ದೇಶದ ಪ್ರಜಾತಂತ್ರ ಇದೀಗ ದೊಡ್ಡ ಅಪಾಯ ಎದುರಿಸುತ್ತಿದೆ. ಚುನಾವಣೆಗಳು ಅರ್ಥಹೀನವಾಗುತ್ತಿವೆ. ಜನರಲ್ಲಿ ಚುನಾವಣೆಯ ಬಗ್ಗೆ ಜಿಗುಪ್ಸೆ ಮೂಡುತ್ತಿದೆ. ಮತದಾನದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ…ಯಾಕೆ? 2022 ರ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣಾ ಹಿನ್ನೆಲೆಯಲ್ಲಿ ಚುನಾವಣೆಗಳ ಬಗ್ಗೆ ಒಂದು ವಸ್ತುನಿಷ್ಠ ವಿಶ್ಲೇ಼ಷಣೆ ಇಂದಿನ ಶ್ರೀನಿ ಕಾಲಂ ನಲ್ಲಿ
ದೇಶದಾದ್ಯಂತ ಭಾರೀ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ, 2022 ರ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣಾ ಪ್ರಕ್ರಿಯೆ ಕೊನೆಗೂ ಮುಗಿದಿದೆ. ಫಲಿತಾಂಶಗಳೂ ಹೊರಬಿದ್ದಿವೆ. ಗುಜರಾತ್ ನಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಮತ್ತೆ ಗದ್ದುಗೆಗೆ ಮರಳಿದೆ. 2002 ರ ಕೋಮುಗಲಭೆಯ ಬಳಿಕ ಗುಜರಾತ್ ಹಿಂದೂ ಮುಸ್ಲಿಂ ನೆಲೆಯಲ್ಲಿ ಸಂಪೂರ್ಣ ಒಡೆದು ಹೋಗಿದ್ದು, ಹಿಂದೂಗಳು ಮತ್ತು ಮುಸ್ಲಿಮರು ಪ್ರತ್ಯೇಕವಾಗಿ ವಾಸಿಸುವ ಸ್ಥಿತಿಗೆ (ಗೆಟ್ಟೋವೈಸೇಶನ್) ತಲಪಿರುವ ಹಿನ್ನೆಲೆಯಲ್ಲಿ, ಹಿಂದೂಗಳ ಪಕ್ಷ ಎಂದು ಬಹಿರಂಗವಾಗಿಯೇ ಬಿಂಬಿಸಿಕೊಂಡು ಬಂದಿರುವ ಬಿಜೆಪಿಗೆ ಪರಿಸ್ಥಿತಿ ಸಹಜವಾಗಿಯೇ ಅನುಕೂಲಕರವಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಪಾಟೀದಾರ ಸಮುದಾಯವು ಮುನಿಸಿ ಕೊಂಡು ಬಿಜೆಪಿಯಿಂದ ದೂರ ಸರಿದುದರಿಂದ ಬಹಳ ಕಷ್ಟದಲ್ಲಿ ಅದು ಅಧಿಕಾರಕ್ಕೆ ಮರಳಿತ್ತು. ಆದರೆ ಈ ಬಾರಿ ಹಾರ್ದಿಕ್ ಪಟೇಲ್ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಪಾಟೀದಾರ್ ಸಮುದಾಯ ಗಟ್ಟಿಯಾಗಿ ಬಿಜೆಪಿಯ ಹಿಂದೆ ನಿಂತಿದೆ. ಅಲ್ಲದೆ ಬಿಜೆಪಿಗೆ ಆರ್ಥಿಕ ಸಂಪನ್ಮೂಲದ ಸಮಸ್ಯೆಯಿಲ್ಲ, ತಳಮಟ್ಟದ ಸಂಘಟನೆ ಗಟ್ಟಿಯಾಗಿದೆ. ಈ ಎಲ್ಲ ಕಾರಣಗಳಿಂದ ಬಿಜೆಪಿ ಅಲ್ಲಿ ಏಳನೇ ಬಾರಿಗೆ ಅಧಿಕಾರ ಹಿಡಿದಿದ್ದು, ಅಭಿವೃದ್ಧಿಗಿಂತಲೂ ಮುಖ್ಯವಾಗಿ ಅದರ ವಿಭಜನಕಾರಿ ರಾಜಕೀಯ ಸಿದ್ಧಾಂತದಿಂದಾಗಿ ಅಲ್ಲಿ ಮುಂದೆ ಎಂದೆಂದೂ ಬಿಜೆಪಿ ಆಳ್ವಿಕೆ ನಡೆಸಿದರೂ ಅಚ್ಚರಿಯೇನೂ ಇಲ್ಲ.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದು ಕೊಳ್ಳುವುದು ಬಹುತೇಕ ನಿಶ್ಚಿತವಾಗಿತ್ತು. ಅಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಮರಳದ ಒಂದು ಪರಂಪರೆ, ಅಲ್ಲಿನ ಬಿಜೆಪಿಯೊಳಗೆ ಇದ್ದ ಒಳಜಗಳ, ಮುಖ್ಯಮಂತ್ರಿಯ ಪದೇ ಪದೇ ಬದಲಾವಣೆ, ಕಾಂಗ್ರೆಸ್ ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸಂಘಟಿತ ಪ್ರಚಾರ ಇವೆಲ್ಲ ಇದಕ್ಕೆ ಕಾರಣವಾಗಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ಮೋದಿ ಸರಕಾರದ ‘ಅಗ್ನಿವೀರ’ ಯೋಜನೆಯ ಬಗ್ಗೆ ಅಲ್ಲಿನ ಯುವ ಸಮುದಾಯದಲ್ಲಿ ವ್ಯಾಪಕ ಅಸಮಾಧಾನವಿತ್ತು. ಹಿಮಾಚಲ ಪ್ರದೇಶ, ಉತ್ತರಾಖಂಡ, ಬಿಹಾರ, ಪಂಜಾಬ್, ಉತ್ತರಪ್ರದೇಶ ಈ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಯುವಕರು ಸೇನೆಗೆ ಸೇರುತ್ತಾರೆ. ‘ಅಗ್ನಿವೀರ ಯೋಜನೆ ತಂದು ತಮ್ಮ ಉದ್ಯೋಗಾವಕಾಶಗಳಿಗೆ ಸಂಚಕಾರ ತಂದ ಬಿಜೆಪಿಗೆ ಪಾಠ ಕಲಿಸುತ್ತೇವೆ’ ಎಂದು ಹಿಮಾಚಲದ ಯುವಜನರು ಬಹಿರಂಗವಾಗಿಯೇ ಹೇಳುತ್ತಿದ್ದರು. ಹೀಗೆ ಶೇಕಡಾವಾರು ಮತಗಳಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲವಾದರೂ 68 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ 40ಸ್ಥಾನ ಗೆದ್ದರೆ ಬಿಜೆಪಿ 25 ಸ್ಥಾನವನ್ನಷ್ಟೇ ಗೆಲ್ಲುವುದು ಸಾಧ್ಯವಾಯಿತು. ಕಾಂಗ್ರೆಸ್ ಅಧಿಕಾರಕ್ಕೇರಿತು; ಸುಖ್ವಿಂದರ್ ಸಿಂಗ್ ಮುಖ್ಯಮಂತ್ರಿಯಾದರು.
ಮಾಧ್ಯಮಗಳ ಪಕ್ಷಪಾತ ನೀತಿ
ಈ ನಡುವೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳನ್ನು ನಮ್ಮ ಮಾಧ್ಯಮಗಳು ವರದಿ ಮಾಡಿದ ಮತ್ತು ಚುನಾವಣಾ ಫಲಿತಾಂಶವನ್ನು ವಿಶ್ಲೇಷಣೆ ಮಾಡಿದ ರೀತಿಯು ದೇಶದಲ್ಲಿ ಮಾಧ್ಯಮ ಯಾವ ಕೆಳಮಟ್ಟವನ್ನು ತಲಪಿದೆ ಮತ್ತು ಎಷ್ಟೊಂದು ಪಕ್ಷಪಾತದಿಂದ ವರ್ತಿಸುತ್ತದೆ ಎಂಬುದರ ಸೂಚಕವಾಗಿದೆ. ಅವುಗಳ ಪ್ರಕಾರ ಗುಜರಾತ್ ರಾಜ್ಯ ಬಿಟ್ಟರೆ ಬೇರೆಲ್ಲೂ ಚುನಾವಣೆ ನಡೆದೇ ಇಲ್ಲ. ಪ್ರಧಾನ ಮಂತ್ರಿ ಮೋದಿಯವರು ಅಲ್ಲಿ ಕುಂತರೂ, ನಿಂತರೂ, ಏನು ಮಾಡಿದರೂ ಸುದ್ದಿ. ನೀತಿ ಸಂಹಿತೆಯ ಉಲ್ಲಂಘನೆಯನ್ನು ಪ್ರಶ್ನಿಸುವ ಧೈರ್ಯವನ್ನು ಅವು ಯಾವತ್ತೂ ತೋರಲೇ ಇಲ್ಲ. ಎಲ್ಲ ಅಕ್ರಮಗಳೂ ಸಕ್ರಮ! ಚುನಾವಣಾ ಫಲಿತಾಂಶ ಬಂದಾಗಲೂ ಅಷ್ಟೇ. ವಾಸ್ತವದಲ್ಲಿ ಗುಜರಾತ್, ಹಿಮಾಚಲ ಪ್ರದೇಶ, ದಿಲ್ಲಿ ಎಂ ಸಿ ಡಿ ಮೂರರಲ್ಲೂ ಬಿಜೆಪಿ ಅಧಿಕಾರದಲ್ಲಿತ್ತು. ಗುಜರಾತ್ ಹೊರತುಪಡಿಸಿ ಉಳಿದ ಎರಡರಲ್ಲೂ ಅದು ಅಧಿಕಾರ ಕಳೆದುಕೊಂಡಿತು. ಒಂದು ರೀತಿಯ ರಾಜಕೀಯ ಮುಖಭಂಗ. ಆದರೆ ಮಾಧ್ಯಮಗಳಿಗೆ ಅದು ಮುಖ್ಯವಾಗಲೇ ಇಲ್ಲ. ನಿರಂತರ ಒಂದೇ ಪಕ್ಷದ ಮತ್ತು ಒಬ್ಬನೇ ನಾಯಕನ ಭಜನೆ ಮಾಡಿದ್ದೇ ಮಾಡಿದ್ದು.!

ಚುನಾವಣಾ ಆಯೋಗದ ಕಾರ್ಯವೈಖರಿ
ಟಿ ಎನ್ ಶೇಷನ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದಾಗ ಚುನಾವಣಾ ಆಯೋಗದ ಶಕ್ತಿ ಏನು ಎಂಬುದು ದೇಶಕ್ಕೆ ಮೊದಲ ಬಾರಿಗೆ ತಿಳಿಯಿತು. ಅದಕ್ಕೆ ಮೊದಲು ಮತ್ತು ಆನಂತರ ನಮ್ಮ ಚುನಾವಣಾ ಆಯೋಗಗಳು ನಿಷ್ಪಕ್ಷಪಾತವಾಗಿ ಮತ್ತು ದಿಟ್ಟವಾಗಿ ಕೆಲಸ ಮಾಡಿದ ಉದಾಹರಣೆಗಳು ತೀರಾ ವಿರಳ. ಕಳೆದ ಸುಮಾರು ಎಂಟು ವರ್ಷಗಳಿಂದಂತೂ ಸಂಪೂರ್ಣ ಕೇಂದ್ರ ಸರಕಾರದ ಕೈಗೊಂಬೆ. ಯಾರು ಚುನಾವಣಾ ಆಯೋಗದ ಚುಕ್ಕಾಣಿ ಹಿಡಿದರು, ಹೇಗೆ ಹಿಡಿದರು, ಸ್ವತಃ ಪ್ರಧಾನಿಯೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದಾಗ ಅವರು ಏನು ಕ್ರಮ ತೆಗೆದುಕೊಂಡರು ಎಂಬುದನ್ನು ಸುಮ್ಮನೆ ಅವಲೋಕಿಸಿದರೂ ಸಾಕು ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಜಿಗುಪ್ಸೆ ಹುಟ್ಟೀತು. ಇದಕ್ಕೆ ಒಂದು ಕಾರಣ ಚುನಾವಣಾ ಆಯೋಗಕ್ಕೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಒಕ್ಕೂಟ ಸರಕಾರದ ಬಳಿ ಇರುವುದು ಮತ್ತು ಸರಕಾರ ತಮಗೆ ಬೇಕಾದವರನ್ನು ನೇಮಕಮಾಡುವುದು!
ಇತ್ತೀಚೆಗೆ ಅರುಣ್ ಗೋಯಲ್ ಅವರನ್ನು ಚುನಾವಣಾ ಕಮಿಷನರ್ ಆಗಿ ನೇಮಕ ಮಾಡಿದಾಗ ಉಂಟಾದ ವಿವಾದ ಇದಕ್ಕೆ ಅತ್ಯುತ್ತಮ ಉದಾಹರಣೆ. ಅರುಣ್ ಗೋಯಲ್ 1985 ರ ಬ್ಯಾಚ್ ನ ಪಂಜಾಬ್ ಕೇಡರ್ ನ ಐ ಎ ಎಸ್ ಅಧಿಕಾರಿ. ಈಗಿನ ಒಕ್ಕೂಟ ಸರಕಾರದಲ್ಲಿ ಭಾರೀ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದವರು. ಡಿಸೆಂಬರ್ 31, 2022 ಕ್ಕೆ ನಿವೃತ್ತಿಯಾಗಲಿದ್ದವರು. ನಿವೃತ್ತಿಗೆ ಇನ್ನೇನು ಆರು ವಾರ ಇರುವಾಗ ಅವರು ಸ್ವಯಂ ನಿವೃತ್ತಿಗೆ (ವಿಆರ್ ಎಸ್) ಅರ್ಜಿ ಹಾಕುತ್ತಾರೆ. ನವೆಂಬರ್ 18 ರಂದು ಅವರ ಮನವಿಯನ್ನು ಅಂಗೀಕರಿಸಲಾಗುತ್ತದೆ. 19 ರಂದು ಅವರನ್ನು ಚುನಾವಣಾ ಕಮಿಷನರ್ ಆಗಿ ನೇಮಕ ಮಾಡಲಾಗುತ್ತದೆ! ಮುಂದಿನ 2027 ರ ಡಿಸೆಂಬರ್ ವರೆಗೂ ಇವರು ಚುನಾವಣಾ ಆಯುಕ್ತರಾಗಿರುತ್ತಾರೆ !
ಈ ವಿಚಾರವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಒಂದೇ ದಿನದಲ್ಲಿ, ಅದೂ ತಿಂಗಳುಗಳ ಕಾಲದಿಂದ ಖಾಲಿ ಬಿದ್ದಿದ್ದ ಹುದ್ದೆಗೆ ಅಷ್ಟು ತರಾತುರಿಯಲ್ಲಿ ನೇಮಕ ಮಾಡುವ ಅಗತ್ಯ ಏನು? ಇದಕ್ಕೆ ಅನುಸರಿಸಲಾದ ಪ್ರಕ್ರಿಯೆಯ ಎಲ್ಲ ವಿವರ ಸಲ್ಲಿಸಿ ಎಂದು ಅದು ಅಟಾರ್ನಿ ಜನರಲ್ ಆರ್ ವೆಂಕಟರಮಣಿಗೆ ಹೇಳಿದೆ. ಚುನಾವಣಾ ಆಯೋಗದ ಆಯುಕ್ತರನ್ನು ನೇಮಕ ಮಾಡಲು ಒಂದು ನಿಷ್ಪಕ್ಷಪಾತವಾದ ಒಂದು ಸಮಿತಿ ಬೇಡವೇ? ಚುನಾವಣಾ ಆಯುಕ್ತರು ಪ್ರಧಾನಿಯ ಮೇಲೂ ಕ್ರಮ ಜರುಗಿಸುವಂತಿರ ಬೇಕಲ್ಲವೇ? ಎಂದು ಅದು ಹೇಳಿದೆ. ಪ್ರಧಾನಿಯಿಂದ ನೇಮಕಗೊಂಡ ಆಯುಕ್ತರು ಪ್ರಧಾನಿಯ ಮೇಲೆ ಕ್ರಮ ಜರುಗಿಸುವರೇ ಎಂಬುದು ಕೋರ್ಟ್ ನ ಪರೋಕ್ಷ ಪ್ರಶ್ನೆಯಾಗಿತ್ತು.
ಗುಜರಾತ್ ಗೆ ಎರಡು ಹಂತದ ಚುನಾವಣೆ!
‘ಒಂದು ದೇಶ ಒಂದು ಚುನಾವಣೆ’ ಇದು ಕಳೆದ ಎಂಟು ವರ್ಷಗಳಲ್ಲಿ ಪದೇ ಪದೇ ಕೇಳಿಬರುತ್ತಿರುವ ಒಂದು ಮಾತು. ಈ ಬಗ್ಗೆ ಮಾತನಾಡಬಾರದ ಚುನಾವಣಾ ಆಯೋಗದಂತಹ ಸ್ವತಂತ್ರ ಸಂಸ್ಥೆಗಳೂ ಆಗಾಗ ಇದರ ಬಗ್ಗೆ ಮಾತನಾಡುತ್ತಾ, ‘ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆಗೆ ಒಮ್ಮೆಲೇ ಚುನಾವಣೆ ನಡೆಸಲು ತಾವು ಸಿದ್ಧ’ ಎನ್ನುತ್ತಿರುತ್ತವೆ. ದೇಶದಲ್ಲಿ ಒಮ್ಮೆಲೇ ಚುನಾವಣೆ ನಡೆಸಲು ಸಿದ್ಧ ಎನ್ನುವ ಇದೇ ಚುನಾವಣಾ ಆಯೋಗ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಗೆ ಒಮ್ಮೆಲೇ ಚುನಾವಣಾ ದಿನಾಂಕ ಘೋಷಿಸುವುದಿಲ್ಲ (ಮತಗಣನೆ ಮಾತ್ರ ಒಂದೇ ದಿನ). ಗುಜರಾತ್ ನಲ್ಲಿ ಪ್ರಧಾನಿಗಳಿಗೆ ಅನುಕೂಲ ಮಾಡಿಕೊಡಲು ಹೀಗೆ ಮಾಡಲಾಗುತ್ತಿದೆಯೋ ಎಂಬ ಅನುಮಾನ ಬರುವಂತೆ ಅಲ್ಲಿ ಅನೇಕ ವಾರಗಳ ಬಳಿಕ ಚುನಾವಣಾ ದಿನಾಂಕ ಘೋಷಿಸಲಾಗುತ್ತದೆ. ಕೇವಲ 182 ವಿಧಾನಸಭಾ ಸ್ಥಾನ ಇರುವ ಗುಜರಾತ್ ನಲ್ಲಿ ಎರಡು ಹಂತದ ಚುನಾವಣೆ ಘೋಷಿಸಲಾಗುತ್ತದೆ. ನಿಯಮದ ದುರುಪಯೋಗ ಮಾಡಿಕೊಂಡು ಮತದಾನದ ದಿನವೂ ಪ್ರಧಾನಿಗಳು ಪಕ್ಕದ ಇನ್ನೊಂದು ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಭಾಷಣ ನಡೆಸುತ್ತಾರೆ. ತಾಯಿಯನ್ನು ಭೇಟಿ ಮಾಡುತ್ತಾರೆ. ಮತ ಚಲಾವಣೆಯ ಸಮಯದಲ್ಲಿಯೂ ರೋಡ್ ಶೋ ನಡೆಸುತ್ತಾರೆ. ಮಾಧ್ಯಮ ಸ್ವಾತಂತ್ರ್ಯ ಬಳಸಿಕೊಂಡು ಮಾಧ್ಯಮಗಳು ಇವುಗಳ ಲೈವ್ ಪ್ರಸಾರ ನಡೆಸುತ್ತವೆ. ದೂರು ಕೊಟ್ಟರೆ ‘ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ’ ಎಂದು ಆಯೋಗ ಹೇಳುತ್ತದೆ. ಅಮಿತ್ ಶಾ, 2002 ರಲ್ಲಿ ‘ಅವರಿಗೆ’ ಪಾಠ ಕಲಿಸಿದೆವು ಎನ್ನುತ್ತಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಲ್ಲ ಎನ್ನುತ್ತದೆ ಆಯೋಗ!
ಚುನಾವಣಾ ಬಾಂಡುಗಳೆಂಬ ಭ್ರಷ್ಟ ಯೋಜನೆ
ಈಗಿನ ಚುನಾವಣೆಗಳು ಉಮೇದುವಾರರ ಪಾಲಿಗೆ ಬಹು ದುಬಾರಿ. ಲಕ್ಷಗಟ್ಟಲೆ ಕೆಲವೊಮ್ಮೆ ಕೋಟಿಗಟ್ಟಲೆ ಹಣ ವ್ಯಯಿಸಬೇಕು. ಜೊತೆಯಲ್ಲಿ ಮಾಧ್ಯಮಗಳೂ ನಿಮ್ಮ ಜತೆಗಿರಬೇಕು. ಆ ಎಲ್ಲ ಅನುಕೂಲಗಳೂ ಈಗ ದೇಶದಲ್ಲಿ ಒಂದು ಪಕ್ಷಕ್ಕಿದೆ. ಪಾರದರ್ಶಕತೆಯು ಬಹುಮುಖ್ಯ ಅಂಶವಾಗಿರಬೇಕಾದ ಪ್ರಜಾತಂತ್ರದಲ್ಲಿ ‘ಚುನಾವಣಾ ಬಾಂಡು’ ಎನ್ನುವುದೇ ದೊಡ್ಡದೊಂದು ಭ್ರಷ್ಟ ಯೋಜನೆ. ಈ ಬಾಂಡ್ ಮೂಲಕ ಕೋಟಿಗಟ್ಟಲೆ ಹಣ ರಾಜಕೀಯ ಪಕ್ಷಗಳಿಗೆ ಬರುತ್ತದೆ. ಆದರೆ
ಅದನ್ನು ಕೊಟ್ಟವರು ಯಾರು ಎಂಬುದು ಯಾರಿಗೂ ತಿಳಿಯದು. 2017- 18 ಮತ್ತು 2019-20 ರಲ್ಲಿ 19 ಪಕ್ಷಗಳು 6,201 ಕೋಟಿ ಹಣ ಪಡೆದವು. ಇದರಲ್ಲಿ ಬಿಜೆಪಿಗೆ 68% ಅಂದರೆ 4,215.89 ಕೋಟಿ ಬಂದರೆ, ಕಾಂಗ್ರೆಸ್ ಗೆ ಕೇವಲ 11.3%, ಅಂದರೆ 706.2 ಕೋಟಿ ಬಂತು. ದೇಶದ ಒಟ್ಟು 105 ರಾಜಕೀಯ ಪಕ್ಷಗಳ ಪೈಕಿ ಚುನಾವಣಾ ಬಾಂಡ್ ನ ಲಾಭವಾದುದು ಕೇವಲ 19 ಪಕ್ಷಗಳಿಗೆ ಎಂದು ‘ದಿ ಕ್ವಿಂಟ್’ ಹೇಳಿದೆ. ಎಲ್ಲವೂ ಗುಪ್ತ ಗುಪ್ತ. ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದರೂ ಇದುವರೆಗೆ ಪ್ರಯೋಜನವಾಗಿಲ್ಲ. ಈ ಚುನಾವಣಾ ಬಾಂಡುಗಳ ಮೂಲಕ ಬಹುದೊಡ್ಡ ಪ್ರಮಾಣದಲ್ಲಿ ಹಣ ಬರುವುದು ಸಹಜವಾಗಿಯೇ ಅಧಿಕಾರದಲ್ಲಿರುವ ಪಕ್ಷಕ್ಕೆ, ಅಂದರೆ ಈಗ ಬಿಜೆಪಿಗೆ. ಹಣ ಮತ್ತು ಅಧಿಕಾರ ಇದ್ದರೆ ಮಾಧ್ಯಮಗಳನ್ನು ಹೇಗೂ ನಿಯಂತ್ರಿಸಬಹುದು. ಆಮಿಷ ಮತ್ತು ಬೆದರಿಕೆ ಎರಡೂ ಇಲ್ಲಿ ಕೆಲಸಕ್ಕೆ ಬರುತ್ತದೆ. ಈಗಂತೂ ಆಳುವವರ ಆಪ್ತ ಸ್ನೇಹಿತ ಬಿಲಿಯಾಧಿಪತಿಗಳು ದೇಶದ ಬಹುತೇಕ ಎಲ್ಲ ಮಾಧ್ಯಮ ಸಂಸ್ಥೆಗಳನ್ನು ಕೊಂಡುಕೊಂಡಿದ್ದು ಅದರ ಲಾಭವೂ ಆಗುತ್ತಿರುವುದು ಬಿಜೆಪಿಗೆ. ಅಂದಮೇಲೆ ಸಮಾನ ನೆಲೆಯ (ಲೆವೆಲ್ ಪ್ಲೇಯಿಂಗ್ ಫೀಲ್ಡ್) ಸ್ಪರ್ಧೆ ಎಲ್ಲಿದೆ?!
ಇಷ್ಟೆಲ್ಲ ಆದ ಮೇಲೆ ಒಂದು ಸರಕಾರ ಚುನಾಯಿತವಾಗಿ ಅಸ್ತಿತ್ವಕ್ಕೆ ಬಂತು ಅಂತಿಟ್ಟು ಕೊಳ್ಳಿ. ಬಿಜೆಪಿಯೇತರ ಪಕ್ಷದ ಸರಕಾರವಾದರೆ ಅದು ಎಷ್ಟು ದಿನ ಉಳಿದು ಕೊಂಡೀತು? ದಶಕದ ಹಿಂದೆ ‘ಆಪರೇಶನ್ ಕಮಲ’ ಎಂಬ ಒಂದು ಅನೈತಿಕ ರಾಜಕೀಯ ಪರಂಪರೆ ಕರ್ನಾಟಕದಿಂದಲೇ ಶುರುವಾಯಿತು. ಒಂದು ಪಕ್ಷದಿಂದ ಗೆದ್ದ ಶಾಸಕರಿಗೆ ಹಣಕಾಸಿನ ಮತ್ತು ಮಂತ್ರಿ ಪದವಿಯ ಆಮಿಷ ಒಡ್ಡಿ ಅಥವಾ ಕೇಂದ್ರೀಯ ಸಂಸ್ಥೆಗಳ ಮೂಲಕ ಬೆದರಿಕೆ ಒಡ್ಡಿ ಅವರು ಬೇರೊಂದು ಪಕ್ಷಕ್ಕೆ ಹೋಗುವಂತೆ ಮಾಡುವುದು, ಆ ಮೂಲಕ ಸರಕಾರಗಳನ್ನು ಉರುಳಿಸಿ ಚುನಾವಣಾ ಮ್ಯಾಂಡೇಟುಗಳನ್ನು ಅಣಕ ವಾಡುವುದು. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಬಿಜೆಪಿ ಅಗತ್ಯ ಬಹುಮತದ ಮೂಲಕ ಅಧಿಕಾರಕ್ಕೆ ಬರಲಿಲ್ಲ. ಆದರೆ ಆ ಮೂರೂ ರಾಜ್ಯಗಳಲ್ಲಿ ಈಗ ಬಿಜೆಪಿ ಆಡಳಿತವಿದೆ. ಅದು ಹೇಗೆ ಅಧಿಕಾರಕ್ಕೆ ಬಂತು ಎಂಬುದನ್ನು ವಿವರಿಸಿ ಹೇಳುವ ಅಗತ್ಯವಿಲ್ಲ. ಎಲ್ಲ ಅಕ್ರಮಗಳೂ ಕ್ರಮಬದ್ಧವಾಗಿಯೇ ನಡೆದುವು ಮತ್ತು ಇದಕ್ಕೆ ಬಹುತೇಕ ಮಾಧ್ಯಮಗಳ ಬೆಂಬಲವಿತ್ತು. ಇದು ನೈತಿಕವಾಗಿ ಮಾತ್ರವಲ್ಲ ಎಲ್ಲ ರೀತಿಯಲ್ಲೂ ತಪ್ಪು ಮತ್ತು ಇದು ಪ್ರಜಾತಂತ್ರಕ್ಕೆ ಅಪಾಯ ಎಂಬುದು ಇವಕ್ಕೆ ಅನಿಸಲೇ ಇಲ್ಲ!
ಈ ಮತ್ತು ಇಂತಹ ಅನೇಕ ಕಾರಣದಿಂದಾಗಿ ದೇಶದ ಪ್ರಜಾತಂತ್ರ ಇದೀಗ ದೊಡ್ಡ ಅಪಾಯ ಎದುರಿಸುತ್ತಿದೆ. ಚುನಾವಣೆಗಳು ಅರ್ಥಹೀನವಾಗುತ್ತಿವೆ. ಜನರಲ್ಲಿ ಚುನಾವಣೆಯ ಬಗ್ಗೆ ಜಿಗುಪ್ಸೆ ಮೂಡುತ್ತಿದೆ. ಮತದಾನದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಹೇಳಿದ ಹಾಗೆ ಪ್ರಧಾನಿಯ ಮೇಲೂ ಕ್ರಮ ಜರುಗಿಸಬಲ್ಲ ಚುನಾವಣಾ ಆಯುಕ್ತರ ನೇಮಕವಾಗಬೇಕು. ಪಕ್ಷಗಳಿಗೆ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಅಂತಾರಲ್ಲ ಅದಿರಬೇಕು. ಜನಪ್ರತಿನಿಧಿಗಳಿಗೆ ಒಂದು ಪಕ್ಷದಿಂದ ಗೆದ್ದ ಮೇಲೆ ಇನ್ನೊಂದು ಪಕ್ಷಕ್ಕೆ ಹೋಗುವ ಅವಕಾಶ ಇರಕೂಡದು. ಹಾಗೆ ಹೋದರೆ ಒಂದಷ್ಟು ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸದಂತಾಗಬೇಕು. ಇವೆಲ್ಲ ಆಗಿಲ್ಲವೆಂದರೆ ದೇಶದ ಪ್ರಜಾತಂತ್ರ, ವಿಶೇಷವಾಗಿ ಸಂಸದೀಯ ಪ್ರಜಾತಂತ್ರ ಕಾಗದದ ಮೇಲಷ್ಟೇ ಉಳಿಯುತ್ತದೆ. ಚುನಾವಣೆ ಕೇವಲ ಒಂದು ಪ್ರಹಸನವಾಗುತ್ತದೆ.
ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.