Sunday, June 29, 2025

ಸತ್ಯ | ನ್ಯಾಯ |ಧರ್ಮ

ಶಕ್ತಿ ಯೋಜನೆ ಪ್ರಶ್ನಿಸಿ ಅರ್ಜಿ:‌ ಅರ್ಜಿದಾರರಿಗೆ ಮಂಗಳಾರತಿ ಮಾಡಿದ ಹೈಕೋರ್ಟ್

ಬೆಂಗಳೂರು:  ರಾಜ್ಯದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ಒದಗಿಸುವ ‘ಶಕ್ತಿ’ ಯೋಜನೆಯಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿದೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದ ಕಾನೂನು ವಿದ್ಯಾರ್ಥಿಗಳ ಬಗ್ಗೆ ಹೈಕೋರ್ಟ್‌ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರಿನ ವಿವಿಧ ಕಾನೂನು ಕಾಲೇಜುಗಳ ಕಾನೂನು ವಿದ್ಯಾರ್ಥಿಗಳಾದ ಅಶ್ವಿನ್‌ ಶಂಕರ್‌ ಭಟ್‌, ನೇಹಾ ವೆಂಕಟೇಶ್‌ ಹಾಗೂ ಯಾಶಿಕಾ ಸರವಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನಂತರ ಪ್ರತಿಕ್ರಿಯಿಸಿದ ನ್ಯಾಯಪೀಠ, “ಶಕ್ತಿ ಯೋಜನೆ ಜಾರಿಯಾದ ನಂತರ ಬಸ್‌ಗಳಲ್ಲಿ ದಟ್ಟಣೆ ಉಂಟಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ, ಹಾಗಾದರೆ, ಯೋಜನೆ ಜಾರಿಯಾಗುವ ಮುನ್ನ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಇರಲಿಲ್ಲವೇ, ಯೋಜನೆಯಿಂದಾಗಿಯೇ ಬಸ್‌ಗಳಲ್ಲಿ ದಟ್ಟಣೆ ಉಂಟಾಗಿದೆಯೇ, ಯಾವ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಇದೆ, ಸರ್ಕಾರಿ ಬಸ್‌ಗಳಲ್ಲಿ ಇಷ್ಟೇ ಜನರಿರಬೇಕೆಂಬ ನಿಯಮ ಇದೆಯೇ, ಮೊದಲು ಸಂಚಾರ ಸುಗಮವಾಗಿತ್ತೆ” ಎಂದು ಖಾರವಾಗಿ ಪ್ರಶ್ನಿಸಿತು.

ʼಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರು ಸಮರ್ಪಕ ಅಧ್ಯಯನ ನಡೆಸಿಲ್ಲʼ ಎಂದು ನುಡಿದ ನ್ಯಾಯಪೀಠ, ʼಏಕೆ ಸಾರಿಗೆ ನಿಯಮಗಳನ್ನು ಅಧ್ಯಯನ ನಡೆಸಿಲ್ಲ, ಸರ್ಕಾರ ದುರ್ಬಲ ವರ್ಗಗಳಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿದೆಯಲ್ಲವೇ, ಹಾಗಾದರೆ, ಯೋಜನೆಯನ್ನು ಪ್ರಶ್ನಿಸಲಾಗಿದೆಯೇ? ದಟ್ಟಣೆ ಕುರಿತು ಪರಿಹಾರ ಕೋರಲಾಗಿದೆಯೇ, ಮುಂಬೈ ಲೋಕಲ್‌ ರೈಲುಗಳ ದಟ್ಟಣೆಯ ನಿಮಗೆ ಅರಿವಿದೆಯೇʼ ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ.

ಸೂಕ್ತ ಅಧ್ಯಯನ ನಡೆಸಿದ ನಂತರ ಅಗತ್ಯ ದಾಖಲೆ ಹಾಗೂ ಸಿದ್ಧತೆಗಳೊಂದಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿದ ನ್ಯಾಯಪೀಠ, ಅರ್ಜಿ ಹಿಂಪಡೆಯಲು ಆರ್ಜಿದಾರರಿಗೆ ಅನುಮತಿ ನೀಡಿ ಆದೇಶಿಸಿತು.

ಫ್ರೀ ಬಸ್ ಯೋಜನೆ ಜಾರಿ ಆದಾಗಿನಿಂದ ವಿದ್ಯಾರ್ಥಿಗಳು ಸೇರಿದಂತೆ ವಯೋವೃದ್ಧರೂ ಸಮಸ್ಯೆಗೀಡಾಗಿದ್ದಾರೆ ಎಂದು ದೂರಿರುವ ಕಾನೂನು ವಿದ್ಯಾರ್ಥಿಗಳು, ಇದಕ್ಕೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಪ್ರತಿನಿತ್ಯ ಬಸ್‌ಗಳಲ್ಲಿ ನಡೆಯುತ್ತಿರುವ ಗಲಾಟೆಗಳು ಬಸ್ ಪ್ರಯಾಣಿಕರ ನೆಮ್ಮದಿಯನ್ನು ಕೆಡಿಸುತ್ತಿದೆ. ಇದರಿಂದ ಇತರೆ ಪ್ರಯಾಣಿಕರಿಗೆ ತಲೆ ನೋವಾಗಿದೆ. ಶಕ್ತಿ ಯೋಜನೆಯಿಂದ‌ ಪ್ರತಿ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಸಾರಿಗೆ ಬಸ್‌ಗಳಲ್ಲಿ ಸೀಟಿಗಾಗಿ ಗಲಾಟೆಗಳು ನಡೆಯುತ್ತಿವೆ. ಹಿರಿಯ ನಾಗರಿಕರು, ಮಕ್ಕಳು ಬಸ್ ಹತ್ತಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪಿಐಎಲ್‌ನಲ್ಲಿ ತಿಳಿಸಲಾಗಿತ್ತು.

ಈ ಯೋಜನೆಗೆ ಒಂದೇ ವಾರದಲ್ಲಿ ತೆರಿಗೆದಾರರ 100 ಕೋಟಿ ಹಣವನ್ನು ಬಳಕೆ ಮಾಡಲಾಗಿದೆ. ಅಂದರೆ ವರ್ಷಕ್ಕೆ 3200ರಿಂದ 3400 ಕೋಟಿ ರೂಪಾಯಿ ಇದಕ್ಕಾಗಿ ನಷ್ಟವಾಗಲಿದೆ. ಅಲ್ಲದೆ, ದೂರದ ಊರಿಗೆ ನಿಂತು ಪ್ರಯಾಣ ಮಾಡಲು ಅವಕಾಶ ಕೊಡಬಾರದು. ಜೊತೆಗೆ ಟಿಕೆಟ್ ಖರೀದಿಸಿದವರಿಗೆ ಶೇ.50ರಷ್ಟು ಸೀಟ್ ಮೀಸಲಿಡಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page