ಸಕಲೇಶಪುರ : ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದಲ್ಲಿ ಆನೆ ದಾಳಿಗೆ ಮೃತಪಟ್ಟ ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಕೇಳಲು ಮುಂದಾದವರ ಮೇಲೆಯೇ ಸ್ಥಳೀಯ ಪೊಲೀಸರು ದೂರು ದಾಖಲಿಸಿ, ಬಂಧಿಸಿದ ಘಟನೆ ನಡೆದಿದೆ.
ನಿನ್ನೆ ಮುಂಜಾನೆ ಕಾಫಿ ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿ ಮೃತಪಟ್ಟ ಘಟನೆ, ಸಕಲೇಶಪುರ ತಾಲ್ಲೂಕಿನ, ವಡೂರು ಗ್ರಾಮದಲ್ಲಿ ನಡೆದಿತ್ತು. ತವರು ಮನೆಗೆಂದು ಬಂದಿದ್ದ ನಾರ್ವೆ ಗ್ರಾಮದ ಕವಿತಾ (37) ಮೃತ ಮಹಿಳೆ. ಸಕಲೇಶಪುರ ಭಾಗದಲ್ಲಿ ನಿರಂತರ ನಡೆಯುತ್ತಿರುವ ಈ ಕಾಡಾನೆ ದಾಳಿಗೆ ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಮೃತಪಟ್ಟ ಕವಿತಾ ಸೇರಿದಂತೆ ಈವರೆಗೆ ಬರೋಬ್ಬರಿ 78 ಮಂದಿ ಕಾಡಾನೆ ದಾಳಿಗೆ ಮೃತಪಟ್ಟರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸರ್ಕಾರ ಈ ಬಗ್ಗೆ ಏನೊಂದೂ ಜವಾಬ್ದಾರಿಯುತವಾಗಿ ನಡೆದುಕೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮಹಿಳೆ ಶವ ಇಟ್ಟು ಪ್ರತಿಭಟನೆ ಮಾಡಲು ಮುಂದಾದ ಕೆಲ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ 11 ಜನರನ್ನು ಬಂಧಿಸಲಾಗಿದೆ.
ಕವಿತಾ ಸಾವಿಗೆ ನ್ಯಾಯ ದೊರಕಿಸಿಕೊಡಲು ಹಾಗೂ ಮರಣೋತ್ತರ ಪರೀಕ್ಷೆ ತಡವಾಗಿದೆ ಎಂದು ಆರೋಪಿಸಿ ಶವಾಗಾರದ ಎದುರು ಧರಣಿ ಮಾಡಲು ಸ್ಥಳೀಯ ಕನ್ನಡಪರ ಸಂಘಟನೆ ಕಾರ್ಯಕರ್ತರು ಮುಂದಾಗಿದ್ದರು. ಈ ನಡುವೆ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಿದ್ದರು.
ನಂತರ ಮರಣೋತ್ತರ ಪರೀಕ್ಷೆ ಬಳಿಕವೂ ಸಹ ಸ್ಥಳೀಯರು ಹಾಗೂ ಸಂಘಟನೆ ಮುಖಂಡರು ಶವವನ್ನು ಹಸ್ತಾಂತರ ಮಾಡಲು ಕೇಳಿದಾಗಲೂ ಪೊಲೀಸರು ದರ್ಪ ಮೆರೆದಿದ್ದಾರೆ. ಈ ವೇಳೆ ಅಂಬುಲೆನ್ಸ್ ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಮೃತರ ಕುಟುಂಬಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸ್ಥಳೀಯರ ಮೇಲೆ ಪ್ರಕರಣ ದಾಖಲಿಸಿ 11 ಜನರ ಬಂಧಿಸಿದ್ದಾರೆ.
ಕವಿತಾ ಅವರ ಹಾಗೂ ಈ ವರೆಗೆ ಆನೆ ದಾಳಿಗೆ ಮೃತಪಟ್ಟವರ ಸಾವಿಗೆ ನ್ಯಾಯ ಕೇಳಿ ಸಕಲೇಶಪುರದ ಅಂಬೇಡ್ಕರ್ ಪ್ರತಿಮೆ ಎದುರು ಧರಣಿ ಮಾಡುವ ಬಗ್ಗೆ ಹೋರಾಟ ನಿರತರು ಸ್ಥಳೀಯ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದರು. ಇದರ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಹೋರಾಟ ಮಾಡಲು ಮುಂದಾದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಬಂಧನದ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಂಧಿತರ ಮೇಲಿನ ಪ್ರಕರಣ ಹಿಂತೆಗೆದುಕೊಳ್ಳಬೇಕು ಮತ್ತು ಮೃತ ಮಹಿಳೆ ಕವಿತಾ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.