ಬೆಂಗಳೂರು: ಸೋನಿಯಾ ಗಾಂಧಿ ಅವರ ವಿರುದ್ಧ ದೂರು ದಾಖಲಿಸಿರುವ ಬಿಜೆಪಿಯ ನಡವಳಿಕೆಯು ಕೇವಲ ಜನರ ಗಮನ ಬೇರೆಡೆ ಸೆಳೆಯುವ ರಾಜಕೀಯ ತಂತ್ರವಾಗಿದ್ದು, ರಾಷ್ಟ್ರಗೀತೆಯ ವೇಳೆ ನಡೆದಾಡಿದ ಸಂಸದೆ ಬಾನ್ಸುರಿ ಸ್ವರಾಜ್ ಅವರ ವಿರುದ್ಧ ಬಿಜೆಪಿ ಯಾಕೆ ದೂರು ದಾಖಲಿಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಬಿಜೆಪಿ ನಾಯಕಿ ಬಾನ್ಸುರಿ ಸ್ವರಾಜ್ ಅವರು ರಾಷ್ಟ್ರಗೀತೆ ಮೊಳಗುತ್ತಿದ್ದ ಸಂದರ್ಭದಲ್ಲೇ ನಡೆದುಕೊಂಡು ಹೋಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ದೂರು ದಾಖಲಿಸಲು ಇಷ್ಟೊಂದು ಉತ್ಸಾಹ ತೋರುವ ಬಿಜೆಪಿ, ಯುವ ಮೋರ್ಚಾ ಅಥವಾ ಎಬಿವಿಪಿ ತಮ್ಮದೇ ನಾಯಕಿಯ ವಿರುದ್ಧ ಏಕೆ ದೂರು ನೀಡಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶೂನ್ಯ ಕೊಡುಗೆ ನೀಡಿರುವ ಹಾಗೂ 52 ವರ್ಷಗಳ ಕಾಲ ರಾಷ್ಟ್ರಧ್ವಜವನ್ನೇ ಹಾರಿಸದ ಹಿನ್ನೆಲೆಯುಳ್ಳ ಆರ್ಎಸ್ಎಸ್, ಎಬಿವಿಪಿ ಅಥವಾ ಬಿಜೆಪಿಯಿಂದ ನಾವು ದೇಶಭಕ್ತಿಯ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ ಎಂದ ಅವರು, ಬಿಜೆಪಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಭಾವನೆಗಳನ್ನು ಕೇವಲ ರಾಜಕೀಯ ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
