ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿಯ ಕಲ್ಲಹಳ್ಳಿ ಗ್ರಾಮದಲ್ಲಿ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತು ಬೈಕ್ನಲ್ಲಿ ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ.
ಕಲ್ಲಳ್ಳಿ ಗ್ರಾಮದ ನಂದೀಶ್ ಅವರ ತಾಯಿ ಪಾರ್ವತಮ್ಮ ಮನೆಯ ಹತ್ತಿರದ ರಸ್ತೆಯಲ್ಲಿ ಹೋಗುವಾಗ ಬೈಕ್ನಲ್ಲಿ ಬಂದ ಬೈಕ್ ಅಪರಿಚಿತ ಮಲ್ಲಳ್ಳಿ ಜಲಪಾತಕ್ಕೆ ಇಲ್ಲಿಂದ ಎಷ್ಟು ಕಿಲೋ ಮೀಟರ್ ಆಗುತ್ತದೆ ಎಂದು ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ 35 ಗ್ರಾಂ ತೂಕದ ಸರ ಕಿತ್ತುಕೊಂಡು ತಂಬಲಗೇರಿ ಮಾರ್ಗದಲ್ಲಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬಿಸ್ಲೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದರು. ಪ್ರವಾಸಿಗರ ವೇಷದಲ್ಲಿ ಬಂದು ಮಲೆನಾಡ ಪಶ್ಚಿಮ ಘಟ್ಟ ಭಾಗದಲ್ಲಿ ಕಳ್ಳತನ ಮಾಡಿರುವ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
