ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚಿತ ವಿಷಯವಾಗಿರುವ ಸಾವರ್ಕರ್ ವಿವಾದವನ್ನೆ ಬಿಜೆಪಿ ತನ್ನ ಚುನಾವಣಾ ಅಸ್ತ್ರವನ್ನಾಗಿ ಮಾಡುವ ತಯಾರಿಯಲ್ಲಿದೆ. ಈ ಬಗ್ಗೆ ಮೈಸೂರಿನಲ್ಲಿ ಸಾವರ್ಕರ್ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿದ್ದು, ರಾಜ್ಯಾದ್ಯಂತ ಸಾವರ್ಕರ್ ಹೆಸರಿನ ರಥಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.
ಪ್ರಾಥಮಿಕ ಹಂತದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ ಈ ಯಾತ್ರೆ ಶುರುವಾಗಲಿದ್ದು 24 ರಂದು ಎಚ್.ಡಿ.ಕೋಟೆ, ಸರಗೂರು, 25, 26ರಂದು ನಂಜನಗೂಡು ಮೂಲಕ ಚಾಮರಾಜನಗರ ಜಿಲ್ಲೆ, 27ರಿಂದ 29ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ.
ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರದ ಬಗ್ಗೆ ದೊಡ್ಡ ಮಟ್ಟದ ಗೊಂದಲ ಏರ್ಪಟ್ಟಿತ್ತು. ಕಾಂಗ್ರೆಸ್ ಸೇರಿದಂತೆ ರಾಜ್ಯದ ಬಹುತೇಕ ಜನಪರ ಸಂಘಟನೆಗಳು ಗಾಂಧಿ ಹತ್ಯೆ ಆರೋಪದಲ್ಲಿ ಸಾವರ್ಕರ್ ಪಾತ್ರ ಮತ್ತು ಸಾವರ್ಕರ್ ಜೈಲು ಶಿಕ್ಷೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಅಲ್ಲ ಎಂಬುದಾಗಿ ಪ್ರತಿಪಾದಿಸಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲೂ ಸಂಘರ್ಷ ಸೃಷ್ಟಿಯಾಗಿದ್ದು 3 ದಿನಗಳ ನಿಷೇಧಾಜ್ಞೆ ಜಾರಿಯಾಗಿತ್ತು. ಸಧ್ಯ ಈ ವಿವಾದವನ್ನೆ ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿ ಮಾಡುವ ಮುನ್ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿ ದಾನವನ್ನು ಜನರಿಗೆ ಪರಿಚಯಿಸಲು ಬಿಜೆಪಿ ಹೊರಟಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಇದನ್ನು ಹೇಗೆ ಕೌಂಟರ್ ಅಸ್ತ್ರವನ್ನಾಗಿ ಉಪಯೋಗಿಸಲಿದೆ ಎಂಬುದುನ್ನು ಕಾದು ನೋಡಬೇಕಿದೆ.