Home ವಿಶೇಷ ʼರಿಶಿ ಸುನಕ್‌ʼ ಬಗ್ಗೆ ನಿಮಗೆ ತಿಳಿಯದ ರಹಸ್ಯಗಳು

ʼರಿಶಿ ಸುನಕ್‌ʼ ಬಗ್ಗೆ ನಿಮಗೆ ತಿಳಿಯದ ರಹಸ್ಯಗಳು

0

ಇನ್ಫೋಸಿಸ್ ನಾರಯಣಮೂರ್ತಿಯ ಅಳಿಯ ರಿಶಿ ಸುನುಕ್ ಬ್ರಿಟನ್ನಿನ ಪ್ರಧಾನಿಯಾಗಿದ್ದು ಭಾರತೀಯರ ಹೆಮ್ಮೆ ಎಂಬ ವಿವೇಚನೆರಹಿತ ಮಾಧ್ಯಮಗಳ ಆರ್ಭಟಗಳು ಈ ಸದ್ಯಕ್ಕೆ ಕಡಿಮೆಯಾಗುವ ಯಾವುದೇ ಸೂಚನೆ ಇಲ್ಲ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮೂಲದ, ಆದರೆ ಆಫ಼್ರಿಕಾದಲ್ಲಿ ನೆಲಸಿದ್ದ ತಂದೆತಾಯಿಗಳು ಬ್ರಿಟನ್ನಿಗೆ ವಲಸೆ ಹೋದ ಮೇಲೆ ಜನಿಸಿದ ರಿಶಿಯವರು ಇನ್ಫೋಸಿಸ್ ನಾರಾಯಣಮೂರ್ತಿಯವರ ಮಗಳನ್ನು ಮದುವೆಯಾಗಿದ್ದಾರೆ. ಇಷ್ಟುಬಿಟ್ಟರೆ ಅವರ ಭಾರತೀಯ ಸಂಬಂಧಗಳು ಬೇರೆ ಏನೂ ಇಲ್ಲ.

ಅದೇನೇ ಇರಲಿ. ಅಪ್ಪಟ ಭಾರತೀಯಳಾದ ಕರ್ನಾಟಕದ ದಲಿತ ಯುವ ಪ್ರತಿಭೆ ಅಶ್ವಿನಿ ವಿಶ್ವಸಂಸ್ಥೆಯಲ್ಲಿ ಜನಾಂಗೀಯ ತಾರತಮ್ಯ ಅಧ್ಯಯನದ ಪ್ರಮುಖ ಸ್ಥಾನ ಪಡೆದಾಗ ಒಂದಕ್ಷರವನ್ನು ಬರೆಯದ ಪತ್ರಿಕೆಗಳು-ಮಾಧ್ಯಮಗಳು ಅಭಾರತೀಯ ರಿಶಿ ಸುನುಕ್ ಬ್ರಿಟನ್ನಿನ ಪ್ರಧಾನಿಯಾದರೆ ಭಾರತವು ಬ್ರಿಟನ್ನನ್ನು ವಶಪಡಿಸಿಕೊಂಡಿತೆಂಬಷ್ಟು ಉತ್ಪ್ರೇಕ್ಷೆ ಮಾಡುತ್ತಿವೆ.

ಸಹಜವಾಗಿಯೇ, ಸೋನಿಯಾ ಗಾಂಧೀಯವರ ವಿದೇಶಿ ಮೂಲವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ್ದ ಬಿಜೆಪಿ ಈಗ ಹೇಗೆ ಬ್ರಿಟನ್ನಿನ್ನಲ್ಲಿ ರಿಶಿ ಪ್ರಧಾನಿಯಾದದ್ದನ್ನು ಸಂಭ್ರಮಿಸುತ್ತಾರೆ ಎಂಬ ಮುಜುಗರದ ಪ್ರಶ್ನೆಗೆ ಕಿವುಡಾಗಿದೆ…

ವಾಸ್ತವವಾಗಿ, ಬ್ರಿಟಿಷರು ಭಾರತವನ್ನು ಆಳುತ್ತಿರುವಾಗ ಬ್ರಿಟನ್ನಿನ ಹಡಗು ಹತ್ತಿಕೊಂಡು ವ್ಯಾಪಾರಿಗಳಾಗಿ, ಆಡಳಿತ ಸಹಾಯಕರಾಗಿ, ಜೀತಗಾರರಾಗಿ, ಕೂಲಿಗಳಾಗಿ, ವ್ಯಾಪಾರಿಗಳಾಗಿ, ಬ್ರಿಟಿಶ್ ಸಾಮ್ರಾಜ್ಯ ಇದ್ದಕಡೆಯೆಲ್ಲಾ ವಲಸೆ ಹೋದ ಭಾರತೀಯರು ಕಳೆದ ನೂರು ವರ್ಷಗಳಲ್ಲಿ ಆಯಾ ದೇಶಗಳ ಪ್ರಜಾತಾಂತ್ರಿಕ ರಾಜಕಾರಣದ ಭಾಗವಾಗಿ ವ್ಯಾಪಾರ, ರಾಜಕಾರಣ, ಉದ್ಯಮಗಳಲ್ಲಿ ಬೆಳೆದಿದ್ದಾರೆ.

ಕೆಲವು ವರ್ಗಗಳು ಅದರಲ್ಲು ಪಕ್ಕಾ ವ್ಯಾಪಾರಿ ವರ್ಗಗಳು ವಸಾಹತುಶಾಹಿಗಳ ಹಾಗೂ ಆಯಾ ದೆಶಗಳ ಶೋಷಕರ ಪರವಾಗಿದ್ದುಕೊಂಡು ಸ್ಥಳೀಯರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಅದನ್ನೇ ಬೆಳವಣಿಗೆ ಎಂದು ಮಾಧ್ಯಮಗಳು ಬಣ್ಣಿಸುತ್ತವೆ.

ಇನ್ನುಳಿದವರು ಅಲ್ಲಿಯ ದೇಶವಾಸಿಗಳೇ ಆಗಿ ನೋವು-ನಲಿವು-ಹೋರಾಟಗಳಲ್ಲಿ ಸರಿಸಮವಾಗಿ ಬೆರೆತುಹೋಗಿದ್ದಾರೆ. ಹೋರಾಟಗಳಲ್ಲಿ ಹುತಾತ್ಮರು ಆಗಿದ್ದಾರೆ. ಇದು ಮಾಧ್ಯಮಗಳಲ್ಲಿ ಸುದ್ದಿಯೂ ಅಗುವುದಿಲ್ಲ.

ಆದರೆ ರಿಶಿ ಸುನುಕ್ ವಿಷಯದಲ್ಲಿ ಹೆಮ್ಮೆ ಪಡುವುದಕ್ಕಿಂತ ಆತಂಕ ಪಡಬೇಕಾದ ಹಲವು ವಿಷಯಗಳಿವೆ. ರಿಷಿಯವರು ಬ್ರಿಟನ್ನಿನ ಬಂಡವಾಳಶಾಹಿ ಹಾಗೂ ಭಾರತದ ಬ್ರಾಹ್ಮಣಶಾಹಿಯ ಎರಕದಲ್ಲಿ ಅದ್ದು ತೆಗೆದಂತಿದ್ದಾರೆ.

ಹೀಗಾಗಿಯೇ ಅವರನ್ನು ಬ್ರಿಟನ್ನಿನ ಕಾರ್ಪೊರೇಟುಗಳು, ಭಾರತೀಯ ಮೋದಿಗಳು ಇಬ್ಬರು ಅಬ್ಬರದಿಂದ ಸ್ವಾಗತಿಸಿದ್ದಾರೆ. ಅದರೆ ಬ್ರಿಟನ್ನಿನ ಬಡಜನರು, ಇತರ ವರ್ಣೀಯರು, ಅಲ್ಪಸಂಖ್ಯಾತರು, ನಿರಾಶ್ರಿತರು, ಸುನುಕರ ಆಯ್ಕೆಯಿಂದ ಕಂಗಾಲಾಗಿದ್ದಾರೆ.

ಬ್ರಿಟನ್ನಿನ ಅತ್ಯಂತ ಪ್ರತಿಗಾಮಿ ಕನ್ಸರ್ವೇಟಿವ್ ಪಕ್ಷದ ಪ್ರಧಾನಿಯಾಗಿರುವ ರಿಶಿ ಸುನುಕ್ ಪ್ರತಿನಿಧಿಸುತ್ತಿರುವುದು ಅತ್ಯಂತ ಜನವಿರೋಧಿ ಆರ್ಥಿಕ ಹಾಗೂ ರಾಜಕೀಯ ನೀತಿಗಳನ್ನು.
ಇದರ ಬಗ್ಗೆ ಬ್ರಿಟನ್ನಿನ South Asia Solidarity Group- ದಕ್ಷಿಣ ಏಷಿಯ ಸೌಹಾರ್ದ ಸಂಘಟನೆ ಯು ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
(https://southasiasolidarity.org/rishi-sunak-will-intensify-racism-and-poverty-and-strengthen-hindutva-fascism-in-the-uk-and-globally)

ಆ ಹೇಳಿಕೆಯ ಕನ್ನಡಾನುವಾದ ಕೆಳಗಿದೆ.

ಈ ಸಂಘಟನೆ ಬ್ರಿಟನ್ನಿನಲ್ಲಿ ಕಳೆದ ಹಲವಾರು ದಶಕಗಳಿಂದ ಕೆಲಸ ಮಾಡುತ್ತಿರುವ ಏಷಿಯಾ ದೇಶಗಳ ಮೂಲದವರ ಸಂಘಟನೆಯಾಗಿದೆ.

ಈ ಸಂಘಟನೆಯು ಬಡದೇಶಗಳ ಮೇಲೆ ಸಾಮ್ರಾಜ್ಯಶಾಹಿ ಆಕ್ರಮಣ, ಯುದ್ಧ, ನವ ಉದಾರವಾದಿ ಜಾಗತಿಕ ಬಂಡವಳಶಾಹಿ ಆಕ್ರಮಣ ಗಳ ವಿರುದ್ಧ ಧ್ವನಿ ಎತ್ತುತ್ತಿರುವುದಲ್ಲದೇ, ಏಷಿಯಾ ದೇಶಗಳಲ್ಲಿ ಜನರು ಇದರ ಬಗ್ಗೆ ನಡೆಸುತ್ತಿರುವ ಹೋರಟಗಳಿಗೆ ಸೌಹಾರ್ದ ಹಾಗೂ ಬೆಂಬಲವನ್ನು ನೀಡುತ್ತಾ ಬಂದಿದೆ.

ಎಲ್ಲಾ ದೇಶದ ಶೋಷಕರು ಜನಶತ್ರುಗಳೇ
ಎಲ್ಲಾ ದೇಶದ ಹೋರಾಟಗಾರರು ಬಂಧುಗಳೇ

ಎಂಬ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಈ ಸಂಘಟನೆ ರಿಶಿ ಸುನುಕರ ನೀತಿಗಳು ಮತ್ತು ಧೋರಣೆಗಳು ಬ್ರಿಟನ್ನಿನ ಬಡವರಿಗೆ ಹಾಗೂ ಜಾಗತಿಕ ಪ್ರಜಾತಂತ್ರಕ್ಕೆ ಎಷ್ಟು ಅಪಯಕಾರಿ ಎಂಬುದನ್ನು ಈ ಹೇಳಿಕೆಯಲ್ಲಿ ವಿವರಿಸಿವೆ.

ಬಿಡುವು ಮಾಡಿಕೊಂಡು ಓದಿ..

” South Asia Solidarity Group-ದಕ್ಷಿಣ ಏಶಿಯಾ ಸೌಹರ್ದ ಸಂಘಟನೆ”

ರಿಶಿ ಸುನುಕ್ ಅವರು ಬಡತನ ಮತ್ತು ಜನಾಂಗೀಯವಾದವನ್ನು ಹೆಚ್ಚಿಸುತ್ತಾರೆ ಮತ್ತು ಯುನೈಟೆಡ್ ಕಿಗ್‌ಡಂನಲ್ಲು (UK) ಹಾಗೂ ಜಗತ್ತಿನ ಇತರೆಡೆಗಳಲ್ಲು ಹಿಂದೂತ್ವ ಫ಼್ಯಾಸಿಸಂ ಅನ್ನು ಗಟ್ಟಿಗೊಳಿಸುತ್ತಾರೆ!

ರಿಶಿ ಸುನುಕ್ ಅವರನ್ನು ಯುನೈಟೆಡ್ ಕಿಂಗ್‌ಡಂ (ಯು.ಕೆ.)ನ ಮೊಟ್ಟ ಮೊದಲ ಏಶಿಯನ್ ಪ್ರಧಾನಿ ಎಂದು ಕೊಂಡಾಡಲಾಗುತ್ತಿದೆ. ಹಾಗಿದ್ದಲ್ಲಿ ಆತನ ನಿಜವಾದ ಅಸ್ಮಿತೆ ಏನು ಮತ್ತು ಅದು ಆತನ ಗೃಹ ಹಾಗೂ ವಿದೇಶಿ ನೀತಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು?

ರಿಶಿ ಸುನುಕ್ ಅವರು ಯು.ಕೆಯ ಸಂಸದರಲ್ಲೇ ಅತಿ ಶ್ರೀಮಂತ ಸಂಸದ. ಚಿಕ್ಕಂದಿನಲ್ಲಿ ಅತ್ಯಂತ ದುಬಾರಿ ಖಾಸಗಿ ಶಿಕ್ಷಣವನ್ನು ಪಡೆದುಕೊಂಡವರು ಮತ್ತು ಅ ನಂತರ ಅಕ್ಸ್‌ಫ಼ರ್ಡ್ ಮತ್ತು ಗೋಲ್ದ್‌ಮಾನ್ ಸಾಶ್ಸ್ ನಲ್ಲಿ ಕಲಿತವರು. ಇವೆಲ್ಲದರಿಂದ ಅವರು ಬ್ರಿಟಿಶ್ ಸಮಾಜದ ಪ್ರತಿಷ್ಟಿತ ವರ್ಗಗಳಲ್ಲಿ ಮನೆಮಾಡಿರುವ ದುರಹಂಕಾರಿ ಮೇಲರಿಮೆಗಳನ್ನು ಹಾಗೂ ಬಡವರು ಹಾಗೂ ದುರ್ಬಲರ ಬಗ್ಗೆ ತಿರಸ್ಕಾರ ಹಾಗೂ ದ್ವೇಷಗಳನ್ನು ಮೈಗೋಡಿಸಿಕೊಂಡಿದ್ದಾರೆ.

2008ರ ಹಣಕಾಸು ಕುಸಿತದ ಸಂದರ್ಭದಲ್ಲಿ ಬ್ರಿಟನ್ ಸರ್ಕಾರವು ಕಟ್ಟುನಿಟ್ಟಿನ ಆರ್ಥಿಕ ನೀತಿಗಳನ್ನು ಜಾರಿ ಮಾಡಿದ್ದರ ಪರಿಣಾಮವಾಗಿ ಯುನೈಟೆಡ್ ಕಿಂಗ್‌ಡಂ ನಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಆದರೆ ಅದೇ ಸಂದರ್ಭದಲ್ಲೇ ರಿಶಿ ಸುನುಕ್ ಅವರು ಅಪಾರ ಸಂಪತ್ತನ್ನು ಸಂಪಾದಿಸಿದರು.
ಕೋವಿಡ್ ಕಾಲದಲ್ಲಿ ಬ್ರಿಟನ್ ಸರ್ಕಾರದ ಹಣಕಾಸು ಮಂತ್ರಿಯಾಗಿ (ಚಾನ್ಸಲರ್) ದ್ದ ರಿಶಿ ಸುನುಕ್ ಅವರು ಕೋವಿಡ್ ಸಾಂಕ್ರಾಮಿಕದ ಸಂದರ್ಭವನ್ನು ನಿಭಾಯಿಸಲು ಅತ್ಯಂತ ಬಡಕುಟುಂಬಗಳಿಗೆ ಅನುಕೂಲಕಾರಿಯಾಗಿದ್ದ ಸಾರ್ವತ್ರಿಕ ಸಾಲ ಯೋಜನೆಯನ್ನು ವಾರಕ್ಕೆ 20 ಪೌಂಡುಗಳಷ್ಟು ಹೆಚ್ಚಿಸುವ ಯೋಜನೆಯನ್ನು ಸ್ಥಗಿತಗೊಳಿಸಿದ್ದರು.
(https://www.opendemocracy.net/en/rishi-sunak-could-become-pm-heres-what-he-doesnt-want-you-to-know)

ಈ ಜುಲೈನಲ್ಲಿ ಈ ಸಾರ್ವತ್ರಿಕ ಸಾಲ ಕಡಿತವನ್ನು ಘೋಶಿಸುವ ಹೊತ್ತಿನಲ್ಲಿ ರಿಷಿ ಸುನುಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ತಾವು 2015ರಲ್ಲಿ 1.5 ಮಿಲಿಯನ್ ಪೌಂಡ್ ಕೊಟ್ಟು ಯಾರ್ಕ್ ಶೈರ್ ನಲ್ಲಿ ಖರೀದಿಸಿದ್ದ ಐಶರಾಮಿ ವಿಲ್ಲಾದಲ್ಲಿ ಈಜುಕೊಳ, ಜಿಮ್ ಮತ್ತು ಟೆನ್ನಿಸ್ ಕೋರ್ಟನ್ನು ನಿರ್ಮಿಸುವ ಯೋಜನೆಯನ್ನು ರೂಪಿಸುತ್ತಿದ್ದರು. ರಿಶಿ ಅವರ ಹೆಂಡತಿ ಅಕ್ಷತಾ ಮೂರ್ತಿಯವರು ಕೋಟ್ಯಾಧಿಪತಿ ಮತ್ತು ಇನ್ಫೋಸಿಸ್ ನ ಸಹ ಸಂಸ್ಥಾಪಕರಾದ ನಾರಾಯಣಮೂರ್ತಿಯವರ ಮಗಳಾಗಿದ್ದು ಅದರ ವ್ಯವಹಾರದಲ್ಲೂ ಪಾಲುದಾರರಾಗಿದ್ದಾರೆ.

ಆಡಂ ಬೈಶಾಸ್ಕಿ ಯವರು ಬರೆಯುವಂತೆ ಸುನುಕ್ ಅವರು ಯುನೈಟೆಡ್ ಕಿಂಗ್‌ಡ ನ ಹಲವಾರು ಕಡೆ ಕೋಟ್ಯಾಂತರ ಪೌಂಡ್ ಬೆಲೆಬಾಲುವ ಐಷರಾಮಿ ಬಂಗಲೆಗಳನ್ನು ಹೊಂದಿರುವುದು ಮಾತ್ರವಲ್ಲದೆ ಕಪ್ಪುಹಣದ ಕೇಂದ್ರವಾಗಿರುವ ಕೇಮ್ಯಾನ್ ಐಲಾಂಡ್‌ ನಲ್ಲೂ ತಮ್ಮ ಅಪಾರ ಸಂಪತ್ತನ್ನು ಕೂಡಿಟ್ಟಿದ್ದಾರೆ.

ಅಷ್ಟು ಮಾತ್ರವಲ್ಲ ಈ ಹಿಂದೆ ಲೇಬರ್ ಪಾರ್ಟಿಯು ಯು.ಕೆಯ ನಗರ ಪ್ರದೇಶಗಳಲ್ಲಿ ಬಡವರಿಗೆಂದು (ಅವರಲ್ಲಿ ಬಹಳಷ್ಟು ಜನ ಏಷಿಯನ್ನರು) ವಿತರಿಸಿದ್ದ ಸಂಪನ್ಮೂಲಗಳನ್ನು ಕಸಿದುಕೊಂಡು ವಿಲಾಸಿ ವರ್ಗಗಳ ಐಷಾರಾಮಕ್ಕೆ ಒದಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ತಮ್ಮ ವರ್ಗಮಿತ್ರರಿಗೆ ಭರವಸೆ ನೀಡಿದ್ದಾರೆ.

ರಿಶಿಯವರ ಟೋರಿ (ಕನ್ಸರ್ವೇಟಿವ್) ಪಕ್ಷವು ಸಮಾಜದ ವೈವಿಧ್ಯತೆಯನ್ನು ಎತ್ತಿ ಹಿಡಿಯುವ ತಮ್ಮ ನಿಲುವಿನ ಬಗ್ಗೆ ಎಷ್ಟೇ ಕೊಚ್ಚಿಕೊಂಡರೂ ರಿಶಿ ಸುನುಕ್ ಅವರು ಮಾತ್ರ ಇತರ ವರ್ಣೀಯರ ಸ್ನೇಹಿತರಂತೂ ಅಲ್ಲವೇ ಅಲ್ಲ.

ಬ್ರಿಟನ್ನಿನಲ್ಲಿ ಕಪ್ಪು ಜನರನ್ನು ಮತ್ತು ಮುಸ್ಲಿಮರನ್ನು ಗುರಿ ಮಾಡಿ ಬ್ರಿಟನ್ನಿನ ಪೊಲೀಸರು ನಡೆಸುವ ಜನಾಂಗೀಯ ಮತ್ತು ಹಿಂಸಾತ್ಮಕ Stop And Search ( ಬೇಕಾಬಿಟ್ಟಿ ತಡೆಯುವ, ಶೋಧಿಸುವ) ನೀತಿಗಳನ್ನು ಇನ್ನಷ್ಟು ಹೆಚ್ಚಿಸುವ ಭರವಸೆಯನ್ನು ನೀಡಿದಾರೆ. ರಾಜಕೀಯ ಸರಿತನಗಳು ತನ್ನ ದಾರಿಗೆ ಅಡ್ಡವಾಗುವುದಿಲ್ಲ ಎಂದು ಘೋಷಿಸಿರುವ ರಿಷಿಯವರು ಮುಸ್ಲಿಮರನ್ನು ವಿನಾಕಾರಣ ನಿಂದಿಸುವ ತೀವ್ರ ಬಲಪಂಥೀಯ ಹೇಳಿಕೆಗಳಾದ “ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮರು” ಎಂಬ ಹೇಳಿಕೆಯನ್ನು ಪದೇಪದೇ ಬಳಸುತ್ತಾರೆ.
(https://www.express.co.uk/news/politics/1651595/Rishi-sunak-child-groomers-conservatives-grooming-gangs)

ಇದರ ಜೊತೆಗೆ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡಿರುವ ಹಾಗೂ ತನ್ನ ಇಸ್ಲಾಮೋಫ಼ೋಬಿಕ್ (ಮುಸ್ಲಿಮರನ್ನು ದುರುಳೀಕರಿಸುವ) ಧೋರಣೆಯಿಂದಾಗಿ ತೀವ್ರ ಟೀಕೆಗೊಳಗಾಗಿದ್ದ PREVENT ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸುವ ಭರವಸೆಯನ್ನೂ ನೀಡಿದ್ದಾರೆ.
(https://www.independent.co.uk/news/uk/politics/rishi-sunak-extremism-terrorism-prevent-b2137158.html)

ಇನ್ನು ನಿರಾಶ್ರಿತ ವಲಸೆಗಾರರ ಪ್ರಶ್ನೆಗೆ ಬರುವುದಾದರೆ ಅವರನ್ನು ರವಾಂಡಾ ದೇಶದ ಮೃತ್ಯು ಸದೃಶ ಶಿಬಿರಗಳಿಗೆ ಅಟ್ಟಿಬಿಡಬೇಕೆಂಬ ಪ್ರೀತಿ ಪಟೇಲರ ಫ಼್ಯಾಸಿಸ್ಟ್ ನೀತಿಯನ್ನು ಅಪ್ಪಿಕೊಳ್ಳಲು ಅವರು ತುದಿಗಾಲಲ್ಲಿ ನಿಂತಿದ್ದಾರೆ.

ವಿಪರ್ಯಾಸವೆಂದರೆ ರಿಶಿ ಸುನುಕರ ಪೂರ್ವಜರೇ ನಿರಾಶ್ರಿತರಾಗಿ ಯುನೈಟೆಡ್ ಕಿಂಗ್‌ಡಂ ಗೆ ಬಂದಿದ್ದರು. ಮತ್ತು ಈ ರವಾಂಡಾ ನೀತಿಯು ದುಬಾರಿಯಾಗಿದ್ದು ಪರಿಣಾಮಕಾರಿಯಾಗಿಲ್ಲವೆಂಬುದು ಈಗಾಗಲೇ ರುಜುವಾತಾಗಿದೆ.

ಇದಲ್ಲದೆ ರಿಷಿ ಸುನುಕ್ ಅವರು ಮೋದಿ ಅಳ್ವಿಕೆಗೆ ಸನಿಹವಾಗಿರುವುದು ಕೂಡ ಸ್ಪಷ್ಟವಾಗಿದೆ. ಜಗತ್ತಿನಾದ್ಯಂತ ಹಿಂದೂತ್ವವಾದಿ ಶಕ್ತಿಗಳೊಂದಿಗೆ ಮಿತ್ರತ್ವ ಹೊಂದಿರುವ ಇಸ್ರೇಲಿನೊಂದಿಗೆ ಅವರಿಗಿರುವ ಸ್ನೇಹ ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ರಿಷಿ ಸುನುಕ್ ಅವರು ಜೆರುಸೊಲೆಮ್ ಅನ್ನು ಇಸ್ರೇಲಿನ ರಾಜಧಾನಿಯಾಗಿ ಜಗತ್ತು ಒಪ್ಪಿಕೊಳ್ಳಬೇಕೆಂಬುದನ್ನು ಬೆಂಬಲಿಸುತ್ತಾರೆ.

ಅಲ್ಲದೇ ಇಸ್ರೇಲಿನ ಘಾತುಕತನವನ್ನು ಜಗತ್ತಿನಾದ್ಯಂತ ಬಯಲು ಮಾಡುತ್ತಿರುವ Boycott, Disinvest, Sanction(BDS)- (ಇಸ್ರೇಲನ್ನು-ಬಹಿಷ್ಕರಿಸಿ, ಹೂಡಿಕೆ ಹಿಂತೆಗೆದುಕೊಳ್ಳಿ ಮತ್ತು ನಿರ್ಬಂಧ ವಿಧಿಸಿ) ಚಳವಳಿಯ ಮೇಲೆ ಶಾಸನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನೂ ನೀಡಿದ್ದಾರೆ.

ಅವರ ಮಾವ ನಾರಾಯಣಮೂರ್ತಿ ಸ್ಥಾಪಿಸಿರುವ ಇನ್‌ಫ಼ೋಸಿಸ್ ಸಂಸ್ಥೆಯು ಇಸ್ರೇಲಿನಲ್ಲಿ ಸಾಕಷ್ಟು ಹೂಡಿಕೆಗಳನ್ನು ಮಾಡಿದ್ದು ಅದರ ಸಹ ಉಸ್ತುವಾರಿಯನ್ನು ಇಸ್ರೇಲಿನ ಮಿಲಿಟರಿ ಬೇಹುಗಾರಿಕೆ ಸಂಸ್ಥೆ ಘಟಕ-೮೨೦೦ರ ಭಾಗವಾಗಿದ್ದ ಉರಿ ಲೆವಿನ್ ನಿರ್ವಹಿಸುತ್ತಾರೆ.
(https://twitter.com/Lowkey0nline/status/1583423329620307969)

ಮೋದಿ ಸರ್ಕಾರದ ಬಗೆಗಿನ ಯಾವುದೇ ವಿಮರ್ಶೆಯನ್ನು ಅಥವಾ ಬ್ರಿಟನ್ನಿನಲ್ಲಿರುವ ಹಿಂದುತ್ವ ಫ಼್ಯಾಸಿಸ್ಟರ ಯಾವುದೇ ಶಾಖೆಗಳ ಮೇಲಿನ ವಿಮರ್ಶೆಯನ್ನು – ಹಿಂದೂಫ಼ೋಬಿಯ- ಹಿಂದುಗಳನ್ನು ದುರುಳಿಕರಿಸುವ
-ತಂತ್ರ ಎಂದು ಪ್ರಚಾರ ಮಾಡುವ ಹಿಂದೂತ್ವ ಫ಼್ಯಾಸಿಸ್ಟರ ಪ್ರಯತ್ನಗಳನ್ನು ರಿಶಿ ಸುನುಕ್ ಅವರು ಬೆಂಬಲಿಸುವ ಎಲ್ಲಾ ಸಾಧ್ಯತೆಗಳಿವೆ.

ಕಳೆದ ಹಲವಾರು ವರ್ಷಗಳಿಂದ ಹೆಚ್ಚೆಚ್ಚು ಪಾಶ್ಚಿಮಾತ್ಯ ರಾಜಕಾರಣಿಗಳು ಮತ್ತು ವಿಶ್ಲೇಷಕರು ಮೋದಿಯವರ ನರಮೇಧ ನೀತಿಗಳನ್ನು ಟೀಕಿಸುವುದು ಹೆಚ್ಚುತ್ತಿದ್ದಂತೆ ಮೋದಿ ಸರ್ಕಾರದ ವಿದೇಶಿ ಕಚೇರಿಗಳು ಅವನ್ನು ನಗಣ್ಯಗೊಳಿಸುವ ಹತಾಷ ಪ್ರಯತ್ನದಲ್ಲಿ ತೊಡಗಿಕೊಂಡಿವೆ.

ಹಿಂದೂಫ಼ೋಬಿಯಾ- ಹಿಂದು ದುರುಳೀಕರಣ ಎಂಬುದು Black Lives Matter Movement – ಕಪ್ಪು ಜನರ ಜೀವಕ್ಕೂ ಬೆಲೆ ಇದೆ ಎಂಬ ಚಳವಳಿಯನ್ನು ನಗಣ್ಯಗೊಳಿಸಲು ಹುಟ್ಟಿಕೊಂಡ ’ White Lives Matter’- ಬಿಳಿ ಜೀವಕ್ಕೆ ಬೆಲೆ ಇದೆ -ಎಂಬ ಬಿಳಿಯ ಶ್ರೇಷ್ಟತೆಯನ್ನು ಪ್ರತಿಪಾದಿಸುವ ಬಿಳಿ ದುರಭಿಮಾನಿ ಜನಾಂಗೀಯ ಪ್ರತಿಕ್ರಿಯೆಗೆ ಸಮಾನವಾದದ್ದು ಎಂಬುದನ್ನು ನಾವು ಸೂಚಿಸುತ್ತಲೇ ಬಂದಿದ್ದೇವೆ. ಇದು ತನ್ನಂತೆಯೇ ಒಂದು ನವನಾಜಿ ಚಳವಳಿಯಾಗಿ ಬೆಳೆಯುತ್ತಿದೆ.

ಭಾರತದಲ್ಲಿರುವ ಹಿಂದೂ ಬಹುಸಂಖ್ಯಾತರು ಅಲ್ಲಿನ ಅಲ್ಪಸಂಖ್ಯಾತರಿಂದ ಯೋಜಿತ ದಾಳಿಗೆ ತುತ್ತಾಗುತ್ತಿದ್ದಾರೆ ಎಂಬ ಹಿಂದೂಫ಼ೋಬಿಯಾದ ತಿಳವಳಿಕೆಯು ಪಾಶ್ಚಿಮಾತ್ಯ ಸಂದರ್ಭದಲ್ಲಿ ಬಿಳಿಯರಿಗೆ ಅನ್ವಯವಾಗುತ್ತದೆ.
(https://southasiasolidarity.org/keir-starmer-dont-pander-to-the-right-believing-in-hinduphobia/)

ಎರಡನ್ನೂ ಕೂಡ ಅಲ್ಪಸಂಖ್ಯಾತ ಹಾಗೂ ದಮನಿತ ಜನರ ಮೇಲೆ ತಾವು ನಡೆಸುವ ಜನಾಂಗೀಯ ಮತ್ತು ಫ಼್ಯಾಸಿಸ್ಟ್ ದಾಳಿಗಳ ವಿರುದ್ಧ ನಡೆಯುವ ಪ್ರತಿರೋಧಗಳ ವಿರುದ್ಧ ನೆಪವಾಗಿ ಹಾಗೂ ಪ್ರತಿಕ್ರಿಯೆಯಾಗಿ ಬಳಸಲಾಗುತ್ತದೆ.

ಕಳೆದ ತಿಂಗಳು ಲೈಸೆಸ್ಟರ್ ನಲ್ಲಿ ಮುಖವಾಡ ಧರಿಸಿದ ಸಶಸ್ತ್ರ ಹಿಂದೂತ್ವವಾದಿಗಳು ಏಶಿಯನ್ ಸಮುದಾಯಗಳ ವಸತಿ ಪ್ರದೇಶದಲ್ಲಿ ಮೆರವಣಿಗೆ ನಡೆಸಿದ್ದರ ಹಿಂದಿನ ಉದ್ದೇಶ ಮುಸ್ಲಿಮರನ್ನು ಪ್ರಚೋದಿಸಿ ತಮ್ಮ ಹಿಂದೂಫ಼ೋಬಿಯಾ ಎಂಬ ಕಥನವನ್ನು ಮತ್ತಷ್ಟು ಗಟ್ಟಿಗೊಳಿಸಿಕೂಳ್ಳುವುದೇ ಆಗಿತ್ತು.

ರಿಶಿ ಸುನುಕ್ ಅವರು ಪ್ರಧಾನಿಯಾಗುವುದರೊಂದಿಗೆ ಈ ಶಕ್ತಿಗಳು ಇನ್ನಷ್ಟು ಬಲಗೊಳ್ಳುತ್ತಾರೆ.

ಅಲ್ಲದೇ ಈ ಬಗೆಯ ಕೋಮುವಾದಿ ಹಿಂಸಾಚಾರವನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ.

ಇದನ್ನು ತಡೆಗಟ್ಟಲೇಬೇಕು.

ಶಿವಸುಂದರ್
ಚಿಂತಕರು

You cannot copy content of this page

Exit mobile version