ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷ ಒಳಗಿನ ಅಸಮಾಧಾನ ಇದೀಗ ಬಹಿರಂಗವಾಗುತ್ತಿರುವ ಸೂಚನೆಗಳು ಕಾಣಿಸುತ್ತಿವೆ. ಪಕ್ಷವು ತನ್ನ ಪ್ರಮುಖ ಸಂಸದರಾದ ರಾಘವ್ ಚಡ್ಡಾ ಅವರನ್ನು ರಾಜ್ಯಸಭಾ ಉಪನಾಯಕ ಸ್ಥಾನದಿಂದ ತೆಗೆದುಹಾಕಿ, ಅವರ ಮಾತನಾಡುವ ಹಕ್ಕಿನ ಮೇಲೂ ನಿರ್ಬಂಧ ವಿಧಿಸಿರುವುದಾಗಿ ಮೂಲಗಳು ತಿಳಿಸಿವೆ.
ಈ ನಿರ್ಧಾರದೊಂದಿಗೆ, ಅಶೋಕ್ ಮಿತ್ತಲ್ ಅವರನ್ನು ರಾಜ್ಯಸಭೆಯ ಹೊಸ ಉಪನಾಯಕರಾಗಿ ನೇಮಿಸಲಾಗಿದೆ. ಈ ಬಗ್ಗೆ ಪಕ್ಷವು ರಾಜ್ಯಸಭಾ ಕಾರ್ಯದರ್ಶಿಗೆ ಅಧಿಕೃತವಾಗಿ ಮಾಹಿತಿ ನೀಡಿದೆ.
ಮೂಲಗಳ ಪ್ರಕಾರ, ರಾಘವ್ ಚಡ್ಡಾ ಅವರು ರಾಜ್ಯಸಭೆಯಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾಗಿ ಸ್ವತಂತ್ರವಾಗಿ ಹಲವು ವಿಷಯಗಳನ್ನು ಎತ್ತುತ್ತಿದ್ದರು ಎಂಬ ಅಸಮಾಧಾನ ಉಂಟಾಗಿತ್ತು. ಅಲ್ಲದೆ, ಮಾತನಾಡುವ ವೇಳೆ ಪಕ್ಷದ ಇತರ ಸದಸ್ಯರಿಗೆ ಅವಕಾಶ ಸಿಗದಿರುವುದೂ ಈ ಕ್ರಮಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ಇನ್ನೂ, ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಾಮೀನು ದೊರೆತ ಬಳಿಕ ಚಡ್ಡಾ ಮೌನವಾಗಿದ್ದದ್ದು ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿತ್ತು ಎಂದು ಮೂಲಗಳು ಸೂಚಿಸುತ್ತವೆ.
ರಾಘವ್ ಚಡ್ಡಾ ಅವರು ರಾಜ್ಯಸಭೆಯಲ್ಲಿ ಮಧ್ಯಮ ವರ್ಗದ ತೆರಿಗೆ ಭಾರ, ಗಿಗ್ ಕೆಲಸಗಾರರ ಭದ್ರತೆ, ಆಹಾರ ಕಲಬೆರಕೆ ಮತ್ತು ವಿಮಾನ ನಿಲ್ದಾಣಗಳಲ್ಲಿನ ದುಬಾರಿ ಸೇವೆಗಳಂತಹ ಜನಸಾಮಾನ್ಯರ ಸಮಸ್ಯೆಗಳನ್ನು ನಿರಂತರವಾಗಿ ಎತ್ತುತ್ತಿದ್ದರು. ಆದಾಗ್ಯೂ, ಪಕ್ಷದ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಮತ್ತು ಸಮನ್ವಯದ ಕೊರತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
