ಬೆಂಗಳೂರು : ಚಿತ್ರದುರ್ಗದಲ್ಲಿ ಇಂದು ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ ಸಿಎಂ ಬೊಮ್ಮಾಯಿ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ರೈತರ ಬೆಳೆಹಾನಿಯ ಬಗ್ಗೆ ಮಾತನಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಳೆಯಿಂದ ರೈತರಿಗಾಗಿರುವ ಬೆಳೆಹಾನಿಯ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ʼವಾಣಿವಿಲಾಸ ಜಲಾಶಯದಿಂದ 1 ಟಿಎಂಸಿ ನೀರನ್ನು ಕುಡಿಯು ನೀರಿಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಯಿತು. ಹನಿ ನೀರಾವರಿ, ಕೆರೆ ತುಂಬಿಸುವ ಯೋಜನೆಗಳಿಂದ ಬರಗಾಲವನ್ನು ಹೆಚ್ಚು ಎದುರಿಸುವ ಈ ತಾಲ್ಲೂಕಿಗೆ ನೀಡಲಾಗುತ್ತಿದೆ. ಈ ಭಾಗದ ರೈತರಿಗೆ 73 ಸಾವಿರ ರೈತರಿಗೆ 105 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ಮನೆ ಹಾನಿ ಪರಿಹಾರವಾಗಿ 4.55 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದ ಪರಿಹಾರದ ಜೊತೆಗೆ ರಾಜ್ಯ ಸರ್ಕಾರದ ಮೊತ್ತವನ್ನು ಸೇರಿಸಿ ದುಪ್ಪಟ್ಟು ಪರಿಹಾರ ನೀಡಲಾಗುತ್ತಿದೆ. ಪರಿಹಾರದ ಮೊತ್ತ ಒಂದೂವರೆ ತಿಂಗಳೊಳಗಾಗಿ ಡಿಬಿಡಿ ಮುಖಾಂತರ ರೈತರಿಗೆ ತಲುಪಿಸಲಾಗುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ 5 ಲಕ್ಷ ಮನೆ ನಿರ್ಮಾಣ ಮಾಡಿದ್ದೇವೆ. ಈ ತಾಲ್ಲೂಕಿನಲ್ಲಿ ಸ್ಲಂ ಬೋರ್ಡ್ 700 ಮನೆಗಳನ್ನು ಹಾಗೂ ಗ್ರಾಮೀಣ ಪ್ರದೇಶದಲ್ಲಿ 1000 ಮನೆಗಳನ್ನು ನೀಡಿದ್ದೇವೆ ಎಂದರು.
ಹೊಸದುರ್ಗಕ್ಕೆ ಸ್ವಚ್ಛಭಾರತ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಯಲ್ಲಿ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಹಿಂದಿನ ಸರ್ಕಾರಗಳಿಗೆ ಈ ಪ್ರದೇಶಕ್ಕೆ ಕುಡಿಯುವ ನೀರನ್ನೂ ಕೊಡಲು ಸಾಧ್ಯವಾಗಲಿಲ್ಲ. ಕೇವಲ ಬಾಯಿಮಾತಿನಲ್ಲಿ ತಾಕತ್ತು ತೋರಿಸುವ ಬಹಳಷ್ಟು ಮಂದಿ ಇದ್ದಾರೆ. ಒಬ್ಬ ರಾಜಕಾರಣಿ ತನ್ನ ತಾಕತ್ತನ್ನು ಜನರ ಸಂಕಷ್ಟಗಳನ್ನು ದೂರ ಮಾಡುವುದರಲ್ಲಿ ತೋರಿಸಬೇಕು. ಜನರಿಗೆ ಕುಡಿಯುವ ನೀರು, ರಸ್ತೆ, ಬಡವರಿಗೆ ಮನೆ , ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದು ನಿಜವಾದ ತಾಕತ್ತು. ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, 6 ಲಕ್ಷ ರೈತಕೂಲಿ ಕಾರ್ಮಿಕರಿಗೆ ಈ ವರ್ಷ ವಿದ್ಯಾನಿಧಿಯನ್ನು ನೀಡಲಾಗುತ್ತಿದೆ.ನೇಕಾರರು, ಮೀನುಗಾರರು, ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ. ಎಸ್ ಸಿ ಎಸ್ಟಿ ಜನಾಂಗಕ್ಕೆ 75 ಯೂನಿಟ್ ಉಚಿತ ವಿದ್ಯುತ್, ಭೂಮಿ ಖರೀದಿಗೆ 20 ಲಕ್ಷ ರೂ.ನೀಡಲಾಗುತ್ತಿದೆ ಎಂದು ಮಾತನಾಡಿದರು.