ಮೀನಿನ ಮಾರಾಟಕ್ಕೆ ಈ ಕಡೆ ಬಂದರೆ, ವಾರಗಳ ತನಕ ನಮ್ಮ ಮನೆಯಲ್ಲೇ ವಾಸ. ಬೆಳಗಾತ ಎದ್ದು ಸುತ್ತಲಿನ ಒಂದೊಂದೇ ಊರು ತಿರುಗಿ ಮೀನು ಮಾರಿ ಸಂಜೆ ಬರುತ್ತಿದ್ದರು. ಅವರು ಪಡೆದ ಅಕ್ಕಿ, ಮುಡಿಯಾಗಿ ನಮ್ಮ ಅಟ್ಟದಲ್ಲೇ ದಾಸ್ತಾನು. ಅದನ್ನು ನಂತರ ಪೇಟೆಯಲ್ಲಿ ಮಾರುತ್ತಿದ್ದರು. ಗಂಡ ಸತ್ತಿದ್ದರೂ ಬಾಯಿ ಬರದ ಮಗಳನ್ನು ಒಬ್ಬಂಟಿಯಾಗಿ ಸಾಕಿದ ಗಟ್ಟಿಗಿತ್ತಿ. ಬಹಳ ವಯಸ್ಸಾಗುವ ವರೆಗೂ ಬರುತ್ತಿದ್ದರು.
ಇರಲಿ, ಅಕ್ಕಿ ಕಡೆಯುತ್ತಿದ್ದ ತಾಯಿ ಮತ್ತು ಅವರ ಪಟ್ಟಾಂಗ ಕೇರೆ ಹಾವಿನ ಕಡೆ ಹರಿಯಿತು. ನನ್ನ ಕಿವಿ ನೆಟ್ಟಗಾಯಿತು. ಅವರ ಸಂಭಾಷಣೆ ಹೆಚ್ಚು ಕಡಿಮೆ ಹೀಗಿತ್ತು.
ತಾಯಿ: ಕೇರೆ ಹಾವನ್ನು ಮೊರಜ (ಬತ್ತದ ಹುಲ್ಲಿನ ಹಗ್ಗ), ಮಹಾರಾಜ ಎಂದೆಲ್ಲಾ ಕರೆಯುವುದು ಯಾಕೆ?
ಅಬ್ಬ: ಹಾಗೆಲ್ಲಾ ಹೆಸರು ಹಿಡಿದು ಕರೆದರೆ ಅದಕ್ಕೆ ಅವಮಾನವಾಗಿ ಹೋಗಿಬಿಡುತ್ತದೆ.
(ಆಗೆಲ್ಲಾ ಕೇರೆ ಮನೆಗೆ ಬಂದರೆ, ಜನರಿಗೆ ಕುಶಿ. ಇಲಿ ಕಾಟ ಕಡಿಮೆ ಆಗುತ್ತದೆ ಎಂದು. ನಿರುಪದ್ರವಿ ಕೇರೆಯನ್ನು ಯಾರು “ಕ್ಯಾರೆ?” ಎನ್ನುತ್ತಿರಲಿಲ್ಲ. ಆದರೆ ಕೇರೆ ಎಂದು ಹೆಸರು ಹೇಳಿ ಕರೆಯುತ್ತಿರಲಿಲ್ಲ!)
ತಾಯಿ: ಕೇರೆ ರಾತ್ರಿ ಹೊತ್ತು ಮನೆಯಲ್ಲಿ ನಿಲ್ಲುವುದಿಲ್ಲ ಅಲ್ಲವಾ?
ಅಬ್ಬ: ಅದಕ್ಕೆ ಮರ್ಯಾದೆ ಇಲ್ಲವಾ? ದಿನಕ್ಕೆ ಒಂದು ಮುಡಿ ಉಪ್ಪು ಖರ್ಚಾಗುವ ದೊಡ್ಡ ದೊಡ್ಡ ಮಹಾರಾಜ ಮನೆಯಲ್ಲಿ ಮಾತ್ರ ಅದು ರಾತ್ರಿ ನಿಲ್ಲುವುದು!
ತಾಯಿ: ಕೇರೆಗೆ ಹೆದರುವುದು ಯಾಕೆ ಅಲ್ವಾ? ಅದೇನೂ ಕಚ್ಚುವುದಿಲ್ಲ. ಕಚ್ಚಿದರೂ ವಿಷವೇನೂ ಇಲ್ಲ!
ಅಬ್ಬ: ಏನು?! ವಿಷ ಇಲ್ಲವ?! ಅದು ಕಚ್ಚುವುದಿಲ್ಲವ?! ಕಚ್ಚಿದರೆ ಮನುಷ್ಯ ಬದುಕುತ್ತಾನ?! ಕೇರೆ ಅಂದರೆ….
ಅವರು ಮಾತು ಮುಗಿಸುವ ಮೊದಲೇ ದೊಡ್ಡದೊಂದು ಕೇರೆ ಹಾವು ಮೇಲೆ ಮಾಡಿನಲ್ಲಿ ಓಡಾಡುತ್ತಿದ್ದದ್ದು ದೊಪ್ಪನೇ ಇವರ ಪಕ್ಕದಲ್ಲಿ ಬಿತ್ತು. ಕೇರೆ, ತಾಯಿ, ಅಬ್ಬ ಮೂವರೂ ಬದುಕಿದರೆ ಬೇಡಿ ತಿಂದೇವು ಎಂದು ಮೂರು ದಿಕ್ಕಿಗೆ ಓಡಿದರು. ನಾನು ಬಿದ್ದು ಬಿದ್ದು ನಕ್ಕು, ನಂತರ ಸರಿಯಾಗಿ ಬೈಗುಳ ತಿಂದೆ!
ಇವರು ಕೇರೆ ಹಾವಿನ ಬಗ್ಗೆ ಮಾತನಾಡುತ್ತಿರುವಾಗಲೇ ಅದು ಅವರ ಪಕ್ಕದಲ್ಲೇ ಉದುರಿ ಬೀಳುವುದು ಕಡಿಮೆ ಕಾಕತಾಳೀಯವೇ!?
ನಮ್ಮ ನಿತ್ಯ ಜೀವನದಲ್ಲಿ ನೂರಾರು ಕಾಕತಾಳೀಯಗಳು ನಡೆಯುತ್ತಿರುತ್ತವೆ. ನೀವು ಯಾವುದಾದರೂ ಒಂದು ವಿಷಯದ ಬಗ್ಗೆ ಮಾತಾಡುತ್ತಲೋ, ಯೋಚಿಸುತ್ತಲೋ ಇರುತ್ತೀರಿ. ಟಿವಿಯಲ್ಲಿ ಪಕ್ಕನೇ ಅದುವೇ ಮಾತು ಬರುತ್ತದೆ! ಆದರೂ ನಾವು ಅದನ್ನು ಗಮನಿಸುವುದಿಲ್ಲ. ಹಾಳಾದ ಗಡಿಯಾರದಂತೆ ಯಾವುದೋ ಜ್ಯೋತಿಷಿ ಹೇಳಿದ್ದು ಒಂದೆರಡು ಸಲ ನಿಜವಾದರೆ ಅದನ್ನೇ ಪ್ರಚಾರ ಮಾಡುತ್ತೇವೆ. ನೂರು ಬಾರಿ ಸುಳ್ಳಾದರೂ ಪಾಠ ಕಲಿಯುವುದಿಲ್ಲ. ಒಂದು ವೇಳೆ ಕಲಿಯುತ್ತಿದ್ದರೆ ಟಿವಿಯಲ್ಲಿ ಬರುವ ಬ್ರಹ್ಮಾಂಡ ಜ್ಯೋತಿಷಿಗಳ ಒಂದು ಅಂಡವಾದರೂ ಉಳಿದಿರುತ್ತಿತ್ತೆ!? ಸುಳ್ಳುಗಳನ್ನು ನಂಬುವುದು ನಮಗೆ ಅಭ್ಯಾಸವಾಗಿದೆ, ರಕ್ತಗತವಾಗಿದೆ. ಹಾಗಾಗಿಯೇ ದೇಶದಲ್ಲಿ ಸುಳ್ಳರದ್ದೇ ಕಾರುಬಾರು ನಡೆಯುತ್ತಿದೆ. ಸತ್ಯ ನಮಗೆ ಬೇಕಾಗಿಲ್ಲ! ವಿಜ್ಞಾನದ ಲಾಭಗಳು ಬೇಕು, ವಿಜ್ಞಾನ ಬೇಕಾಗಿಲ್ಲ. ನಮಗೆ ಆಜ್ಞಾನದ ಕೊಳಚೆ ಗುಂಡಿಯೇ ಇಷ್ಟ!