ತೀರ್ಥಹಳ್ಳಿ: ಬಾಯಿಗೆ ಬಂದಂತೆ ಮಾತನಾಡಿ ನಂತರ ಕ್ಷಮೆಯಾಚಿಸುವ ಬಿಜೆಪಿಯ ನಾಯಕರ ಪರಂಪರೆ ಮುಂದುವರೆದಿದ್ದು ತೀರ್ಥಹಳ್ಳಿಯ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ತಮ್ಮ ಅಜ್ಞಾನದ ಮಾತುಗಳಿಗಾಗಿ ಕ್ಷಮೆಯಾಚಿಸಿರುವುದಾಗಿ ಸುದ್ದಿಯಾಗಿದೆ.
ಈ ಕರಿತು ಮಾತನಾಡಿರುವ ಅವರು “ನನ್ನನ್ನು ಯಾರೂ ತಪ್ಪು ತಿಳಿಯಬಾರದು. ನಾನು ಮಲೆನಾಡಿನ ಪಾಲಿಗೆ ಮರಣ ಶಾಸನವಾಗಿರುವಕಸ್ತೂರಿ ರಂಗನ್ ವರದಿಯನ್ನು ಟೀಕಿಸುತ್ತಾ, ಅರಣ್ಯ ಸಚಿವ ಈಶ್ವರ್ ಖಂಡಿಸುವ ಭರದಲ್ಲಿ ಖರ್ಗೆಯವರ ಹೆಸರನ್ನು ಹೇಳಿದೆ. ಈ ಕುರಿತು ನಡೆದ ತಪ್ಪಿಗೆ ನಾನು ಖರ್ಗೆಯವರ ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ.
AICC ಅಧ್ಯಕ್ಷರಾ ಖರ್ಗೆಯವರ ಕುರಿತು ಕೀಳು ಅಭಿರುಚಿಯ ಹೇಳಿಕೆ ಕೊಟ್ಟಿದ್ದ ಆರಗ ನಿನ್ನೆಯಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಕಾಂಗ್ರಸ್ ಕೂಡಾ ನೇರ ವಾಗ್ದಾಳಿ ಮಾಡಿತ್ತು. ಕಾಂಗ್ರೆಸ್ ನಾಯಕ ಆರಗ ಜ್ಞಾನೇಂದ್ರರನ್ನು ನಿಮ್ಹಾನ್ಸ್ಗೆ ಸೇರಿಸಬೇಕು ಎಂದಿದ್ದರು.
ವೇದಿಕೆಯ ಮೇಲೆ ಬಾಯಿಗೆ ಬಂದಂತೆ ಮಾತನಾಡುವ ಚಾಳಿ ಜ್ಞಾನೇಂದ್ರರಿಗೆ ಹೊಸದೇನೂ ಅಲ್ಲ. ಈ ಹಿಂದೆ ಕರಾವಳಿಯ ದೈವಗಳ ಕುರಿತು ಕೆಟ್ಟದಾಗಿ ಮಾತನಾಡಿ ಎಲ್ಲರಿಂದ ಟೀಕೆಗೆ ಒಳಗಾಗಿದ್ದರು.
ಈಗ ಒಬ್ಬ ಹಿರಿಯ ರಾಜಕಾರಣಿಯಾಗಿ ಇನ್ನೊಬ್ಬರ ಮೈಬಣ್ಣದ ಕುರಿತು ಹೀನಮಟ್ಟದ ಹೇಳಿಕೆ ನೀಡಿ ಎಲ್ಲರಿಂದ ಟೀಕೆ ಮಾಡಿಸಿಕೊಂಡು ಎಂದಿನಂತೆ ತನ್ನ ಪಕ್ಷದ ಇತರ ನಾಯಕರಂತೆ ಕ್ಷಮೆ ಯಾಚಿಸಿದ್ದಾರೆ.
ಇಂತಹುದೇ ಒಂದು ಪ್ರಕರಣದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ‘ಕಾಗೆ’ಗೆ ಹೋಲಿಸಿ ವರ್ಣ ಅವಹೇಳನ ಮಾಡಿದ್ದ ಪ್ರಕರಣವನ್ನು ಪೀಪಲ್ ಮೀಡಿಯಾ ವರದಿ ಮಾಡಿತ್ತು. ಆ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಸುಮೊಟೊ ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದನ್ನು ಸ್ಮರಿಸಬಹುದು.