ಸಂಸತ್ ಅಧಿವೇಶನಗಳಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಸಿಪಿಐ(ಎಂ) ರಾಜ್ಯಸಭಾ ಉಪನಾಯಕ ಜಾನ್ ಬ್ರಿಟಾಸ್ ಆಗ್ರಹಿಸಿದ್ದಾರೆ. ಸಂಸತ್ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರ ಭಾನುವಾರ ಆಯೋಜಿಸಿದ್ದ ಸರ್ವಪಕ್ಷ ಸಭೆಯಲ್ಲಿ ಅವರು ಮಾತನಾಡಿದರು. ಸಂಸತ್ತು ಚರ್ಚೆಗೆ ವೇದಿಕೆ ಎಂಬ ಸಂದೇಶವನ್ನೂ ಲೋಕಸಭೆ ಚುನಾವಣೆ ಫಲಿತಾಂಶ ಸಾರುತ್ತಿದೆ ಎಂದು ಅವರು ಹೇಳಿದರು. ಅದನ್ನು ಅರ್ಥ ಮಾಡಿಕೊಂಡು ಮುನ್ನಡೆಯಲು ಸರಕಾರ ಸಿದ್ಧವಾಗಬೇಕು ಎಂದು ಕೋರಿದರು.
ಈ ಹಿಂದೆ ಪ್ರತಿಪಕ್ಷಗಳು ಯಾವುದೇ ವಿಷಯ ಪ್ರಸ್ತಾಪಿಸಿದರೆ ಸಚಿವರ ಬಳಿಗೆ ಬಂದು ಉತ್ತರಿಸಲಾಗುತ್ತಿತ್ತು, ಇಲ್ಲವಾದಲ್ಲಿ ಆ ಕುರಿತು ಪ್ರತ್ಯೇಕ ಚರ್ಚೆ ನಡೆಸಲಾಗುತ್ತಿತ್ತು ಎಂದು ಅವರುನೆನಪಿಸಿದರು. ಈಗೊಂದು ದಶಕದಿಂದ ಇವುಗಳ ಪ್ರಸ್ತಾಪವೇ ಇಲ್ಲ ಎಂದು ಅವರು ಟೀಕಿಸಿದರು.
ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಅಧಿವೇಶನದಲ್ಲಿ ಮಣಿಪುರ ಮತ್ತು ನೀಟ್ ಸಮಸ್ಯೆಗಳ ಬಗ್ಗೆ ಚರ್ಚಿಸಲು ಒತ್ತಾಯಿಸಿದರೂ ಅವಕಾಶ ನೀಡಲಿಲ್ಲ ಎಂದು ಅವರು ನೆನಪಿಸಿದರು. ಈ ವಿಧಾನವನ್ನು ಬದಲಿಸಿ ಮಾತುಕತೆಗೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.
ಒಕ್ಕೂಟ ತತ್ವಗಳನ್ನು ಗಾಳಿಗೆ ತೂರಲಾಗಿದೆ ಎಂದು ಟೀಕಿಸಿದ ಅವರು, ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳಲು ಮತ್ತು ರಾಜ್ಯಗಳಲ್ಲಿನ ಸರ್ಕಾರಗಳನ್ನು ಉರುಳಿಸಲು ರಾಜ್ಯಪಾಲರು ಪೈಪೋಟಿ ನಡೆಸುತ್ತಿರುವುದು ಅತಿರೇಕದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ನಿರುದ್ಯೋಗ, ಬಡತನದಂತಹ ಹಲವು ವಿಷಯಗಳಲ್ಲಿ ಸರಕಾರದ ಲೆಕ್ಕಾಚಾರದಲ್ಲಿ ಅಸಂಗತತೆ ಇದೆ ಎಂದರು. ಜನಗಣತಿ ನಡೆಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದಿರುವ ಬ್ರಿಟಾಸ್, ನೀಟ್, ಮಣಿಪುರ, ಕಾಶ್ಮೀರ, ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ಅಗ್ನಿಪಥ್ ಮುಂತಾದ ಎಲ್ಲ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧರಾಗಿರಬೇಕು ಎಂದು ಕೇಳಿಕೊಂಡರು.
ಕಾಂವಾಡಿ ಯಾತ್ರೆಗೆ ಸಂಬಂಧಿಸಿದ ಆದೇಶದಿಂದ ಕೋಮು ಸೌಹಾರ್ದತೆಗೆ ಆಗುವ ಅಪಾಯವನ್ನು ಅರಿತು ಅದನ್ನು ಹಿಂಪಡೆಯುವಂತೆ ಯುಪಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಕೇಂದ್ರ ಸಿದ್ಧವಾಗಬೇಕು ಎಂದು ಅವರು ಕೇಳಿಕೊಂಡರು. ಸಭೆಯ ಅಧ್ಯಕ್ಷತೆ ವಹಿಸಿರುವ ರಾಜನಾಥ್ ಸಿಂಗ್ ಅವರು ಈ ಕುರಿತು ಮುತುವರ್ಜಿ ವಹಿಸಬೇಕು ಎಂದು ಅವರು ಕೋರಿದರು.