ಚೆನ್ನೈ: ಅಣ್ಣಾ ಡಿಎಂಕೆ (AIADMK) ಪಕ್ಷದ ಮೂಲಕ ತಮಿಳುನಾಡನ್ನು ಆಳಲು ಆರ್ಎಸ್ಎಸ್ (RSS) ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಡಿಎಂಕೆ, ಕಾಂಗ್ರೆಸ್ ಮತ್ತು ಅವುಗಳ ಮೈತ್ರಿಪಕ್ಷಗಳು ಆರ್ಎಸ್ಎಸ್ನಿಂದ ತಮಿಳು ಭಾಷೆ, ಸಂಸ್ಕೃತಿ ಮತ್ತು ಇತಿಹಾಸವನ್ನು ರಕ್ಷಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ‘ಸೆಕ್ಯುಲರ್ ಪ್ರೋಗ್ರೆಸಿವ್ ಅಲೈಯನ್ಸ್’ (SPA) ಅಭ್ಯರ್ಥಿಗಳ ಪರವಾಗಿ ಸೋಮವಾರ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ತಮಿಳುನಾಡು ಇಡೀ ದೇಶಕ್ಕೆ ಪ್ರಗತಿಪರ ದೃಷ್ಟಿಕೋನವನ್ನು ನೀಡಿದೆ ಎಂದು ಶ್ಲಾಘಿಸಿದರು. ಇಲ್ಲಿನ ರಾಜಕೀಯವು ಸಾಮಾಜಿಕ ನ್ಯಾಯದೊಂದಿಗೆ ಬೆರೆತಿದೆ ಎಂದು ಅವರು ಅಭಿಪ್ರಾಯಪಟ್ಟರು. ಮಂಡೈಕಾಡು ಕಾಲೇಜು ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಐತಿಹಾಸಿಕ ‘ಭಾರತ್ ಜೋಡೋ ಯಾತ್ರೆ’ ಕನ್ಯಾಕುಮಾರಿಯಿಂದಲೇ ಆರಂಭವಾಗಿತ್ತು ಎಂಬುದನ್ನು ಸ್ಮರಿಸಿದರು.
ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಕಾಂಗ್ರೆಸ್ ಸೈದ್ಧಾಂತಿಕ ಹೋರಾಟ ನಡೆಸುತ್ತಿದೆ ಎಂದು ರಾಹುಲ್ ಸ್ಪಷ್ಟಪಡಿಸಿದರು. “ದೇಶದ ಪ್ರತಿ ರಾಜ್ಯಕ್ಕೂ ತನ್ನದೇ ಆದ ಧ್ವನಿ ಮತ್ತು ಪ್ರಾತಿನಿಧ್ಯ ಇರಬೇಕು. ರಾಜ್ಯಗಳ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲೆ ದಾಳಿ ಮಾಡಬಾರದು” ಎಂದು ಅವರು ಆಗ್ರಹಿಸಿದರು. ಆದರೆ ಬಿಜೆಪಿಯು “ಒಂದೇ ಭಾಷೆ, ಒಂದೇ ಸಂಪ್ರದಾಯ ಮತ್ತು ಒಂದೇ ಇತಿಹಾಸ” ಎಂಬ ಏಕಮುಖ ಆಧಿಪತ್ಯವನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಒಂದು ಕಾಲದಲ್ಲಿ ಎಐಎಡಿಎಂಕೆಯಲ್ಲಿ ಉತ್ತಮ ನಾಯಕರಿದ್ದರು ಎಂದು ನೆನಪಿಸಿಕೊಂಡ ರಾಹುಲ್, “ಆ ಪಕ್ಷ ಈಗ ತನ್ನ ಅಸ್ತಿತ್ವವನ್ನು ಕಳೆದುಕೊಂಡು, ತಮಿಳುನಾಡಿನಲ್ಲಿ ಬಿಜೆಪಿ ಪ್ರವೇಶಿಸಲು ಒಂದು ಸಾಧನವಾಗಿ ಬದಲಾಗಿದೆ” ಎಂದು ಟೀಕಿಸಿದರು.
