ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಹಲವು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದು , ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮಮಂದಿರ ಉದ್ಘಾಟನೆಗೆ ನಮ್ಮ ವಿರೋಧವೇನೂ ಇಲ್ಲ. ಇದರಲ್ಲಿ ಬಿಜೆಪಿ ಅಗತ್ಯಕ್ಕಿಂತ ಹೆಚ್ಚು ರಾಜಕೀಯ ಲಾಭ ಪಡೆಯಲೆತ್ನಿಸಿದೆ ಎಂದು ಆರೋಪಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಗಳಿಸಲು ಕೇಂದ್ರ ಸರ್ಕಾರ ರಾಮಮಂದಿರ ಉದ್ಘಾಟನೆಯನ್ನು ಬಳಸಿಕೊಂಡಿದೆ ಎಂದು ಕರ್ನಾಟಕ ಸರ್ಕಾರದ ಸಚಿವ ಡಿ.ಸುಧಾಕರ್ ಅವರು ಆರೋಪಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಅವಧಿಯಲ್ಲಿ ಬಿಜೆಪಿ ಪುಲ್ವಾಮಾ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಂಡು ಲಾಭ ಪಡೆದಂತೆ, ಈ ಅವಧಿಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ಬಳಸಿಕೊಳ್ಳುತ್ತಿದೆ ಎಂದು ಸಚಿವ ಡಿ.ಸುಧಾಕರ್. ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ.
ಸುಧಾಕರ್, ಅಯೋಧ್ಯೆ ರಾಮಮಂದಿರ ಉದ್ಘಾಟನೆ ಒಂದು ಸ್ಟಂಟ್, ಜನರು ಮೂರ್ಖರಲ್ಲ, ನಾವು ಎರಡು ಬಾರಿ ಮೂರ್ಖರಾಗಿದ್ದೇವೆ, ಮೂರನೇ ಬಾರಿಗೆ ಮೋಸ ಹೋಗುವುದಿಲ್ಲ ಎಂಬ ವಿಶ್ವಾಸವಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿರುವುದು ನಿಜ. ರಾಮಮಂದಿರಕ್ಕೆ ನಾವೆಲ್ಲರೂ ಹಣ ನೀಡಿದ್ದೇವೆ. ಈ ಹಿಂದೆಯೂ ಇಟ್ಟಿಗೆ ನೀಡಿದ್ದೇವೆ, ರಾಮಮಂದಿರ ಯಾವ ಪಕ್ಷದ ಸ್ವತ್ತಲ್ಲ” ಎಂದು ಹೇಳಿದ್ದಾರೆ.