Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಪ್ರಧಾನಿಗಳನ್ನೇ ರಕ್ಷಿಸಲು ಬಿಜೆಪಿಗೆ ಸಾಧ್ಯವಿಲ್ಲ! ಮುಂದುವರಿದ ವಿಪಕ್ಷಗಳ ಧರಣಿ

ಪ್ರಧಾನಿಗಳನ್ನೇ ರಕ್ಷಿಸಲು ಬಿಜೆಪಿಗೆ ಸಾಧ್ಯವಿಲ್ಲ! ಮುಂದುವರಿದ ವಿಪಕ್ಷಗಳ ಧರಣಿ

0

ನವದೆಹಲಿ: ಲೋಕಸಭೆಯಲ್ಲಿ ಭದ್ರತಾ ಲೋಪದ ಬಗ್ಗೆ ಚರ್ಚಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ವಿರೋಧಿಸಿ ವಿರೋಧ ಪಕ್ಷಗಳು ಪ್ರತಿಭಟನೆಗೆ ನಡೆಸಿದ ಕಾರಣ ಸಂಸತ್ತಿನ ಉಭಯ ಸದನಗಳನ್ನು ಇಂದು ಮುಂದೂಡಲಾಗಿದೆ. ಸತತ ಎರಡು ದಿನಗಳ ಕಾಲ ಸಂಸತ್ತಿನಲ್ಲಿ ಅಸ್ತವ್ಯಸ್ತ ಉಂಟಾಗಿದೆ.

ರಾಜ್ಯಸಭೆಯಲ್ಲಿ ಸಭಾಪತಿ ಜಗದೀಪ್ ಧನ್‌ಕರ್‌ ಅವರು ಈ ವಿಷಯದ ಬಗ್ಗೆ ಚರ್ಚೆಗಾಗಿ ವಿರೋಧ ಪಕ್ಷದ ಸದಸ್ಯರಿಂದ ಹಲವಾರು ನೋಟಿಸ್‌ಗಳನ್ನು ಸ್ವೀಕರಿಸಿದರೂ, ಈ ವಿನಂತಿಗಳಿಗೆ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ರಾಜ್ಯಸಭೆಯನ್ನು ಮುಂದೂಡಲಾಗಿತ್ತು. ಲೋಕಸಭೆಯಲ್ಲೂ ಪರಿಸ್ಥತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.

ಸಂಸತ್ತಿನ ಹೊರಗೆ ಮಕರ ದ್ವಾರದ ಮೆಟ್ಟಿಲುಗಳು ಹೊಸ ಪ್ರತಿಭಟನೆಯ ಪಾಯಿಂಟ್ ಆಗಿ ಬದಲಾಗಿದ್ದು, ಅಮಾನತುಗೊಂಡ ಸಂಸದರು ಭಿತ್ತಿಪತ್ರಗಳೊಂದಿಗೆ ಸರ್ಕಾರ ಹಠಮಾರಿಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಅಮಾನತುಗೊಂಡ ಸಂಸದರ ಜೊತೆ ಸೇರಿಕೊಂಡಿದ್ದಾರೆ.

ಸದನದ ಹೊರಗಿರುವ ಗಾಂಧಿ ಪ್ರತಿಮೆ ಎದುರು ಇತರ ಸಂಸದರೊಂದಿಗೆ ಪ್ರತಿಭಟನೆ ನಡೆಸಿದ ಡಿಎಂಕೆ ಸಂಸದೆ ಕನಿಮೊಳಿ, ‘ಈ ದೇಶವನ್ನು ರಕ್ಷಿಸುವವರು ತಮ್ಮಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ಪದೇ ಪದೇ ಹೇಳುತ್ತಿದೆ. ಅವರಿಗೆ ಸಂಸತ್ತಿನ ರಕ್ಷಣೆಯನ್ನೇ ಮಾಡಲಾಗಿಲ್ಲ. ಪ್ರಧಾನಿಯವರು ಅಲ್ಲಿದ್ದರೆ, ಅವರನ್ನೂ ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಯಾವುದೇ ಭದ್ರತೆಯ ಉಲ್ಲಂಘನೆಗೆ ದೇಶ ಮತ್ತು ಸರ್ಕಾರ ಹೊಣೆಯಾಗಬೇಕು. ಪ್ರಧಾನಿ ಮತ್ತು ಗೃಹಮಂತ್ರಿ ಸಂಸತ್ತಿಗೆ ಬಂದು ಏನಾಯಿತು ಎಂದು ನಮಗೆ ತಿಳಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಆದರೆ ಅವರು ಅದನ್ನೂ ಮಾಡಲಿಲ್ಲ,” ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ನಾಯಕ ಶಶಿ ತರೂರ್ ಬಿಕ್ಕಟ್ಟಿಗೆ ಕೇಂದ್ರ ಗೃಹ ಸರ್ಕಾರವನ್ನು ದೂಷಿಸಿ, ಇದನ್ನು ತಡೆಯಲು ಏನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

“ಗೃಹ ಸಚಿವರು ದೆಹಲಿ ಪೊಲೀಸ್ ಮತ್ತು ದೇಶದ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರು ಹೊರಗೆ ಮಾಧ್ಯಮದ ವಾಹಿನಿಗಳೊಂದಿಗೆ ಮಾತನಾಡುತ್ತಿದ್ದಾರೆ, ಅವರು ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ, ಸಂಸತ್ತಿನ ಅಧಿವೇಶನದಲ್ಲಿ ಸದಸ್ಯರಾಗಿರುವ ಅವರು ತಮ್ಮ ಹೊಣೆಗಾರಿಕೆಯಂತೆ ಸಂಸತ್ತಿನ ಸದನದಲ್ಲಿ ಇರಬೇಕು. ಅವರು ಸಂಸದರೊಂದಿಗೆ ಮಾತನಾಡಲು ಇಲ್ಲಿಗೆ ಬರಬೇಕು,” ಎಂದು ತರೂರ್‌ ಹೇಳಿದ್ದಾರೆ.

ಸಂಸತ್ತಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪರಿಸ್ಥಿತಿಯನ್ನು ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾ, “ಸಭಾಧ್ಯಕ್ಷರು ಈಗಾಗಲೇ ಸರ್ವಪಕ್ಷ ಸಭೆಯಲ್ಲಿ ಸದಸ್ಯರೊಂದಿಗೆ [ಭದ್ರತಾ ಉಲ್ಲಂಘನೆ ಬಗ್ಗೆ] ಚರ್ಚಿಸಿದ್ದಾರೆ. ಸಂಸತ್ತಿನ ಉಭಯ ಸದನಗಳ ಜವಾಬ್ದಾರಿ ಅವರ ಮೇಲಿದೆ ಎಂದು ಅವರು ಈಗಾಗಲೇ ಹೇಳಿದ್ದಾರೆ ಮತ್ತು ನಾವು ಅನುಸರಿಸಬೇಕಾದ ನಿರ್ದೇಶನಗಳನ್ನು ಅವರು ನೀಡಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಸದನ ನಡೆಸಲು ಬಿಡುವುದಿಲ್ಲ ಎಂಬ ಪ್ರತಿಪಕ್ಷಗಳ ಹೇಳಿಕೆಗಳು ಅವರಿಗೆ ತಕ್ಕುದಲ್ಲ. ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು,” ಎಂದು ಹೇಳಿದ್ದಾರೆ.

ಖರ್ಗೆ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ, ಕೃಪೆ:X/@kharge

ಸಂಸತ್ತು ಪ್ರಾರಂಭವಾಗುವ ಮೊದಲು, ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯು ಕಾರ್ಯತಂತ್ರವನ್ನು ರೂಪಿಸಲು, ಇಡೀ ವಿರೋಧ ಪಕ್ಷದ ಸದಸ್ಯರು ಒಗ್ಗಟ್ಟನ್ನು ಪ್ರದರ್ಶಿಸಲು ಮುಂದಾಗಿದ್ದಾರೆ.

You cannot copy content of this page

Exit mobile version