ಮನುಸ್ಮೃತಿ ಕುರಿತಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಶಿವಸೇನೆ (ಏಕನಾಥ್ ಶಿಂಧೆ ಬಣ) ನಾಯಕಿ ಶೈನಾ ಎನ್ಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯವರಿಗೆ ಕೇವಲ ಹಿಂದೂ ಧರ್ಮಗ್ರಂಥಗಳಲ್ಲಿ ಮಾತ್ರ ಕೆಡುಕುಗಳು ಕಾಣಿಸುತ್ತವೆ ಎಂದು ಆರೋಪಿಸಿರುವ ಅವರು, ಶರಿಯಾ, ನಿಖಾಹ್ ಹಲಾಲಾ ಅಥವಾ ತ್ರಿವಳಿ ತಲಾಖ್ನಂತಹ ಆಚರಣೆಗಳ ಬಗ್ಗೆ ಅವರು ಎಂದಾದರೂ ಮುಕ್ತವಾಗಿ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರ ಬಗ್ಗೆ ರಾಹುಲ್ ಗಾಂಧಿಯವರಿಗೆ ಅಷ್ಟೊಂದು ಕಾಳಜಿಯಿದ್ದರೆ, ಏಕರೂಪ ನಾಗರಿಕ ಸಂಹಿತೆಯನ್ನು (UCC) ಬೆಂಬಲಿಸಲಿ, ಬಾಲ್ಯವಿವಾಹವನ್ನು ನಿಲ್ಲಿಸಲಿ ಹಾಗೂ ಬಹುಪತ್ನಿತ್ವದ ವಿರುದ್ಧ ಕಠಿಣ ಕಾನೂನು ತರಲು ಬೆಂಬಲ ನೀಡಲಿ ಎಂದು ಶೈನಾ ಎನ್ಸಿ ಸವಾಲು ಹಾಕಿದ್ದಾರೆ. ಇಂತಹ ಪ್ರಮುಖ ಸುಧಾರಣೆಗಳ ಬಗ್ಗೆ ಮೌನ ವಹಿಸಿ, ಕೇವಲ ಧರ್ಮಗ್ರಂಥಗಳನ್ನು ತಿರುಚಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಇದೇ ವಿಚಾರವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ನೀವು ಮನುಸ್ಮೃತಿಯನ್ನು ನಂಬಿ ಅಥವಾ ಬಿಡಿ, ಆದರೆ ತಪ್ಪು ಮಾಹಿತಿಗಳನ್ನು ಹರಡಬೇಡಿ. ಅಥರ್ವವೇದ, ಶತಪಥ ಬ್ರಾಹ್ಮಣ, ಮಹಾಭಾರತ ಮತ್ತು ಮತ್ಸ್ಯ ಪುರಾಣಗಳು ಯಾರ ಮಹಿಮೆಯನ್ನು ಕೊಂಡಾಡುತ್ತವೆಯೋ ಅಂತಹ ಮನುವನ್ನು ಏಕೆ ಅವಮಾನಿಸುತ್ತಿದ್ದೀರಿ? ಸನಾತನಿಗಳು ಪಾಲಿಸುವ ಕಾಲಗಣನೆಯನ್ನು ನೀಡಿದ್ದು ಮನುವೇ ಹೊರತು ಬೇರೆ ಯಾರೂ ಅಲ್ಲ” ಎಂದು ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೂಡ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು, “ರಾಹುಲ್ ಗಾಂಧಿ ಮಹಿಳಾ ಹಕ್ಕುಗಳ ಪ್ರತಿಪಾದಕರಲ್ಲ, ಕೇವಲ ಹಿಂದೂ ವಿರೋಧಿ” ಎಂದು ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಸಬಲೀಕರಣದ ವಿಷಯವನ್ನು ಅವರು ಹಿಂದೂ ಧರ್ಮವನ್ನು ಗುರಿಯಾಗಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದಿರುವ ಅವರು, ಶರಿಯಾ ಅಡಿಯಲ್ಲಿರುವ ಪಿತೃಪ್ರಧಾನ ಪದ್ಧತಿಗಳ ವಿರುದ್ಧ ಅವರು ಎಂದಿಗೂ ಧ್ವನಿ ಎತ್ತಿಲ್ಲ ಎಂದು ಕಿಡಿಕಾರಿದ್ದಾರೆ.‘ಶರಿಯಾ, ಹಲಾಲಾ ಬಗ್ಗೆ ರಾಹುಲ್ ಗಾಂಧಿ ಎಂದಾದರೂ ಮಾತನಾಡಿದ್ದಾರೆಯೇ?’: ಶೈನಾ ಎನ್ಸಿ ಮತ್ತು ಬಿಜೆಪಿ ನಾಯಕರ ವಾಗ್ದಾಳಿ
