ತಮಿಳುನಾಡು: ಎಐಎಡಿಎಂಕೆ ಸರ್ಕಾರದಲ್ಲಿನ ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಕ್ಯಾಬಿನೆಟ್ ಸಚಿವ ವಿ. ಸೆಂಥಿಲ್ ಬಾಲಾಜಿ ತಮ್ಮ ಡಿಎಂಕೆ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸೆಂಥಿಲ್ ಬಂಧನವಾಗಿ ಸುಮಾರು ಒಂಬತ್ತು ತಿಂಗಳ ಕಳೆದಿದ್ದವು.ಕೊನೆಗೂ ಕೊನೆಗೂ ಸೆಂಥಿಲ್ ಬಾಲಾಜಿ ರಾಜೀನಾಮೆ ಸಲ್ಲಿಸಿ ಹೊರ ಬಂದಿದ್ದಾರೆ. ಸ್ಟಾಲಿನ್ ಸಂಪುಟದಲ್ಲಿ ವಿದ್ಯುತ್, ಅಸಾಂಪ್ರದಾಯಿಕ ಇಂಧನ ನಿಷೇಧದ ಉಸ್ತುವಾರಿ ವಹಿಸಿದ್ದ ಅವರನ್ನು ಜೂನ್ 14, 2023 ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ನಂತರವೂ ಅವರನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸಂಪುಟದಲ್ಲಿ ಖಾತೆಯಿಲ್ಲದ ಸಚಿವರಾಗಿ ಮುಂದುವರೆಸಲಾಗಿತ್ತು.
ಹಿಂದಿನ ಎಐಎಡಿಎಂಕೆ ಸರ್ಕಾರದಲ್ಲಿ ರಾಜ್ಯ ಸಾರಿಗೆ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ನಗದು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಥಿಲ್ ಬಾಲಾಜಿ ಅವರನ್ನು ಜೂನ್ 2023 ರಲ್ಲಿ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಜನವರಿ 30 ರಂದು ಮದ್ರಾಸ್ ಹೈಕೋರ್ಟ್ ಸೆಂಥಿಲ್ ಬಾಲಾಜಿ 230 ದಿನಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದರೂ ಸಚಿವ ಸ್ಥಾನವನ್ನು ಏಕೆ ಮುಂದುವರಿಸಿದ್ದಾರೆ ಎಂದು ಪ್ರಶ್ನಿಸಿದ್ದರಿಂದ ಅವರು ರಾಜಿನಾಮೆ ನೀಡಲೇಬೇಕಿತ್ತು.
ಚೆನ್ನೈ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಾಜಿ ಸಚಿವರ ಜಾಮೀನು ಅರ್ಜಿಯನ್ನು ಜನವರಿ 12 ರಂದು ಮೂರನೇ ಬಾರಿಗೆ ತಿರಸ್ಕರಿಸಿತು. ಸೆಪ್ಟೆಂಬರ್ 2023 ಮತ್ತು ಜೂನ್ 2023 ರಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು, ಅವರ ವಿರುದ್ಧದ ಆರೋಪಗಳು ಸತ್ಯದಿಂದ ಕೂಡಿವೆ ಎಂದು ಹೇಳಿತ್ತು. ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಒಂದೊಂದು ಬಾರಿ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನಿರಾಕರಿಸಿದ್ದವು.
ಸೆಂಥಿಲ್ ಬಾಲಾಜಿ ಮನೆ ಮೇಲೆ ಇಡಿ ದಾಳಿ ನಡೆಸಿದ ನಂತರ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆ ನಂತರ ಜೂನ್ನಲ್ಲಿ ಅವರನ್ನು ಬಂಧಿಸಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿತ್ತು. ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ನಂತರ ಅವರನ್ನು ಪುಝಲ್ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.
ಸಿಎಂ ಸ್ಟಾಲಿನ್ ಸೇರಿದಂತೆ ಹಲವಾರು ಡಿಎಂಕೆ ಪಕ್ಷದ ಕಾರ್ಯಕರ್ತರು ಇಡಿ ಕ್ರಮಗಳು ರಾಜಕೀಯ ಕಿರುಕುಳಕ್ಕೆ ಸಮಾನವಾಗಿದೆ ಎಂದು ಆರೋಪ ಮಾಡಿದ್ದರು. ತಮಿಳುನಾಡಿನ ಡಿಎಂಕೆಯಂತಹ ಎದುರಾಳಿ ಪಕ್ಷಗಳ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸೇಡು ತೀರಿಸಿಕೊಳ್ಳಲಾಗಿದೆ ಎಂದು ದೂರಿದ್ದಾರೆ.