Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ 8 ತಿಂಗಳ ಹಿಂದೆಯೇ ಮೃತಪಟ್ಟ ಶ್ರೀಮತಿ ರಾಜೇಶ್ವರಿಯವರು ಪೂಚಂತೇ ಪ್ರತಿಷ್ಠಾನದ ಸದಸ್ಯೆ.!

8 ತಿಂಗಳ ಹಿಂದೆಯೇ ಮೃತಪಟ್ಟ ಶ್ರೀಮತಿ ರಾಜೇಶ್ವರಿಯವರು ಪೂಚಂತೇ ಪ್ರತಿಷ್ಠಾನದ ಸದಸ್ಯೆ.!

0

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಮಿತಿಗಳು ನಿಜವಾಗಿಯೂ ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದೆಯೇ? ಪ್ರಸ್ತುತ ಸಂದರ್ಭದಲ್ಲಿ ಇಡೀ ಸರ್ಕಾರದ ಆಡಳಿತ ವೈಖರಿಯೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಆಗಿರುವ ಹಿನ್ನೆಲೆಯಲ್ಲಿ ನಿರ್ದಿಷ್ಟವಾಗಿ ಒಂದು ಇಲಾಖೆಯ ಬಗ್ಗೆ ಇಂತದ್ದೊಂದು ಪ್ರಶ್ನೆ ಎದುರಾಗಲು ಕಾರಣವೇನು? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಿರುವ ಯಡವಟ್ಟೇನು ಎಂಬುದು ಸಧ್ಯಕ್ಕೆ ಎದ್ದಿರುವ ಗಂಭೀರ ಪ್ರಶ್ನೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ವಿವಿಧ ಸಾಹಿತಿ, ಕವಿಗಳ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಷ್ಠಾನಗಳಿಗೆ ಸರ್ಕಾರ ಹೊಸ ಸಮಿತಿಗಳನ್ನು ರಚನೆ ಮಾಡಿದೆ. ಈ ಸಮಿತಿ ರಚನೆ ನಿಜವಾಗಿಯೂ ಸರಿಯಾದ ರೀತಿಯಲ್ಲಿ ನಡೆದಿದೆಯೇ ಎಂಬ ಪ್ರಶ್ನೆಗೆ ಆಯ್ಕೆಯಲ್ಲಿ ಆದ ಯಡವಟ್ಟುಗಳೇ ಉತ್ತರ ಕೊಡುತ್ತಿವೆ.

ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಹೆಸರಿನ ಪ್ರತಿಷ್ಠಾನಕ್ಕೆ ಅಧ್ಯಕ್ಷರನ್ನಾಗಿ ಚಿಂತಕರು, ಬರಹಗಾರರಾದ ನರೇಂದ್ರ ರೈ ದೇರ್ಲ ಅವರನ್ನು ಆಯ್ಕೆ ಮಾಡಲಾಗಿತ್ತು. ಸಧ್ಯ ಈ ಆಯ್ಕೆ ಬಗ್ಗೆ ನರೇಂದ್ರ ರೈ ದೇರ್ಲ ಅವರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ‘ಇಲ್ಲಿಯವರೆಗೂ ಇಲಾಖೆಯ ಯಾವ ಅಧಿಕಾರಿಗಳೂ ನನ್ನನ್ನು ಸಂಪರ್ಕಿಸಿ ಈ ಜವಾಬ್ದಾರಿಯ ಬಗ್ಗೆ ಪ್ರಸ್ತಾಪಿಸಿಲ್ಲ. ನನ್ನ ಹಿತೈಷಿಗಳು, ತೇಜಸ್ವಿಯವರ ಅಭಿಮಾನಿಗಳು ನನಗೆ ಕರೆ ಮಾಡಿ ಅಭಿನಂದಿಸಿದ ನಂತರವಷ್ಟೇ ನನಗೆ ನನ್ನ ಆಯ್ಕೆಯ ಬಗ್ಗೆ ತಿಳಿದಿದೆ. ನನ್ನ ಆಯ್ಕೆ ಮಾಡಿದ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಆದರೆ ಅನಿವಾರ್ಯ ಕಾರಣಗಳಿಂದ ಈ ಜವಾಬ್ದಾರಿ ನಿರ್ವಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನ ಈ ನಿರ್ಧಾರವನ್ನು ಅನ್ಯತಾ ಭಾವಿಸಬೇಡಿ..’ ಎಂದು ಆಯ್ಕೆಯನ್ನು ತಿರಸ್ಕರಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಿದ ಇನ್ನೊಂದು ದೊಡ್ಡ ಯಡವಟ್ಟು ಏನೆಂದರೆ ಪ್ರತೀ ಸಮಿತಿಗೂ ಒಬ್ಬ ಮಹಿಳಾ ಸದಸ್ಯರು ಕಡ್ಡಾಯ ಇರಬೇಕು ಎಂಬ ನಿಯಮದ ಅಡಿಯಲ್ಲಿ ಕಳೆದ 8 ತಿಂಗಳ ಹಿಂದೆಯೇ ಮೃತಪಟ್ಟಿದ್ದ ತೇಜಸ್ವಿಯವರ ಹೆಂಡತಿ, ಸಾಹಿತಿಗಳೂ ಆದ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರನ್ನು ಆಯ್ಕೆ ಮಾಡಿದ್ದಾರೆ. ಇದು ತೀವ್ರ ಅವಮಾನಕರ ಮತ್ತು ಸರ್ಕಾರದ ಬೇಜವಾಬ್ದಾರಿ ನಿಲುವಿಗೆ ಹಿಡಿದ ಕನ್ನಡಿಯಂತಿದೆ.

ಇಂತಹ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಾದರೆ ಆಯ್ಕೆ ಸಮಿತಿಗೆ ಬೇಕಾದ ಕನಿಷ್ಟ ವಿವೇಚನೆಯನ್ನೂ ಇವರು ಇಟ್ಟುಕೊಂಡಿಲ್ಲ. ಮಹಿಳಾ ಸದಸ್ಯರೊಬ್ಬರು ಬೇಕಲ್ಲಾ ಎಂಬ ಕಾಟಾಚಾರದ ಆಯ್ಕೆ ಇದಾಗಿದೆ.

ಯತಾ ರಾಜ ತಥಾ ಪ್ರಜಾ ಎಂಬಂತೆ.. ಸರ್ಕಾರ ಯಾವ ರೀತಿ ಕಾರ್ಯ ನಿರ್ವಹಿಸುತ್ತೋ ಅದರ ಕೆಳಗಿರುವ ಸಮಿತಿಗಳೂ ಅದೇ ರೀತಿ ತನ್ನ ಕೆಲಸ ಮಾಡುತ್ತವೆ. ಸಧ್ಯ ಸರ್ಕಾರವೇ ಹಳಿ ತಪ್ಪಿರುವಾಗ ಇಂತಹ ಸಮಿತಿಗಳ ಈ ಯಡವಟ್ಟುಗಳು ಅಂತಹ ಆಶ್ಚರ್ಯ ಏನೂ ಅಲ್ಲ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

You cannot copy content of this page

Exit mobile version