ಹೊಸ ದಿಲ್ಲಿ: ಮರಾಠಾ ಮೀಸಲಾತಿ ಚಳವಳಿಗಾರರು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್ಸಿಪಿ) ಶಾಸಕ ಪ್ರಕಾಶ್ ಸೋಲಂಕೆ ಅವರ ನಿವಾಸವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿರುವ ಘಟನೆ ಸೋಮವಾರ ನಡೆದಿದೆ.
ಅಲ್ಲಿನ ಪೊಲೀಸರ ಮಾಹಿತಿ ಪ್ರಕಾರ, ಈ ಘಟನೆಯು ಮರಾಠ ಕೋಟಾದ ಹೋರಾಟಗಾರರಾದ ಮನೋಜ್ ಜರಂಗೆ ಪಾಟೀಲ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ನೀಡಿರುವ ಹೇಳಿಕೆ ಮತ್ತು ಮರಾಠ ಕೋಟಾದ ಬಗ್ಗೆ ಮಾತನಾಡಿರುವ ಸೋಲಂಕೆ ಅವರ ಆಡಿಯೊ ಕ್ಲಿಪ್ ಆನ್ಲೈನ್ನಲ್ಲಿ ವೈರಲ್ ಆದ ನಂತರ ಈ ಘಟನೆ ಸಂಭವಿಸಿದ್ದು, ಪ್ರಕಾಶ್ ಸೋಲಂಕೆ ಅವರ ಬಂಗಲೆಯ ಮೇಲೂ ಕಲ್ಲು ತೂರಲಾಗಿದ್ದು ಮತ್ತು ನಿವಾಸದಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹಚ್ಚಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಆಡಿಯೋ ಕ್ಲಿಪ್ನಲ್ಲಿ, ಎನ್ಸಿಪಿ ಶಾಸಕರು ಮರಾಠ ಮೀಸಲಾತಿ ವಿಷಯವನ್ನು “ಮಕ್ಕಳ ಆಟ” ಎಂದು ಕರೆದಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆ ನಡೆದ ಬಳಿಕ ಮಾಧ್ಯಮದವರ ಬಳಿ ಮಾತನಾಡಿರುವ ಶಾಸಕ ಸೋಲಂಕೆ ಅವರು, ಘಟನೆ ನಡೆದಾಗ ನಾನು ಮನೆಯೊಳಗಿದ್ದೆ, “ಅದೃಷ್ಟವಶಾತ್, ನನ್ನ ಕುಟುಂಬ ಸದಸ್ಯರು ಅಥವಾ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ. ನಾವೆಲ್ಲರೂ ಸುರಕ್ಷಿತವಾಗಿರುತ್ತೇವೆ, ಆದರೆ ಬೆಂಕಿಯಿಂದಾಗಿ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ” ಎಂದಿದ್ದಾರೆ.