ಮಂಗಳೂರು: ಮಂಗಳೂರಿನ ಯುವ ನ್ಯಾಯವಾದಿ ಕುಲದೀಪ್ ಶೆಟ್ಟಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪೂಂಜಾಲಟ್ಟೆ ಪಿಎಸ್ಐ ಸುತೇಶ್ ಅವರನ್ನು ಅಮಾನತು ಮಾಡುವಂತೆ ಪಶ್ಚಿಮ ವಲಯದ ಡಿಐಜಿ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
ಬಂಟ್ವಾಳದ ಪೂಂಜಾಲಕಟ್ಟೆ ಪೊಲೀಸರು ಜಾಗದ ವಿಚಾರವಾಗಿ ನ್ಯಾಯವಾದಿ ಕುಲದೀಪ್ ಶೆಟ್ಟಿ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಚಿಂತಾಮಣಿ ವಕೀಲ ಸಂಘದ ಪದಾಧಿಕಾರಿಗಳು ಸೇರಿ ಕಚೇರಿಯಿಂದ ಅಲ್ಲಿನ ತಹಾಶಿಲ್ದಾರ್ ಕಚೇರಿಯವರೆಗೂ ಮೆರವಣಿಗೆ ಹೊರಟು ಪ್ರತಿಭಟನೆ ನಡೆಸಿದ್ದು, ಸುತೇಶ್ ಅವರನ್ನು ಕರ್ತವ್ಯದಿಂದ ವಜಾ ಮಾಡುವಂತೆ ಮನವಿ ಮಾಡಿದ್ದರು.
ಪೂಂಜಾಲಕಟ್ಟೆಯ ಪೊಲೀಸರು ರಾತ್ರೋರಾತ್ರಿ ಮನೆಗೆ ನುಗ್ಗಿ ಯಾವುದೇ ಸಾಕ್ಷಿ ಆಧಾರಗಳನ್ನು ತೋರಿಸದೇ ಅರೆಸ್ಟ್ ಮಾಡಿರುವುದಲ್ಲದೇ, ಜೋರು ಜೋರಾಗಿ ಮಾತನಾಡಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು.
ಪಿಎಸ್ಐ ಸುತೇಶ್ ಅವರು ವಿನಾಕಾರಣ ಮತ್ತು ದುರುದ್ಧೇಶದಿಂದ ರಾತ್ರೋರಾತ್ರಿ ಮಂಗಳೂರಿನ ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು, ಅಲ್ಲದೇ ಒಬ್ಬ ವ್ಯಕ್ತಿಯ ಬಂಧನದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಕಾರಣ ಅವರನ್ನು ಈ ಕೂಡಲೆ ಕರ್ತವ್ಯದಿಂದ ಶಾಶ್ವತವಾಗಿ ವಜಾ ಮಾಡಿ ಕಾನೂನು ರೀತಿಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಕೀಲರ ಸಂಘದವರು ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಸುತೇಶ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ವರ್ಗಾವಣೆ ಅಷ್ಟೇ ಅಲ್ಲದೇ ಈ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ಅಷ್ಟಲ್ಲದೇ ಆಗಿರುವ ದೌರ್ಜನ್ಯಕ್ಕೆ ನ್ಯಾಯ ಬೇಕು. ಈ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಗೃಹ ಸಚಿವರಿಗೂ ಮನವಿ ಸಲ್ಲಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಂತರ ಆರೋಪಿ ಪಿಎಸ್ಐ ಸುತೇಶ್ ಅವರನ್ನು ಅಮಾನತುಗೊಳಿಸುವಂತೆ ಪಶ್ಚಿಮ ವಲಯದ ಡಿಐಜಿ ಡಾ.ಚಂದ್ರಗುಪ್ತ ಆದೇಶ ನೀಡಿದ್ದಾರೆ.