Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಸಂಸತ್‌ ದಾಳಿ ʼಯೋಜಿತ ಪಿತೂರಿʼ: ನ್ಯಾಯಾಲಯಕ್ಕೆ ಪೊಲೀಸ್‌ ಹೇಳಿಕೆ

ಸಂಸತ್‌ ದಾಳಿ ʼಯೋಜಿತ ಪಿತೂರಿʼ: ನ್ಯಾಯಾಲಯಕ್ಕೆ ಪೊಲೀಸ್‌ ಹೇಳಿಕೆ

0

ನವದೆಹಲಿ: ಡಿಸೆಂಬರ್ 13 ರಂದು ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಗಾಗಿ ಬಂಧಿಸಲಾದ ನಾಲ್ವರು ವ್ಯಕ್ತಿಗಳು ಒಂದು “ಯೋಜಿತ ಪಿತೂರಿ” ಯ ಭಾಗ ಎಂದು ದೆಹಲಿ ಪೊಲೀಸರು ಗುರುವಾರ ನಗರದ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮನೋರಂಜನ್ ಡಿ, ಸಾಗರ್ ಶರ್ಮಾ, ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾದ ನಾಲ್ವರು ಆರೋಪಿಗಳ ವಿರುದ್ಧ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗುರುವಾರ ನಗರ ನ್ಯಾಯಾಲಯ ಇವರನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ʼಇವರು ನಾಪತ್ತೆಯಾಗಿದ್ದಾರೆʼ ಎಂಬ ಪೋಸ್ಟರ್‌ಗಳನ್ನು ಪೋಸ್ಟ್ ಮಾಡಿ, ಪತ್ತೆ ಮಾಡಿದವರಿಗೆ ಸ್ವಿಸ್ ಬ್ಯಾಂಕ್‌ನಿಂದ ಬಹುಮಾನ ನೀಡಲಾಗುವುದು ಎಂದಿರುವ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

“ಅವರು [ಮೋದಿ] ಜಾಗತಿಕ ಮಟ್ಟದಲ್ಲಿ ನಮ್ಮ ಪ್ರತಿನಿಧಿ. ಅವರು ಘೋಷಿತ ಅಪರಾಧಿಯಂತೆ ಕಾಣೆಯಾಗಿದ್ದಾರೆ ಎಂದು ಇವರ ಬಗ್ಗೆ ಹೇಳಲಾಗಿದೆ. ಅವರು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಎಂಬುದನ್ನು ಇದು ತೋರಿಸುತ್ತದೆ. ಆರೋಪಿಗಳಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಇರಲೂ ಬಹುದು” ಎಂಬ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆಯನ್ನು ಲೈವ್ ಲಾ ವರದಿ ಮಾಡಿದೆ.

ತನಿಖೆಯ ಭಾಗವಾಗಿ ಆರೋಪಿಗಳನ್ನು ಮುಂಬೈ ಮತ್ತು ಲಕ್ನೋಗೆ ಕರೆದೊಯ್ಯಲು 15 ದಿನಗಳ ಕಾಲ ಇವರನ್ನು ಪೊಲೀಸ್ ಕಸ್ಟಡಿಗೆ ನೀಡಲು ಪ್ರಾಸಿಕ್ಯೂಷನ್ ಕೋರಿತ್ತು. ಆದರೆ, ಪ್ರತಿವಾದಿ ವಕೀಲರು, ಇದಕ್ಕೆ ನಾಲ್ಕರಿಂದ ಐದು ದಿನಗಳ ಪೊಲೀಸ್ ಕಸ್ಟಡಿ ಸಾಕು ಎಂದು ವಾದಿಸಿದ್ದಾರೆ.

ಡಿಸೆಂಬರ್ 13 ರಂದು, ಮನೋರಂಜನ್ ಮತ್ತು ಶರ್ಮಾ ಹಳದಿ ಬಣ್ಣದ ಹೊಗೆಯನ್ನು ಹಾಕಿ ಲೋಕಸಭೆಯಲ್ಲಿ ದಾಂಧಲೆ ಎಬ್ಬಿಸಿದ್ದರು. ಸಂಸತ್ತಿನ ಹೊರಗೆ ಆಜಾದ್ ಮತ್ತು ಶಿಂಧೆ ಎಂಬ ಆರೋಪಿಗಳು ಹೊಗೆ ಹಾರಿಸಿ “ಸರ್ವಾಧಿಕಾರ ನಿಲ್ಲಿಸಿ” ಎಂದು ಘೋಷಣೆ ಕೂಗಿದ್ದರು.

You cannot copy content of this page

Exit mobile version