Home ವಿಶೇಷ ಸರ್ಕಾರದಿಂದ ‘ಸರಿಪಡಿಸಲಾದ’ ಇತಿಹಾಸದ ಓದು : ಭಾರತದ ಆರ್ವೆಲಿಯನ್  ದಿನಗಳು

ಸರ್ಕಾರದಿಂದ ‘ಸರಿಪಡಿಸಲಾದ’ ಇತಿಹಾಸದ ಓದು : ಭಾರತದ ಆರ್ವೆಲಿಯನ್  ದಿನಗಳು

0
ಯಾರು ಭೂತಕಾಲವನ್ನು ನಿಯಂತ್ರಿಸುತ್ತಾರೋ ಅವರು ಭವಿಷ್ಯವನ್ನು ನಿಯಂತ್ರಿಸುತ್ತಾರೆ. ವರ್ತಮಾನವನ್ನು ನಿಯಂತ್ರಿಸುವವರು ಭೂತವನ್ನು ನಿಯಂತ್ರಿಸುತ್ತಾರೆ" ಎನ್ನುತ್ತಾನೆ ಕಾದಂಬರಿಕಾರ ಜಾರ್ಜ್ ಆರ್ವೆಲ್, ತನ್ನ ಒಂದು ಪ್ರಸಿದ್ಧ ಕಾದಂಬರಿಯಲ್ಲಿ. ಫ್ಯಾಸಿಸ್ಟ್ ಮನೋಭಾವದ ಪ್ರತಿಯೊಂದು ಸರಕಾರವೂ ಭೂತಕಾಲದ ದಾಖಲೆಗಳೆಲ್ಲವನ್ನೂ ತನ್ನ ನಿರೂಪಣೆಗೆ ಅನುಗುಣವಾಗಿ ತಿರುಚುತ್ತಲೇ ಇರುತ್ತದೆ ಅಥವಾ ನಾಶ ಪಡಿಸುತ್ತಿರುತ್ತದೆ. ತನ್ನನ್ನು ವಿರೋಧಿಸ ಬಹುದಾದ ಬುದ್ಧಿಜೀವಿಗಳನ್ನು ಸುಳ್ಳು ಸಾಕ್ಷ್ಯ ಸೃಷ್ಟಿಸಿ ಜೈಲಿನಲ್ಲಿಡುತ್ತದೆ. ವರ್ತಮಾನ ಕಾಲದಲ್ಲಿ ನಿತ್ಯವೂ ಇಂತಹ ನೂರೆಂಟು ಘಟನೆಗಳಿಗೆ ನಾವು ಸಾಕ್ಷಿಯಾಗುತ್ತಿರುವುದನ್ನು ನೆನಪಿಸಿಕೊಡುತ್ತ ಲೇಖಕಿ ರಂಜಿತಾ ಅವರು ನಮ್ಮ ಜನತಂತ್ರ ವ್ಯವಸ್ಥೆ ಎದುರಿಸುತ್ತಿರುವ ಅಪಾಯವನ್ನು ಮಾರ್ಮಿಕವಾಗಿ ವಿವರಿಸುತ್ತಾರೆ. 

ಸಿಎನ್ಎನ್ (CNN ) ವರದಿಯ ಪ್ರಕಾರ ಈ ವರ್ಷ ಯುದ್ಧ ನಿರತ ರಷ್ಯಾದ ಜನರು  ಅತ್ಯಧಿಕ ಸಂಖ್ಯೆಯಲ್ಲಿ ಓದಿದ ಪುಸ್ತಕವೆಂದರೆ ಜಾರ್ಜ್ ಆರ್ವೆಲ್ ನ  ಸರ್ವಾಧಿಕಾರದ ದಿನಗಳ ಕುರಿತ  ಕಾದಂಬರಿ ‘1984’.  ೧949ರಲ್ಲಿ  ಪ್ರಕಟಿಸಲ್ಪಟ್ಟ ಈ ಕಾದಂಬರಿ 1988 ರವರೆಗೂ ರಷ್ಯಾದಲ್ಲಿ ನಿಷೇಧಿಸಲ್ಪಟ್ಟಿತ್ತು. ಏಕೆಂದರೆ ಸ್ವತಃ ಸಮಾಜವಾದಿಯಾಗಿದ್ದ ಜಾರ್ಜ್ ಆರ್ವೆಲ್  ತನ್ನ ಕಾದಂಬರಿಯ “ಬಿಗ್ ಬ್ರದರ್“ ಪಾತ್ರದ ಮೂಲಕ “ಸ್ಟಾಲಿನಿಸಂ” (Stalinism)  ವಿರುದ್ಧ ಎಚ್ಚರಿಸಿದ್ದರು. ಈ ಪುಸ್ತಕವನ್ನು ರಷ್ಯಾ ಸರ್ಕಾರ  ಈಗ ಜನರಿಗೆ ಓದಲು ಬಿಟ್ಟಿದೆಯೆಂದರೆ ರಷ್ಯನ್ ಭಾಷಾ ಆವೃತ್ತಿಯು ಪಶ್ಚಿಮದ ಸಮಾಜವಾದನ್ನು ಟೀಕೆಗೆ ಗುರಿ ಮಾಡಿರುವ ಸಾಧ್ಯತೆಗಳಿವೆ .

ಪುಸ್ತಕದ ಮುಖ್ಯ ಪಾತ್ರಗಳ ಸಂಭಾಷಣೆಯ ಮೂಲಕ  ಆರ್ವೆಲ್ “ಯಾರು ಭೂತಕಾಲವನ್ನು ನಿಯಂತ್ರಿಸುವರೋ ಅವರು ಭವಿಷ್ಯವನ್ನು ನಿಯಂತ್ರಿಸುತ್ತಾರೆ. ವರ್ತಮಾನವನ್ನು ನಿಯಂತ್ರಿಸುವವರು ಭೂತವನ್ನು ನಿಯಂತ್ರಿಸುತ್ತಾರೆ” ಎಂಬ ಭವಿಷ್ಯ ವಾಣಿಯನ್ನು ಓದುಗರ ಮುಂದಿಡುತ್ತಾರೆ. ಪುಸ್ತಕದಲ್ಲಿ  ಬಿಗ್ ಬ್ರದರ್‌ ನ  ಸರ್ಕಾರ ಭೂತ ಕಾಲದ ದಾಖಲೆಗಳೆಲ್ಲವನ್ನೂ ತನ್ನ ನಿರೂಪಣೆಗನುಗುಣವಾಗಿ ತಿರುಚುತ್ತದೆ ಅಥವಾ ನಾಶ ಮಾಡುತ್ತದೆ ಹಾಗೂ ಪ್ರಜೆಗಳ ಮೇಲೆ ಯಂತ್ರದ ಮೂಲಕ ಸದಾ ಕಾಲ ನಿಗಾ ವಹಿಸುತ್ತಿರುತ್ತದೆ. ತನ್ನನ್ನು ವಿರೋಧಿಸಬಹುದಾದ ಬುದ್ಧಿ ಜೀವಿಗಳನ್ನು ಸುಳ್ಳು ಸಾಕ್ಷ್ಯ ಸೃಷ್ಟಿಸಿ ಬಂಧಿಸುತ್ತದೆ. 

 ಆರ್ವೆಲ್ ನ ಪುಸ್ತಕ ಓದದೆಯೂ ಇತಿಹಾಸದ ಮೇಲೆ ನಿಯಂತ್ರಣ ಸಾಧಿಸುವ ಸರ್ಕಾರಗಳ ಪ್ರಯತ್ನಗಳು, ಅದರ ಪರಿಣಾಮದ ಕುರಿತು ಭಾರತೀಯರಿಗೆ ಕಳೆದ ಕೆಲವು ವರ್ಷಗಳಲ್ಲಿ  ಅನುಭವಕ್ಕೆ ಬಂದಿರಬಹುದು. EWS ಮೀಸಲಾತಿಯ ಕುರಿತು ಅಸಮ್ಮತಿ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೂ ಕೂಡ ಭಾರತ ಆರ್ವೆಲ್ ಭವಿಷ್ಯವಾಣಿಯ ದಿನಗಳತ್ತ ಸಾಗುತ್ತಿದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ (“ಎಸ್ ಸಿ/ಎಸ್ ಟಿ/ಒಬಿಸಿ ವರ್ಗಗಳನ್ನು ಹೊರಗಿಟ್ಟಿರುವುದರ ಒಟ್ಟು ಪರಿಣಾಮವು ಆರ್ವೆಲ್ಲಿಯನ್ ಆಗಿದೆ, ಅಂದರೆ  ಜಾತಿ ಅಥವಾ ವರ್ಗವನ್ನು ಲೆಕ್ಕಿಸದೆ ಎಲ್ಲಾ ಬಡವರು ಪರಿಗಣನೆಗೆ ಅರ್ಹರಾಗಿದ್ದಾರೆ, ಆದರೂ ಮೇಲ್ವರ್ಗ/ಜಾತಿಗಳಿಗೆ ಸೇರಿದವರನ್ನು ಮಾತ್ರ ಇಲ್ಲಿ ಪರಿಗಣಿಸಲಾಗುತ್ತಿದೆ ” -ರವೀಂದ್ರ ಭಟ್, ನ್ಯಾಯಮೂರ್ತಿ )

ಅಮೇರಿಕನ್ ಫೋರೆನ್ಸಿಕ್ ಸಂಸ್ಥೆಯ ವರದಿಯು  2020 ರಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ಭಾಗಿಯಾದ  ಆರೋಪದ ಮೇಲೆ ಬಂಧಿಸಲ್ಪಟ್ಟ ಮತ್ತು ಒಂದು ವರ್ಷದ ನಂತರ ಸೆರೆಯಲ್ಲಿಯೇ  ಸಾವನ್ನಪ್ಪಿದ 83 ವರ್ಷದ ಕಾರ್ಯಕರ್ತ ಫಾದರ್ ಸ್ಟೇನ್ ಸ್ವಾಮಿ ಅವರ ಕಂಪ್ಯೂಟರ್‌ನ್ನು ಹ್ಯಾಕ್ ಮಾಡಿ ಉದ್ದೇಶ ಪೂರ್ವಕವಾಗಿಯೇ ಅವರ ವಿರುದ್ಧದ ಸಾಕ್ಷ್ಯಗಳನ್ನು ಇಡಲಾಗಿತ್ತು  ಎಂದು ತೋರಿಸಿದ್ದನ್ನು ಇಲ್ಲಿ  ಸ್ಮರಿಸಬಹುದು. ಭಾರತ ಸರ್ಕಾರವು ಪೆಗಾಸಸ್ ಎಂಬ ಬೇಹುಗಾರಿಕಾ ತಂತ್ರಾಂಶವನ್ನು ಖರೀದಿಸಿದ್ದು  ಬಯಲಾಗಿದ್ದರೂ ಸರ್ಕಾರ ಇದನ್ನು ಅಲ್ಲಗೆಳೆಯಿತು  ಹಾಗೂ  ಈ ಕುರಿತ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸದೆ ಯಥಾ ಪ್ರಕಾರ ದೇಶದ, ವಿರೋಧ ಪಕ್ಷಗಳ ಗಮನವನ್ನು ಬೇರೆಡೆ ಸೆಳೆಯಲಾಯಿತು. ಲೋಕಸಭೆಯ ಐಟಿ ಸಂಸದೀಯ ಸಮಿತಿಯು ಇದರ ಕುರಿತು ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿತ್ತು.  ಆದರೆ ಕೆಲವು ತಿಂಗಳ ಹಿಂದೆ ಸಂಸದೀಯ ಸಮಿತಿಯ ಮರು ರಚನೆಯಾದಾಗ ಈ ವರ್ಷದಿಂದ ಅಲ್ಲಿಯೂ ಕೂಡ ಆಡಳಿತ ಪಕ್ಷ ಪಾರಮ್ಯ ಮೆರೆದಿದೆ (ಆರು ಪ್ರಮುಖ ಸಂಸದೀಯ ಸಮಿತಿಗಳ ಅಧ್ಯಕ್ಷರು – ಗೃಹ, ಐಟಿ, ರಕ್ಷಣೆ, ವಿದೇಶಾಂಗ ವ್ಯವಹಾರಗಳು, ಹಣಕಾಸು ಮತ್ತು ಆರೋಗ್ಯ – ಇವೆಲ್ಲವೂ ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳ ಪಾಲಾಗಿವೆ. ಪ್ರಮುಖ ಸಂಸದೀಯ ಸಮಿತಿಗಳ ಅಧ್ಯಕ್ಷರು ವಿರೋಧ ಪಕ್ಷಕ್ಕೆ ಸೇರಿರಬೇಕೆಂಬ ಅಲಿಖಿತ ಸಂಪ್ರದಾಯವನ್ನು ಸರ್ಕಾರ ಕೊನೆಗೊಳಿಸಿದೆ). ಹಾಗಾಗಿ ಪೆಗಾಸಸ್ ಸಂಬಂಧ ಸಂಸದೀಯ ಸಮಿತಿಯ  ವರದಿಯು ಎಂದಾದರೂ ಬಹಿರಂಗಗೊಂಡಲ್ಲಿ ಅದು ಒಂದು ದುರ್ಬಲ ಕಡತವಾಗಿರುತ್ತದೆ ಅಷ್ಟೇ.  ಇನ್ನು ಇಸ್ರೋ ವಿಜ್ಞಾನಿಗಳ ಜೋಶಿಮಠ ಕುರಿತ ವರದಿ ಮೊದಲೇ ಬಹಿರಂಗಗೊಳ್ಳದೆ ಸೀದಾ ಗೃಹ ಮಂತ್ರಿಗಳ ಕಛೇರಿ ಸೇರಿದ್ದರೆ ಬಿಡುಗಡೆಯೇ ಆಗುತ್ತಿರಲಿಲ್ಲ ಎನ್ನುವ ಸತ್ಯ ಈಗಾಗಲೇ ಬಹುಶ: ಅವರ ಸಮರ್ಥಕರಿಗೂ ತಿಳಿದಿದೆ. 

ಕೆಲವು ದಿನಗಳ ಹಿಂದೆಯಷ್ಟೇ ಗೃಹ ಮಂತ್ರಿಗಳು ದೆಹಲಿಯಲ್ಲಿ ಲೇಖಕರೊಬ್ಬರ ಸ್ವಾತಂತ್ರ್ಯ ಸಂಗ್ರಾಮದ ಇನ್ನಿತರ ನಾಯಕರ ಕುರಿತ ಪುಸ್ತಕವೊಂದನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಪುಸ್ತಕ ಪರಿಚಯ ಸಂಧರ್ಭದಲ್ಲಿ ಸಾವರ್ಕರ್ ಇದ್ದ ಅಂಡಮಾನಿನ ಜೈಲು, RSS ನ ಸ್ಥಾಪನೆ, INA ಸೈನಿಕರನ್ನು ಬಂಧಿಸಿಟ್ಟಿದ್ದ ಕೋಟೆಯ  ವೀಡಿಯೋಗಳನ್ನು ಪ್ರದರ್ಶಿಲಾಯಿತು. ಗೃಹ ಮಂತ್ರಿಗಳು ಇತಿಹಾಸದ ಈ ನಿರೂಪಣೆಯನ್ನು  ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು “ಒಪ್ಪಲೇಬೇಕು “ ಎಂದು ಆಗ್ರಹಿಸಿದರು.

2023 ರಲ್ಲಿ  ಭಾರತದ  ಒಂಬತ್ತು ರಾಜ್ಯಗಳಲ್ಲಿ (ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ) ಚುನಾವಣೆ ನಡೆಯಲಿದೆ. ಸರ್ಕಾರದ ಹಿಂಬಾಲಕರು ಕಟ್ಟುವ ಹೊಸ ಇತಿಹಾಸದ ನಿರೂಪಣೆಗಳು ಚುನಾವಣಾ ವರ್ಷಗಳಲ್ಲಿ ಇನ್ನೂ ವೇಗ ಪಡೆದುಕೊಳ್ಳುತ್ತವೆ. ಮುಘಲ್ ಅಥವಾ ಮುಸ್ಲಿಂ ರಾಜರೊಂದಿಗೆ ಘರ್ಷಣೆಯ ಇತಿಹಾಸವಿರುವ ನಾಯಕರ ಕುರಿತ ಆಚರಣೆಗಳಲ್ಲಿ ಸರ್ಕಾರದ ನಾಯಕರ ಹಾಜರಿ ಕಡ್ಡಾಯವಿರುತ್ತದೆ ಹಾಗೂ ವಿಜೃಂಭಣೆಯ ಆಚರಣೆಗಳಲ್ಲಿ ಇತಿಹಾಸದಲ್ಲಿ ಸದರಿ ನಾಯಕನಿಗೆ ಮುಖ್ಯ ಸ್ಥಾನ ಸಿಗದೆ ಅನ್ಯಾಯವಾಗಿದೆ ಎಂಬ ಘೋಷಣೆಗಳನ್ನು ಮರೆಯದೆ ಜನರ ಮುಂದೆ ಮಾಡಲಾಗುತ್ತದೆ. ಆಡಳಿತ ಪಕ್ಷದ ಕೋಮುವಾದವನ್ನು ಪ್ರತಿಭಟಿಸಿ ದೇಶದುದ್ದಕ್ಕೂ ಪಾದಯಾತ್ರೆ ಕೈಗೊಂಡ ವಿರೋಧ ಪಕ್ಷದ ನಾಯಕರೊಬ್ಬರ ಪ್ರಯತ್ನಗಳನ್ನು ಜನರ ಕಣ್ಣಿಗೇ ಬೀಳದಂತೆ, ಅವರ ಮನಸ್ಸಿನಲ್ಲಿ ದಾಖಲಾಗದಂತೆ ಮಾಡಲು ಮಾಧ್ಯಮಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಅಥವಾ ನಿರ್ದೇಶಿಸಲಾಗುತ್ತದೆ. ಒಟ್ಟಿನಲ್ಲಿ ಭಾರತದ ಇತಿಹಾಸ ಕೇವಲ ಹಿಂದೂ – ಮುಸ್ಲಿಂ ಘರ್ಷಣೆಯ ಹಾಗೂ ಮುಘಲ್ ದಬ್ಬಾಳಿಕೆಯ ಆಳ್ವಿಕೆಯ ಇತಿಹಾಸ ಎಂಬ ದ್ವೇಷದ ನಿರೂಪಣೆಗಳನ್ನು, ಅಧಿಕಾರಕ್ಕೆ ಬರಲು ಹಾಗೂ ಬಂದ ನಂತರ ಅದನ್ನು ಖಾಯಂ ಮಾಡುವ ಪ್ರಯತ್ನಗಳಲ್ಲಿ  ಆಡಳಿತ ಪಕ್ಷ ಸದಾ ತೊಡಗಿರುತ್ತದೆ.

ಇದೇ ಪ್ರಯತ್ನಗಳ ಸರದಿಯಲ್ಲಿ  ಹೊಸ ಸೇರ್ಪಡೆ ಎಂದರೆ ಕೆಲವು ದಿನಗಳ  ಹಿಂದಿನ ಕೇಂದ್ರ ಶಿಕ್ಷಣ ಮಂತ್ರಿಗಳ ಹೇಳಿಕೆ. 2023 ರ ಜನವರಿಯ 26 ರ ವಸಂತ ಪಂಚಮಿಯ ದಿನದಂದು ಜಾರಿಗೆ ತರಲಾಗುವ ಹೊಸ  ರಾಷ್ಟ್ರೀಯ ಶಿಕ್ಷಣ ನೀತಿಯ (NEP ) ಮೂಲಕ ದೇಶದ ವಿದ್ಯಾರ್ಥಿಗಳು “ಸರಿಪಡಿಸಲಾದ“ ಇತಿಹಾಸವನ್ನು ಓದುತ್ತಾರೆ ಎಂದು ಅವರು ಹೇಳಿದರು.

ಜನವರಿ 26ರ ದಿನ  ಗಣರಾಜ್ಯೋತ್ಸವ ಎಂಬ ಮಹತ್ವದ ದಿನ ಎಂಬುದು ಬಹುಶ: ಶಿಕ್ಷಣ ಮಂತ್ರಿಗಳಿಗೆ ಮರೆತು ಹೋಗಿದೆ, ಆದರೆ ವಸಂತ ಪಂಚಮಿ ಎಂಬ ವಿಷಯ ಬಹುಶ: ಎಲ್ಲರೂ ನೆನಪಿಡಬೇಕೆಂದು ಅವರು ಬಯಸಿದ್ದಾರೆ. ಗೋವಿಜ್ಞಾನ ಹಾಗೂ ಗೋವಿನ ಉತ್ಪನ್ನ (ಗೋಮೂತ್ರ, ಗಂಜಲ)ದ ಕುರಿತ  ಬಗ್ಗೆ ರಾಷ್ಟ್ರವ್ಯಾಪಿ ಪರೀಕ್ಷೆ ನಡೆಸಲು ಹೊರಟಿರುವ ಸರ್ಕಾರದಿಂದ ಸಂವಿಧಾನದಲ್ಲಿ ಉಲ್ಲೇಖವಾಗಿರುವ ವೈಜ್ಞಾನಿಕ ಮನೋಭಾವ ಉದ್ದೀಪಿಸುವ ಶಿಕ್ಷಣದ ಕುರಿತು ನಿರೀಕ್ಷೆ ಇಡುವ ಅಗತ್ಯವೇನಿಲ್ಲ ಎಂದು ತಮ್ಮ ಸತತ ನಡೆಗಳ ಮೂಲಕ ಸರ್ಕಾರ ಹಾಗೂ ಮಂತ್ರಿಗಳು  ಸ್ಪಷ್ಟ ಪಡಿಸುತ್ತಲೇ ಇದ್ದಾರೆ.

ಕರ್ನಾಟಕ ಸರ್ಕಾರವು ಅನರ್ಹರಿಗೆ ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷತೆ ನೀಡಿ, ಪ್ರಜೆಗಳು- ಪ್ರಾಜ್ಞರ ಬಲವಾದ ವಿರೋಧದ  ನಡುವೆಯೂ ತನ್ನ ನಡೆಯನ್ನು ಸಮರ್ಥಿಸಿಕೊಂಡದ್ದು  ಬಹುಶ: ಜನರ ಮನಸಿನಿಂದ ಆಗಲೇ  ಮರೆಯಾಗಿದೆ. ಹುಬ್ಬಳ್ಳಿಯಲ್ಲಿ ಕಳೆದ ವಾರದ ಪ್ರಧಾನಿಗಳ ಕಾರ್ಯಕ್ರಮಕ್ಕೆ ಶಾಲೆಗಳಿಗೆ ರಜೆ ಘೋಷಿಸಿ (ಭದ್ರತಾ ಕಾರಣಗಳನ್ನು ನೀಡಿ !) ಪ್ರತಿ ಶಾಲೆ/ಕಾಲೇಜಿನ ಕನಿಷ್ಠ ನೂರು ಮಕ್ಕಳು  ಕಾರ್ಯಕ್ರಮಕ್ಕೆ ಹಾಜರಿರಬೇಕೆಂದು ಹೊರಡಿಸಿದ್ದ ಸೂಚನೆಯನ್ನು ವಿರೋಧದ ನಂತರ ಹಿಂಪಡೆಯಲಾಯಿತು.  ಬಿಜೆಪಿಯ ಹಾಗೂ ಮಿತ್ರ ಪಕ್ಷಗಳ  ಸಾಧ್ವಿ – ಸಾಧುಗಳು ಆಯುಧಗಳನ್ನು ಕೈಗೆತ್ತಿಕೊಳ್ಳಿ ಎಂದು ಪದೇ ಪದೇ ಕರೆ ಕೊಟ್ಟರೂ ಪೊಲೀಸ್ ವ್ಯವಸ್ಥೆ ಕಂಡೂ ಕಾಣದಂತೆ ಸುಮ್ಮನಿರುವುದು ಜನರಿಗೂ ಒಪ್ಪಿತವಾಗಿದೆ.

ಗುರು ಗೋವಿಂದ್ ಸಿಂಗ್ ರ ಮಕ್ಕಳು ಹುತಾತ್ಮರಾದ ದಿನವನ್ನು ‘ವೀರ್ ಬಾಲ ದಿವಸ್‘ ಎಂದು ಆಚರಿಸಲಾಗುವುದು ಎಂಬ ಪ್ರಧಾನಿಗಳ ಘೋಷಣೆಯನ್ನು ಸಿಖ್ ಸಂಘಟನೆಗಳು ವಿರೋಧಿಸಿದವು. ಆದರೂ ಅದನ್ನು ಕಡೆಗಣಿಸಿದ ಬಿಜೆಪಿ, ಸಿಖ್ – ಮುಸ್ಲಿಂ ಸೌಹಾರ್ದ ಕದಡುವ ತನ್ನ ಪ್ರಯತ್ನದಲ್ಲಿ ಮುಂದುವರಿಯಿತು. ಯುಜಿಸಿ ಯ ಅಧ್ಯಕ್ಷರು ಇತ್ತೀಚೆಗೆ ಖಾಪ್ ಪಂಚಾಯತ್ ಗಳೆಂಬ ಸಾಂಪ್ರದಾಯಿಕ ವ್ಯವಸ್ಥೆಗಳು ಅಳವಡಿಸಿಕೊಂಡಿದ್ದ ‘ಪ್ರಜಾಸತ್ತಾತ್ಮಕ ಮಾದರಿ’ (!?) ಯ ಬಗ್ಗೆ ಅಧ್ಯಯನ ನಡೆಸಲು ವಿಶ್ವ ವಿದ್ಯಾಲಯಗಳಿಗೆ  ಸುತ್ತೋಲೆ ಹೊರಡಿಸಿದ್ದರು. ಇಲ್ಲದ ಆದರ್ಶ ಪ್ರಜಾಪ್ರಭುತ್ವ ದ ಮಾದರಿಯನ್ನು ವಿಶ್ವ ವಿದ್ಯಾಲಯಗಳು ಎಲ್ಲೆಲ್ಲಿ ಹುಡುಕಬೇಕಾಯಿತೋ ಅಥವಾ ಸೃಷ್ಟಿಸಬೇಕಾಯಿತೋ ಸರ್ಕಾರಕ್ಕಷ್ಟೇ ಗೊತ್ತು !. 

ಆಡಳಿತ ಸಿಕ್ಕ ಅವಧಿಯುದ್ದಕ್ಕೂ ಕೇಂದ್ರ ಸರ್ಕಾರ ಮಾಡಿದ ಇಂಥ ಇತಿಹಾಸ ತಿರುಚುವ ಪ್ರಯತ್ನಗಳ ಸಂಖ್ಯೆ  ಬಹು ದೊಡ್ಡದಿದೆ. ಪಟ್ಟಿ ಮಾಡುತ್ತಾ ಹೋದಂತೆ ಸರ್ಕಾರದ ವಿರುದ್ಧ ದೂರುಗಳನ್ನಷ್ಟೇ ಮುಂದಿಡುತ್ತಿದ್ದೇವೆಯೇ ಎಂದು ನಮಗೇ ಒಂದು ಕ್ಷಣ ಗೊಂದಲವಾಗುತ್ತದೆ. ಒಂದು ವರ್ಷದಲ್ಲೇ ಇಷ್ಟು ಪ್ರಯತ್ನಗಳು ನಡೆದರೆ, ಅವನ್ನು ಪರಿಶೀಲನೆ ಮಾಡುವ ಹಾಗೂ ವಿಮರ್ಶೆ ಗೊಳಪಡಿಸುವ ಅರ್ಹತೆಯಿರುವ ಕೆಲವೇ ಸಂಶೋಧಕರು, ವಿಷಯ ತಜ್ಞರು ಸಂಪನ್ಮೂಲ ಮತ್ತು ಬೆಂಬಲದ ಕೊರತೆಯಿಂದ ಧ್ವನಿ ಕಳೆದುಕೊಂಡು ಬಡವಾಗಿದ್ದಾರೆ. 

ಇಂಥ ಪ್ರಯತ್ನಗಳು ಭಾರತಕ್ಕೆ ಮಾತ್ರ ಸೀಮಿತವೇನಲ್ಲ ಹಾಗೂ ಇದು ಹೊಸದೂ ಅಲ್ಲ. “ಉಕ್ರೇನ್ ಗೆ ಇತಿಹಾಸವಿಲ್ಲ“  ಎಂದು ಹೇಳಿದ್ದ  ಪುಟಿನ್ ಮತ್ತು ಅವರ ಸರ್ಕಾರ  ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ಯ ಮೂಲಕ ಉಕ್ರೇನ್ ನೊಂದಿಗೆ ಇಂಥದೇ ಪ್ರಯೋಗಗಳನ್ನು ಮಾಡುತ್ತಿದೆ. ಯುದ್ಧದಲ್ಲಿ ರಷ್ಯಾ ಸೇನೆ ವ್ಯವಸ್ಥಿತವಾಗಿ  ಉಕ್ರೇನ್ ನ ಮ್ಯೂಸಿಯಂಗಳು, ಐತಿಹಾಸಿಕ ಕಟ್ಟಡಗಳು, ಉಕ್ರೇನ್ ಪರಂಪರೆ ಬಿಂಬಿಸುವ ಸ್ಮಾರಕಗಳನ್ನು  ಗುರಿಯಾಗಿಸಿ ದಾಳಿ ಮಾಡುತ್ತಿದೆ. ಉಕ್ರೇನ್ ಸ್ಥಳಗಳನ್ನು ಮರು ವಶಪಡಿಸಿಕೊಂಡಲ್ಲಿ ನಗರಗಳನ್ನು ತೊರೆದು ಹೋಗುವ ಮುಂಚೆ ರಷ್ಯಾ ಸೇನೆ ವಸ್ತು ಸಂಗ್ರಹಾಲಯಗಳನ್ನು ಲೂಟಿ ಮಾಡಿ ನಡೆಯುತ್ತಿದೆ. ರಷ್ಯಾ ಅಧ್ಯಕ್ಷರು, ಅಖಂಡ ರಷ್ಯಾದ ಪ್ರಜೆಗಳು ಎಂದು ಘೋಷಿಸುತ್ತಲೇ ಉಕ್ರೇನಿಯನ್ನರು ಮತ್ತು ಅವರ ಭಾಷೆ-ಸಂಸ್ಕೃತಿಯ  ಮೇಲೆ ನಿರಂತರ  ಮಾರಣಾಂತಿಕ  ಪ್ರಯೋಗಗಳನ್ನು ನಡೆಸುತ್ತಿದ್ದರೆ ಭಾರತ ಸರ್ಕಾರ ತನ್ನದೇ ಪ್ರಜೆಗಳನ್ನು ಬಲಿಪಶುಗಳನ್ನಾಗಿ ಮಾಡಿದೆ.

ಅಧಿಕಾರದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಪಠ್ಯಪುಸ್ತಕಗಳೊಂದಿಗೆ ತನಗೆ ಸರಿ ಕಂಡಂತೆ ಬದಲಾವಣೆ  ಮಾಡಲು ಯತ್ನಿಸುತ್ತವೆ.  ಆದರೆ ಯಾವುದೇ ಪಕ್ಷವು ಇಲ್ಲಿಯವರೆಗೆ ಜನರ ಸ್ಮರಣೆಯನ್ನು ಅಳಿಸಲು, ಇತಿಹಾಸವನ್ನು ಬದಲಾಯಿಸಲು ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ತನ್ನದೇ ಆದ ಸಂಕುಚಿತ ತಿಳುವಳಿಕೆಯನ್ನು ಜನರಿಗೆ ಉಣಿಸಲು ಈ ಪರಿಯ  ಬಲವಂತದ, ವ್ಯಾಪಕ ಪ್ರಯತ್ನಗಳನ್ನು ಮಾಡಿಲ್ಲ. ಉತ್ತಮ ಶಿಕ್ಷಣ ಪಡೆದು ವಿಶ್ವಕ್ಕೆ ಅತ್ಯುನ್ನತ ಮಾನವ ಸಂಪನ್ಮೂಲವಾಗಬಲ್ಲ ಸಾಧ್ಯತೆಯಿರುವ ಭಾರತದ ಯುವ ಜನತೆಯ ಭವಿಷ್ಯವು ನಿರಂತರವೂ  ಅರ್ಥಹೀನವೂ ಆದ  ದ್ವೇಷ ರಾಜಕಾರಣದ ಪ್ರಯೋಗಗಳಿಗೆ ಬಲಿಯಾಗುತ್ತಿದೆ. 

ರಂಜಿತಾ ಜಿ ಎಚ್

ಲೇಖಕರು

You cannot copy content of this page

Exit mobile version