ಕ್ಷರಧಿ ಎಂಬ ಹೆಸರಿನ 5 ವರ್ಷದ ಈ ಪುಟ್ಟ ಬಾಲೆಯ ಪ್ರತಿಭೆಯು 2025 ರ ಏಪ್ರಿಲ್ ತಿಂಗಳ ಸೋಮವಾರ 21 ನೇ ತಾರೀಖಿನಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಯಿತು. ನಮ್ಮ ದೇಶದ ಅತ್ಯಂತ ಅದ್ಭುತ ಮತ್ತು ಶ್ರೇಷ್ಠ ಸಾಧನೆಗಳನ್ನು ದಾಖಲಿಸುವ ಒಂದು ವಾರ್ಷಿಕ ಪುಸ್ತಕದಲ್ಲಿ ಕ್ಷರಧಿಯ ಹೆಸರು ಸೇರ್ಪಡೆಯಾಗಿರುವುದು ಬಹಳ ಹೆಮ್ಮೆಯ ವಿಚಾರ. ಈ ಬಾಲಕಿಯು ತಾಯಿಯ ಉದರದಲ್ಲಿರುವಾಗಲೇ ಸಂಗೀತ ಕಲೆಯನ್ನು ವರಪ್ರಸಾದವಾಗಿ ಪಡೆದುಕೊಂಡು ಬಂದಿದ್ದಾಳೆ. ಜನ್ಮದತ್ತವಾಗಿ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಈ ಮಗುವು ಎಲ್ಲರ ಮುದ್ದಿನ ಕಣ್ಮಣಿಯಾಗಿದ್ದಾಳೆ.
ಕ್ಷರಧಿಯ ಹುಟ್ಟೂರು ಬೆಂಗಳೂರು. ತಂದೆ ಶ್ರೀನಾಗ್, ತಾಯಿ ಮಾಧುರಿ. ಶ್ರೀನಾಗ್ ಮೂಲತಃ ಚಿಕ್ಕಬಳ್ಳಾಪುರದ ನಂದಿಹಳ್ಳಿಯವರು. ಮಾಧುರಿ ಬೆಂಗಳೂರಿನವರು. ಈ ದಂಪತಿಗಳು ತಮ್ಮ ಪುಟ್ಟ ಮಗಳೊಂದಿಗೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನೆಲೆಸಿದ್ದಾರೆ. ಈ ಮುದ್ದು ಬಾಲಕಿ ಬಸವೇಶ್ವರ ನಗರದ ‘ಯುರೋ ಕಿಡ್ಸ್’ ಶಾಲೆಯಲ್ಲಿ
ಯು.ಕೆ.ಜಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕ್ಷರಧಿಯ ಕುಟುಂಬದ ಬಹುತೇಕ ಎಲ್ಲರೂ ಸಂಗೀತದಲ್ಲಿ ಅಭಿರುಚಿಯುಳ್ಳವರೇ ಆಗಿದ್ದಾರೆ.
ಕ್ಷರಧಿ ಬಹು ಪ್ರಬುದ್ಧ ಬಾಲಕಿ. ಹುಟ್ಟಿನಿಂದಲೇ ಸಂಗೀತವನ್ನು ರಕ್ತಗತ ಮಾಡಿಕೊಂಡಿರುವ ಬಾಲೆ. ಪುಟ್ಟ ಮಗುವಾಗಿದ್ದಾಗಲೇ ಸಂಗೀತದ ಬಗ್ಗೆ ಒಲವು ತೋರುತ್ತಿದ್ದಳು ಕ್ಷರಧಿ. ಹಾಡುಗಳನ್ನು ಆಲಿಸದೆ ಈ ಮಗುವಿಗೆ ನಿದ್ರೆ ಬರುತ್ತಿರಲಿಲ್ಲವಂತೆ. ಏಳು ತಿಂಗಳ ಮಗುವಾಗಿದ್ದಾಗಲೇ ‘ಅ’ ಕಾರ ಮತ್ತು ‘ಹ’ ಕಾರವನ್ನು ಶ್ರದ್ಧೆಯಿಂದ ಆಲಿಸಿ ಅವುಗಳನ್ನು ಪುನರುಚ್ಚರಿಸುತ್ತಿದ್ದಳಂತೆ. ಕ್ಷರಧಿ ಮೂರು ವರ್ಷ ತುಂಬಿ ಮೂರು ತಿಂಗಳ ಬಾಲೆಯಾಗಿರುವಾಗಲೇ ವಿದುಷಿ ಆಶಾ ಮಂಜುನಾಥ್ ರವರಿಂದ ಕರ್ನಾಟಿಕ್ ಸಂಗೀತವನ್ನು ಕಲಿಯಲು ಪ್ರಾರಂಭಿಸಿದಳು. ನಾಲ್ಕು ವರ್ಷದವಳಿದ್ದಾಗಿನಿಂದ ನರಹರಿ ದೀಕ್ಷಿತ್ ರವರಿಂದ ಲಘು ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾಳೆ.

ಗುರು ಹಿರಿಯರ ಆಶೀರ್ವಾದದಿಂದ ಹಾಗೂ ಅಪ್ಪ ಅಮ್ಮ ಮತ್ತು ಕುಟುಂಬದ ಸದಸ್ಯರರೆಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ಕ್ಷರಧಿ ಇದುವರಿಗೂ 30 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾಳೆ. “ಈ ಪುಟಾಣಿಯು 14 ನಿಮಿಷ ಮತ್ತು 13 ಸೇಕೆಂಡ್ ಗಳಲ್ಲಿ 165 ಹಾಡುಗಳ ಗುನುಗುವಿಕೆಯನ್ನು ಆಲಿಸುವ ಮೂಲಕ ಹಾಡುಗಳನ್ನು ಗುರುತಿಸಿ ಇಂಡಿಯಾ ಬುಕ್ ರೆಕಾರ್ಡ್ಸ್ ನಲ್ಲಿ ಸಾಧಕಿಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ”. ಈ ಮಗುವಿಗೆ ಸಂಗೀತದ ಮೇಲಿರುವ ಪ್ರೀತಿ ಹಾಗೂ ಶ್ರದ್ಧೆ ಇಂದು ಅವಳನ್ನು ಈ ಮಟ್ಟಕ್ಕೆ ತಲುಪಿಸಿದೆ.
ಕ್ಷರಧಿಯನ್ನು ನಾನು ಮೊದಲಬಾರಿಗೆ ನೋಡಿದ್ದು ಹಾಗೂ ಸಮ್ಮೋಹನಗೊಳಿಸುವಂತಹಾ ಈ ಪುಟಾಣಿಯ ಹಾಡನ್ನು ಆಲಿಸಿದ್ದು ನಮ್ಮ ಬೆಂಗಳೂರಿನ ಆರ್ಗ್ಯಾನಿಕ್ ಗ್ರೀನ್ ಪಾತ್ ನಲ್ಲಿ. ನನ್ನ ಸ್ನೇಹಿತೆ ಮಮತಾ ಭಾಸ್ಕರ್ ರವರ ಜೊತೆ ಒಂದು ಭಾನುವಾರ ಅಲ್ಲಿ ನೆರವೇರುವ ಸಂಗೀತ ಕಾರ್ಯಕ್ರಮವನ್ನು ನೋಡಲು ಹೋಗಿದ್ದೆ. ಈ ಬಾಲೆಯು ಅಮ್ಮ ಮಾಧುರಿಯವರ ಜೊತೆ
ಬಂದಿದ್ದಳು. ಪುಟ್ಟ ಬಾಲಕಿಯಾದ ಕಾರಣ ಸದಾ ಅಮ್ಮ ಅಪ್ಪನ ಜೊತೆಯೇ ಇರುತ್ತಿದ್ದ ಕ್ಷರಧಿ ಸ್ವಲ್ಪ ಸಂಕೋಚ ಗುಣದವಳು ಕೂಡಾ. ನಾವು ಹತ್ತಿರ ಕರೆದಾಗ ದೂರದಿಂದಲೇ ಕದ್ದು ನೋಡುತ್ತಿದ್ದಳೇ ವಿನಃ ಬರುತ್ತಿರಲಿಲ್ಲ. ಚಾಕೊಲೇಟ್ ಕೊಟ್ಟರೆ ಅಮ್ಮ ಹೇಳುವವರೆಗೂ ತೆಗೆದುಕೊಳ್ಳುತ್ತಾ ಇರಲಿಲ್ಲ.
ಕ್ಷರಧಿ ಹಾಡುತ್ತಾಳೆ ಎಂದು ನನ್ನ ಗೆಳತಿ ಮಮತಾರವರು ಹೇಳಿದಾಗ ಮೊದಲು ನನಗೆ ನಂಬಿಕೆಯೇ ಬರಲಿಲ್ಲ. ಐದು ವರ್ಷದ ಮುದ್ದು ಮಗು ಬಾಲಗೀತೆಗಳನ್ನು ಹಾಡುವ ಈ ವಯಸ್ಸಿನಲ್ಲಿ ಹಾಡುಗಳನ್ನು ಹಾಡುತ್ತಾಳೆಯೇ!!!! ಎಂದು ಅಚ್ಚರಿಯುಂಟಾಯಿತು. ವೇದಿಕೆಯ ಮೇಲೆ ಮೈಕ್ ಹಿಡಿದು ನಿಂತ ಕ್ಷರಧಿಯನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ಹಿನ್ನೆಲೆ ಸಂಗೀತ ಪ್ರಾರಂಭವಾಗುವುದರ ಜೊತೆಗೆ ಪುಟ್ಟ ಕ್ಷರಧಿಯ ಸುಮಧುರ ಧ್ವನಿ ಕೇಳಿಸಿತು. ಖ್ಯಾತ ಗಾಯಕಿ ಬಿ.ಕೆ ಸುಮಿತ್ರಾರವರು ಹಾಡಿದ “ಸಂಪಿಗೆ ಮರದ ಹಸಿರೆಲೆ ನಡುವೆ” ಹಾಡನ್ನು ಸುಶ್ರಾವ್ಯವಾಗಿ ಹಾಡಿದಳು. ನಾವೆಲ್ಲರೂ ಮಂತ್ರಮುಗ್ಧರಾಗಿ ಕ್ಷರಧಿಯ ಹಾಡುಗಾರಿಕೆಯನ್ನು ಆಲಿಸುತ್ತಿದ್ದೆವು. ನಡುವೆ ಒಂದು ಕಡೆ ತಾಳ ತಪ್ಪುವ ಹಂತಕ್ಕೆ ಬಂದಾಗ ಸ್ವಲ್ಪವೂ ವಿಚಲಿತಳಾಗದೇ ಪುನಃ ಅತಿ ಸಮರ್ಥವಾಗಿ ತಾಳವನ್ನು ಸರಿದೂಗಿಸಿ ಹಾಡಿದಳು. ಅಂಜಿ ಹಾಡುವುದನ್ನು ನಿಲ್ಲಿಸಲಿಲ್ಲ. ಅಲ್ಲಿ ನೆರೆದಿದ್ದ ಸಂಗೀತ ಪ್ರಿಯರೆಲ್ಲರನ್ನೂ ಚಕಿತಗೊಳಿಸಿ ಮೂಕವಿಸ್ಮಿತರನ್ನಾಗಿ ಮಾಡಿದಳು ಈ ಬಾಲೆ. ಅರಿಯದೇ ನನ್ನ ಗೆಳತಿಯ ಕೊರಳಿನಿಂದ ಉದ್ಗಾರವೊಂದು ಹೊರಬಿತ್ತು…”ಈ ಮಗು ನಿಜಕ್ಕೂ ಸರಸ್ವತಿ ಪುತ್ರಿಯೇ ಸರಿ”…. ಎಂದು ಹೇಳುತ್ತಾ ಗದ್ಗದಿತರಾದರು. ಅವರ ಕಣ್ಣಿಂದ ಆನಂದಬಾಷ್ಪ ಹರಿಯಿತು.
ಕ್ಷರಧಿಯ ಹಾಡುಗಾರಿಕೆಯನ್ನು ಕೇಳಿ ನಾನು ರೋಮಾಂಚನಗೊಂಡೆ. ನನ್ನ ಗಂಟಲಿನಿಂದ ಶಬ್ದವೇ ಹೊರ ಬರಲಿಲ್ಲ. ಕ್ಷರಧಿಯ ಹಾಡನ್ನು ಕೇಳಿದ ಎಲ್ಲರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹೀಗೆ ಅನೇಕ ಬಾರಿ ಕ್ಷರಧಿಯ ಹಾಡನ್ನು ಕೇಳಿ ಮೂಕವಿಸ್ಮಿತಳಾಗಿದ್ದೇನೆ. ತನಗಿಂತ ಹಿರಿಯರು ಹಾಡುವಾಗಲೂ ಶ್ರದ್ಧೆಯಿಂದ ಗಮನಿಸಿ, ಅವರು ಲಯ,ತಾಳ ತಪ್ಪಿದರೆ ಒಡನೆಯೇ ಅದನ್ನು ಗುರುತಿಸುವ ಸೂಕ್ಷ್ಮಮತಿ ಈ ಬಾಲಕಿ. ನಮ್ಮ ಮಮತಾ ಸಂಗೀತ ಸುಧೆಯ ವಿಶೇಷ ಅತಿಥಿ ಈ ಬಾಲ ಪ್ರತಿಭೆ. ಕ್ಷರಧಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ ಒಂದು ವಿಶೇಷ ಕಳೆ ತುಂಬಿ ತುಳುಕಿದಂತೆ ಆಗುತ್ತದೆ. ಒಂದು ಪರಿಪೂರ್ಣತೆಯ ಭಾವ ನಮ್ಮಲ್ಲಿ ಮೂಡುತ್ತದೆ. ಇಡೀ ಕುಟುಂಬವೇ ನಮ್ಮ ಕಾರ್ಯಕ್ರಮಕ್ಕೆ ಆಗಮಿಸುತ್ತದೆ. ಮಲ್ಲೇಶ್ವರದ ಲೀಲಾದ್ರಿ ಸಭಾಂಗಣದಲ್ಲಿ ನಡೆದ ಮಮತಾ ಸಂಗೀತ ಸುಧೆಯ ಕಾರ್ಯಕ್ರಮದಲ್ಲಿ ಕ್ಷರಧಿಯು ಹಾಡಿದಾಗ ಅವಳ ಸೊಗಸಾದ ಗಾಯನಕ್ಕೆ ಬೆರಗಾಗಿ ಸಭಾಂಗಣದ ಮಾಲಿಕರು ವೇದಿಕೆಯಲ್ಲಿ ಮಗುವನ್ನು ಆಹ್ವಾನಿಸಿ ಸನ್ಮಾನ ಮಾಡಿದ್ದಾರೆ. ಈ ಪುಟ್ಟ ಬಾಲಕಿಯನ್ನು ಹಲವು ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳಲ್ಲಿ ಸನ್ಮಾನಿಸಿದ್ದಾರೆ.
ವೇದಿಕೆಯ ಭಯವಿಲ್ಲದೇ, ಯಾವುದೇ ಅಂಜಿಕೆ ಆತಂಕವಿಲ್ಲದೇ ಸುಶ್ರಾವ್ಯವಾಗಿ ಹಾಡುವ ಈ ಬಾಲೆಯಿಂದ ಸಂಗೀತ ಪ್ರೇಮಿಗಳು ಕಲಿಯುವುದು ಬಹಳವಿದೆ. ಕ್ಷರಧಿ ಪ್ರತಿಯೊಂದು ಹಾಡನ್ನೂ ಬಹಳ ತನ್ಮಯತೆಯಿಂದ ಹಾಡುತ್ತಾಳೆ. ಈ ಮಗುವಿನ ಪ್ರತಿಭೆ ಅಗಾಧವಾದದ್ದು. ಈ ಬಾಲ ಪ್ರತಿಭೆ ನಮ್ಮ ಬೆಂಗಳೂರಿನವಳು ಎನ್ನುವುದು ನಾವು ಹೆಮ್ಮೆ ಪಡಬೇಕಾದ ವಿಚಾರ. ಮುಂದೊಂದು ದಿನ ಈ ಮಗು ಒಂದು ಸುಪ್ರಸಿದ್ಧ ಗಾಯಕಿಯಾಗಿ ಹೊರ ಹೊಮ್ಮಲಿ. ಈಕೆಯ ಪ್ರತಿಭೆ ನಾಲ್ಕೂ ದಿಕ್ಕುಗಳಲ್ಲಿ ಪ್ರಸರಣಗೊಳ್ಳಲಿ. ಕ್ಷರಧಿಯ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಎಲ್ಲರೂ ಹಾರೈಸೋಣ. ನಮ್ಮ ನಾಡಿನ ಈ ಬಾಲ ಪ್ರತಿಭೆಯನ್ನು ಸಂಪೂರ್ಣ ಸಹಕಾರ ನೀಡಿ ಬೆಳೆಸೋಣ. ವಿದ್ಯಾಭ್ಯಾಸದ ಜೊತೆ ಜೊತೆಗೇ ಈ ಬಾಲೆಯ ಸಂಗೀತಾಭ್ಯಾಸವೂ ನಿರಂತರವಾಗಿ ನಡೆಯುತ್ತಿರಲಿ.
ರುಕ್ಮಿಣಿ.ಎಸ್.ನಾಯರ್
ಬೆಂಗಳೂರು.