ಚುನಾವಣಾ ಬಾಂಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದೆ. ಇಲೆಕ್ಟೋರಲ್ ಬಾಂಡಿಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಲು ಬ್ಯಾಂಕ್ ಜೂನ್ 30ರ ತನಕ ಸಮಯ ನೀಡುವಂತೆ ಕೇಳಿಕೊಂಡಿತ್ತು.
ಈ ಹಿಂದೆ, ಫೆಬ್ರವರಿ 15ರಂದು ನಡೆದ ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ಇಲೆಕ್ಟೋರಲ್ ಬಾಂಡನ್ನು ಅಸಾಂವಿಧಾನಿಕ ಎಂದು ಘೋಷಿಸಿತ್ತು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ನೀಡುವಂತೆ SBIಗೆ ಸೂಚಿಸಿತ್ತು. ಈಗ ಕಳೆದ ಐದು ವರ್ಷಗಳಲ್ಲಿ ಯಾರು ಎಷ್ಟು ರೂಪಾಯಿಗಳ ಚುನಾವಣಾ ಬಾಂಡುಗಳನ್ನು ಖರೀದಿಸಿದ್ದಾರೆ ಮತ್ತು ಯಾವ ಪಕ್ಷಕ್ಕೆ ನೀಡಿದ್ದಾರೆ ಎಂಬ ಬಗ್ಗೆ ಮಾರ್ಚ್ 12ರೊಳಗೆ ಮಾಹಿತಿ ನೀಡುವಂತೆ ನ್ಯಾಯಾಲಯವು ಬ್ಯಾಂಕಿಗೆ ಸೂಚಿಸಿದೆ.
ಸುಪ್ರೀಂ ಕೋರ್ಟಿನ ಈ ನಿರ್ದೇಶನದ ನಂತರ, ವಿರೋಧ ಪಕ್ಷಗಳು ಬಿಜೆಪಿಯ ಮೇಲೆ ಮುರಿದುಬೀಳಲು ಪ್ರಾರಂಭಿಸಿವೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿಯನ್ನು ಹಂಚಿಕೊಳ್ಳಲು ಹೆದರುತ್ತಿದೆ ಎಂದು ಅವು ಆರೋಪಿಸಿವೆ. ಇಲೆಕ್ಟೋರಲ್ ಬಾಂಡ್ ಮೂಲಕ ಆಡಳಿತಾರೂಢ ಬಿಜಪಿ ಗರಿಷ್ಠ ಹಣವನ್ನು ಪಡೆದಿದೆ ಎನ್ನುವುದು ವಿಪಕ್ಷಗಳ ಆರೋಪ.
ಕಾಂಗ್ರೆಸ್ ಹೇಳಿದ್ದೇನು?
ಇಲೆಕ್ಟೋರಲ್ ಬಾಂಡ್ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸಲು SBIಗೆ ಹೆಚ್ಚಿನ ಸಮಯ ನೀಡದಿರುವ ಕೋರ್ಟ್ ನಿರ್ಧಾರವನ್ನು ಕಾಂಗ್ರೆಸ್ ಸ್ವಾಗತಿಸಿದೆ. ಇದೇ ವಿಷಯವಾಗಿ ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು SBI ಶಾಖೆಯ ಹೊರಗೆ ಪ್ರತಿಭಟನೆ ನಡೆಸಿದರು.
ಈ ಕುರಿತು ಹೇಳಿಕೆ ನೀಡಿರುವ ರಾಹುಲ್ ಗಾಂಧಿ “ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ‘ನರೇಂದ್ರ ಮೋದಿಯವರ ದೇಣಿಗೆ ವ್ಯವಹಾರವು ಬಹಿರಂಗವಾಗಲಿದೆ” ಎಂದು ಹೇಳಿದ್ದಾರೆ.
“100 ದಿನಗಳಲ್ಲಿ ಸ್ವಿಸ್ ಬ್ಯಾಂಕುಗಳಿಂದ ಕಪ್ಪು ಹಣವನ್ನು ತರುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರವು ತನ್ನದೇ ಬ್ಯಾಂಕಿನ ಮಾಹಿತಿಯನ್ನು ಮರೆಮಾಚಲು ಹೋಗಿ ಸುಪ್ರೀಂ ಕೋರ್ಟಿನಲ್ಲಿ ತಲೆ ತಗ್ಗಿಸಿ ನಿಂತಿದೆ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
“ಇಲಿಕ್ಟೋರಲ್ ಬಾಂಡ್ ಎನ್ನುವುದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಹಗರಣವೆಂದು ಸಾಬೀತಾಗಲಿದೆ, ಇದು ಭ್ರಷ್ಟ ಕೈಗಾರಿಕೋದ್ಯಮಿಗಳು ಮತ್ತು ಸರ್ಕಾರದ ಸಂಬಂಧವನ್ನು ಬಹಿರಂಗಪಡಿಸುತ್ತದೆ ಮತ್ತು ನರೇಂದ್ರ ಮೋದಿಯವರ ನಿಜವಾದ ಮುಖವನ್ನು ದೇಶದ ಮುಂದೆ ಬಹಿರಂಗಪಡಿಸುತ್ತದೆ” ಎಂದೂ ಅವರು ಹೇಳಿಕೆ ನೀಡಿದ್ದಾರೆ.
“ಈ ವಿಷಯದಲ್ಲಿ ಬಿಜೆಪಿ ಕ್ರೋನೋಲಜಿ ಸ್ಪಷ್ಟವಾಗಿದೆ. ದೇಣಿಗೆ ನೀಡಿ-ವ್ಯಾಪಾರ ಮಾಡಿ, ದೇಣಿಗೆ ನೀಡಿ-ರಕ್ಷಣೆ ಪಡೆಯಿರಿ. ಚಂದಾ ನೀಡುವವರ ಮೇಲೆ ಅನುಗ್ರಹದ ಮಳೆ ಮತ್ತು ಜನಸಾಮಾನ್ಯರ ಮೇಲೆ ತೆರಿಗೆಯ ಹೊರೆ. ಇದೇ ಬಿಜೆಪಿಯ ಮೋದಿ ಸರ್ಕಾರ” ಎಂದು ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದಾರೆ.
“ಇಡಿ-ಸಿಬಿಐ-ಐಟಿ ದಾಳಿಗಳನ್ನು ನಡೆಸುವ ಮೂಲಕ ಬಿಜೆಪಿ ಹೇಗೆ ದೇಣಿಗೆ ಸುಲಿಗೆ ಮಾಡುತ್ತಿತ್ತು ಎಂಬುದನ್ನು ಮಾಧ್ಯಮ ವರದಿಗಳು ಬಹಿರಂಗಪಡಿಸಿವೆ. ಸುಪ್ರೀಂ ಕೋರ್ಟ್ ತೀರ್ಪು ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಸಮಾನತೆಗೆ ಸಂದ ಜಯವಾಗಿದೆ.”
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಅಜಯ್ ಕುಮಾರ್, ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರಲಾಗುವುದು ಎಂದು ಬಿಜೆಪಿ ಹೇಳುತ್ತಿದ್ದ ಸಮಯವಿತ್ತು. ಆದರೆ ಈಗ ಈ ಜನರಿಗೆ ಸ್ಟೇಟ್ ಬ್ಯಾಂಕ್ ಖಾತೆಗಳ ಮಾಹಿತಿಯನ್ನೇ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಗಣಿ ಮಾಫಿಯಾ ಬಿಜು ಜನತಾದಳ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರ್ಕಾರಕ್ಕೆ ಇಲಿಕ್ಟೋರಲ್ ಬಾಂಡ್ಗಳನ್ನು ನೀಡಿದೆ ಎಂದು ಅವರು ಆರೋಪಿಸಿದರು.
ಅಖಿಲೇಶ್ ಯಾದವ್ ಹೇಳಿದ್ದೇನು?
“ಸುಪ್ರೀಂ ಕೋರ್ಟ್ ಮೂಲಕವಾದರೂ ಆ ಪಟ್ಟಿ ಹೊರ ಬರುತ್ತಿರುವುದರ ಕುರಿತು ಇಡೀ ದೇಶ ಸಂತೋಷಪಡುತ್ತಿದೆ. ಇದರ ಮೂಲ ಇಲೆಕ್ಟೋರಲ್ ಬಾಂಡ್ಗಳನ್ನು ಯಾರ್ಯಾರಿಗೆ ನೀಡಲಾಗಿದೆ ಎನ್ನುವುದು ತಿಳಿಯಲಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ್ ತಿಳಿಸಿದ್ದಾರೆ.
ಪ್ರಶಾಂತ್ ಭೂಷಣ್ ಪ್ರತಿಕ್ರಿಯೆ
ಈ ವಿಷಯದಲ್ಲಿ ನ್ಯಾಯಾಲಯದ ಹಿಂದಿನ ತೀರ್ಪಿನಂತೆ ಇದು ಉತ್ತಮ ಮತ್ತು ದೃಢವಾದ ನಿರ್ಧಾರವಾಗಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದರು.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರವಾಗಿ ಪ್ರಶಾಂತ್ ಭೂಷಣ್ SBI ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.