ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ನಿಸ್ವಾರ್ಥ ಸಾರ್ವಜನಿಕ ಸೇವೆಯನ್ನು ಗೌರವಿಸಿ ಇಡೀ ದೇಶವೇ ‘ಆಶೀರ್ವಾದ ಕಾ ದಿಯಾ’ ಅಭಿಯಾನದಡಿ ಒಗ್ಗೂಡುತ್ತಿರುವ ಸಂದರ್ಭದಲ್ಲಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಆಯೋಜಿಸಿದ್ದ ಕಾರ್ಯಕ್ರಮವು ರಾಜಕೀಯ ಅಸಭ್ಯತೆಯ ಪರಮಾವಧಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು, ಸಂಸ್ಕೃತ ಶ್ಲೋಕಗಳನ್ನು ಪಠಿಸುವುದರಿಂದ ನಿಮ್ಮ ಕಾರ್ಯಕರ್ತರ ಕಹಿ ಹಾಗೂ ಕೀಳುಮಟ್ಟದ ರಾಜಕೀಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ನೀತಿ ಮತ್ತು ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯ ಹೊಂದುವುದು ಪ್ರಜಾಪ್ರಭುತ್ವದ ಭಾಗ. ಆದರೆ, ದೇಶದ ಪ್ರಧಾನಿಯೊಬ್ಬರ ಜನ್ಮದಿನದಂದೇ ವೈಯಕ್ತಿಕ ನಿಂದನೆಗೆ ಇಳಿದಿರುವುದು ಕರ್ನಾಟಕದ ರಾಜಕೀಯ ಘನತೆ ಮತ್ತು ಸಂಸ್ಕೃತಿಗೆ ಕಪ್ಪುಚುಕ್ಕೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜಕೀಯ ವೈರತ್ವಕ್ಕೆ ತನ್ನದೇ ಆದ ಚೌಕಟ್ಟಿದೆ. ಆದರೆ ವೈಯಕ್ತಿಕ ಸಂದರ್ಭಗಳಲ್ಲಿ ಕನಿಷ್ಠ ಸೌಜನ್ಯ, ಸಂಯಮ ಮತ್ತು ಪ್ರಬುದ್ಧತೆಯನ್ನು ಮೆರೆಯಬೇಕಾಗುತ್ತದೆ. ಕನಿಷ್ಠಪಕ್ಷ ಜನ್ಮದಿನದ ಸಂದರ್ಭದಲ್ಲಾದರೂ ರಾಷ್ಟ್ರನಾಯಕರನ್ನು ಇಂತಹ ಕೀಳುಮಟ್ಟದ ರಾಜಕೀಯ ದಾಳಿಗಳಿಂದ ದೂರವಿಡುವ ಸೌಜನ್ಯವನ್ನು ಕಾಂಗ್ರೆಸ್ ತೋರಬೇಕಿತ್ತು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
