ಬೆಂಗಳೂರು: ಆನೇಕಲ್ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಶುಕ್ರವಾರ ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಆರು ಮಂದಿಯನ್ನು ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದವರಿಗೆ ಆನೇಕಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಟ್ಟಡದ ಎರಡನೇ ಮಹಡಿಯ ನಿರ್ಮಾಣದಲ್ಲಿ ಸುಮಾರು 25 ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕಟ್ಟಡವು ಸೇಂಟ್ ಆಗ್ನೆಸ್ ಶಿಕ್ಷಣ ಸಂಸ್ಥೆಗೆ ಸೇರಿದೆ.

ಸೆಂಟ್ರಿಂಗ್ ಕಾಮಗಾರಿ ಸರಿಯಾಗಿ ನಡೆಯದ ಕಾರಣ ಈ ಘಟನೆ ನಡೆದಿದೆ ಎಂದು ಕಾರ್ಮಿಕರೊಬ್ಬರು ತಿಳಿಸಿದರು. ದುರಂತಕ್ಕೆ ಕಾರಣವೇನೆಂದು ಪೊಲೀಸರು ಇನ್ನಷ್ಟೇ ತಿಳಿಸಬೇಕಿದೆ.
ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ ಅವಶೇಷಗಳನ್ನು ತೆರವುಗೊಳಿಸಿವೆ. ಅವಶೇಷಗಳ ಅಡಿಯಲ್ಲಿ ಯಾವುದೇ ಕಾರ್ಮಿಕರು ಕಂಡುಬಂದಿಲ್ಲ.
ಮೃತರನ್ನು ಮಿನಾರ್ ಬಿಸ್ವಾಸ್ ಮತ್ತು ಶಾಹಿದ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಾರ್ಮಿಕರು ಜಾರ್ಖಂಡ್ ಮೂಲದವರು.