Saturday, June 21, 2025

ಸತ್ಯ | ನ್ಯಾಯ |ಧರ್ಮ

ಒಂದು ದೇಶ-ಒಂದು ಚುನಾವಣೆ: ಸರ್ವಾಧಿಕಾರದ ಕೈಗೆ ಭಾರತ?

ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ʼಒಂದು ದೇಶ – ಒಂದು ಚುನಾವಣೆʼ ವರದಿಗೆ ಅನುಮೋದನೆ ನೀಡಿದೆ. ಈ ಹಿನ್ನಲೆಯಲ್ಲಿ ಪೀಪಲ್‌ ಮೀಡಿಯಾದಲ್ಲಿ ಬಂದಿರುವ ಚರಣ್‌ ಐವರ್ನಾಡುರವರ ಹಿಂದಿನ ಲೇಖನವನ್ನು ಓದಿ.

******

2023ರ ಮೇನಲ್ಲಿ ಟರ್ಕಿ ದೇಶದ ಅಧ್ಯಕ್ಷರಾಗಿ ರೆಸೆಪ್ ತಯ್ಯಿಪ್ ಎರ್ಡೊಗನ್ ಮತ್ತೆ ಆಯ್ಕೆಯಾದಾಗ, ಅವರನ್ನು ಅಭಿನಂದಿಸಿವರಲ್ಲಿ ಮೊದಲಿಗರು ನಮ್ಮ ದೇಶದ ಘನವೆತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಹೇಳಿಕೇಳಿ ಪಾಶ್ಚಿಮಾತ್ಯ ಚಿಂತಕರು  ಎರ್ಡೊಗನ್ ಅವರನ್ನು ಚುನಾಯಿತ ಸರ್ವಾಧಿಕಾರಿ ಎಂದು ಕರೆಯುತ್ತಾರೆ. ಮೊದಲು ಪ್ರಧಾನಿಯಾಗಿ, ನಂತರ ಟರ್ಕಿಯ ಅಧ್ಯಕ್ಷರಾದ ಇವರು 20 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ.

ನೀವು ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೋದಿಜಿ ಈ ಚುನಾಯಿತ ಸರ್ವಾಧಿಕಾರಿಯಿಂದ ಸ್ಪೂರ್ತಿಯನ್ನು ಪಡೆದಂತೆ ಕಾಣುತ್ತದೆ. ಇದೇನು ಬಿಜೆಪಿ ಹಾಗೂ ಅದರ ಅಡುಗೆ ಮನೆ ಆರ್‌ಎಸ್‌ಎಸ್‌ಗೆ ಹೊಸದೇನಲ್ಲ.

ಪ್ರಾದೇಶಿಕ ರಾಷ್ಟ್ರೀಯತೆಯನ್ನು ಸದಾ ವಿರೋಧಿಸುತ್ತಿದ್ದ ಆರ್‌ಎಸ್‌ಎಸ್‌ನ ಎರಡನೇ ಸರಸಂಚಾಲಕ ಮಾಧವ ಸದಾಶಿವ ಗೋಲ್ವಾಲ್ಕರ್‌ ತಮ್ಮ We, or Our Nationhood Defined ಎಂಬ ಪುಸ್ತಕದಲ್ಲಿ ಈ ಪ್ರಪಂಚ ಕಂಡ ಅತ್ಯಂತ ಕ್ರೂರ ಸರ್ವಾಧಿಕಾರಿ ಜರ್ಮನಿಯ ಹಿಟ್ಲರ್‌ನನ್ನು ಹಾಡಿ ಹೊಗಳುತ್ತಾರೆ. ಪ್ರಾದೇಶಿಕ ರಾಷ್ಟ್ರೀಯತೆಯನ್ನು ಬಿಟ್ಟು ಭಾರತ, ಜನಾಂಗೀಯ ರಾಷ್ಟ್ರೀಯತೆಯನ್ನು ಒಪ್ಪಲು ಹಿಟ್ಲರ್‌ನಿಂದ ಸ್ಪೂರ್ತಿ ಪಡೆಯುವಂತೆ ಹೇಳುತ್ತಾರೆ. ಜರ್ಮನಿಯನ್ನು ಧ್ವಂಸ ಮಾಡಿದ ಹಿಟ್ಲರ್‌ ಸರ್ವಾಧಿಕಾರದ ಜನಾಂಗೀಯ ಶುದ್ಧೀಕರಣವನ್ನು ಅವರು ಭಾರತದ ಅಗತ್ಯ ಎಂದು ಹೇಳುತ್ತಾರೆ.

ಇದನ್ನು ಓದಿ: ‘ಒಂದು ದೇಶ ಒಂದು ಚುನಾವಣೆ’ ವರದಿಗೆ ಕೇಂದ್ರದ ಅನುಮೋದನೆ

ಹಾಗಾಗಿ, ಸರ್ವಾಧಿಕಾರಿಗಳು ಇನ್ನೊಂದು ದೇಶದ ಸರ್ವಾಧಿಕಾರಿಯನ್ನು ಹೊಗಳುವುದು, ಮತ್ತು ಅವನಿಗಿಂತ ಒಂದು ಹೆಜ್ಜೆ ಮುಂದೆ ಹೋಗುವುದು ಚರಿತ್ರೆಯಲ್ಲಿ ಆಗಾಗ ಕಂಡುಬಂದಿದೆ.

2017 ರಲ್ಲಿ ಎರ್ಡೋಗನ್ ದೇಶದ ಸರ್ವಶಕ್ತ ಅಧ್ಯಕ್ಷರಾಗಿ ಹೊರಹೊಮ್ಮಲು ಅವರು ಅಲ್ಪಸಂಖ್ಯಾತ ಕುರ್ದಿಗಳ ಮೇಲೆ ಸಾಂಪ್ರದಾಯಿಕ ಇಸ್ಲಾಮಿಸ್ಟ್‌ಗಳನ್ನು ಎತ್ತಿಕಟ್ಟಿದ್ದರು. ಇದರಿಂದ ಮೋದಿಯವರು ಸ್ಪೂರ್ತಿ ಪಡೆದಿದ್ದಾರಾ? ಇದನ್ನು ನೀವೇ ಯೋಚಿಸಬೇಕು.

ಎರ್ಡೋಗನ್ ನಂತೆ ಮೋದಿಯವರಲ್ಲಿ ಕಂಡು ಬರುವ ಮಹತ್ವದ ಸಾಮ್ಯತೆ ಎಂದರೆ ತನಗೆ ಬೇಕಾದವರನ್ನು ಶಾಸನಬದ್ಧ ಸ್ಥಾನಗಳಿಗೆ ನೇಮಿಸುವುದು. ಸರ್ವಾಧಿಕಾರಿಯ ಪ್ಲೈಬುಕ್‌ನಲ್ಲಿ ಇರುವ ರಹಸ್ಯ, ಕುತಂತ್ರ ಮತ್ತು ಆಶ್ಚರ್ಯ ಈ ಮೂರನ್ನೂ ನೀಡಬಹುದು.

ಇಡೀ ದೇಶವನ್ನು ರಹಸ್ಯವಾಗಿ ಇಡಲಾಗಿದೆ. ಮುಕ್ತವಾಗಿ ನಡೆಯಬೇಕಾದ ಸಂಸದೀಯ ಚರ್ಚೆಗಳನ್ನು ನಿಲ್ಲಿಸಲಾಗುತ್ತಿದೆ. ಇತ್ತೀಚೆಗೆ ಸಂಸತ್‌ ಅಧಿವೇಶನ ಹೇಗೆ ನಡೆಯಿತು ಎಂಬುದನ್ನೇ ಗಮನಿಸಿ, ಇದ್ದಕ್ಕಿದ್ದಂತೆ 2023ರ ಆಗಸ್ಟ್ 31 ರಂದು, ಸಂಸದೀಯ ವ್ಯವಹಾರಗಳ ಸಚಿವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ವಿಚಿತ್ರದ ಸಂದೇಶವೊಂದನ್ನು ನೀಡಿದರು. ಸೆಪ್ಟೆಂಬರ್ 18 ರಿಂದ 22 ರವರೆಗೆ ಪ್ರಶ್ನೋತ್ತರ ಅವಧಿಯಿಲ್ಲದೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ ಎಂದು ಅವರು ಘೋಷಿಸಿದರು

ಅಧಿವೇಶನದ ಅಜೆಂಡಾವನ್ನು 2023ರ ಸೆಪ್ಟೆಂಬರ್ 13 ರ ಬುಧವಾರದವರೆಗೆ ರಹಸ್ಯವಾಗಿಡಲಾಗಿತ್ತು. ಇದು ಕಾರ್ಯಸೂಚಿಯ ಬಗ್ಗೆ ಹೆಚ್ಚಿನ ಊಹಾಪೋಹಗಳಿಗೆ ಕಾರಣವಾಯಿತು. ಅಜೆಂಡಾವನ್ನು ರಹಸ್ಯವಾಗಿ ಇಟ್ಟ ಮೇಲೆ ಪ್ರಹ್ಲಾದ್‌ ಜೋಶಿ ಒಂದು ರಾಷ್ಟ್ರ- ಒಂದು ಚುನಾವಣೆಯ ಸಾಧ್ಯತೆಯನ್ನು ಅಧ್ಯಯನ ಮಾಡಲು ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದರು. ಮರುದಿನ, ಅಮಿತ್ ಶಾ ಅವರನ್ನೊಳಗೊಂಡ ಎಂಟು ಸದಸ್ಯರ ಸಮಿತಿಗೆ ಔಪಚಾರಿಕವಾಗಿ ಸೂಚಿಸಲಾಯಿತು.

ಇದು ಸರ್ವಾಧಿಕಾರದ ಎಲ್ಲಾ ಲಕ್ಷಣಗಳನ್ನೂ ತೋರಿಸುತ್ತದೆ. ಆದರೆ ಅಮಿತ್‌ ಶಾ ಅವರು ಕೋವಿಂದ್ ಅವರನ್ನು ಜೂನ್ 2 ಕ್ಕೂ ಮೊದಲೇ ಇದಕ್ಕೆ ನಿಯೋಜಿಸಿದ್ದರು. ಕೋವಿಂದ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಹನ್ನೆರಡು ರಾಜ್ಯಗಳ ರಾಜ್ಯಪಾಲರನ್ನು ಭೇಟಿ ಮಾಡಿದ್ದರು.

ಸಮಿತಿಯಲ್ಲಿನ ಎಲ್ಲಾ ಎಂಟು ಸದಸ್ಯರು ಕೇಂದ್ರ ಸರ್ಕಾರದ ಬೆಂಬಲಿಗರು. ಇದರ ಓರ್ವ ಸದಸ್ಯ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ಸಮಿತಿಗೆ ರಾಜೀನಾಮೆ ನೀಡಿ ಹೊರಬಂದರು.

ಅಂದರೆ, ಪ್ರಹ್ಲಾದ್‌ ಜೋಶಿ ಅಧಿಕೃತವಾಗಿ ಒಂದು ದೇಶ-ಒಂದು ಚುನಾವಣೆಯ ಪರಿಶೀಲನೆಗೆ ಸಮಿತಿ ರಚಿಸುವ ಅಧಿಕೃತ ಘೋಷಣೆ ಮಾಡುವ ಮೊದಲೇ ಅಮೀತ್‌ ಶಾ ಈ ಸಮಿತಿಯನ್ನು ಮಾಡಿದ್ದರು. ಅಂದರೆ, ಈ ಬಗ್ಗೆ ಇಡೀ ದೇಶಕ್ಕೆ ಗೊತ್ತಾಗದಂತೆ ರಹಸ್ಯವಾಗಿ ಇಡಲಾಗಿತ್ತು.

ಈಗ 2029ಕ್ಕೆ ಲೋಕಸಭಾ, ರಾಜ್ಯ ವಿಧಾನ ಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ “ಒಂದು ದೇಶ- ಒಂದು ಚುನಾವಣೆ”ಯನ್ನು ಜಾರಿಗೊಳಿಸಲು ಭಾರತದ ಸಂವಿಧಾನದಲ್ಲಿ ಹೊಸ ಅಧ್ಯಾಯವನ್ನು ಸೇರಿಸಲು ಕಾನೂನು ಆಯೋಗ ಶಿಫಾರಸ್ಸುಗಳನ್ನು ನೀಡಲಿದೆ.

ನಿವೃತ್ತ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ಈ ಆಯೋಗವು ಐದು ವರ್ಷಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಚುನಾವಣೆಗಳನ್ನು ಸಿಂಕ್ರೊನೈಸೇಶನ್ ಮಾಡಲು ಶಿಫಾರಸು ಮಾಡುವ ಸಾಧ್ಯತೆಯಿದೆ.

ಈ ಒಂದು ದೇಶ-ಒಂದು ಚುನಾವಣೆ ಯಾಕೆ ಬೇಕು ಎಂಬುದಕ್ಕೆ ಮೋದಿ ಕೊಡುವ ಕಾರಣಗಳು ತುಂಬಾ ವಿಚಿತ್ರವಾಗಿದೆ. ದೇಶದ ಬೇರೆ ಬೇರೆ ಕಡೆ ಆಗಾಗ ಚುನಾವಣೆಗಳಿ ನಡೆಯುತ್ತಿದ್ದರೆ ಖರ್ಚು ಜಾಸ್ತಿ, ಚುನಾವಣೆಯ ಸಂದರ್ಭದಲ್ಲಿ ಪದೇ ಪದೇ Model Code of Conduct (MCC) ಜಾರಿಗೆ ತಂದರೆ ಅಗತ್ಯ ಸೇವೆಗಳನ್ನು ಪೂರೈಸುವಂತ ಸರ್ಕಾರದ ಕೆಲಸಗಳಿಗೆ ತೊಡಕಾಗುತ್ತದೆ, ಚುನಾವಣೆಗಳನ್ನು ನಡೆಸಲು ನಿಯೋಜಿಸಲಾದ ಸರ್ಕಾರಿ ಸಿಬ್ಬಂದಿಯ ಮೇಲೆ ಅನಗತ್ಯ ಹೊರೆ ಬೀಳುತ್ತದೆ.

ಎಂಸಿಸಿ ಮೂಲಭೂತ ಸೇವೆಗಳನ್ನು ನೀಡಲು ಸರ್ಕಾರಕ್ಕೆ ತೊಡಕನ್ನು ಉಂಟು ಮಾಡುತ್ತದೆ ಎಂದರೆ ಇದು ಬೇರೆ ಬೇರೆ ಪಕ್ಷಳು ಚುನಾವಣಾ ಆಯೋಗದ ಜೊತೆಗೆ ಕುಳಿತು ಮಾತನಾಡಿ ಪರಿಹರಿಸಬಹುದಾದ ಸಮಸ್ಯೆ. ಆದರೆ ಮಾರ್ಚ್ 2016 ರ ನಂತರ ಯೋಜನೆಗೆ ಬೇಕಾದ ಉಭಯಪಕ್ಷೀಯ ಬೆಂಬಲವನ್ನು ಪಡೆಯಲು ಸರ್ಕಾರವು ಯಾವುದೇ ರೀತಿಯ ಪ್ರಯತ್ನವನ್ನು ಮಾಡಲಿಲ್ಲ.

ಸೆಪ್ಟೆಂಬರ್ 2023 ರಲ್ಲಿ ಕೇಂದ್ರ ಸರ್ಕಾರ ತರಾತುರಿಯಲ್ಲಿ ಕೋವಿಂದ್ ನೇತೃತ್ವದ ಸಮಿತಿಯನ್ನು ನೇಮಿಸಿತು ಮತ್ತು ಒಪ್ಪಿಗೆಯಿಲ್ಲದೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರನ್ನು ಸಮಿತಿಗೆ ಸೇರಿಸಿತು. ಅವರು ತಮ್ಮ ಸ್ಥಾನಕ್ಕೆ ಒಪ್ಪಿಗೆ ಇಲ್ಲದೆ ನೇಮಕ ಮಾಡಿದ ಕಾರಣ ರಾಜೀನಾಮೆಯನ್ನು ನೀಡಿದರು.

ನಿಮಗೆ ಅಚ್ಚರಿ ಆಗಬಹುದು, ಇವರ ತಂತ್ರ ಎಷ್ಟು ಗುಪ್ತವಾಗಿ, ಪರಿಣಾಮಕಾರಿಯಾಗಿ ಮಾಡಲಾಗಿದೆ ಎಂಬುದು. 1984 ರಿಂದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವನ್‌ ನೇಷನ್‌ – ವನ್‌ ಇಲೆಕ್ಷನ್‌ ಭರವಸೆಯನ್ನು ನೀಡುತ್ತಾ ಬಂದಿದೆ. 2017 ರ ಜುಲೈಯಲ್ಲಿ ರಾಮ್‌ ನಾಥ್‌ ಕೋವಿಂದ್‌ ರಾಷ್ಟ್ರಪತಿಯಾಗಿ ಆಯ್ಕೆಯಾದ ಮೇಲೆ 2018 ರ ಜನವರಿಯಲ್ಲಿ ಸಂಸತ್ತಿನ ಉಭಯ ಸದನಗಳಿಗೆ ತಮ್ಮ ಮೊದಲ ರಾಷ್ಟ್ರಪತಿ ಭಾಷಣ ನೀಡುತ್ತಾರೆ. ಅದರಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪ ಮಾಡುತ್ತಾರೆ. ಅಲ್ಲಿಂದಲೇ ಪ್ರಧಾನಿ ಮೋದಿಯವರ ಈ ಒಂದು ದೇಶ-ಒಂದು ಚುನಾವಣೆಗೆ ರಾಷ್ಟ್ರಪತಿ ಮುದ್ರೆ ಬೀಳಲು ಶುರುವಾಯ್ತು.

ನರೇಂದ್ರ ಮೋದಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಗೊಳ್ಳುವುದು ನಿಶ್ಚಿತ. ಆದರೆ ಇದು ಪ್ರಪಂಚದ ಆತ್ಯಂತ ದೊಡ್ಡ ಪ್ರಜಾಪ್ರಭುತ್ವ ಭಾರತದ ಮೇಲೆ ಹೊಡೆಯುವ ಪೆಟ್ಟು ಅಂತಿಂಥ ಹೊಡೆತ ಅಲ್ಲ. ಇದು ಪ್ರಜಾಪ್ರಭುತ್ವದಿಂದ ಚುನಾಯಿತ ಸರ್ವಾಧಿಕಾರಕ್ಕೆ ಭಾರತ ಮಗ್ಗಲು ಬದಲಿಸುವ ಸಾಧ್ಯತೆ ಇದೆ.

ಭಾರತದಂತಹ ರಾಜಕೀಯವಾಗಿ ವೈವಿಧ್ಯಮಯವಾಗಿರುವ ರಾಷ್ಟ್ರದಲ್ಲಿ, ಆವರ್ತಕ ಚುನಾವಣೆಗಳು ಒಂದೇ ಪಕ್ಷಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುವುದಿಲ್ಲ. ಜನರು ಬೇರೆ ಬೇರೆ ಚುನಾವಣೆಗಳಿಗೆ ಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಸ್ಥಳೀಯ ಮಟ್ಟದಲ್ಲಿ ಅವರು ತಮ್ಮ ಮತವನ್ನು ಯಾರಿಗೆ, ಯಾಕೆ ಹಾಕಬೇಕು ಎಂಬುದನ್ನು ಸ್ಥಳೀಯ ಆದ್ಯತೆಗಳು, ಸಮಸ್ಯೆಗಳ ಮೇಲೆ ನಿರ್ಧರಿಸುತ್ತಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಬಂದಾಗ ಜನರ ಉದ್ದೇಶ, ಆಭಿಪ್ರಾಯಗಳು ಬದಲಾಗುತ್ತದೆ. ಬದಲಾಗಲೇ ಬೇಕು. ಆಗ ಮಾತ್ರ ಅಧಿಕಾರದ ವಿಕೇಂದ್ರೀಕರಣ ಸಮರ್ಪಕವಾಗಿ ಜಾರಿಯಾಗುವುದು.

ನೀವೇ ಈ ಉದಾಹರಣೆಗಳನ್ನು ನೋಡಿ, ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಸಂಸತ್ತಿನ ಚುನಾವಣೆಯ ಜೊತೆ ಜೊತೆಗೆ ಪ್ರತಿಯೊಂದು ರಾಜ್ಯ ಚುನಾವಣೆಗಳು ನಡೆದಿದ್ದರೆ, ಭಾರತದ ರಾಜಕೀಯ ಇತಿಹಾಸವು ಬೇರೆ ಆಗಿರುತ್ತಿತ್ತು. 1989 ರ ಚುನಾವಣೆಯಲ್ಲಿ ರಾಜೀವ್ ಗಾಂಧಿ ಸೋತ ನಂತರೂ ಅವರು ಅಧಿಕಾರದಲ್ಲಿ ಮುಂದುವರಿಯುತ್ತಿದ್ದರು. ಹಾಗೆಯೇ, 2019 ರಲ್ಲಿ ಪುಲ್ವಾಮಾ-ಬಾಲಾಕೋಟ್ ಅವಳಿ ಘಟನೆಗಳು ನಡೆದಾಗಲೂ ಬಿಜೆಪಿ ಅಧಿಕಾರಕ್ಕೆ ಬಂತು.

ಅಮೆರಿಕದ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಮತ್ತು ಇಂಟರ್ನ್ಯಾಷನಲ್ ಸ್ಟಡೀಸ್ ಹೇಳುವಂತೆ 2014ರಲ್ಲಿ ಸಂಸತ್‌ ಚುನಾವಣೆಯ ಜೊತೆಗೆ ಎಲ್ಲಾ ರಾಜ್ಯಗಳ ಚುನಾವಣೆಗಳು ನಡೆದಿದ್ದರೆ, ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿತ್ತು.

2020 ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ದಿ ಅಡ್ವಾನ್ಸ್ಡ್ ಸ್ಟಡಿ ಆಫ್ ಇಂಡಿಯಾ ಪ್ರಕಟಿಸಿದ ವರದಿಯಲ್ಲಿ ಏಕಕಾಲಕ್ಕೆ ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ನಡೆದರೆ ಮತದಾರರು ಅಭ್ಯರ್ಥಿಗಿಂತ ಪಕ್ಷದ ಕಡೆಗೆ ನೋಡಿ ಮತ ಹಾಕುತ್ತಾರೆ ಎಂದು ಹೇಳಲಾಗಿದೆ. ಒಂದೇ ಪಕ್ಷದ ಅಭ್ಯರ್ಥಿ ಎಷ್ಟೇ ಬರಗೆಟ್ಟ ನಾಯಕನಾಗಿದ್ದರೂ, ಭ್ರಷ್ಟನಾಗಿದ್ದರೂ ಅವನು ಗೆಲ್ಲುವ ಸಾಧ್ಯತೆ 20% ಹೆಚ್ಚಾಗುತ್ತದೆ ಎಂದು ಈ ವರದಿ ಹೇಳುತ್ತದೆ.

ಬಿಜೆಪಿ ಸರ್ಕಾರ 2019ರಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಅವ್ಯವಸ್ಥೆ ಮತ್ತು ಸಾಂವಿಧಾನಿಕ ಅಸ್ತವ್ಯಸ್ತತೆಗೆ ಕಾರಣ Fixed-term Parliaments Act, 2011ನಿಂದ ಪಾಠ ಕಲಿತಿಲ್ಲ. ಈ ಕರಾಳ ಕಾಯ್ದೆಯನ್ನು ಮಾರ್ಚ್ 2022ರಲ್ಲಿ ಎಲ್ಲಾ ಪಕ್ಷಗಳೂ ಆ ದೇಶದಲ್ಲಿ ತೀರ್ಮಾನಿಸಿ ರದ್ದು ಮಾಡಲಾಯಿತು.

ಆದರೆ, ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಮೇ 12, 2021 ರಂದು The Dissolution and Calling of Parliament Bill ಜಾರಿಗೆ ತಂದು, ಅದಕ್ಕೆ ಮಾರ್ಚ್ 24, 2022 ರಂದು ರಾಜ ಸಮ್ಮತಿಯೂ ಸಿಕ್ಕಿತು. ಇದು ಸ್ಥಿರ ಅವಧಿಯ ಸಂಸತ್ತಿನ ಕಾಯ್ದೆ 2011ಯನ್ನು ತೆಗೆದು ಹಾಕಿತು. ರಾಜ ಪರಿವಾರದ ಒಪ್ಪಿಗೆಯಂತೆ ಈ ದೇಶದಲ್ಲಿ ತನಗೆ ಬೇಕಾದಾಗ ಸಂಸತ್ತನ್ನು ವಿಸರ್ಜಿಸಿ ಚುನಾವಣೆ ನಡೆಸುವ ಅಧಿಕಾರವನ್ನು ಅಲ್ಲಿನ ಪ್ರಧಾನಿಗೆ ನೀಡಲಾಯ್ತು. ಇದು ಪ್ರಜಾಸತಾತ್ಮಕತೆಗೆ ವಿರುದ್ಧವಾಗಿದೆ.

Fixed-term Parliaments Act, 2011 ಹೇಗೆ ಬ್ರಟೀಷ್‌ ಸಂವಿಧಾನದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಿತೋ, ಮೋದಿಯವರ ಏಕಕಾಲಕ್ಕೆ ಚುನಾವಣೆ ಎಂಬ ಯೋಜನೆಯೂ ಇದೇ, ಇದಕ್ಕೂ ಹೆಚ್ಚಿನ ದುಷ್ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಸಂವಿಧಾನದಲ್ಲಿ ತಿದ್ದುಪಡಿ ಜೊತೆಗೆ, ಏಕಕಾಲದ ಚುನಾವಣೆಗೆ ಬೇಕಾದ ಒಂದು ಸ್ಥಿರ ಕ್ಯಾಲೆಂಡರನ್ನು ಸಂವಿಧಾನಕ್ಕೆ ಸೇರಿಸಬೇಕಾಗುತ್ತದೆ.

ಮುಖ್ಯವಾಗಿ,  ಮುಂದಿನ ಸಂಸದೀಯ ಚುನಾವಣೆ ನಡೆದಾಗ, ಎಲ್ಲಾ ರಾಜ್ಯಗಳ ಅಸೆಂಬ್ಲಿಗಳನ್ನು ವಿಸರ್ಜಿಸಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಹಲವಾರು ರಾಜ್ಯಗಳ ಅಸೆಂಬ್ಲಿಗಳ ಅಧಿಕಾರಾವಧಿಯನ್ನು 2024 ಮತ್ತು 2029 ರ ನಡುವೆ ಮೊಟಕುಗೊಳಿಸಬೇಕಾಗುತ್ತದೆ, ಇಲ್ಲವೇ ವಿಸ್ತರಿಸಬೇಕಾಗುತ್ತದೆ.

ಒಂದು ವೇಳೆ ಹೀಗಾದರೆ, ಈ ದೇಶ ಪ್ರಜಾಪ್ರಭುತ್ವವಾಗಿ ಉಳಿಯುವುದಿಲ್ಲ. ಜನಾದೇಶವನ್ನು ಏಕಾಏಕಿಯಾಗಿ ಮೊಟುಕುಗೊಳಿಸುವುದು, ಅಸೆಂಬ್ಲಿಗಳನ್ನು ವಿಸರ್ಜಿಸುವುದು ಎಂದರೆ ದೇಶದ ನಾಗರಿಕನ ಅಧಿಕಾರ, ಹಕ್ಕುಗಳನ್ನು ಕಸಿದುಕೊಂಡ ಹಾಗೆಯೇ.

ಮೋದಿಯವರ ಈ ಯಾವುದೇ ಯೋಜನೆ, ಯೋಚನೆಗಳು ಭಾರತದ ಒಳಿತಿಗಲ್ಲ. ಇದು ಭಾರತದ ಕೇಡುಗಾಲ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟ ಹಾಗೇ, ಮೋದಿಯವರು ಒಂದು ದೇಶ-ಒಂದು ಚುನಾವಣೆಯ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅತಂತ್ರಗೊಳಿಸಲು ಮುಂದಾಗಿದ್ದಾರೆ.

ಅವರ ಉದ್ದೇಶ ತುಂಬಾ ಸ್ಪಷ್ಟ. ಈ ದೇಶವನ್ನು ಒಂದು ಕಾರ್ಪೋರೇಟ್‌ ಕಂಪನಿಯ ರೀತಿಯಲ್ಲಿ ನಡೆಸುವುದು. ಆಗ ಭಾರತ  ಜನಾದೇಶವೇ ಸರ್ವೋಚ್ಚವಾಗಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯುವುದಿಲ್ಲ.

ಭಿನ್ನ ರಾಜಕೀಯ ಪಕ್ಷಗಳು ರಾಜ್ಯಗಳಲ್ಲಿ ಆಡಳಿತ ನಡೆಸುವ ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ನಾಶ ಮಾಡಿ, ಇಡೀ ದೇಶದ ರಾಜಕೀಯ ವ್ಯವಸ್ಥೆಯನ್ನು ಏಕಪಕ್ಷೀಯಗೊಳಿಸುವುದು. ಇದನ್ನು ಜನರಿಗೆ ಅರ್ಥಮಾಡಿಸಿ, ಈ ಸರ್ವಾಧಿಕಾರಕ್ಕೆ ಜನರು ಒಗ್ಗುವಂತೆ ಮಾಡಲು ಬಿಜೆಪಿ ಅನೇಕ ಪ್ರಯತ್ನಗಳನ್ನು ಮಾಡಿದೆ. ಇದರಲ್ಲಿ ತುಂಬಾ ಅಪಾಯಕಾರಿ ನಡೆ ಎಂದರೆ, ವಿರೋಧ ಪಕ್ಷದ ನಾಯಕರು ಇಲ್ಲದೆ ಸಂಸತ್‌ ಕಲಾಪಗಳು ನಡೆದದ್ದು, ಮೂರು ಕ್ರಿಮಿನಲ್‌ ಕಾನೂನು ಕಾಯಿದೆಗಳನ್ನು, ಟೆಲಿಕಾಮ್‌ ಬಿಲ್‌ಗಳನ್ನು ಅವರ ಉಪಸ್ಥಿತಿ ಇಲ್ಲದೇ ಜಾರಿಗೆ ತಂದದ್ದು.

ಇದನ್ನು ಜನ ಸಂಭ್ರಮಿಸಿದರೆ, ಈ ಜನರನ್ನು ಸರ್ವಾಧಿಕಾರಕ್ಕೆ ಮತ್ತು ಗುಲಾಮಗಿರಿಗೆ ಒಗ್ಗಿಸುವುದು ತುಂಬಾ ಸುಲಭ ಎಂಬುದು ಬಿಜೆಪಿಗೆ ಅರ್ಥವಾಗಿದೆ.

ವನ್‌ ನೇಷನ್‌ – ವನ್‌ ಇಲೆಕ್ಷನ್‌ ಕಾಂಗ್ರೇಸಿಗೆ ಮಾತ್ರ ದೊಡ್ಡ ಪೆಟ್ಟು ಎಂದು ಇತರ ರಾಜಕೀಯ ಪಕ್ಷಗಳು ಭಾವಿಸಿದರೆ ಅದು ಮೂರ್ಖತನ. ಈಗ ಬಿಜೆಪಿ ಜೊತೆಗೆ ದೋಸ್ತಿ ಮಾಡಿ ಹಸಿರು ಶಾಲಿನಿಂದ ಕೇಸರಿ ಶಾಲಿಗೆ ಬದಲಾಗಿರುವ ಕುಮಾರ ಸ್ವಾಮಿಯವರ ಮೂರ್ಖತನವೂ ಕೂಡ. ಇದು ಕೇವಲ ವಿರೋಧ ಪಕ್ಷಗಳಿಗೆ ಸಂಕಷ್ಟ ಮಾತ್ರವಲ್ಲ, ಬಿಜೆಪಿಯ ರಾಜಕೀಯ ಮಿತ್ರಪಕ್ಷಗಳ ಅಸ್ತಿತ್ವಕ್ಕೂ ಅಪಾಯ ತಂದಿಡಲಿದೆ ಎಂಬುದನ್ನು ಮರೆಯಬಾರದು. ಏಕಕಾಲದ ಚುನಾವಣೆ ಎಂಬ ಬಿಜೆಪಿಯ ಕಪಟ, ಕ್ರೂರ ತಂತ್ರ ಭಾರತದ ಪ್ರಾದೇಶಿಕ ಪಕ್ಷಗಳನ್ನು ಕೊಂದು ಹಾಕಲಿದೆ.

ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಒಂದು ದೇಶ-ಒಂದು ಚುನಾವಣೆ ಎಂಬ ಬಿಜೆಪಿಯ ನಡೆ ದೇಶಕ್ಕೆ ಮುಂದೆ ಒದಗಬಹುದಾದ ಕರಾಳ ದಿನಗಳ ಮುನ್ಸೂಚನೆ, ಇದನ್ನು ದೇಶದ ಪ್ರತಿಯೊಬ್ಬ ನಾಗರಿಕ ಅರ್ಥಮಾಡಿಕೊಂಡು, ಈ ದೇಶ ವಿರೋಧಿ ನಡೆಯನ್ನು ವಿರೋಧಿಸಬೇಕು.

ಚರಣ್‌ ಐವರ್ನಾಡು, ಬೆಂಗಳೂರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page