ಕುಂದಾಪುರ: ಸಮುದಾಯ ಕುಂದಾಪುರ ಘಟಕವು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಕುರಿತು ಅರಿವು ಮತ್ತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ “ಅಮೃತ ಘಳಿಗೆ” ಎನ್ನುವ ಕಿರು ವೀಡಿಯೋ ಸ್ಪರ್ಧೆಯೊಂದನ್ನು ಆಯೋಜಿಸಿತ್ತು.
ಈ ಸ್ಪರ್ಧೆಗೆ ಆಯೋಜಕರ ನಿರೀಕ್ಷೆಯನ್ನು ಮೀರಿ ಮಕ್ಕಳು ಸ್ಪಂದಿಸಿದ್ದರು. ಒಂದೇ ವಾರದಲ್ಲಿ ಮುನ್ನೂರು ಮಕ್ಕಳು ಈ ಸ್ಪರ್ಧೆಗೆ ವಿಡಿಯೋ ಕಳುಹಿಸಿದ್ದರು. “ಎಳೆಯ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ಸ್ವರೂಪ ಮತ್ತು ಅದರ ಪರಿಣಾಮಗಳು ಅರ್ಥವಾಗುವುದು ಕಷ್ಟ. ಆ ಕತೆಗಳನ್ನು ಮತ್ತೆ ಮತ್ತೆ ಕೇಳುವುದೊಂದೇ ದಾರಿ. ಕುಂದಾಪುರ ಸಮುದಾಯವು ಮಕ್ಕಳಿಗಾಗಿ ಹಮ್ಮಿಕೊಂಡ ಎರಡು ನಿಮಿಷಗಳ ವಿಡಿಯೋ ಭಾಷಣ ಸ್ಪರ್ಧೆಯ ಉದ್ದೇಶವೂ ಅದೇ- ಮಕ್ಕಳಿಗಾಗಿ ದೊಡ್ಡವರು ಸ್ವಾತಂತ್ರದ ಕತೆ ಹೇಳಬೇಕೆಂಬುದು. ಒಂದೇ ವಾರದಲ್ಲಿ ಮುನ್ನೂರು ಮಕ್ಕಳು ವಿಡಿಯೋ ಕಳುಹಿಸಿಕೊಟ್ಟರು. ಅವರೆಲ್ಲರ ಪೋಷಕರು, ಶಿಕ್ಷಕರು ಎರಡು ನಿಮಿಷಗಳ ವಿಡಿಯೋಕ್ಕಾಗಿ ಸಂಗ್ರಹಿಸಿದ ಸಂಗತಿಗಳು ಸ್ವಾತಂತ್ರ ಹೋರಾಟದ ಕಾಲವನ್ನು ಕಟ್ಟಿಕೊಳ್ಳಲು ಸಹಾಯ ಮಾಡಿರಬಹುದು. ಮುನ್ನೂರು ಮಕ್ಕಳಲ್ಲಿ ಮೂವತ್ತು ಮಕ್ಕಳು ನಾಡಿದ್ದು ರವಿವಾರ ನಮ್ಮ ಜೊತೆ ಇರುತ್ತಾರೆ. ಎಲ್ಲ ಮುನ್ನೂರು ಮಕ್ಕಳಿಗೂ ಪುಸ್ತಕ ಬಹುಮಾನ ಮತ್ತು ಸರ್ಟಿಫಿಕೇಟ್ ದೊರೆಯುತ್ತದೆ,” ಎಂದು ಪೀಪಲ್ ಮೀಡಿಯಾ ಜೊತೆ ಮಾತನಾಡಿದ ಸಮುದಾಯ ಕುಂದಾಪುರದ ಅಧ್ಯಕ್ಷರಾದ ಉದಯ ಗಾಂವ್ಕರ್ ತಿಳಿಸಿದರು.

ಕಾರ್ಯಕ್ರಮವು 18 ಸೆಪ್ಟಂಬರ್ 2022ರ ಭಾನುವಾರದಂದು ಅಪರಾಹ್ನ 10 ಗಂಟೆಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯ ಝಾನ್ಸಿರಾಣಿ ಲಕ್ಷ್ಮಿಬಾಯಿ (ಜೆಎಲ್ಬಿ) ರಸ್ತೆಯಲ್ಲಿರು ಜೇಸಿ ಭವನದಲ್ಲಿ ನಡೆಯಲಿದ್ದು ಸಾರ್ವಜನಿಕರು, ಆಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಚಿತ್ರನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ಡಿಎಸ್ಎಸ್ ಸಂಘಟನೆಯ ರಾಜು ಬೆಟ್ಟಿನ ಮನೆ, ಜೇಸಿ ಟ್ರಸ್ಟಿನ ಸದಾನಂದ ನಾವುಡ, ಜೇಸಿಐ ಕುಂದಾಪುರ, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಘವೇಂದ್ರ ಉಡುಪಿ ಹಾಗೂ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.