ಸಿಐಎಸ್ಎಫ್ ಮಹಿಳಾ ಕಾನ್ಸ್ಟೆಬಲ್ ಒಬ್ಬರು ಸಂಸದೆ ಕಂಗನಾ ರಣಾವತ್ ಅವರ ಕೆನ್ನೆಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಬನಾ ಆಜ್ಮಿ ಪ್ರತಿಕ್ರಿಯಿಸಿದ್ದು, ʼಭದ್ರತಾ ಸಿಬ್ಬಂದಿಗಳು ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ” ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು “ನನಗೆ ಕಂಗನಾ ಕುರಿತು ವಿಶೇಷ ಪ್ರೇಮ ಅಥವಾ ದ್ವೇಷ ಇಲ್ಲ. ಆದರೆ ಆಕೆಯ ಕಪಾಳಕ್ಕೆ ಹೊಡೆದ ವಿಷಯವನ್ನು ಸಮರ್ಥನೆ ಮಾಡುವವರ ಗುಂಪಿಗೆ ನಾನು ಸೇರಲಾರೆ” ಎಂದಿದ್ದಾರೆ.
ಈ ಕುರಿತು ಜಾಲತಾಣ ವೇದಿಕೆ X ಮೂಲಕ ಪ್ರತಿಕ್ರಿಯಿಸಿರುವ ಅವರು ಮುಂದುವರೆದು, “ಭದ್ರತಾ ಸಿಬ್ಬಂದಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪ್ರಾರಂಭಿಸಿದರೆ, ನಾವು ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಅಜ್ಮಿ ಅವರ ಪತಿ, ಹಿರಿಯ ಚಿತ್ರಕಥೆಗಾರ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ಅವರೊಂದಿಗೂ ವಿವಾದ ಮಾಡಿಕೊಂಡಿರುವ ಕಂಗನಾ ಪ್ರಸ್ತುತ ನ್ಯಾಯಾಲಯವೊಂದರಲ್ಲಿ ಮಾನನಷ್ಟ ಮೊಕದ್ದಮೆಯನ್ನುಎದುರಿಸುತ್ತಿದ್ದಾರೆ.
ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ರೈತ ಪ್ರತಿಭಟನೆಯ ಬಗ್ಗೆ ನೀಡಿದ್ದ ಪ್ರತಿಕ್ರಿಯೆಯ ಕುರಿತು ನಟಿ, ಸಂಸದೆಯ ವಿರುದ್ಧ ಅಸಮಾಧಾನಗೊಂಡಿದ್ದ ಸಿಐಎಸ್ಎಫ್ ಕಾನ್ಸ್ಟೆಬಲ್ ತನ್ನ ಮುಖಕ್ಕೆ ಹೊಡೆದು ನಿಂದಿಸಿದ್ದಾರೆ ಎಂದು ರಣಾವತ್ ತನ್ನ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.