ಪೆಪ್ಪರ್ ಸ್ಪ್ರೇ ಅಪಾಯಕಾರಿ ಅಸ್ತ್ರ.. ಅದನ್ನು ಆತ್ಮರಕ್ಷಣೆಗೂ ಸಹ ಬಳಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.
ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಕಂಪನಿ ಚಿನ್ನಾಭರಣಗಳ ಮಳಿಗೆಯ ನಿರ್ದೇಶಕ ಸಿ. ಗಣೇಶ್ ನಾರಾಯಣ ಮತ್ತು ಅವರ ಪತ್ನಿ ವಿದ್ಯಾ ನಟರಾಜ್, ಆತ್ಮರಕ್ಷಣೆಯ ಕಾರಣಕ್ಕೆ ಪೆಪ್ಪರ್ ಸ್ಪ್ರೇ ಅಸ್ತ್ರದ ಬಗ್ಗೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಂಶದ ಮೂಲಕ ಗಮನ ಸೆಳೆದು ತೀರ್ಪು ನೀಡಿದೆ.
ಚಿಲ್ಲಿ ಸ್ಪ್ರೇ ಬಳಸಿದ ಆರೋಪದ ಮೇಲೆ ಸಂಸ್ಥೆಯ ನಿರ್ದೇಶಕ ಸಿ.ಗಣೇಶ್ ನಾರಾಯಣ್ ಮತ್ತು ಅವರ ಪತ್ನಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕೋರ್ಟ್ ನಿರಾಕರಿಸಿದೆ. ದೂರುದಾರರು ತಮ್ಮ ಆಸ್ತಿಯನ್ನು ಪ್ರವೇಶಿಸುವಾಗ ಅವರ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದ ಆರೋಪ ದಂಪತಿಗಳ ಮೇಲಿದೆ.
ದಂಪತಿಗಳ ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಈ ಪ್ರಕರಣದಲ್ಲಿ ದಂಪತಿಗಳ ಜೀವಕ್ಕೆ ಯಾವುದೇ ಅಪಾಯವಿಲ್ಲವಾದ್ದರಿಂದ ಆತ್ಮರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಬಳಸಬಾರದಿತ್ತು ಎಂದು ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ವಿಷಯದಲ್ಲಿ ತನಿಖೆ ಅಗತ್ಯವಾಗಿದೆ ಎಂದು ತಿಳಿಸಿದೆ.
ನಮ್ಮ ದೇಶದಲ್ಲಿ ಪಪ್ಪೆರ್ ಸ್ಪ್ರೇ ಬಳಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಕಾನೂನು ಇಲ್ಲ ಎಂದು ನ್ಯಾಯಾಲಯ ಹೇಳಿದೆ. 2018 ರಲ್ಲಿನ ಅಮೇರಿಕಾದಲ್ಲಿ ಒಂದು ಪ್ರಕರಣ ಉಲ್ಲೇಖಿಸಿ ವಿವಿರಿಸಿದ ನ್ಯಾಯಪೀಠ ಪೆಪ್ಪರ್ ಸ್ಪ್ರೇಯಂತಹ ರಾಸಾಯನಿಕ ಸಿಂಪಡಣೆಗಳು ಅಪಾಯಕಾರಿ ಆಯುಧಗಳಾಗಿವೆ ಎಂದು ಹೇಳಿದೆ ಎಂದು ತಿಳಿಸಿದೆ.