ಚಿಕ್ಕಮಂಗಳೂರು / ಮಂಗಳೂರು : ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಗೆ ಜನ ಜೀವನ ನಿಜಕ್ಕೂ ಅಸ್ತವ್ಯಸ್ತವಾಗಿದ್ದು, ಭಾರೀ ಮಳೆಯ ಪರಿಣಾಮ ಮಂಗಳೂರಿನ ಕದ್ರಿಯಲ್ಲಿ ಹಾಗೂ ಚಿಕ್ಕಮಗಳೂರಿನಲ್ಲಿ ಭೂಕುಸಿತ ಉಂಟಾಗಿದೆ.
ಮಂಗಳೂರಿನ ಕದ್ರಿ ಶಿವಭಾಗ್ ಹಾಗೂ ಕಂಕನಾಡಿಯಲ್ಲಿ ಭಾರೀ ಮಳೆಗೆ ಬೃಹತ್ ತಡೆಗೋಡೆಗಳು ಉರುಳಿ ಬಿದ್ದು, ಹತ್ತಾರು ಮನೆಗಳಿಗೆ ಹಾನಿ ಉಂಟಾಗಿದೆ. ಶಿವಭಾಗ್ ಬಳಿಯ ಅಪಾರ್ಟ್ಮೆಂಟ್ ಹಿಂಬದಿಯ ಬೃಹತ್ ಕಾಂಕ್ರಿಟ್ ತಡೆಗೋಡೆ ಕುಸಿದು ಅಪಾರ್ಟ್ಮೆಂಟ್ನ 2 ಮನೆಗಳಿಗೆ ಹಾನಿಯಾಗಿದೆ.
ತಡೆಗೋಡೆ ಕುಸಿತ ಪರಿಣಾಮ 2 ಮನೆಯಲ್ಲಿದ್ದ 7 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಗುಡ್ಡದ ಮೇಲ್ಭಾಗ ಮತ್ತಷ್ಟು ಸಡಿಲಗೊಂಡಿದ್ದು, ಮತ್ತೆ ಕುಸಿಯುವ ಸಾದ್ಯತೆಯಿದೆ. ಅಲ್ಲದೇ ಗುಡ್ಡ ಕೂಗಳತೆಯ ದೂರದಲ್ಲಿ ಮನೆಗಳಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ 169ರ ವಾಮಂಜೂರು-ಗುರುಪುರ ನಡುವಿನ ಕೆತ್ತಿಕಲ್ ಗುಡ್ಡ ಕೂಡ ಕುಸಿಯುತ್ತಿದ್ದು, ಮೇಲ್ಭಾಗದಲ್ಲಿರುವ 9 ಮನೆಗಳು ನೆಲಸಮವಾಗುವ ಭೀತಿ ಎದುರಾಗಿದೆ. ಇನ್ನು ಕೆಲವೆಡೆ ಬೃಹತ್ ಮರಗಳು ಧರೆಗುರುಳಿವೆ.
ಇನ್ನು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರ್ ಸಮೀಪ ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ಗುಡ್ಡ ಕುಸಿದಿದ್ದು, ಶಿವಮೊಗ್ಗ-ಮಂಗಳೂರು ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ತುಂಗಾ ನದಿಗೂ ಪ್ರವಾಹ ಬಂದಿದ್ದು, ಶೃಂಗೇರಿ ಮಠದ ಬಳಿಯ ಕಪ್ಪೆಶಂಕರ ದೇವಾಲಯ ಜಲಾವೃತಗೊಂಡಿದೆ.
ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇಗೂರಿನಿಂದ ಕೊಗ್ರೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು, ಸ್ಥಳೀಯರ ಸಹಾಯದಿಂದ ಮರ ತೆರವು ಕಾರ್ಯ ನಡೆಯುತ್ತಿದೆ.
ಮುಳ್ಳಯ್ಯನಗಿರಿ , ದತ್ತಪೀಠಕ್ಕೆ ತೆರಳುವ ರಸ್ತೆಯಲ್ಲಿ ಕೂಡ ಬೃಹತ್ ಗಾತ್ರದ ಮರ ಬಿದ್ದಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸದ್ಯ ಸ್ಥಳಕ್ಕೆ ಗ್ರಾಮಾಂತರ ಪೊಲೀಸರ ಭೇಟಿ ನೀಡಿದ್ದು, ಸ್ಥಳೀಯರ ಸಹಾಯದಿಂದ ಮರ ಕಟ್ ಮಾಡಿ ತೆರವುಗೊಳಿಸುತ್ತಿದ್ದಾರೆ.