ಹಾಸನ : ನಗರದ ವಿದ್ಯಾಸೌಧ ಶಿಕ್ಷಣ ಸಂಸ್ಥೆಗಳಿಗೆ ಬಾಂಬ್ ಹಾಕಿ ಸ್ಪೋಟಿಸುವುದಾಗಿ ಅಪರಿಚಿತ ಕಿಡಿಗೇಡಿಯೊಬ್ಬ ಇಮೇಲ್ ಮೂಲಕ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ವಿಜಯನಗರ, ಇಂಡಸ್ಟ್ರಿಯಲ್ ಏರಿಯಾ ಹಾಗೂ ಕೆ.ಆರ್.ಪುರಂನಲ್ಲಿರುವ ವಿದ್ಯಾಸೌಧ ಪಬ್ಲಿಕ್ ಸ್ಕೂಲ್, ವಿದ್ಯಾಸೌಧ ಕಿಡ್ಸ್ ಮತ್ತು ವಿದ್ಯಾಸೌಧ ಕಾಲೇಜ್ಗೆ ಈ ಬೆದರಿಕೆ ಇಮೇಲ್ ಬಂದಿದೆ. ಮಂಜೇಗೌಡ ಎಂಬುವವರ ಮಾಲೀಕತ್ವದ ಈ ಶಿಕ್ಷಣ ಸಂಸ್ಥೆಗಳಿಗೆ ಇಂದು ಮಧ್ಯಾಹ್ನ 1 ಗಂಟೆಗೆ ಶಾಲಾ ಕಟ್ಟಡವನ್ನು ಸ್ಪೋಟಿಸುವುದಾಗಿ ಇಮೇಲ್ನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಹಾಸನ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಡರಾತ್ರಿ ಶಾಲಾ ಕಟ್ಟಡಗಳಿಗೆ ತೆರಳಿ ತೀವ್ರ ಪರಿಶೀಲನೆ ನಡೆಸಿದ್ದಾರೆ. ಈವರೆಗೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲವಾದರೂ, ತನಿಖೆ ಮುಂದುವರಿದಿದೆ. ಅಪರಿಚಿತನಿಂದ ಬಂದ ಈ ಬೆದರಿಕೆ ಇಮೇಲ್ನ ಮೂಲವನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಘಟನೆಯಿಂದ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಸಿಬ್ಬಂದಿಯಲ್ಲಿ ಆತಂಕ ಮೂಡಿದೆ.