Home ದೇಶ ‘ತಪ್ಪು ತಿಳುವಳಿಕೆ’ಯಿಂದ ಕ್ರೈಸ್ತ ಸನ್ಯಾಸಿನಿಯರ ಬಂಧನವಾಗಿದೆ, ಅವರಿಗೆ ಸದ್ಯದಲ್ಲೇ ಜಾಮೀನು ಸಿಗಲಿದೆ: ಕೇರಳ ಬಿಜೆಪಿ ಅಧ್ಯಕ್ಷ...

‘ತಪ್ಪು ತಿಳುವಳಿಕೆ’ಯಿಂದ ಕ್ರೈಸ್ತ ಸನ್ಯಾಸಿನಿಯರ ಬಂಧನವಾಗಿದೆ, ಅವರಿಗೆ ಸದ್ಯದಲ್ಲೇ ಜಾಮೀನು ಸಿಗಲಿದೆ: ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್

0

ತ್ರಿಶೂರ್ (ಕೇರಳ): ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದ ಆರೋಪದ ಮೇಲೆ ಛತ್ತೀಸ್‌ಗಢದಲ್ಲಿ ಇಬ್ಬರು ಸನ್ಯಾಸಿನಿಯರನ್ನು ಬಂಧಿಸಿರುವುದು “ತಪ್ಪು ತಿಳುವಳಿಕೆ”ಯಿಂದ ಆಗಿದೆ, ಮತ್ತು ಅವರಿಗೆ ಶೀಘ್ರದಲ್ಲೇ ಜಾಮೀನು ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಶುಕ್ರವಾರ ಹೇಳಿದ್ದಾರೆ.

ಚಂದ್ರಶೇಖರ್ ಅವರು ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (CBCI)ದ ಅಧ್ಯಕ್ಷರಾದ ಆರ್ಚ್‌ಬಿಷಪ್ ಆಂಡ್ರ್ಯೂಸ್ ತಾಳತ್ ಅವರನ್ನು ಭೇಟಿಯಾದ ನಂತರ ಈ ಹೇಳಿಕೆ ನೀಡಿದ್ದಾರೆ. ಸನ್ಯಾಸಿನಿಯರಿಗೆ ಜಾಮೀನು ಸಿಗಲಿದೆ ಎಂದು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ತಾಳತ್ ಅವರಿಗೆ ತಿಳಿಸಲು ಚಂದ್ರಶೇಖರ್ ಈ ಭೇಟಿ ನೀಡಿದ್ದರು.

ಸನ್ಯಾಸಿನಿಯರ ಜಾಮೀನು ಅರ್ಜಿಯನ್ನು ರಾಜ್ಯ ಸರ್ಕಾರ ವಿರೋಧಿಸುವುದಿಲ್ಲ ಎಂದು ಪ್ರಧಾನಿ ಮತ್ತು ಗೃಹ ಸಚಿವರು ತಮಗೆ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದರು.

“ಇದು ನ್ಯಾಯಾಂಗ ಪ್ರಕ್ರಿಯೆ. ಅದು ನಡೆಯಲಿ. ನಾನು ಹೇಳುವುದೇನೆಂದರೆ, ಈ ವಿಷಯವನ್ನು ರಾಜಕೀಯಗೊಳಿಸಬೇಡಿ. ನಾವು ಇದನ್ನು ರಾಜಕೀಯವಾಗಿ ನೋಡುತ್ತಿಲ್ಲ. ಕೇವಲ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇದು ತಪ್ಪು ತಿಳುವಳಿಕೆ” ಎಂದು ಅವರು ಪ್ರತಿಪಾದಿಸಿದರು.

“ಛತ್ತೀಸ್‌ಗಢದಲ್ಲಿ ಖಾಸಗಿ ಉದ್ಯೋಗ ಸಂಸ್ಥೆಗಳನ್ನು ನಿಯಂತ್ರಿಸುವ ಕಾನೂನು ಇದೆ. ಈ ಕಾನೂನಿನ ಪ್ರಕಾರ, ಉದ್ಯೋಗಕ್ಕಾಗಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳುವ ಯುವತಿಯರು ಪೋರ್ಟಲ್‌ ಒಂದುರಲ್ಲಿ ನೋಂದಾಯಿಸಿಕೊಳ್ಳಬೇಕು. ಅದು ನಡೆದಿಲ್ಲ. ಹಾಗಾಗಿ ತಪ್ಪು ತಿಳುವಳಿಕೆಯುಂಟಾಗಿ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ” ಎಂದು ಚಂದ್ರಶೇಖರ್ ಹೇಳಿದರು.

ಏತನ್ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷರೊಂದಿಗಿನ ಸಭೆಯ ನಂತರ ಆರ್ಚ್‌ಬಿಷಪ್ ತಾಳತ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಚರ್ಚ್ ಈ ಸನ್ಯಾಸಿನಿಯರಿಗೆ ಇಂದು ಜಾಮೀನು ಸಿಗಬೇಕೆಂದು ಬಯಸುತ್ತದೆ ಎಂದರು. ಸನ್ಯಾಸಿನಿಯರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಕೇಳಿ “ನೋವಾಯಿತು” ಎಂದು ಅವರು ಹೇಳಿದರು.

ದೇಶದಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲಿನ ಹೆಚ್ಚುತ್ತಿರುವ ದಾಳಿಗಳು ಮತ್ತು ಅವರಿಗೆ ಭದ್ರತೆ ಒದಗಿಸಬೇಕಾದ ಅಗತ್ಯದ ಬಗ್ಗೆ ಚಂದ್ರಶೇಖರ್ ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಆರ್ಚ್‌ಬಿಷಪ್ ಹೇಳಿದರು.

ಸ್ಥಳೀಯ ಬಜರಂಗ ದಳದ ಕಾರ್ಯಕರ್ತನ ದೂರಿನ ಮೇರೆಗೆ ಸನ್ಯಾಸಿನಿಯರಾದ ಪ್ರೀತಿ ಮೆರ್ರಿ ಮತ್ತು ವಂದನಾ ಫ್ರಾನ್ಸಿಸ್ ಹಾಗೂ ಸುಕಮನ್ ಮಾಂಡವಿ ಅವರನ್ನು ಜುಲೈ 25ರಂದು ದುರ್ಗ್ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅವರು ನಾರಾಯಣಪುರದ ಮೂವರು ಹುಡುಗಿಯರನ್ನು ಬಲವಂತವಾಗಿ ಮತಾಂತರ ಮಾಡಿ, ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

You cannot copy content of this page

Exit mobile version