Friday, June 20, 2025

ಸತ್ಯ | ನ್ಯಾಯ |ಧರ್ಮ

ರಾಜಕೀಯ ಜೀವನ ತ್ಯಾಗ ಮಾಡಿ ಕೆಎಲ್‌ಇ ಸೊಸೈಟಿ  ಕಟ್ಟಿದ ಪ್ರಭಾಕರ್ ಕೋರೆ: ಸಿಎಂ ಬೊಮ್ಮಾಯಿ

ಬೆಳಗಾವಿ:  ಡಾ.ಪ್ರಭಾಕರ್ ಕೋರೆ ಅವರು ತಮ್ಮ ರಾಜಕೀಯ ಜೀವನ ತ್ಯಾಗ ಮಾಡಿ  ಕರ್ನಾಟಕ ಲಿಂಗಾಯತ ಶಿಕ್ಷಣ  ಸೊಸೈಟಿ (ಕೆಎಲ್‌ಇ) ಕಟ್ಟಿದ್ದಾರೆ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದರು.

ಇಂದು ಡಾ: ಪ್ರಭಾಕರ ಕೋರೆಯವರ 75 ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ಹಮ್ಮಿಕೊಳ್ಳಲಾಗಿದ್ದ ಅಮೃತ್ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬೊಮ್ಮಾಯಿ ಅವರು, ಕೆಎಲ್‌ಇ  ಸೊಸೈಟಿ ಕಟ್ಟಲು ಡಾ.ಪ್ರಭಾಕರ್ ಕೋರೆ ಎಷ್ಟು ಶ್ರಮ ವಹಿಸಿದ್ದಾರೆ ಅಷ್ಟು ಶ್ರಮ ರಾಜಕೀಯ ರಂಗಕ್ಕೆ ಕೊಟ್ಟಿದ್ದರೆ ಬಹಳ ದೊಡ್ಡ ರಾಜಕೀಯ ನಾಯಕ ಆಗುತ್ತಿದ್ದರು. ನಮ್ಮ ಭಾಗದ ಜನ, ಬಡವರು, ಗ್ರಾಮೀಣ ವರ್ಗದವರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯ ಎಂದು ಅರಿತಿದ್ದ ಅವರು ಆಮೂಲಾಗ್ರ ಬದಲಾವಣೆ ತರಲು ಶಿಕ್ಷಣ ಮುಖ್ಯ. ನಾನೊಬ್ಬ ನಾಯಕನಾಗುವುದಕ್ಕಿಂತ ಹಲವಾರು ನಾಯಕರನ್ನು ಬೆಳೆಸೋಣ ಎಂದು ತಮ್ಮ ರಾಜಕೀಯ ಜೀವನ ತ್ಯಾಗ ಮಾಡಿ ಕೆಎಲ್‌ಇ ಸೊಸೈಟಿ  ಕಟ್ಟಿದ್ಧಾರೆ ಎಂದರು.

ಕೆ.ಎಲ್.ಸಂಸ್ಥೆಯನ್ನು ಸ್ವತಂತ್ರ ವಿವಿ ಯಾಗುವ ಮಟ್ಟಕ್ಕೆ ಕಟ್ಟಿದರು

ಒಬ್ಬ ವ್ಯಕ್ತಿಗೆ 75 ವರ್ಷ ತುಂಬಿದಾಗ ಬದುಕಿನ ಆಯಾಮಗಳನ್ನು ಸಿಂಹಾವಲೋಕನ ಮಾಡುವ ಸಮಯ. ಪ್ರಭಾಕರ್ ಕೋರೆ ಅವರು ನಡೆದು ಬಂದ ದಾರಿಯನ್ನು ಗಮನಿಸಿದಾಗ, ಸಣ್ಣ ವಯಸ್ಸಿನಲ್ಲಿ ಸೊಸೈಟಿಯ ನಿರ್ದೇಶಕ ಮಂಡಳಿ ಸದಸ್ಯರಾದರು. ಮುಂದೆ ಕೆಎಲ್‌ಇ ಅಧ್ಯಕ್ಷರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಹಲವಾರು ಸವಾಲುಗಳನ್ನು ಸೊಸೈಟಿ ಎದುರಿಸುತ್ತಿತ್ತು. ಅವರು ಅಧ್ಯಕ್ಷರಾಗುವ ಪೂರ್ವದಲ್ಲಿ ಕೆಎಲ್‌ಇ ಮತ್ತು ಇತರೆ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡಬೇಕೆಂಬ ಕಾರ್ಮೋಡದ ವಾತಾವರಣವನ್ನು ನಿಭಾಯಿಸಿದರು. ಎಲ್ಲಾ ಸವಾಲುಗಳನ್ನು ಎದುರಿಸಿ ಕೆ.ಎಲ್.ಇ ಸೊಸೈಟಿ ಪ್ರಗತಿಯನ್ನು ಮುನ್ನಡೆಸುವುದು ಸುಲಭ ಇರಲಿಲ್ಲ. ಡಾ.ಪ್ರಭಾಕರ ಕೋರೆ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಸಂಸ್ಥೆಯನ್ನು ಬೆಳೆಸಿದರು. ಹಲವಾರು ಟೀಕೆಗಳು, ನ್ಯಾಯಾಲಯದ ಪ್ರಕರಣಗಳು, ಅವಮಾನದ ಮಾತುಗಳು ಕೆಲಸ ಮಾಡಲು ಅವಕಾಶ ಇಲ್ಲದಿರುವ  ಸನ್ನಿವೇಶವನ್ನು ನೋಡಿದಾಗಲೂ ಅವುಗಳನ್ನು ದಿಟ್ಟತನದಿಂದ ಎದುರಿಸಿ, ಬುದ್ಧಿಶಕ್ತಿಯಿಂದ ಕೆ.ಎಲ್.ಇ ಸಂಸ್ಥೆಯನ್ನು ಸರ್ವಸ್ವತಂತ್ರ ವಿವಿ ಮಾಡುವ ಮಟ್ಟಕ್ಕೆ ಡಾ.ಪ್ರಭಾಕರ ಕೋರೆ ಶ್ರಮವಹಿಸಿದರು ಎಂದು ಹೇಳಿದರು.

ಸರ್ಕಾರ ಮಾಡುವ ಕೆಲಸ ಮಾಡಿದ್ದಾರೆ

ಈ ಭಾಗದ ಬಹುತೇಕ ನಾಯಕರು ಕೆಎಲ್‌ಇ ಸೊಸೈಟಿ ವಿದ್ಯಾರ್ಥಿಗಳು. ನಾವೆಂದಿಗೂ ಇದನ್ನು ಮರೆಯಲು ಸಾಧ್ಯವಿಲ್ಲ. ಸ್ವತಂತ್ರ ಪೂರ್ವ ಹಾಗೂ ನಂತರದಲ್ಲಿ ಕೆಎಲ್‌ಇ ಸಂಸ್ಥೆ ಇಲ್ಲದಿದ್ದರೆ, ಮುಂಬೈ ಕರ್ನಾಟಕದಲ್ಲಿ ಇಷ್ಟು ದೊಡ್ಡ ಪ್ರಮಾಣದ ಶಿಕ್ಷಣ ಸಂಸ್ಥೆ ತೆರೆಯದಿದ್ದರೆ ದಾನಿಗಳು ದಾನವನ್ನು ಕೊಡದಿದ್ದರೆ, ಬಹುತೇಕವಾಗಿ ಮುಂಬೈ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಬೆಳೆಯುತ್ತಿರಲಿಲ್ಲ. ಯಾವ ಕೆಲಸವನ್ನು ಸರ್ಕಾರ ಮಾಡಬೇಕಿತ್ತೋ ಅದನ್ನು ಕೆಎಲ್‌ಇ ಸೊಸೈಟಿ ಮಾಡಿದೆ ಎಂದರು.

ಶೈಕ್ಷಣಿಕ ಕ್ರಾಂತಿ

ಕೆಎಲ್‌ಇ ಸೊಸೈಟಿ ಬೆಳೆದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಚ್ಚುವ ಹಂತದಲ್ಲಿ ಇದ್ದ ಶಿಕ್ಷಣ ಸಂಸ್ಥೆಗಳು ಕೆಎಲ್‌ಇ ಸಂಸ್ಥೆ ಬಳಿ ಬಂದು ಮುನ್ನಡೆಸಿ ಎಂದು ಕೇಳುತ್ತಿದ್ದರು. ತಮ್ಮ ಸಂಸ್ಥೆಯಲ್ಲಿ ಜಾತಿ, ಮತ, ಪಂಥ ನೋಡದೇ ಎಲ್ಲರಿಗೂ ಶಿಕ್ಷಣ ನೀಡಿದ್ದಾರೆ. ಡಾ.ಪ್ರಭಾಕರ್ ಕೋರೆ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಬೆಂಗಳೂರಿನಲ್ಲಿಯೂ ಯಾವ ಸಂಸ್ಥೆಗೂ ಕಡಿಮೆ ಇಲ್ಲದಂತೆ ಕೆಎಲ್‌ಇ ಸಂಸ್ಥೆ ಕಟ್ಟಿದ್ದಾರೆ. ಶಿಕ್ಷಣ, ವೈದ್ಯಕೀಯ, ಕೃಷಿಯಲ್ಲಿ ಏನಾದರೂ ಹೊಸತನ ಬಂದಿದ್ದರೆ ಕೂಡಲೇ  ತಮ್ಮ ಸಂಸ್ಥೆಯಲ್ಲಿ ಅದನ್ನು ತೆರೆಯುತ್ತಾರೆ ಎಂದರು.  

ಎಲ್ಲಾ ರಂಗಗಳಲ್ಲಿಯೂ ಸಾಧನೆ

ಎಲ್ಲ ರಂಗದಲ್ಲೂ ಪ್ರಭಾಕರ ಕೋರೆ ಅವರು ಸಾಧನೆ ಮಾಡಿದ್ದಾರೆ. ಒಬ್ಬ ವ್ಯಕ್ತಿಗೆ ರಾಜಕೀಯ ಶಕ್ತಿಯಿಂದಲೇ ಮಾತ್ರ ಬೆಳೆಯಬೇಕಾಗಿಲ್ಲ.  ಬೆಳಗಾವಿಯಲ್ಲಿ ಕನ್ನಡ ಮೇಯರ್ ಆಯ್ಕೆ ಮಾಡಬೇಕಾದ ಸಂದರ್ಭದಲ್ಲಿ 19 ಎಂಇಎಸ್ ಸದಸ್ಯರ ಮತಗಳ ಅಗತ್ಯವಿತ್ತು. ಆಗ ಅದರ ಜವಾಬ್ದಾರಿಯನ್ನು ಹೊತ್ತ ಕೋರೆಯವರು ಆ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಎಂಇಎಸ್ ಮತಗಳನ್ನು ಪಡೆಯತ್ತಾರೆ ಎಂದರೆ ಅವರ ಶಕ್ತಿ ಏನೆಂದು ಅಂದಾಜು ಮಾಡಬಹುದು ಎಂದು ಬೊಮ್ಮಯಿ ಹೇಳಿದರು.

ಬುಲೆಟ್ ಮ್ಯಾನ್

ʼದೇಹದೊಳಗೆ ಬುಲೆಟ್ ಇಟ್ಟುಕೊಂಡು ಅಷ್ಟು ಶಕ್ತಿಯಿಂದ ಓಡಾಡುತ್ತಿದ್ದರು. ಅವರಿಗೆ ನಾನು ಬುಲೆಟ್ ಮ್ಯಾನ್ ಎಂದು ಕರೆಯುತ್ತೇನೆ. ಅವರ ಮೇಲೆ ಗುಂಡು ಹಾರಿಸಿದ ಸಂದರ್ಭದಲ್ಲಿ ಭೇಟಿಯಾಗಿದ್ದೆ. ಆಗ ಬಸಣ್ಣ ನಾನು ಬದುಕಬಾರದಿತ್ತು. ಈಗ ಬದುಕಿ ಬಂದಿದೀನಿ ಇದು ನನ್ನ ಪುನರ್ಜನ್ಮ. ನಾನೇದಾರೂ ಬದುಕಿದ್ರೆ ಕೆಎಲ್‌ಇ ಸೊಸೈಟಿಗಾಗಿ ಸಮಾಜಕ್ಕಾಗಿ ಎಂದಿದ್ದರು’ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ಅದೇ ರೀತಿ ಡಾ.ಪ್ರಭಾಕರ್ ಕೋರೆ ಬದುಕುತ್ತಿದ್ದಾರೆ ಎಂದರು.

ಈ ಸಂರ್ಭದಲ್ಲಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್, ಗೋವಾ ಮುಖ್ಯಮಂತ್ರಿ ಡಾ: ಪ್ರಮೋದ್ ಸಾವಂತ್, ಕೇಂದ್ರ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಸಂಸದೆ ಮಂಗಳಾ ಸುರೇಶ್ ಅಂಗಡಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್,ಯಡಿಯೂರಪ್ಪ, ಜಗದೀಶ್ ಶೆಟ್ಟರ್ , ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬಿ.ಸಿ.ನಾಗೇಶ್,  ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಹಾಗೂ ಲಕ್ಷಣ ಸವದಿ, ಶಾಸಕ ಆರ್.ವಿ.ದೇಶಪಾಂಡೆ,  ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page