ಬೆಂಗಳೂರು, ಜುಲೈ 3: ಆರೋಗ್ಯ ಹಾಗೂ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಇಂದಿನ ಸವಾಲುಗಳಿಗೆ ಪರಿಷ್ಕಾರ ಸೂಚಿಸುವ ಮಾರ್ಗೋಪಾಯಗಳನ್ನು ಹೊಂದಿದ ತಂತ್ರಜ್ಞಾನಾಧರಿತ ಉದ್ದಿಮೆಗಳನ್ನು ರಾಜ್ಯದಲ್ಲಿ ಆರಂಭಿಸಲು ನೆದರ್ಲ್ಯಾಂಡ್ಸ್ ಮುಂದೆ ಬಂದಲ್ಲಿ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಹೇಳಿದರು.
ನೆದರ್ಲ್ಯಾಂಡ್ಸ್ ದೇಶದ ಭಾರತದ ರಾಯಭಾರಿಗಳ ಬೆಂಗಳೂರು ಪ್ರತಿನಿಧಿಗಳಾದ ಶ್ರೀ ಎವೋಟ್ ಡೇ ವಿಥ್ ಹಾಗೂ ಅವರ ತಂಡದೊಂದಿಗೆ ಸಭೆ ನಡೆಸಿದ ಸಚಿವರು ಬೆಂಗಳೂರು ಅಥವ ರಾಜ್ಯದ ಯಾವುದೇ ಸ್ಥಳಗಳಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳನ್ನು ಆರಂಭಿಸಲು ಮುಂದೆ ಬಂದಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಕರ್ನಾಟಕ ಸರ್ಕಾರ ಒದಗಿಸಿಕೊಡಲಿದೆ ಎಂದರು. ಫಿಲಿಪ್ಸ್ ಕಂಪೆನಿಯ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೆಂಗಳೂರು ಮೆಟ್ರೋ ನಿರ್ಮಾಣದ ವೇಗವನ್ನು ವೃದ್ಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನೆದರ್ಲ್ಯಾಂಡ್ಸ್ ದೇಶದ 40ಕ್ಕೂ ಹೆಚ್ಚು ಮಾಹಿತಿ ತಂತ್ರಜ್ಞಾನ ಆಧಾರಿತ ಹಾಗೂ ಇನ್ನಿತರ ಕಂಪೆನಿಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಶ್ರೀ ಎವೋಟ್ ಡೇ ವಿಥ್ ಅವರು ಸಚಿವರಿಗೆ ಹೇಳಿದರಲ್ಲದೆ ಈ ಡಚ್ ಕಂಪೆನಿಗಳಲ್ಲಿ ಕರ್ನಾಟಕದ ಸುಮಾರು 10,000 ಮಂದಿ ಉದ್ಯೋಗಸ್ಥರಾಗಿದ್ದಾರೆ ಎಂದೂ ತಿಳಿಸಿದರು.
ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು ಜರ್ಮನಿ ರಾಯಭಾರಿಗಳ ಬೆಂಗಳೂರು ಪ್ರತಿನಿಧಿಗಳಾದ ಶ್ರೀ ಅಚೀಮ್ ಬರ್ಕಾರ್ಟ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ರಾಜ್ಯದಲ್ಲಿ ಐಟಿ ಎಂಜನಿಯರ್ಗಳಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಜರ್ಮನಿ ಆಧಾರಿತ ಕಂಪೆನಿಗಳು ಆದ್ಯತೆ ನೀಡಬೇಕೆಂದು ತಿಳಿಸಿದರಲ್ಲದೆ ರಾಜ್ಯದಲ್ಲಿ ಐಟಿ ಕ್ಷೇತ್ರದ ಮತ್ತಷ್ಟು ಬೆಳವಣಿಗೆಗಾಗಿ ಸಲಹೆಗಳನ್ನು ನೀಡಬೇಕೆಂದು ಕೇಳಿದರು.
ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಆವರು ಭಾರತದಲ್ಲಿನ ಅಮೆರಿಕ ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳೊಂದಿಗೆ ಸಹ ಸಭೆ ನಡೆಸಿದರು. ಮುಂದಿನ ದಶಕಗಳನ್ನು ದೃಷ್ಟಿಯಲ್ಲಿರಿಸಿಕೊಂಡು ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸವಾಲುಗಳು ನಮ್ಮ ಮುಂದೆ ಇದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿ, ಬ್ರಾಂಡ್ ಬೆಂಗಳೂರು ಸೃಜಿಸುವಲ್ಲಿ ಅಗತ್ಯ ಸಲಹೆಗಳನ್ನು ನೀಡುವಂತೆ ಕೋರಿದರು. ಸಂಸ್ಥೆಯ ಕರ್ನಾಟಕದ ನಿರ್ದೇಶಕರಾದ ಶ್ರೀ ಅಂಶುಮಾನ್ ಅಪ್ಪಣ್ಣ ಹಾಗು ಪ್ರತಿನಿಧಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಸಭೆಗಳಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಗಳ ಸಚಿವರಾದ ಶ್ರೀ ರಮಣರೆಡ್ಡಿ ಹಾಗೂ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.