ಬೆಂಗಳೂರು : ರಾಜ್ಯದಲ್ಲಿ ಇಂಧನ ಕೊರತೆ ಉಂಟಾಗಿದೆ ಎಂಬ ವದಂತಿಗಳ ನಡುವೆಯೇ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸ್ಪಷ್ಟನೆ ನೀಡಿದ್ದು, ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ ಎಂದು ತಿಳಿಸಿದೆ. ಕೆಲ ಪೆಟ್ರೋಲ್ ಬಂಕ್ಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿರುವುದು ಜನರು ಭಯದಿಂದ ಹೆಚ್ಚಾಗಿ ಖರೀದಿ ಮಾಡುತ್ತಿರುವುದರಿಂದ ಎಂದು ಕಂಪನಿ ಹೇಳಿದೆ.
ರಾಜ್ಯದ ಎಲ್ಲಾ ಪೆಟ್ರೋಲಿಯಂ ಟರ್ಮಿನಲ್ಗಳು ಮತ್ತು ಸರಬರಾಜು ಕೇಂದ್ರಗಳಲ್ಲಿ ಸಮರ್ಪಕ ಪ್ರಮಾಣದ ಇಂಧನ ಸಂಗ್ರಹವಿದ್ದು, ಪೆಟ್ರೋಲ್ ಬಂಕ್ಗಳಿಗೆ ಸರಬರಾಜು ನಿರಂತರವಾಗಿ ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಕೆಲವು ಪ್ರದೇಶಗಳಲ್ಲಿ ಏಕಾಏಕಿ ಹೆಚ್ಚಾದ ಬೇಡಿಕೆಯಿಂದ ಕೆಲ ಔಟ್ಲೆಟ್ಗಳಲ್ಲಿ ತಾತ್ಕಾಲಿಕ ಕೊರತೆ ಕಂಡುಬಂದಿದೆಯಷ್ಟೇ. ಆದರೆ, ಸರಬರಾಜಿನ ಸಮಸ್ಯೆಯಲ್ಲ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕದ ತೈಲೋದ್ಯಮದ ರಾಜ್ಯ ಮಟ್ಟದ ಸಂಯೋಜಕರಾದ ಸಿದ್ಧಾರ್ಥ್ ಅಗರ್ವಾಲ್ ಅವರು ಮಾತನಾಡಿ, ಐಒಸಿ, ಬಿಪಿಸಿ ಮತ್ತು ಎಚ್ಪಿಸಿ ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯದ ತೈಲ ಕಂಪನಿಗಳ ಟರ್ಮಿನಲ್ಗಳಲ್ಲಿ ಸಮರ್ಪಕ ಪ್ರಮಾಣದ ಇಂಧನ ಲಭ್ಯವಿದೆ ಎಂದು ಹೇಳಿದ್ದಾರೆ.
ತಾತ್ಕಾಲಿಕವಾಗಿ ಸಮಸ್ಯೆ ಎದುರಿಸುತ್ತಿರುವ ಪೆಟ್ರೋಲ್ ಬಂಕ್ಗಳಿಗೆ ಆದ್ಯತೆಯ ಆಧಾರದ ಮೇಲೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.ಜನರು ಆತಂಕದಿಂದ ಅನಗತ್ಯವಾಗಿ ಇಂಧನ ಸಂಗ್ರಹಿಸಿಕೊಳ್ಳಬಾರದು. ಪ್ಲಾಸ್ಟಿಕ್ ಕ್ಯಾನ್ಗಳು ಅಥವಾ ಅನುಮೋದಿಸದ ಪಾತ್ರೆಗಳಲ್ಲಿ ಪೆಟ್ರೋಲ್ ಸಂಗ್ರಹಿಸುವುದು ಅಪಾಯಕಾರಿಯಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಇಂತಹ ಕ್ರಮಗಳಿಂದ ದೂರವಿರಬೇಕು ಎಂದು ಕಂಪನಿ ಎಚ್ಚರಿಕೆ ನೀಡಿದೆ.ಇದೇ ವೇಳೆ, ರಿಫೈನರಿಗಳಿಂದ ಇಂಧನ ಉತ್ಪಾದನೆ ಹಾಗೂ ಸರಬರಾಜು ನಿರಂತರವಾಗಿ ನಡೆಯುತ್ತಿದ್ದು, ಯಾವುದೇ ರೀತಿಯ ವ್ಯತ್ಯಯವಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
