Friday, May 10, 2024

ಸತ್ಯ | ನ್ಯಾಯ |ಧರ್ಮ

ಕಲಬುರಗಿಯಿಂದ ಗೃಹಜ್ಯೋತಿಗೆ ಚಾಲನೆ ; ‘ಗ್ಯಾರಂಟಿ’ಗೆ ಯಾವ ಯೋಜನೆ ಹಣವೂ ಬೇಕಿಲ್ಲ: ಪ್ರಿಯಾಂಕ್ ಖರ್ಗೆ

ಗೃಹ ಜ್ಯೋತಿ ಯೋಜನೆ ನಾಳೆ ಕಲಬುರಗಿಯಿಂದ ಲೋಕಾರ್ಪಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲಾಧಿಕಾರಿ‌ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತ್ತಾ ತಿಳಿಸಿದ್ದಾರೆ.

ಕಳೆದ‌ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಎಲ್ಲೆಡೆ ಜನರ ಬೇಡಿಕೆ ಕೇಳಿದ ನಂತರ ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆ ತಯಾರಿಸಿತ್ತು. ಜೊತೆಗೆ ಆರ್ಥಿಕ ಸ್ಥಿರತೆ ಕೊಡುವ ಉದ್ದೇಶದಿಂದ ಐದು ಪ್ರಮುಖ ಗ್ಯಾರಂಟಿಗಳನ್ನು ಕೂಡಾ ಘೋಷಿಸಲಾಯಿತು. ಅದರಂತೆ ಒಂದೊಂದೆ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತಿದ್ದು ಅದರಲ್ಲಿ ಮಹತ್ವದ ಗೃಹಜ್ಯೋತಿ ಯೋಜನೆಗೆ ಚಾಲನೆ ಸಿಗಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪ್ರತಿಯೊಂದು ಗ್ಯಾರಂಟಿಗಳು ಕೂಡಾ ಪ್ರಮುಖ ಯೋಜನೆಗಳಾಗಿವೆ. ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಗಳು ಜಾರಿಗೊಳ್ಳುವ ಹಂತದಲ್ಲಿದ್ದು ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಯುವನಿಧಿ ಯೋಜನೆ ಈ ಸಲದ ಶೈಕ್ಷಣಿಕ ವರ್ಷ ಮುಗಿದ ನಂತರ ಜಾರಿಯಾಗಲಿದೆ. ನಾವು ಭಾಷೆ ಕೊಟ್ಟಂತೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಲಿದ್ದೇವೆ. ಇದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ‌ ಅಸಹನೀಯವಾಗಿದೆ ಎಂದು ದೂರಿದರು.

ಗೃಹಜ್ಯೋತಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಒಟ್ಟು 1,41,23,240 ಫಲಾನುಭವಿಗಳು ಹಾಗೂ ಕಲಬುರಗಿ ಜಿಲ್ಲೆಯಲ್ಲಿ 4,69,029 ಫಲಾನುಭವಿಗಳು ಈಗಾಗಲೇ ನೋಂದಾಯಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇನ್ನು ನಾಳೆ ನಡೆಯಲಿರುವ ಗೃಹ ಜ್ಯೋತಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರಾದ ಹಾಗೂ ರಾಜ್ಯ ಸಭಾ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,‌ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ ಕೆ.ಶಿವಕುಮಾರ್ ಹಾಗೂ‌ ಇಂಧನ ಸಚಿವ‌ ಕೆ.ಜೆ ಜಾರ್ಜ್ ಸೇರಿದಂತೆ ಹಲವರು ಉಪಸ್ಥಿತರಿರುತ್ತಾರೆ. ಈ ಸಭೆಗೆ ಸುಮಾರು 20 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ. ಈ ಸಮಾರಂಭದಲ್ಲಿ 10 ಜನರಿಗೆ ಸಾಂಕೇತಿಕವಾಗಿ ಶೂನ್ಯ ಬಿಲ್ ಕೊಡಲಾಗುವುದು. ಈ ಯೋಜನೆ ಆಯಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು‌ ಸಚಿವರು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಇತರೆ ಯೋಜನೆಗಳಿಗೆ ಅನುದಾನದ ಕೊರತೆ ಎದುರಾಗಲಿದೆ‌ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಜನರಿಗೆ ಅಗತ್ಯ ಯೋಜನೆಗಳ ಜಾರಿಗೆ ಬೇಕಾಗವಷ್ಟು ಅನುದಾನವನ್ನು ಈಗಾಗಲೇ ತೆಗೆದಿರಿಸಲಾಗಿದ್ದು ಯಾವುದೇ ಪ್ರಮುಖ ಯೋಜನೆಗಳಿಗೆ ಗ್ಯಾರಂಟಿಗಳಿಂದ ಆರ್ಥಿಕವಾಗಿ ತೊಂದರಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿದ್ಯುಚ್ಛಕ್ತಿ ಕಂಪನಿಗಳಿಗೆ ಸರ್ಕಾರದ ಬೇರೆ ಬೇರೆ ಇಲಾಖೆಗಳಿಂದ ಬಾಕಿ ಬರಬೇಕಿದ್ದು ಹಾಗೆ ಉಳಿದಿದೆ ಇದು ಗ್ಯಾರಂಟಿ‌ ಯೋಜನೆ ಸಮರ್ಪಕ ಜಾರಿಗೆ ಅನಾನುಕೂಲವಾಗಲಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಸರ್ಕಾರ ಇತರೆ ಇಲಾಖೆಗಳಿಂದ ಬರಬೇಕಾಗುವ ಬಾಕಿಯನ್ನು ಹಂತ ಹಂತವಾಗಿ ವಸೂಲಿ ಮಾಡುವುದರ ಜೊತೆಗೆ ಬದಲಿ ವ್ಯವಸ್ಥೆಯ ಮೂಲಕ ರೆವೆನ್ಯೂ ಸಂಗ್ರಹಿಸಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ಇನ್ನು ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆಯಿಂದಾಗಿ ಅವರ ಮೇಲಿನ ಗೌರವ ಕಡಿಮೆಯಾಗಿದೆ ಎಂದು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಇದು ಕೇಶವ ಕೃಪಾದ ಹೇಳಿಕೆ. ಅವರ ಹೇಳಿಕೆ ಆರ್ ಎಸ್ ಎಸ್ ಹೇಳಿಕೆಯಾಗಿದೆ. ದಲಿತರ ಮೇಲಿನ ಬಿಜೆಪಿಯ ಅಸಹನೆಯಾಗಿದೆ. ಈ ಅಸಹನೆ ಬಹಳ ದಿನ ಉಳಿಯುವುದಿಲ್ಲ ಯಾಕೆಂದರೆ, ರಾಜ್ಯದಲ್ಲಿ ಕೇಶವ ಕೃಪಾ ಆಳುತ್ತಿಲ್ಲ. ಬಾಬಾಸಾಹೇಬರ ಸಂವಿಧಾನದ ಪ್ರಕಾರ ಆಡಳಿತ ನಡೆಯುತ್ತಿದೆ. ಅರಗ ಅವರ ಕ್ಷಮೆ ನಮಗೆ ಬೇಕಿಲ್ಲ. ಕ್ಷಮೆ ಕೇಳಿದ ತಕ್ಷಣ ಮನಸ್ಥಿತಿ ಬದಲಾಗುತ್ತದೆಯೇ? ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ ಕಾನೂನು ಪ್ರಕಾರ ಅದು ಮುಂದುವರೆಯಲಿದೆ ಎಂದು ತಿರುಗೇಟು ನೀಡಿದರು

Related Articles

ಇತ್ತೀಚಿನ ಸುದ್ದಿಗಳು