ಬೆಂಗಳೂರು: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಕೋರಿ ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಸೋಮವಾರ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣದ ಮರುತನಿಖೆಗೆ ಆದೇಶಿಸುವಂತೆ ನ್ಯಾಯಾಲಯದಿಂದ ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ಕೋರಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮತ್ತು ನಂದೀಶ್ಕುಮಾರ್ ಜೈನ್ ಎಂಬುವರು ಮನವಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಹೈಕೋರ್ಟ್ ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಿದೆ.
ಪ್ರಸಿದ್ಧ ಧರ್ಮಸ್ಥಳ ಮಂಜುನಾಥ ದೇವಸ್ಥಾನ ಮತ್ತು ನ್ಯಾಯಾಂಗದ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಅರ್ಜಿದಾರರು ಕೋರಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಅವರು ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಆಂದೋಲನ ಮತ್ತು ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಬಲ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧವೂ ಆರೋಪ ಮಾಡುತ್ತಿದ್ದಾರೆ.
ಅರ್ಜಿಯಲ್ಲಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
17 ವರ್ಷದ ಸೌಜನ್ಯಳನ್ನು ಅಕ್ಟೋಬರ್ 9, 2012ರಂದು ಧರ್ಮಸ್ಥಳ ಬಳಿಯ ಉಜಿರೆಯಲ್ಲಿರುವ ತನ್ನ ಮನೆಗೆ ಹೋಗುವಾಗ ಅಪಹರಿಸಲಾಗಿತ್ತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಓದುತ್ತಿದ್ದಳು. ಮರುದಿನ ಆಕೆಯ ಶವವು ನೇತ್ರಾವತಿ ನದಿಯ ಬಳಿ ಕಾಡಿನಲ್ಲಿ ಆಕೆಯ ಮನೆಯ ಸಮೀಪ ಪತ್ತೆಯಾಗಿದೆ. ಮೃತದೇಹ ಅರೆಬೆತ್ತಲೆಯಾಗಿ ಪತ್ತೆಯಾಗಿದೆ. ಅವಳ ಒಂದು ಕೈಯನ್ನು ಅವಳ ದುಪಟ್ಟಾ ಬಳಸಿ ಮರಕ್ಕೆ ಕಟ್ಟಲಾಗಿತ್ತು. ಆಕೆಯ ಜನನಾಂಗವು ಮಣ್ಣಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು.
ಈ ಕುರಿತು ಆರಂಭಗೊಂಡ ದೊಡ್ಡ ಮಟ್ಟದ ಸಾರ್ವಜನಿಕ ಪ್ರತಿಭಟನೆಯಲ್ಲಿ ಪ್ರದೇಶದ ಪ್ರಬಲ ಧಾರ್ಮಿಕ ಮುಖಂಡರೊಬ್ಬರ ಕುಟುಂಬ ಸದಸ್ಯರ ಕಡೆಗೆ ಬೆರಳುಗಳನ್ನು ತೋರಿಸಲಾಯಿತು. ಕೋಲಾಹಲದ ನಡುವೆ, ಪೊಲೀಸರು ಅಕ್ಟೋಬರ್ 11ರಂದು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿ ಈತನೇ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಂದಿದ್ದಾನೆ ಎಂದಿದ್ದರು.
ರಾಜಕೀಯ ಒತ್ತಡಕ್ಕೆ ಮಣಿದ ಪೊಲೀಸರು ಅಪರಾಧ ನಡೆದ ಸ್ಥಳವನ್ನಾಗಲಿ, ಮೃತದೇಹವನ್ನಾಗಲಿ ವಿಡಿಯೋ ಮಾಡುವ ಕುರಿತು ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ. ಅಪರಾಧ ನಡೆದ ಪ್ರದೇಶವನ್ನು ಪರಿಶೀಲನೆ ಮಾಡಲು ಯಾವುದೇ ತಜ್ಞರನ್ನು ಕರೆತರಲಾಗಿಲ್ಲ ಮತ್ತು ಮೃತ ದೇಹದಿಂದ ಯಾವುದೇ ಮಾದರಿಗಳನ್ನು ಸಂಗ್ರಹಿಸಲಾಗಿಲ್ಲ ಎಂದೂ ಆರೋಪಿಸಲಾಗಿತ್ತು.
ಧರ್ಮಸ್ಥಳ ಟ್ರಸ್ಟ್ನ ಅಕೌಂಟೆಂಟ್ ಮಲಿಕ್ ಜೈನ್, ಅನ್ನಪೂರ್ಣ ಟ್ರಸ್ಟ್ನ ಹಿರಿಯ ವ್ಯವಸ್ಥಾಪಕರ ಮಗ ಧೀರಜ್ ಮತ್ತು ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆಯರ ಸೋದರನ ಮಗ ನಿಶ್ಚಲ್ ಜೈನ್ ವಿರುದ್ಧ ಪ್ರತಿಭಟನಾಕಾರರು ಮತ್ತು ಸೌಜನ್ಯ ಅವರ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಘಟನೆ ನಡೆದಾಗ ನಿಶ್ಚಲ್ ಜೈನ್ ನ್ಯೂಯಾರ್ಕ್ನಲ್ಲಿದ್ದರು ಎಂದು ವೀರೇಂದ್ರ ಹೆಗ್ಗಡೆ ಹೇಳಿಕೊಂಡಿದ್ದಾರೆ. ಅಪರಾಧ ತನಿಖಾ ಇಲಾಖೆ (ಸಿಐಡಿ) ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಿದೆ.
ಆರೋಪಿಗಳ ಸಹಿತ ಮೂವರನ್ನು ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಸೌಜನ್ಯ ಅವರ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ್ದರೂ, ಉನ್ನತ ನ್ಯಾಯಾಲಯಗಳು ಅರ್ಜಿಯನ್ನು ಅನುಮತಿಸಲಿಲ್ಲ. ನಂತರ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಲಾಯಿತು.
ಜೂನ್ 16ರಂದು, ಸಿಬಿಐ ವಿಶೇಷ ನ್ಯಾಯಾಲಯವು ಬಂಧಿತ ಆರೋಪಿ ಸಂತೋಷ್ ರಾವ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು ಮತ್ತು ನ್ಯಾಯಾಲಯವು ಪ್ರಕರಣದ ತನಿಖೆ ನಡೆಸಿದವರ ವಿರುದ್ಧ ತನಿಖೆಗೆ ಆದೇಶಿಸಿತು ಮತ್ತು ತನಿಖೆಯ ಸಮಯದಲ್ಲಿ ನಿರ್ಣಾಯಕ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಡೆಗೆ ಚೂರು ಗಮನ ನೀಡಲಾಗಿಲ್ಲ ಎಂದಿತ್ತು. ಈ ತೀರ್ಪು ಸಾರ್ವಜನಿಕರಲ್ಲಿ ಕಳವಳಗಳನ್ನು ಮೂಡಿಸಿದೆ.
ಸೌಜನ್ಯಾ ಬಸ್ನಿಂದ ಇಳಿದು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದುದನ್ನು ಕಂಡ ಭದ್ರತಾ ಸಿಬ್ಬಂದಿ ರವಿ ಪೂಜಾರಿ ಎಂಬುವರು ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದೂ ಶಂಕೆಗೆ ಕಾರಣವಾಗಿದೆ. ಇದು ಆತ್ಮಹತ್ಯೆ ಎಂದು ತೀರ್ಮಾನಿಸಲಾಗಿದ್ದರೂ, ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಿಬಿಐ ಚಾರ್ಜ್ಶೀಟ್ನಲ್ಲಿ ಸಂತೋಷ್ ರಾವ್ ಅವರನ್ನು ಏಕೈಕ ಆರೋಪಿ ಎಂದು ಉಲ್ಲೇಖಿಸಲಾಗಿದೆ.
ಈ ವಿಚಾರ ಈಗ ಕರ್ನಾಟಕದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯಸಭಾ ಬಿಜೆಪಿ ಸಂಸದ ವೀರೇಂದ್ರ ಹೆಗ್ಗಡೆ ಪ್ರಕರಣವನ್ನು ಮುಚ್ಚಿ ಹಾಕಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಣದ ಕೈಗಳು ಅಭಿವೃದ್ಧಿಯಲ್ಲಿ ದೈತ್ಯ ಹೆಜ್ಜೆ ಇಡುತ್ತಿರುವ ಹಿಂದೂ ಯಾತ್ರಾಸ್ಥಳವಾದ ಧರ್ಮಸ್ಥಳಕ್ಕೆ ಅಪಖ್ಯಾತಿ ತರಲು ಮತ್ತು ಮಾನಹಾನಿ ಎಸಗಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.