Friday, September 12, 2025

ಸತ್ಯ | ನ್ಯಾಯ |ಧರ್ಮ

ರಾವಣ ಅಂದ್ರೆ ಸಮಸ್ಯೆಯಲ್ಲ, ಕಸಬ್‌ ಅಂದ ಕೂಡಲೇ ಸಮಸ್ಯೆಯಾಗತ್ತೆ: ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಉವಾಚ

ಬೆಂಗಳೂರು: ಉಡುಪಿಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ, ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ‘ಕಸಬ್’ (ಭಯೋತ್ಪಾದಕ) ಎಂದು ಕರೆದಿರುವ ಆರೋಪದ ಮೇಲೆ ಶಿಕ್ಷಕನನ್ನು ಡಿಬಾರ್ ಮಾಡಿರುವುದರ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿಕೆ ನೀಡಿದ್ದು, ʼಇದು ಒಂದು ಸಣ್ಣ ವಿಷಯ ಇಲ್ಲಿ ರಾವಣ ಅಂದ್ರೆ ಸಮಸ್ಯೆಯಲ್ಲ, ಕಸಬ್‌ ಅಂದ ಕೂಡಲೇ ಸಮಸ್ಯೆಯಾಗತ್ತೆʼ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ʼಈ ಘಟನೆ ನಡೆದಿರುವುದು ದುರದೃಷ್ಟಕರ. ಶಿಕ್ಷಕರು ಆ ಹೆಸರನ್ನು ಬಳಸಬಾರದಿತ್ತು. ಆದರೆ ಇದು ಗಂಭೀರ ವಿಷಯವಲ್ಲ ಎಂದು ನಾನು ಭಾವಿಸುತ್ತೇನೆ ಏಕೆಂದರೆ, ಹಲವಾರು ಬಾರಿ, ನಾವು ವಿದ್ಯಾರ್ಥಿಗಳನ್ನು ‘ರಾವಣ’ ಮತ್ತು ‘ಶಕುನಿ’ ಎಂದು ಕರೆಯುತ್ತೇವೆ. ಆದಾಗ್ಯೂ, ಅದು ಯಾವುದೇ ಸಮಸ್ಯೆಯಾಗುವುದಿಲ್ಲ. ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ‘ಕಸಬ್’ ಎಂಬ ಹೆಸರು ಏಕೆ ಒಂದು ಸಮಸ್ಯೆಯಾಯಿತು ಎಂದು ನನಗೆ ತಿಳಿದಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಕೆಲವು ಹೆಸರುಗಳು ಏಕೆ ರಾಷ್ಟ್ರೀಯ ವಿಷಯವಾಗಿ ಮಾರ್ಪಟ್ಟಿವೆ ಎಂದು ನನಗೆ ಅರ್ಥವಾಗುತ್ತಿಲ್ಲʼ ಎಂದಿದ್ದಾರೆ.

ʼಏನಾಯಿತೋ ಅದು ಆಗಬಾರದಿತ್ತು. ಈ ಹೇಳಿಕೆ ನೀಡಿರುವುದಕ್ಕೆ ಸರ್ಕಾರವು ಅವರ ಮೇಲೆ ಕ್ರಮ ಕೈಗೊಂಡಿದೆ. ಶಿಕ್ಷಣ ಸಂಸ್ಥೆಯು ಶಿಕ್ಷಕನನ್ನು ಅಮಾನತುಗೊಳಿಸಿದೆʼ.ನಾವು ಸಾಮಾನ್ಯವಾಗಿ ಮಂತ್ರಿಗಳಿಗೆ ʼರಾವಣʼ ಮತ್ತು ʼಶಕುನಿʼಯಂತಹ ಹೆಸರುಗಳನ್ನು ಬಳಸುತ್ತೇವೆ. ಅದು ಏಕೆ ಸುದ್ದಿಯಾಗುವುದಿಲ್ಲ? ರಾವಣ ಎಂಬ ಹೆಸರಿಗೆ ಒಳ್ಳೆಯ ಅರ್ಥವಿದೆಯೇ? ಇಲ್ಲ, ಇದು ಒಂದು ಸಮಸ್ಯೆಯಾಗಿ ಪರಿಣಮಿಸುವುದಿಲ್ಲ. ನೀವು ʼಕಸಬ್ʼ ಬಗ್ಗೆ ಮಾತನಾಡಿದಾಗ ಅದು ಸಮಸ್ಯೆಯಾಗುತ್ತದೆʼ ಎಂದು ನಾಗೇಶ್ ತರ್ಕಿಸಿದ್ದಾರೆ.

ʼಪ್ರಾಧ್ಯಾಪಕ ಅದನ್ನು ಹೇಳಬಾರದಿತ್ತುʼ. ಏಕೆಂದರೆ ಯುವ ಮನಸ್ಸುಗಳಿಗೆ ನೋವಾಗಬಾರದು. ಆದರೆ ಈ ವಿಚಾರ ಮತ್ತು ಅದರ ಸುತ್ತಲಿನ ವಿವಾದಗಳು ವೋಟ್ ಬ್ಯಾಂಕ್ ರಾಜಕೀಯ ಎಂದು ಹೇಳಿದ್ದಾರೆ.

ಇದನ್ನು ಓದಿ: ʼನಾವು ಕಲಿಯುವುದಾದರೆ ಮಾತ್ರ…ʼ

ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಪ್ರೊಫೆಸರ್ ಒಬ್ಬ ಮುಸ್ಲಿಂ ವಿದ್ಯಾರ್ಥಿಯನ್ನು ತರಗತಿಯಲ್ಲಿ ‘ಭಯೋತ್ಪಾದಕ’ ಎಂದು ಕರೆದಿದ್ದದ್ದಾರೆ. ಈ ವೇಳೆ ವಿದ್ಯಾರ್ಥಿಯು ಪ್ರೊಫೆಸರ್ ಹೇಳಿಕೆಯನ್ನು ವಿರೋಧಿಸಿದ್ದು, ನೀವು ಹೀಗೆ ಒಂದು ಸಮುದಾಯವನ್ನು ಅವಹೇಳನಕಾರಿಯಾಗಿ ತಮಾಷೆ ಮಾಡುವಂತಿಲ್ಲ, ಇದು ತಮಾಷೆಯ ವಿಚಾರ ಅಲ್ಲಾ ಸರ್‌ ಎಂದು ತರಾಟೆಗೆ ತೆಗದುಕೊಂಡಿದ್ದಾನೆ. ನಂತರ ಶಿಕ್ಷಕನು ಆತನನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page