ಕಳೆದ ಐದಾರು ವರ್ಷಗಳಿಂದ ಸಮಾಜಮುಖಿ ಚಟುವಟಿಕೆ, ಕನ್ನಡ ಉಳಿಸಿ ಅಭಿಯಾನ, ಕನ್ನಡ ಶಾಲೆ ಉಳಿಸಿ ಅಭಿಯಾನ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಗಳನ್ನು ಮಾಡಿಕೊಂಡು ಬಂದ ‘ಕನ್ನಡ ಮನಸುಗಳು ಕರ್ನಾಟಕ’ ತಂಡ, ಕಳೆದ ಶನಿವಾರ ಮತ್ತು ಭಾನುವಾರ ತೀರ್ಥಹಳ್ಳಿಯ ‘ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ’ಗೆ ಬಣ್ಣ ಹೊಡೆಯುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದೆ.

ಸುಮಾರು 22 ವರ್ಷಗಳಿಂದಲೂ ಸುಣ್ಣ ಬಣ್ಣ ಕಾಣದೇ ಇದ್ದ ಈ ಶಾಲೆ ಇಂದಿಗೂ ಹಲವು ಅವ್ಯವಸ್ಥೆಗಳ ಆಗರದಂತೆ ಆಗಿದೆ. 8, 9 ಮತ್ತು 10 ನೇ ತರಗತಿ ಸೇರಿದಂತೆ ಒಟ್ಟು 18 ಸೆಕ್ಷನ್ ಗಳನ್ನು ಹೊಂದಿದ್ದ ಈ ಶಾಲೆಯಿಂದ ಪ್ರತೀ ವರ್ಷ 400 ರಿಂದ 450 ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸುತ್ತಿದ್ದರು. ಒಂದು ಕಾಲದಲ್ಲಿ 1,200 ಕ್ಕೂ ಮೀರಿದ ವಿದ್ಯಾರ್ಥಿಗಳ ಸಂಖ್ಯೆ ಇಂದು 400, 450 ರ ಆಸುಪಾಸಿಗೆ ಬಂದು ನಿಂತಿದೆ ಎಂದರೆ ಇದಕ್ಕೆ ಸರ್ಕಾರದ ಮತ್ತು ಶಾಲಾ ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷ್ಯವೇ ಮುಖ್ಯ ಕಾರಣ ಎನ್ನುತ್ತಾರೆ ಸ್ಥಳೀಯರು.
ಒಂದು ಕಾಲದಲ್ಲಿ ತಾಲ್ಲೂಕಿನ ಮುಖ್ಯ ಸರ್ಕಾರಿ ಪ್ರೌಢಶಾಲೆ ಎಂಬ ಬಿರುದು ಹೊಂದಿದ್ದ ಈ ಶಾಲೆ, ವಿದ್ಯಾರ್ಥಿಗಳ ಕೊರತೆಯಿಂದ 8 ಕೊಠಡಿಗಳ ಒಂದು ದೊಡ್ಡ ಕಟ್ಟಡ ಯಾವುದೇ ಉಪಯೋಗಕ್ಕೆ ಬಾರದೇ ಹಾಳು ಬಿದ್ದಿದೆ. ವಿದ್ಯಾರ್ಥಿಗಳು ಪ್ರಾರ್ಥನೆಗೆ ನಿಲ್ಲುವ ಜಾಗದ ಮೇಲ್ಚಾವಣಿ ಕಿತ್ತು, ಈಗಲೋ ಆಗಲೋ ಸಿಮೆಂಟ್ ಉದುರಿ ಬೀಳುವ ಸ್ಥಿತಿಯಲ್ಲಿದೆ. ವಿಶಾಲವಾದ ಆಡಿಟೋರಿಯಂ ಜಾಗದದಲ್ಲಿ ಒಂದೇ ಒಂದು ಕಿಟಕಿ ಕೂಡಾ ಇಲ್ಲ. ಹಾಗಾಗಿ ವಿದ್ಯಾರ್ಥಿಗಳು ಮಳೆಗಾಲ ಮತ್ತು ಚಳಿಗಾಲದಲ್ಲಿ ನಡುಗುವ ಸ್ಥಿತಿಯಲ್ಲಿ ಪ್ರಾರ್ಥನೆ ಮತ್ತು ಕಾರ್ಯಕ್ರಮದಲ್ಲಿ ಕೂರುವಂತಹ ದುಸ್ಥಿತಿ ಇಲ್ಲಿದೆ.
ಇನ್ನು ಕ್ಲಾಸ್ ರೂಮುಗಳ ಕಥೆಯಂತೂ ಹೇಳ ತೀರದು. ಶಾಲೆಯ ಒಂದೇ ಒಂದು ಕ್ಲಾಸ್ ರೂಮಿನ ಕಿಟಕಿ ಬಾಗಿಲುಗಳು ಸರಿಯಿಲ್ಲ. ಮುಟ್ಟಿದರೆ ಉದುರಿ ಬೀಳುವಂತಿವೆ. ಅನಾದಿಕಾಲದ ಹಿಂದೆ ಮಾಡಿದ ಡೆಸ್ಕ್ ಗಳು ಬೋಲ್ಟ್ ನಟ್ ಕಳಚಿ ಉದುರಿ ಬೀಳುತ್ತಿವೆ. ಮಕ್ಕಳು ಕೂರುವ ಎಷ್ಟೋ ಡೆಸ್ಕ್, ಬೆಂಚ್ ಗಳಲ್ಲಿ ಹಲಗೆಗಳೇ ಇಲ್ಲ. ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಲೂ ಸ್ಥಳೀಯ ಆಡಳಿತ, ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಅಂದಹಾಗೆ ತೀರ್ಥಹಳ್ಳಿಗೆ ಯಾವುದೇ ಸಚಿವ ಮುಖ್ಯಮಂತ್ರಿ, ಪ್ರಧಾನಿ, ರಾಷ್ಟ್ರಪತಿ ಬಂದರೂ ಇದೇ ಶಾಲೆಯ ಮೈದಾನದಲ್ಲೇ ಹೆಲಿಕಾಪ್ಟರ್ ಇಳಿಯಬೇಕು. ಇಂತಹ ಸ್ಥಳದಲ್ಲೇ ಅವ್ಯವಸ್ಥೆಯ ಆಗರದಂತೆ ಇರುವ ಈ ಶಾಲೆ ಸರ್ಕಾರದ ಯಾವುದೇ ಅನುಧಾನ ಇಲ್ಲದೇ ಬಣಗುಡುತ್ತಿದೆ.
ಸಧ್ಯ ‘ಕನ್ನಡ ಮನಸುಗಳು’ ತಂಡ ಸರ್ಕಾರದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಇಷ್ಟು ದೊಡ್ಡ ಕಟ್ಟಡವನ್ನು ತನ್ನ ಕೈಲಾದ ಮಟ್ಟಿಗೆ ಚಂದಗಾಣಿಸಿದೆ. ಸುಮಾರು 5 ಲಕ್ಷ ವೆಚ್ಚದಲ್ಲಿ ಬಣ್ಣ, ಆವರಣ ಸ್ವಚ್ಛತೆ, ಟೇಬಲ್ ದುರಸ್ತಿ, ಮೂಲಸೌಕರ್ಯ ಪೂರೈಕೆಯಂತಹ ಕೆಲಸಗಳನ್ನು ನೆರವೇರಿಸಿದೆ. ಸುಮಾರು 50 ಮಂದಿ ಸ್ವಯಂಸೇವಕರು ಅವಿರತವಾಗಿ ಚಳಿ ಮಳೆ ಲೆಕ್ಕಿಸದೆ ರಾತ್ರಿ ಹಗಲು ಶಾಲೆ ದುರಸ್ತಿಗೆ ಶ್ರಮಿಸಿದ್ದಾರೆ. ಇವರ ಜೊತೆಗೆ ಸ್ಥಳೀಯ ‘ದೇಶಕ್ಕಾಗಿ ನಾವು’ ಸಂಘಟನೆ ಪದಾಧಿಕಾರಿಗಳು ಕೂಡಾ ಬೇಕಾದ ಎಲ್ಲಾ ಸೌಕರ್ಯ ಒದಗಿಸಲು ಕೆಲಸ ಸಾಗಿದಷ್ಟೂ ಹೊತ್ತು ಅವರ ಜೊತೆಗಿದ್ದು ಶ್ರಮಿಸಿತು.
ನಂತರ ಸಮಾರೋಪ ಸಮಾರಂಭದ ಕೆಳಗೆ ರಾತ್ರಿ ‘ದೇಶಕ್ಕಾಗಿ ನಾವು’ ಸಂಘಟನೆ ಆಯೋಜಿಸಿದ್ದ ಬ್ರಹ್ಮಾವರದ ‘ಮಂದಾರ ಸಾಂಸ್ಕೃತಿಕ ಸೇವಾ ಸಂಘಟನೆ’ ಆಯೋಜಿಸಿದ್ದ “ಕೊಳ್ಳಿ” ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಇತ್ತೀಚೆಗೆ ತೀರ್ಥಹಳ್ಳಿ ಕ್ಷೇತ್ರ ವ್ಯಾಪ್ತಿಯ ಹುಲಿಕಲ್ ಬಳಿ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸಹಾಯಾರ್ಥ ನಾಟಕ ಆಯೋಜಿಸಿದ್ದರು.
ಒಟ್ಟಾರೆಯಾಗಿ ಕನ್ನಡ ಮನಸ್ಸುಗಳು ತಂಡ ಇಲ್ಲಿಯವರೆಗೂ ಈ ರೀತಿಯ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಇಂತಹ ಹಲವಷ್ಟು ಕಾರ್ಯಗಳು ಹೀಗೇ ಮುಂದುವರೆಯಲಿ ಎಂದು ಹಾರೈಸೋಣ.