ಬೆಂಗಳೂರು ಜೂ 20: ಕೃಷಿಯಿಂದಲೇ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಕೃಷಿ ಪ್ರಗತಿ ಆದರೆ ಮಾತ್ರ ದೇಶದ ಆರ್ಥಿಕತೆ ಪ್ರಗತಿ ಹೊಂದುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಿಕೆವಿಕೆ ಸಭಾಂಗಣದಲ್ಲಿ “ವಿಜಯ ಕರ್ನಾಟಕ” ಪತ್ರಿಕೆ ಆಯೋಜಿಸಿದ್ದ “ಸೂಪರ್ ಸ್ಟಾರ್ ರೈತ” ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಧಕ ರೈತರನ್ನು ಪುರಸ್ಕರಿಸಿ ಮಾತನಾಡಿದರು.
ಶೇ70 ರಷ್ಟು ಗ್ರಾಮೀಣ ಭಾರತ ಕೃಷಿ ಮೇಲೆ ಅವಲಂಭಿತವಾಗಿದೆ. ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಭಿ, ಸ್ವಾಭಿಮಾನಿ ಆಗಲು ಕೃಷಿಕ ಸಮುದಾಯ, ರೈತ ಸಮುದಾಯ ಕಾರಣ ಎಂದರು.
ಕೃಷಿ ಅಧಿಕಾರಿಗಳು ರೈತರ ಅಭಿಪ್ರಾಯ ಪಡೆದು, ರೈತರ ಅನುಭವ ಆಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಹಕಾರ ನೀಡಬೇಕು. Lab to Land ಮತ್ತು Land to Lab ಕಡೆಗೆ ಕೃಷಿ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.
ಸಾಮಾಜಿಕ ನ್ಯಾಯ, ವರ್ಗ ರಹಿತ ಸಮಾಜ ಆಗಬೇಕಾದರೆ ರೈತರಿಗೆ ಆರ್ಥಿಕವಾಗಿ ಶಕ್ತಿ ನೀಡಬೇಕು. ಇಲ್ಲದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಸಾಮಾಜಿಕ ಬದಲಾವಣೆ ದಿಕ್ಕಿನಲ್ಲಿ ನಾವು ಗ್ಯಾರಂಟಿಗಳನ್ನು ರೂಪಿಸಿ ಜಾರಿ ಮಾಡಿದೆವು. ಇದರಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಮೋದಿಯವರೂ ಸುಳ್ಳು ಹೇಳಿದ್ದರು. ಸತ್ಯ ಏನು ಎಂದು ನಾಡಿನ ಜನತೆಗೆ ಮನವರಿಕೆಯಾಗಿದೆ ಎಂದರು.
ರೈತರ ಪಂಪ್ ಸೆಟ್ ಗಳಿಗೆ ವರ್ಷಕ್ಕೆ ನಮ್ಮ ಸರ್ಕಾರ 19000 ಕೋಟಿ ಸಬ್ಸಿಡಿ ನೀಡುತ್ತಿದೆ. ಕೃಷಿ ನೀರಾವರಿಗೆ 26000 ಕೋಟಿ ನೀಡಿದ್ದೇವೆ. ಆರ್ಥಿಕತೆ ದಿವಾಳಿಯಾಗಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ರೈತಪರ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲು ಸಾಧ್ಯವಿತ್ತೇ ಎಂದು ರೈತ ಸಮಾಜವನ್ನು ಪ್ರಶ್ನಿಸಿದರು.