ಕರ್ನಾಟಕ ಚಿತ್ರಕಲಾ ಪರಿಷತ್ತು ಹಮ್ಮಿಕೊಳ್ಳುವ ಚಿತ್ರಸಂತೆ ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ನಡೆಯುತ್ತದೆ. ಜನವರಿ 8ನೇ ತಾರೀಖಿನಂದು ಕುಮಾರಕೃಪ ರಸ್ತೆ, ಗಾಂಧೀಭವನದ ಸುತ್ತ ಮುತ್ತ, ಕುಮಾರಕೃಪಕ್ಕೆ ಹೊಂದಿಕೊಂಡ ಚಿಕ್ಕಪುಟ್ಟ ರಸ್ತೆಗಳೂ, ಚಿತ್ರಕಲಾ ಪರಿಷತ್ತಿನ ಕ್ಯಾಂಪಸ್ ಒಳಗೂ ಎಲ್ಲಿ ನೋಡಿದರಲ್ಲಿ ವರ್ಣರಂಜಿತ ಕಲಾಕೃತಿಗಳು ಕಂಗೊಳಿಸಿದ್ದವು.
ಮೈಸೂರು ಶೈಲಿ, ತಂಜಾವೂರು ಶೈಲಿ, ಜಲವರ್ಣ, ತೈಲವರ್ಣ, ರಾಜಸ್ಥಾನ ಶೈಲಿ, ಸ್ಯಾಂಡ್ ಆರ್ಟ್, ಆಕ್ರಿಲಿಕ್ ಆರ್ಟ್, ಗ್ರಾಫಿಕ್ಸ್.. ಗ್ರಾಮಿಣ ಸೊಗಡಿನ ಚಿತ್ರಗಳು, ನಗರದ ಚಿತ್ರಗಳು, ವ್ಯಕ್ತಿಚಿತ್ರಗಳು, ವ್ಯಂಗ್ಯಚಿತ್ರ, ದೇವರಚಿತ್ರಗಳು, ಪ್ರಕೃತಿ ಸೌಂದರ್ಯ, ಮೂರ್ತ, ಅಮೂರ್ತ ಕಲೆಗಳ ಅಪೂರ್ವ ಸಂಗಮದಂತಿತ್ತು ಈ ಚಿತ್ರಸಂತೆ.
ಹಲವಾರು ಕಲಾಕೃತಿಗಳು ಮನಸ್ಸಿನಲ್ಲಿ ಮರೆಯಾಗದೆ ಉಳಿದವು. ಬಾವಿಯಲಿ ಈಜಲು ಧುಮುಕುವ ಮಕ್ಕಳ ಚಿತ್ರ, ತಾಯಿಯೊಬ್ಬಳು ಮಗುವಿಗೆ ಸ್ನಾನ ಮಾಡಿಸುವ ಚಿತ್ರ, ಹಂಪಿದೇವಾಲಯ, ಯಕ್ಷಗಾನ ಪ್ರಸಂಗ, ಹೀಗೆ ಬರೆಯುತ್ತಾ ಹೋದರೆ ಸಾಕಷ್ಟು ಇದೆ . ಸರಿಯಾಗಿ ಮೂರುಗಂಟೆಗಳ ಕಾಲ ಚಿತ್ರ ಸಂತೆ ಸುತ್ತಿ ಕಲಾವಿದರ ಕಲ್ಪನಾಲಹರಿಗೆ, ಸೃಜನಶೀಲತೆಗೆ ಸೆಲ್ಯೊಟ್ ಹೊಡೆದು ಬಂದೆ.
ಗೀತಾಂಜಲಿ. ಎಸ್. ಸಿ
ಕವಯಿತ್ರಿ