ಸಕಲೇಶಪುರ : ರಾಜ್ಯದಿಂದ ಅಮರ್ನಾಥ ಯಾತ್ರೆಗೆ ತೆರಳಿದ್ದ ಹಲವಷ್ಟು ಮಂದಿ ಅಲ್ಲಿನ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಸಕಲೇಶಪುರ ಪಟ್ಟಣದಿಂದ ತೆರಳಿದ್ದ 16 ಮಂದಿಯ ತಂಡ ಯಾವುದೆ ಅಪಾಯವಿಲ್ಲದೆ ಸುರಕ್ಷಿತವಾಗಿ ಹಿಂತಿರುಗಿದ್ದಾರೆ.
ನಿನ್ನೆ ಸುರಿದ ಬಾರಿ ಮಳೆಯಲ್ಲಿ ಸಾವಿರಾರು ಮಂದಿ ಸಿಲುಕಿದ ಬಗ್ಗೆ ವರದಿಯಾಗಿದೆ. ಅಮರನಾಥ್ ಯಾತ್ರೆಯಲ್ಲಿ ಜಲಪ್ರವಾಹಕ್ಕೆ ಸಿಲುಕಿದವರನ್ನು ಈಗಾಗಲೇ ಮಿಲಿಟರಿ ಪಡೆ ರಕ್ಷಣಾ ಕಾರ್ಯದ ಮೂಲಕ ಸೂಕ್ತ ಜಾಗಕ್ಕೆ ರವಾನಿಸುವ ಕೆಲಸ ಮಾಡುತ್ತಿದೆ. ಹಾಗೆಯೇ ರಾಜ್ಯದ ನಾನಾ ಭಾಗಗಳಿಂದ ಹೋದಂತಹ ಯಾತ್ರಾರ್ಥಿಗಳನ್ನು ಮಿಲಿಟರಿ ಪಡೆ ಮತ್ತು ಸ್ಥಳೀಯ ಆಡಳಿತ ರಕ್ಷಣೆ ಮಾಡುತ್ತಿದೆ.

ಸೋಮವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಅಮರ್ನಾಥ್ ದರ್ಶನಕ್ಕೆ ಸಕಲೇಶಪುರದಿಂದ ತೆರಳಿದ್ದ ತಂಡ, ಸಂಜೆಯ ವೇಳೆಗೆ ವಿಪರೀತ ಮಳೆ ಆರಂಭವಾಗಿ ತೊಂದರೆಗೆ ಸಿಲುಕಿದೆ. ಈ ಸಂಧರ್ಭದಲ್ಲಿ ಮಿಲಿಟರಿ ಪಡೆಯ ಹೆಲಿಕ್ಯಾಪ್ಟರ್ ಮುಖಾಂತರ ಎಲ್ಲಾ 16 ಮಂದಿ ಹೊರ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆ ನಂತರ ಉತ್ತರ ಪ್ರದೇಶದ ಬಳ್ತಲ್ ಮಿಲಿಟರಿ ಕ್ಯಾಂಪ್ಗೆ ಈ ತಂಡ ಬಂದು ಆಗಮಿಸಿ ಆಶ್ರಯ ಪಡೆದಿದೆ. ನಂತರ ಮಂಗಳವಾರ ಮಧ್ಯಾಹ್ನದ ಸಕಲೇಶಪುರದ ಈ ತಂಡ ಶ್ರೀನಗರದ ಕಡೆಗೆ ಪ್ರಯಾಣ ಮುಂದುವರೆಸಿದೆ.
ತಂಡದಲ್ಲಿ ಮಾಜಿ ಪುರಸಭಾ ಸದಸ್ಯ ವೆಂಕಟೇಶ್, ವರ್ತಕರುಗಳಾದ ಮಧುಕುಮಾರ್, ಉಮಾಪತಿ, ನರೇಂದ್ರಸಿಂಗ್, ಯುವರಾಜ್ ಸೇರಿದಂತೆ ಒಟ್ಟು 8 ಪುರುಷರು ಹಾಗೂ 8 ಮಹಿಳೆಯರಿದ್ದಾರೆ.