Home ರಾಜ್ಯ ಎನ್ಎಸ್‌ಡಿ ಬೆಂಗಳೂರು ಕೇಂದ್ರ: ಈಡೇರದ ಭರವಸೆ, ವಿದ್ಯಾರ್ಥಿಗಳಿಗೆ ದ್ರೋಹ

ಎನ್ಎಸ್‌ಡಿ ಬೆಂಗಳೂರು ಕೇಂದ್ರ: ಈಡೇರದ ಭರವಸೆ, ವಿದ್ಯಾರ್ಥಿಗಳಿಗೆ ದ್ರೋಹ

0

ಬೆಂಗಳೂರು, ಫೆ.7: ದಕ್ಷಿಣ ಭಾರತಕ್ಕೆ ರಂಗಭೂಮಿ ಶಿಕ್ಷಣವನ್ನು ವಿಸ್ತರಿಸಲು ಮತ್ತು ಮಹತ್ವದ ಸಾಂಸ್ಕೃತಿಕ ಸಂಸ್ಥೆಯಾಗಿ ವಿಕಸನಗೊಳ್ಳುವ ಆಶಯದೊಂದಿಗೆ ರಾಷ್ಟ್ರೀಯ ನಾಟಕ ಶಾಲೆ (NSD) ಬೆಂಗಳೂರು ಕೇಂದ್ರವನ್ನು ಸ್ಥಾಪಿಸಲಾಯಿತು. ಆರಂಭಿಕ ಪ್ರಗತಿಯ ಹೊರತಾಗಿಯೂ, ಇದು ದುರುಪಯೋಗಕ್ಕೆ ಒಳಗಾಗಿದೆ ಮತ್ತು ಉದ್ದೇಶವನ್ನು ಪೂರೈಸುವಲ್ಲಿ ವಿಫಲವಾಗಿದೆ. ಸಾಕಷ್ಟು ಹಣ ಮತ್ತು ಸಾಂಸ್ಥಿಕ ದೃಷ್ಟಿಕೋನದ ಕೊರತೆಯಿಂದ ನರಳುತ್ತಿದೆ.

ರಾಜ್ಯದಲ್ಲಿ ರಂಗಭೂಮಿ ಶಿಕ್ಷಣವನ್ನು ಉತ್ತೇಜಿಸಬೇಕಾದ ಕೇಂದ್ರವು ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ರಂಗಭೂಮಿ ಉತ್ಸಾಹಿಗಳಿಗೆ ಹತಾಶೆ ಮತ್ತು ನಿರಾಶೆಯನ್ನುಂಟು ಮಾಡಿದೆ ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿ, ರಂಗರ್ಮಿ ರವಿಕಿರಣ್‌ ರಾಜೇಂದ್ರನ್‌ ಹೇಳುತ್ತಾರೆ.

ಈಡೇರದ ಭರವಸೆಗಳು ಮತ್ತು ಸಾಂಸ್ಥಿಕ ನಿರ್ಲಕ್ಷ್ಯ

ದೆಹಲಿಯ ಎನ್‌ಎಸ್‌ಡಿಯ ಒಂದು ಶಾಖೆಯಾಗಿ ಸ್ಥಾಪಿಸಲಾದ ಬೆಂಗಳೂರು ಕೇಂದ್ರಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂರು ಎಕರೆ ಭೂಮಿಯನ್ನು ನೀಡಿತು. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ ಮತ್ತು ಲಕ್ಷದ್ವೀಪದ ರಂಗಭೂಮಿ ಉತ್ಸಾಹಿಗಳಿಗೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಆದಾಗ್ಯೂ, ಪ್ರಾರಂಭವಾದ ಸುಮಾರು ಒಂದು ದಶಕದಿಂದ, ಎನ್‌ಎಸ್‌ಡಿ ಬೆಂಗಳೂರು ಕೇಂದ್ರ ಅಭಿವೃದ್ಧಿ ಹೊಂದುವ ಬದಲು ನಿರ್ಲಕ್ಷಿತ ಕೇಂದ್ರವಾಗಿ ಉಳಿದಿದೆ.

ನಟನೆಯಲ್ಲಿ ಒಂದು ವರ್ಷದ ತರಬೇತಿ ಕೋರ್ಸ್‌ ನೀಡುವ ಭರವಸೆಯನ್ನು ನೀಡಿ ಪ್ರಾದೇಶಿಕ ಸಂಪನ್ಮೂಲ ಕೇಂದ್ರವಾಗಿ ಪ್ರಾರಂಭವಾದರೂ, ಸಂಸ್ಥೆಯು ಕರ್ನಾಟಕದ ರಂಗ ಸಮುದಾಯದೊಂದಿಗೆ ಅರ್ಥಪೂರ್ಣ ಸಂಬಂಧವನ್ನು ಬೆಳೆಸುವಲ್ಲಿ ವಿಫಲವಾಗಿದೆ. ಕೇಂದ್ರದ ಮೊದಲ ಬ್ಯಾಚ್ ವಿದ್ಯಾರ್ಥಿಗಳು ಎತ್ತಿದ ಮೂಲಭೂತ ಸಮಸ್ಯೆಗಳು ಇಂದಿಗೂ ಬಗೆಹರಿಯದೆ ಉಳಿದಿವೆ, ಅವುಗಳೆಂದರೆ:

  • ಶೈಕ್ಷಣಿಕ ಸ್ಪಷ್ಟತೆಯ ಕೊರತೆ: ಪ್ರಸ್ತುತ ಯಾವುದೇ ಅಕಾಡೆಮಿಕ್ ಮಾನ್ಯತೆ ನೀಡದ ಒಂದು ವರ್ಷದ ಕೋರ್ಸ್‌ನ ಉದ್ದೇಶ ಮತ್ತು ಶೈಕ್ಷಣಿಕ ಮೌಲ್ಯವನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದರು.
  • ಸಾಕಷ್ಟು ಸ್ಟೈಫಂಡ್ ನೀಡುತ್ತಿಲ್ಲ: 2014 ರಲ್ಲಿ ಎನ್‌ಎಸ್‌ಡಿ ದೆಹಲಿಯ ವಿದ್ಯಾರ್ಥಿಗಳಿಗೆ 6000 ರುಪಾಯಿ ಸ್ಟೈಫಂಡ್‌ ಸಿಗುತ್ತಿದ್ದಾಗ, ಬೆಂಗಳೂರು ಕೇಂದ್ರದ ವಿದ್ಯಾರ್ಥಿಗಳು 4,500 ರುಪಾಯಿ ಸ್ಟೈಫಂಡ್‌ ಪಡೆಯುತ್ತಿದ್ದರು. ಇದರಲ್ಲಿ ಊಟ ಮತ್ತು ವಸತಿಯ ವೆಚ್ಚವಾಗಿ 3,200 ರುಪಾಯಿ ಕಡಿತ ಮಾಡುತ್ತಿದ್ದರು. ಸದ್ಯ ಬೆಂಗಳೂರಿನ ವಿದ್ಯಾರ್ಥಿಗಳಿಗೆ 6,000 ರುಪಾಯಿ ನೀಡಲಾಗುತ್ತದೆ, ದೆಹಲಿಯ ವಿದ್ಯಾರ್ಥಿಗಳಿಗೆ 9,000 ರುಪಾಯಿ ನೀಡಲಾಗುತ್ತಿದೆ. ಈ ಆರು ಸಾವಿರದಲ್ಲಿ ಊಟ ಮತ್ತು ವಸತಿಯ ವೆಚ್ಚವನ್ನು ಕಡಿತಗೊಳಿಸಿದಾಗ ಬೆಂಗಳೂರು ಕೇಂದ್ರದ ವಿದ್ಯಾರ್ಥಿಗಳ ಕೈಯಲ್ಲಿ ಉಳಿಯುವುದು ಸುಮಾರು 500 ರುಪಾಯಿ ಮಾತ್ರ. ಬೆಂಗಳೂರು ಕೇಂದ್ರದ ಮೊದಲ ಬ್ಯಾಚ್‌ನಿಂದಲೇ ದೆಹಲಿಯಲ್ಲಿ ನೀಡುವಷ್ಟೇ ಮೊತ್ತದ ಸ್ಟೈಫಂಡನ್ನು ಬೆಂಗಳೂರು ಕೇಂದ್ರದ ವಿದ್ಯಾರ್ಥಿಗಳಿಗೆ ನೀಡುವಂತೆ ಒತ್ತಾಯ ಮಾಡಿಕೊಂಡು ಬರಲಾಗುತ್ತಿದೆ.
  • ಭಾಷಾ ಅಡೆತಡೆಗಳು: ಕರ್ನಾಟಕದಲ್ಲಿ ಈ ಸಂಸ್ಥೆ ಇದ್ದರೂ, ಎನ್‌ಎಸ್‌ಡಿ ಬೆಂಗಳೂರು ಕೇಂದ್ರದಲ್ಲಿ ಬೋಧನೆಯ ಭಾಷೆ ಹಿಂದಿಗೆ ಹೆಚ್ಚಾಗಿ ಬದಲಾಗುತ್ತಿದೆ, ಇದು ಸ್ಥಳೀಯ ವಿದ್ಯಾರ್ಥಿಗಳನ್ನು ದೂರವಿಡುತ್ತಿರುವುದಲ್ಲದೆ, ಪ್ರದೇಶದ ಭಾಷಾ ವೈವಿಧ್ಯತೆಗೆ ಹಾನಿಯುಂಟು ಮಾಡುತ್ತಿದೆ.
  • ಆಡಳಿತಾತ್ಮಕ ಸಮಸ್ಯೆ: ಎನ್‌ಎಸ್‌ಡಿ ಬೆಂಗಳೂರು ಕೇಂದ್ರ, ಹಣಕಾಸು ಮತ್ತು ಆಡಳಿತಾತ್ಮಕವಾಗಿ ಎನ್‌ಎಸ್‌ಡಿ ದೆಹಲಿಯ ಬಿಗಿ ಹಿಡಿತದಲ್ಲಿ ಕೆಲಸ ಮಾಡುತ್ತಿದೆ, ಸ್ವತಂತ್ರ ವಾರ್ಷಿಕ ಬಜೆಟ್ ಬದಲಿಗೆ ಮಾಸಿಕ ನಿಧಿ ಹಂಚಿಕೆಗಳನ್ನು ಪಡೆಯುತ್ತಿದೆ.

ಕರ್ನಾಟಕದ ರಂಗ ಚಟುವಟಿಕೆಗಳ ನಿರ್ಲಕ್ಷ್ಯ

“ಕರ್ನಾಟಕವು ಶ್ರೀಮಂತ ರಂಗಭೂಮಿ ಸಂಪ್ರದಾಯವನ್ನು ಹೊಂದಿದೆ. ಕರ್ನಾಟಕದ ಬಿ.ವಿ. ಕಾರಂತರಂತಹ ದಿಗ್ಗಜರು ಎನ್.ಎಸ್.ಡಿ. ದೆಹಲಿಯನ್ನು ರೂಪಿಸಿದ್ದಾರೆ. ನೀನಾಸಂ, ರಂಗಾಯಣ ಮತ್ತು ಸಾಣೇಹಳ್ಳಿ ರಂಗಭೂಮಿ ಶಾಲೆಯಂತಹ ಸಂಸ್ಥೆಗಳು ಹಲವಾರು ತಲೆಮಾರುಗಳಿಂದ ಅತ್ಯುತ್ತಮ ರಂಗಕರ್ಮಿಗಳನ್ನು ರೂಪಿಸಿವೆ. ಆದರೂ ಎನ್‌ಎಸ್‌ಡಿ ಬೆಂಗಳೂರು ಕೇಂದ್ರ ಈ ಇವೆಲ್ಲವನ್ನೂ ಬಳಸಿಕೊಳ್ಳಲು ಅಥವಾ ಸ್ಥಳೀಯ ರಂಗಭೂಮಿ ಗುಂಪುಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಲು ವಿಫಲವಾಗಿದೆ,” ಎಂದು ರವಿಕಿರಣ್‌ ಹೇಳುತ್ತಾರೆ.

ಇದಲ್ಲದೆ, ಭಾಷಾ ಸಮಸ್ಯೆಯನ್ನು ಪರಿಹರಿಸುವಲ್ಲಿ ಕೇಂದ್ರದ ವೈಫಲ್ಯವು ದಕ್ಷಿಣ ರಾಜ್ಯಗಳ ವಿದ್ಯಾರ್ಥಿಗಳನ್ನು ದೂರವಿಡುತ್ತಲೇ ಇದೆ. ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದ ಬಗ್ಗೆ ತಳೆಯಲಾಗಿರುವ ನಿರ್ಲಕ್ಷ್ಯವು ಕರ್ನಾಟಕದ ರಂಗಭೂಮಿಗೆ ಸೇವೆ ಸಲ್ಲಿಸುವ ಅದರ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ರಂಗಭೂಮಿ ಇಲ್ಲಿ ಶಿಕ್ಷಣ ಪೂರೈಸಿರುವ ಹಳೆ ವಿದ್ಯಾರ್ಥಿಗಳ ಸಂಘ ಹೇಳುತ್ತದೆ.

ಹಳೆ ವಿದ್ಯಾರ್ಥಿಗಳ ನಿರ್ಲಕ್ಷ್ಯ ಮತ್ತು ಅವಕಾಶಗಳ ಕೊರತೆ

ಎನ್‌ಎಸ್‌ಡಿ ಬೆಂಗಳೂರು ಕೇಂದ್ರ ತನ್ನ ಹಳೆಯ ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯ ಹೊಂದಿರುವುದು ಹಳೆ ವಿದ್ಯಾರ್ಥಿಗಳಿಗೆ ಅಸಮಧಾನವನ್ನು ಉಂಟುಮಾಡಿದೆ. 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯಿಂದ ಶಿಕ್ಷಣ ಪಡೆದಿದ್ದಾರೆ, ಆದರೆ ಯಾವುದೇ ಔಪಚಾರಿಕವಾದ ಹಳೆ ವಿದ್ಯಾರ್ಥಿಗಳ ಸಂಘವನ್ನು ಮಾಡಲಾಗಿಲ್ಲ. ಅನೇಕ ಹಳೆ ವಿದ್ಯಾರ್ಥಿಗಳು ತಮ್ಮ ಸರ್ಟಿಫಿಕೇಟ್‌ಗಳಿಗೆ ಔದ್ಯೋಗಿಕ ಮಾರುಕಟ್ಟೆಯಲ್ಲಿ ಯಾವುದೇ ಬೆಲೆ ಇಲ್ಲ ಎಂದು ಹೇಳುತ್ತಿದ್ದಾರೆ. ಒಂದು ಪದವಿಯಾಗಿಯೋ ಅಥವಾ ಪಿಜಿ ಡಿಪ್ಲೋಮಾವಾಗಿ ಪರಿಗಣಿಸದೆ ನೀಡುವ ಈ ಸರ್ಟಿಫಿಕೇಟ್‌ನಿಂದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಿಲ್ಲ. ಹಳೆ ವಿದ್ಯಾರ್ಥಿಗಳ ಸಂಘದ ಕೋರಿಕೆಗಳನ್ನು ನಿರಂತರವಾಗಿ ನಿರ್ಲಕ್ಷಿಸಲಾಗುತ್ತಿದೆ ಮತ್ತು ಅವರಿಗೆ ಕ್ಯಾಂಪಸ್ ಪ್ರವೇಶವನ್ನು ಕೂಡ ನಿರಾಕರಿಸಲಾಗುತ್ತಿದೆ.

ಸಂಸ್ಥೆಯನ್ನು ಸ್ಥಾಪಿಸಿ 10 ವರ್ಷಗಳು ಕಳೆದರೂ ಸಂಸ್ಥೆಯು ತನ್ನ ಅಕಾಡೆಮಿಕ್‌ ಕೋರ್ಸ್‌ಗಳಿಗೆ ಯಾವುದೇ ಮೌಲ್ಯವನ್ನು ನೀಡದಿರುವುದು ಮತ್ತು ಅದಕ್ಕೊಂದು ಸ್ಪಷ್ಟ ಸ್ವರೂಪವನ್ನು ನೀಡದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. “ಕೋರ್ಸನ್ನು ಮೂರು ಅಥವಾ ನಾಲ್ಕು ವರ್ಷಗಳವರೆಗೆ ವಿಸ್ತರಿಸಿದರೆ ಅದನ್ನು ಪಿಜಿ ಡಿಪ್ಲೊಮಾ ಅಥವಾ ಪದವಿ ಎಂದು ಪರಿಗಣಿಸಬೇಕೇ? ಸದ್ಯದ ಕೋರ್ಸ್‌ ಹೊಸ ಶಿಕ್ಷಣ ನೀತಿಯೊಂದಿಗೆ (NEP) ಹೊಂದಿಕೆಯಾಗುತ್ತದೆಯೇ?” ಎಂದು ರವಿಕಿರಣ್‌ ರಾಜೇಂದ್ರನ್‌ ಪ್ರಶ್ನಿಸುತ್ತಾರೆ.

ಸಭೆ ಸೇರಲಿರುವ ಹಳೆ ವಿದ್ಯಾರ್ಥಿಗಳು

ಫೆಬ್ರವರಿ 9, 2025 ರಂದು, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲದ ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ಹಳೆ ವಿದ್ಯಾರ್ಥಿಗಳು ಮತ್ತು ರಂಗಭೂಮಿ ಉತ್ಸಾಹಿಗಳು ಕೇಂದ್ರದ ನಿರ್ದೇಶಕರಿಂದ ಉತ್ತರಗಳನ್ನು ಪಡೆಯಲು ಕಲಾಗ್ರಾಮದಲ್ಲಿ ಸಭೆ ಸೇರಲಿದ್ದಾರೆ. ಈ ಸಭೆಯಲ್ಲಿ ಕೇಂದ್ರದ ಹಳೆ ವಿದ್ಯಾರ್ಥಿಗಳ ನಿರ್ದೇಶನದ ನಾಟಕ ʼಡೋರ್ ನಂ. 8ʼ ರ ಪ್ರದರ್ಶನವಿರುತ್ತದೆ.

ಸಂಸ್ಥೆಯ ನ್ಯೂನತೆಗಳ ಮೇಲೆ ಬೆಳಕು ಚೆಲ್ಲುವುದು ಮತ್ತು ಅದರ ಭವಿಷ್ಯಕ್ಕಾಗಿ ಸ್ಪಷ್ಟವಾದ ಮಾರ್ಗಸೂಚಿಯನ್ನು ರೂಪಿಸಲು ಮನವಿ ನೀಡುವುದು ಈ ಸಭೆಯ ಉದ್ದೇಶವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸೇರಿದಂತೆ ಇತರ ಸಂಸ್ಥೆಗಳು ಈ ಸಂವಾದದಲ್ಲಿ ಭಾಗವಹಿಸಲು ಮತ್ತು ತನ್ನ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾದ ಎನ್‌ಎಸ್‌ಡಿ ಬೆಂಗಳೂರು ಕೇಂದ್ರವನ್ನು ವೈಫಲ್ಯದ ಹೊಣೆಹೊರಲು ಒತ್ತಾಯಿಸಲಾಗಿದೆ.

You cannot copy content of this page

Exit mobile version