ಬೆಂಗಳೂರು: ಹಳೆಯ ಪಿಂಚಣಿ ಯೋಜನೆನ್ನು (ಒಪಿಎಸ್/OPS) ಮರಳಿ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಮ್ಮನ್ನು ಭೇಟಿ ಮಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗಕ್ಕೆ ಭರವಸೆ ನೀಡಿದರು.
ಪ್ರಸ್ತುತ ಹೊಸ ಪಿಂಚಣಿ ಯೋಜನೆ (ಎನ್ಪಿಎಸ್/NPS) ಅಡಿಯಲ್ಲಿರುವ ನೌಕರರ ಪರವಾಗಿ ನಿಲ್ಲುವ ಸರ್ಕಾರದ ಬದ್ಧತೆಗೆ ಒತ್ತು ನೀಡಿದ ಸಿದ್ದರಾಮಯ್ಯ, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಂಘಕ್ಕೆ ಭರವಸೆ ನೀಡಿದರು.
OPS ಯೋಜನೆಯನ್ನು ಮರಳಿ ತರುವ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಿದ್ದೇವೆ ಎಂದು ತಿಳಿಸಿದರು. ಎನ್ ಪಿ ಎಸ್ ಯೋಜನೆಗೆ ನೌಕರರ ವೇತನದಿಂದ ಕಡಿತಗೊಳಿಸುವುದನ್ನು ನಿಲ್ಲಿಸಲು ದಾರಿಗಳನ್ನು ಹುಡುಕುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.
7ನೇ ವೇತನ ಆಯೋಗದ ಅನುಷ್ಠಾನದ ಬಗ್ಗೆ ಇರುವ ಕಳವಳವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸರ್ಕಾರ ರಚಿಸಿರುವ ಆಯೋಗವು ತನ್ನ ವರದಿಯನ್ನು ಸಲ್ಲಿಸಿದ ನಂತರ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ಅಸೋಸಿಯೇಷನ್, ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಶಿಫಾರಸುಗಳನ್ನು ತ್ವರಿತವಾಗಿ ಜಾರಿಗೆ ತರುವಂತೆ ಸಿಎಂಗೆ ಒತ್ತಾಯಿಸಿದರು.
ಸಮಿತಿಯು ಯಾವುದೇ ಪ್ರಗತಿ ಕಾಣದೆ ಸುಮಾರು ಒಂದು ವರ್ಷ ಪೂರೈಸಿದೆ ಎಂದು ನಿಯೋಗ ಅಸಮಾಧಾನ ವ್ಯಕ್ತಪಡಿಸಿತು.
ಕಳೆದ ವರ್ಷ ಮಾರ್ಚ್ 1ರಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಏಕವ್ಯಕ್ತಿ ಸಮಿತಿಯನ್ನು ಸರ್ಕಾರ ರಚಿಸಿತ್ತು. ಒಪಿಎಸ್ ಯೋಜನೆಯನ್ನು ಮರಳಿ ಜಾರಿಗೊಳಿಸಿರುವ ದೇಶದ ಕೆಲವು ರಾಜ್ಯಗಳು ಯೋಜನೆಯನ್ನು ಹೇಗೆ ಜಾರಿಗೆ ತಂದಿವೆ ಎಂಬುದನ್ನು ಅಧ್ಯಯನ ಮಾಡುವುದು ಅದರ ಉದ್ದೇಶವಾಶವಾಗಿತ್ತು. ಸಮಿತಿಯು ಇನ್ನಷ್ಟೇ ತನ್ನ ವರದಿಯನ್ನು ಸಲ್ಲಿಸಬೇಕಿದೆ.
ಪಿಂಚಣಿ ಸಂಬಂಧಿತ ಚರ್ಚೆಗಳಲ್ಲದೆ, ಕರ್ನಾಟಕ ಆರೋಗ್ಯ ಸಂಜೀವನಿ ಯೋಜನೆ, ಆರೋಗ್ಯ ವಿಮಾ ಉಪಕ್ರಮವನ್ನು ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ತ್ವರಿತವಾಗಿ ಜಾರಿಗೊಳಿಸಲಾಗುವುದು ಎಂದು ಸಿಎಂ ನೌಕರರಿಗೆ ಭರವಸೆ ನೀಡಿದರು.
ಇತ್ತೀಚಿನ ಸುದ್ದಿಗಳ ಪ್ರಕಾರ ನಾಳೆ ಎಂದರೆ ಜನವರಿ 18ರಂದು ಸಂಪುಟ ಸಭೆಯಲ್ಲಿ ಎನ್ಪಿಎಸ್ ರದ್ಧತಿ ಘೋಷಣೆ ನಡೆಯಲಿದೆ ಎನ್ನಲಾಗಿದೆ.